11
ಮೋಸದ ತಕ್ಕಡಿ ಯೆಹೋವ ದೇವರಿಗೆ ಅಸಹ್ಯವಾಗಿದೆ;
ಆದರೆ ನ್ಯಾಯದ ತೂಕ ಅವರಿಗೆ ಮೆಚ್ಚುಗೆ.
 
ಗರ್ವ ಬಂದಾಗ ನಾಚಿಕೆಯೂ ಬರುತ್ತದೆ;
ಆದರೆ ದೀನತೆಯೊಂದಿಗೆ ಜ್ಞಾನ ಬರುವುದು.
 
ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡೆಸುವುದು;
ಅಪನಂಬಿಗಸ್ತರ ಕಪಟತನವೇ ಅವರನ್ನು ನಾಶಪಡಿಸುವುದು.
 
ಉಗ್ರತೆಯ ದಿನದಲ್ಲಿ ಸಂಪತ್ತು ಲಾಭಕರವಾಗುವುದಿಲ್ಲ;
ಆದರೆ ನೀತಿಯ ನಡತೆ ಮರಣದಿಂದ ವಿಮೋಚಿಸುವುದು.
 
ನಿಷ್ಕಳಂಕರ ನೀತಿಯು ಅವರ ಮಾರ್ಗವನ್ನು ಸರಾಗ ಮಾಡುವುದು;
ಆದರೆ ದುಷ್ಟರು ತಮ್ಮ ದುಷ್ಟತ್ವದಿಂದಲೇ ಬೀಳುವರು.
 
ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವುದು;
ಆದರೆ ಅಪನಂಬಿಗಸ್ತರು ದುಷ್ಟ ಆಸೆಗಳಿಂದ ಸಿಕ್ಕಿಹಾಕಿಕೊಳ್ಳುತ್ತಾರೆ.
 
ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವುವು;
ತನ್ನ ಬಲದಿಂದ ನಿರೀಕ್ಷಿಸಿದ್ದೆಲ್ಲವೂ ಇಲ್ಲದಂತಾಗುವುದು.
 
ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ,
ದುಷ್ಟನು ಅದರ ಸ್ಥಳದಲ್ಲಿ ಸಿಕ್ಕಿಬೀಳುವನು.
 
ಒಬ್ಬ ಭಕ್ತಿಹೀನನು ಬಾಯಿಂದ ತನ್ನ ನೆರೆಯವನನ್ನು ಹಾಳು ಮಾಡುತ್ತಾನೆ,
ಆದರೆ ನೀತಿವಂತನು ತಿಳುವಳಿಕೆಯ ಮೂಲಕ ಬಿಡಿಸಲಾಗುವನು.
 
10 ನೀತಿವಂತರು ಅಭಿವೃದ್ಧಿಹೊಂದಿದರೆ, ಪಟ್ಟಣವು ಉಲ್ಲಾಸಿಸುತ್ತದೆ;
ದುಷ್ಟರು ನಾಶವಾದರೆ, ಜಯೋತ್ಸವ ಉಂಟಾಗುತ್ತದೆ.
 
11 ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಪ್ರಗತಿಯಾಗುತ್ತದೆ,
ಆದರೆ ದುಷ್ಟರ ಬಾಯಿಂದ ಅದು ನಾಶವಾಗುತ್ತದೆ.
 
12 ಜ್ಞಾನವಿಲ್ಲದವನು ತನ್ನ ನೆರಯವನನ್ನು ಹೀನೈಸುತ್ತಾನೆ,
ಆದರೆ ತಿಳುವಳಿಕೆಯುಳ್ಳವನು ಮೌನವಾಗಿರುತ್ತಾನೆ.
 
13 ಚಾಡಿಕೋರನು ರಹಸ್ಯಗಳನ್ನು ಬಹಿರಂಗಪಡಿಸುತ್ತಾನೆ,
ಆದರೆ ನಂಬಿಗಸ್ತನು ಆ ಸಂಗತಿಯನ್ನು ಮುಚ್ಚುತ್ತಾನೆ.
 
14 ಆಲೋಚನೆ ಇಲ್ಲದೆ ಇರುವಲ್ಲಿ ಜನರು ಬೀಳುತ್ತಾರೆ,
ಆದರೆ ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.
 
15 ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ,
ಹೊಣೆಗಾರನಾಗಿರದವನು ಸುರಕ್ಷಿತವಾಗಿರುವನು.
 
16 ದಯೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಸಂಪಾದಿಸಿಕೊಳ್ಳುತ್ತಾಳೆ,
ನಿಷ್ಕರುಣ ವ್ಯಕ್ತಿ ಸಂಪತ್ತನ್ನು ಮಾತ್ರ ಪಡೆದುಕೊಳ್ಳುತ್ತಾನೆ.
 
