14
ಜ್ಞಾನಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ;
ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
 
ತನ್ನ ಯಥಾರ್ಥತೆಯಲ್ಲಿ ನಡೆಯುವವನು ಯೆಹೋವ ದೇವರಿಗೆ ಭಯಪಡುತ್ತಾನೆ,
ಆದರೆ ಅವರನ್ನು ತಿರಸ್ಕರಿಸುವವರು ತಮ್ಮ ಮಾರ್ಗಗಳಲ್ಲಿ ಮೋಸ ಹೋಗುತ್ತಾರೆ.
 
ಬುದ್ಧಿಹೀನನ ಬಾಯಿಯಲ್ಲಿ ಗರ್ವದ ಅಂಕುರವಿದೆ,
ಆದರೆ ಜ್ಞಾನವಂತರ ತುಟಿಗಳು ಅವರನ್ನು ಕಾಪಾಡುವುವು.
 
ಎತ್ತುಗಳು ಇಲ್ಲದೆ ಇರುವಲ್ಲಿ ಗೋದಲಿಯು ಶುಚಿಯಾಗಿರುತ್ತದೆ,
ಆದರೆ ಎತ್ತಿನ ಬಲದಿಂದಲೇ ಬೆಳೆಯು ಹೇರಳವಾಗಿ ವೃದ್ಧಿಯಾಗುತ್ತದೆ.
 
ಪ್ರಾಮಾಣಿಕ ಸಾಕ್ಷಿಯು ಸುಳ್ಳಾಡನು,
ಆದರೆ ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.
 
ಅಪಹಾಸ್ಯ ಮಾಡುವವನು ಜ್ಞಾನವನ್ನು ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ,
ಆದರೆ ವಿವೇಚಿಸುವವನಿಗೆ ಜ್ಞಾನವು ಸುಲಭವಾಗಿದೆ.
 
ನೀನು ಬುದ್ಧಿಹೀನನ ತುಟಿಗಳಲ್ಲಿ ಪರಿಜ್ಞಾನವನ್ನು ಕಾಣದೆ ಹೋದರೆ,
ಅವನ ಬಳಿಯಿಂದ ಹೊರಟು ಹೋಗು.
 
ಜಾಣನ ಜ್ಞಾನವು ತನ್ನ ಮಾರ್ಗಗಳಿಗೆ ಆಲೋಚನೆ ನೀಡುತ್ತದೆ.
ಮೂಢರ ಬುದ್ಧಿಹೀನತೆಯು ಮೋಸಕರ.
 
ಬುದ್ಧಿಹೀನರು ಪಾಪಪರಿಹಾರವನ್ನು ಅಪಹಾಸ್ಯ ಮಾಡುವರು,
ಆದರೆ ನೀತಿವಂತರಿಗೆ ದಯೆಯಿದೆ.
 
10 ಹೃದಯಕ್ಕೆ ತನ್ನ ವ್ಯಥೆಯು ಗೊತ್ತು;
ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ.
 
11 ದುಷ್ಟರ ಮನೆಯು ನಾಶವಾಗುವುದು,
ಆದರೆ ಯಥಾರ್ಥವಂತರ ಗುಡಾರವು ಏಳಿಗೆಯಾಗುವುದು.
 
12 ಮನುಷ್ಯ ದೃಷ್ಟಿಗೆ ಸರಿ ತೋರುವ ಒಂದು ಮಾರ್ಗವಿದೆ,
ಆದರೆ ಅದರ ಅಂತ್ಯವು ಮರಣದ ಮಾರ್ಗಗಳೇ.
 
13 ನಗೆಯಲ್ಲಿಯೂ ಹೃದಯವು ದುಃಖದಿಂದ ಇರುವುದು,
ಅದರ ಉಲ್ಲಾಸದ ಅಂತ್ಯವು ಸಂತಾಪವೇ.
 
14 ಭ್ರಷ್ಟನು ತನ್ನ ದುಷ್ಕರ್ಮಗಳಿಂದ ದಣಿಯನು,
ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು.
 
15 ಅರಿವಿಲ್ಲದವರು ಯಾವ ಮಾತನ್ನಾದರೂ ನಂಬುತ್ತಾರೆ,
ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.
 
16 ಜ್ಞಾನಿಯು ಯೆಹೋವ ದೇವರಿಗೆ ಭಯಪಟ್ಟು ಕೆಟ್ಟತನದಿಂದ ದೂರ ಹೋಗುವನು,
ಆದರೆ ಬುದ್ಧಿಹೀನನು ಯೋಚಿಸದೆ ಆತ್ಮವಿಶ್ವಾಸದಿಂದ ನಡೆಯುವನು.
 
17 ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ,
ಜನರು ಕುಯುಕ್ತಿಯುಳ್ಳವನನ್ನು ಹಗೆ ಮಾಡುತ್ತಾರೆ.
 
18 ಅರಿವಿಲ್ಲದವರು ಮೂರ್ಖತನಕ್ಕೆ ಬಾಧ್ಯರಾಗುತ್ತಾರೆ,
ಆದರೆ ಜಾಣರು ಪರಿಜ್ಞಾನದಿಂದ ಆವರಿಸುತ್ತಾರೆ.
 