17 ದಯೆಯುಳ್ಳವನು ತನಗೆ ತಾನೇ ಒಳ್ಳೆಯದನ್ನು ಮಾಡಿಕೊಳ್ಳುತ್ತಾನೆ,
ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.
 
18 ದುಷ್ಟನು ಮೋಸದ ಸಂಬಳವನ್ನು ಸಂಪಾದಿಸುತ್ತಾನೆ,
ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹವಾದ ಬಹುಮಾನವಿರುವುದು.
 
19 ನೀತಿವಂತನ ಮಾರ್ಗಗಳಲ್ಲಿ ಅಚಲವಾಗಿರುವವನು ಜೀವ ಹೊಂದುತ್ತಾನೆ,
ಕೆಟ್ಟದ್ದನ್ನು ಬೆನ್ನಟ್ಟುವವನು ತನ್ನ ಮರಣವನ್ನು ಬೆನ್ನಟ್ಟುತ್ತಾನೆ.
 
20 ವಕ್ರ ಹೃದಯವುಳ್ಳವರು ಯೆಹೋವ ದೇವರಿಗೆ ಅಸಹ್ಯವಾದವರು,
ಆದರೆ, ಸನ್ಮಾರ್ಗದಲ್ಲಿ ಯಥಾರ್ಥವಾಗಿ ಇರುವವರಲ್ಲಿ ಅವರು ಆನಂದಿಸುತ್ತಾರೆ.
 
21 ದುಷ್ಟನಿಗೆ ಶಿಕ್ಷೆ ತಪ್ಪುವುದಿಲ್ಲ;
ನೀತಿವಂತರ ವಂಶವು ಬಿಡುಗಡೆ ಹೊಂದುವುದು.
 
22 ಹಂದಿಯ ಮೂಗಿಗೆ ಬಂಗಾರದ ಮೂಗುತಿಯು ಹೇಗೋ,
ಹಾಗೆಯೇ ವಿವೇಕವಿಲ್ಲದ ಸ್ತ್ರೀಗೆ ಸೌಂದರ್ಯವು.
 
23 ನೀತಿವಂತರ ಅಪೇಕ್ಷೆಯು ಶುಭಕ್ಕಾಸ್ಪದ,
ದುಷ್ಟರ ಅಪೇಕ್ಷೆಯು ತೀರ್ಪಿಗೀಡು.
 
24 ಒಬ್ಬನು ತನ್ನ ಸಂಪತ್ತನ್ನು ಉದಾರವಾಗಿ ವ್ಯಯಮಾಡಿದರೂ ಅವನು ವೃದ್ಧಿಯಾಗುತ್ತಾನೆ,
ಆದರೆ ಇನ್ನೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನು ಬಡತನಕ್ಕೆ ಬರುತ್ತಾನೆ.
 
25 ಉದಾರಿಯು ಅಭಿವೃದ್ಧಿ ಹೊಂದುವನು;
ಬೇರೆಯವರಿಗೆ ಚೈತನ್ಯ ಕೊಡುವವನು ಚೈತನ್ಯ ಹೊಂದುವನು.
 
26 ಧಾನ್ಯವನ್ನು ಬಚ್ಚಿಟ್ಟುಕೊಳ್ಳುವವನನ್ನು ಜನರು ಶಪಿಸುವರು;
ಆದರೆ ಅದನ್ನು ಮಾರುವವನ ಮೇಲೆ ಆಶೀರ್ವಾದವು ನೆಲೆಯಾಗಿರುವುದು.
 
27 ಒಳ್ಳೆಯದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದುತ್ತಾನೆ;
ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವುದು.
 
28 ತನ್ನ ಐಶ್ವರ್ಯದಲ್ಲಿ ಭರವಸೆ ಇಡುವವನು ಬಿದ್ದುಹೋಗುವನು,
ಆದರೆ ನೀತಿವಂತರು ಹಸಿರೆಲೆಯ ಹಾಗೆ ಚಿಗುರುವರು.
 
29 ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು;
ಮೂರ್ಖನು ಜ್ಞಾನನಿಗೆ ಸೇವಕನಾಗಿರುವನು.
 
30 ನೀತಿವಂತರ ಫಲವು ಜೀವವೃಕ್ಷ;
ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ.
 
31 ಇಗೋ, ಭೂಮಿಯ ಮೇಲೆ ನೀತಿವಂತರು ತಮ್ಮ ಫಲವನ್ನು ಹೊಂದಲಿಕ್ಕಿರುವಾಗ,
ದುಷ್ಟರು ಮತ್ತು ಪಾಪಿಗಳು ಎಷ್ಟೋ ಹೆಚ್ಚಾಗಿ ತಮ್ಮ ಫಲವನ್ನು ಹೊಂದುತ್ತಾರೆ.