19 ದುಷ್ಟರು ಒಳ್ಳೆಯವರಿಗೆ ಬಾಗುತ್ತಾರೆ,
ದುಷ್ಟರು ನೀತಿವಂತರ ದ್ವಾರಗಳಲ್ಲಿ ಅಡ್ಡ ಬೀಳುತ್ತಾರೆ.
 
20 ಬಡವನು ಅವನ ನೆರೆಯವನಿಂದಲೇ ಕಡೆಗಣಿಸಲಾಗುವನು;
ಆದರೆ ಐಶ್ವರ್ಯವಂತನಿಗೆ ಬಹುಜನ ಮಿತ್ರರು.
 
21 ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪಮಾಡುತ್ತಾನೆ,
ಬಡವರ ಮೇಲೆ ಕನಿಕರ ತೋರಿಸುವವನು ಧನ್ಯನು.
 
22 ಕೆಟ್ಟದ್ದನ್ನು ಕಲ್ಪಿಸುವವರು ದಾರಿ ತಪ್ಪುವುದಿಲ್ಲವೇ?
ಆದರೆ ಒಳ್ಳೆಯದನ್ನು ಕಲ್ಪಿಸುವವರಿಗೆ ಪ್ರೀತಿ ಸತ್ಯತೆಯು ಇರುವುವು.
 
23 ಎಲ್ಲಾ ಪ್ರಯಾಸದಲ್ಲಿ ಲಾಭವಿದೆ,
ಹರಟೆ ಮಾತು ಬಡತನಕ್ಕೆ ಮಾತ್ರ ದಾರಿ.
 
24 ಜ್ಞಾನವಂತರ ಕಿರೀಟವೇ ಅವರ ಸಂಪತ್ತು,
ಆದರೆ ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವನ್ನು ನೀಡುತ್ತದೆ.
 
25 ಸತ್ಯಸಾಕ್ಷಿಯು ಪ್ರಾಣಗಳನ್ನು ರಕ್ಷಿಸುತ್ತಾನೆ,
ಸುಳ್ಳುಸಾಕ್ಷಿಯು ಮೋಸಗಾರನು.
 
26 ಯೆಹೋವ ದೇವರಿಗೆ ಭಯಪಡುವವನು ಭದ್ರಕೋಟೆಯನ್ನು ಹೊಂದಿದ್ದಾನೆ.
ಆತನ ಮಕ್ಕಳಿಗೆ ಆಶ್ರಯವು ಇರುವುದು.
 
27 ಯೆಹೋವ ದೇವರ ಭಯವು ಜೀವದ ಬುಗ್ಗೆಯಾಗಿದೆ.
ಅದು ಮನುಷ್ಯನನ್ನು ಮರಣದ ಪಾಶಗಳಿಂದ ತಿರುಗಿಸುತ್ತದೆ.
 
28 ಜನಸಮೂಹದಲ್ಲಿ ಅರಸನ ಘನತೆ ಇದೆ.
ಆದರೆ ಜನರ ಕೊರತೆಯಲ್ಲಿ ರಾಜಪುತ್ರನ ನಾಶ.
 
29 ತಾಳ್ಮೆಯುಳ್ಳವನು ಬಹು ವಿವೇಕಿ,
ಮುಂಗೋಪಿಯು ಮೂರ್ಖತನವನ್ನು ಎತ್ತಿಹಿಡಿಯುವನು.
 
30 ಶಾಂತ ಹೃದಯವು ದೇಹಕ್ಕೆ ಜೀವ;
ಆದರೆ ಮತ್ಸರವು ಎಲುಬುಗಳಿಗೆ ಕ್ಷಯ.
 
31 ಬಡವರನ್ನು ಹಿಂಸಿಸುವವನು, ತನ್ನ ಸೃಷ್ಟಿಕರ್ತನನ್ನು ಹೀನೈಸುವನು,
ಆದರೆ ಬಡವರನ್ನು ಕನಿಕರಿಸುವವನು ದೇವರನ್ನು ಸನ್ಮಾನಿಸುವನು.
 
32 ದುಷ್ಟನು ತನ್ನ ಆಪತ್ಕಾಲದಲ್ಲಿ ಹಾಳಾಗುತ್ತಾನೆ,
ಆದರೆ ನೀತಿವಂತನಿಗೆ ಮರಣದಲ್ಲಿಯೂ ಆಶ್ರಯ ಇದೆ.
 
33 ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆಯಾಗಿದೆ,
ಆದರೆ ಮೂರ್ಖರಲ್ಲಿ ಜ್ಞಾನವು ಕಂಡುಬರುವುದಿಲ್ಲ.
 
34 ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ;
ಆದರೆ ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ.
 
35 ಜ್ಞಾನವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ;
ಆದರೆ ಮಾನಗೇಡಿ ಸೇವಕನ ಮೇಲೆ ಅರಸನ ಕೋಪ ಎರಗುತ್ತದೆ.