17
ವಿವಾದದೊಂದಿಗೆ ತುಂಬಿದ ಔತಣದ ಮನೆಗಿಂತ,
ಶಾಂತಿ ಸಮಾಧಾನದ ಒಣ ತುತ್ತು ಮೇಲು.
 
ನಾಚಿಕೆಪಡಿಸುವ ಮಗನ ಮೇಲೆ ಜಾಣನಾದ ಸೇವಕನು ಆಳುವವನಾಗಿ
ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
 
ಸೋಸುವುದಕ್ಕೆ ಬೆಳ್ಳಿಗೆ ಕುಲುಮೆ ಪುಟ, ಬಂಗಾರಕ್ಕೆ ಆವಿಗೆ;
ಆದರೆ ಯೆಹೋವ ದೇವರು ಹೃದಯಗಳನ್ನು ಪರಿಶೋಧಿಸುತ್ತಾರೆ.
 
ಕೇಡು ಮಾಡುವವನು ಕೆಟ್ಟ ಮಾತುಗಳಿಗೆ ಕಿವಿಗೊಡುತ್ತಾನೆ;
ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು.
 
ಬಡವರನ್ನು ಹಾಸ್ಯಮಾಡುವವನು, ತನ್ನನ್ನು ಸೃಷ್ಟಿಸಿದ ಯೆಹೋವ ದೇವರನ್ನು ನಿಂದಿಸುತ್ತಾನೆ;
ಬೇರೆಯವರ ವಿಪತ್ತುಗಳಿಗೆ ಸಂತೋಷಿಸುವವನು ಶಿಕ್ಷೆಯನ್ನು ಹೊಂದುವನು.
 
ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ;
ಮಕ್ಕಳ ಭೂಷಣವು ಅವರ ತಂದೆತಾಯಿಗಳೇ.
 
ಉತ್ತಮವಾದ ಪದಗಳು ಮೂರ್ಖನಿಗೆ ಸೂಕ್ತವಲ್ಲ;
ಆಳುವವನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಆಯುಕ್ತವಲ್ಲವೇ.
 
ಕೊಡುವವನ ಕಣ್ಣಿಗೆ ಲಂಚವು ಆಕರ್ಷಣೆಯಾಗಿದೆ;
ಪ್ರತಿ ತಿರುವಿನಲ್ಲಿಯೂ ಯಶಸ್ಸು ಬರುತ್ತದೆ ಎಂದು ಅವರು ಭಾವಿಸುತ್ತಾರೆ.
 
ದೋಷವನ್ನು ಕ್ಷಮಿಸುವವನು ಪ್ರೀತಿಯನ್ನು ಹುಡುಕುತ್ತಾನೆ;
ಆದರೆ ದೋಷವನ್ನು ಎತ್ತಿ ಆಡುವವನು ಸ್ನೇಹಿತರಿಂದ ಪ್ರತ್ಯೇಕಗೊಳ್ಳುತ್ತಾನೆ.
 
10 ಬುದ್ಧಿಹೀನನ ಬೆನ್ನಿಗೆ ನೂರು ಪೆಟ್ಟುಗಳಿಗಿಂತ
ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟುತ್ತದೆ.
 
11 ತಿರುಗಿ ಬೀಳುವವನು ಕೆಟ್ಟದ್ದಕ್ಕೇ ತವಕಪಡುತ್ತಾನೆ;
ಆದಕಾರಣ ಮರಣ ದೂತರನ್ನು ಅವನ ವಿರುದ್ಧ ಕಳುಹಿಸಲಾಗುವದು.
 
12 ತನ್ನ ಮೂಢತೆಯಲ್ಲಿರುವ ಬುದ್ಧಿಹೀನನನ್ನು ಸಂಧಿಸುವುದಕ್ಕಿಂತ
ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಸಂಧಿಸುವುದು ಮೇಲು.
 
13 ಉಪಕಾರಕ್ಕೆ ಅಪಕಾರವನ್ನು ಮಾಡುವವನ
ಮನೆಯಿಂದ ಕೇಡು ತೊಲಗುವುದೇ ಇಲ್ಲ.
 
14 ಕಲಹದ ಪ್ರಾರಂಭವು ಆಣೆಕಟ್ಟು ಒಡೆದಂತೆ ಇರುವುದು;
ಆದಕಾರಣ ಆ ಕಲಹಕ್ಕೆ ಕೈಹಾಕುವುದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
 
15 ದುಷ್ಟರನ್ನು ನೀತಿವಂತರೆಂದು ನಿರ್ಣಯಿಸುವವನು,
ನೀತಿವಂತರನ್ನು ಖಂಡಿಸುವವನೂ ಇವರಿಬ್ಬರೂ ಯೆಹೋವ ದೇವರಿಗೆ ಅಸಹ್ಯ.
 
16 ಜ್ಞಾನವನ್ನು ಸಂಪಾದಿಸುವುದಕ್ಕೆ ಬುದ್ಧಿಹೀನನ ಕೈಯಲ್ಲಿ ಹಣ ಏಕೆ?
ಅವನಿಗೆ ಕಲಿಯಲು ಮನಸ್ಸಿಲ್ಲವಲ್ಲ.
 
17 ಸ್ನೇಹಿತನು ಎಲ್ಲಾ ಸಮಯದಲ್ಲಿ ಪ್ರೀತಿಸುತ್ತಾನೆ;
ಆಪತ್ತಿನಲ್ಲಿ ಸಹಾಯಮಾಡುವಗೋಸ್ಕರ ಸಹೋದರನು ಹುಟ್ಟಿದ್ದಾನೆ.
 
18 ಬುದ್ಧಿಹೀನನು ಕೈ ಕುಲುಕಿ
ತನ್ನ ನೆರೆಯವನಿಗೆ ಜಾಮಿನನಾಗುತ್ತಾನೆ.
 
19 ಕಲಹವನ್ನು ಪ್ರೀತಿಮಾಡುವವನು ಪಾಪವನ್ನು ಪ್ರೀತಿಮಾಡುತ್ತಾನೆ;
ತನ್ನ ಗೋಡೆಯನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಆಮಂತ್ರಿಸುತ್ತಾನೆ.
 
20 ವಕ್ರಹೃದಯವುಳ್ಳವನು ಸಮೃದ್ಧಿಯನ್ನು ಹೊಂದುವುದಿಲ್ಲ;
ಮೋಸದ ನಾಲಿಗೆಯುಳ್ಳವನು ಹಾನಿಗೆ ಬೀಳುವನು.
 
21 ಬುದ್ಧಿಹೀನ ಹೆತ್ತವನಿಗೆ ವ್ಯಥೆ;
ಬುದ್ಧಿಹೀನನ ತಂದೆಗೆ ಸಂತೋಷವಿರುವುದಿಲ್ಲ.
 
22 ಹರ್ಷಹೃದಯವು ಒಳ್ಳೆಯ ಔಷಧ;
ಆದರೆ ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
 
23 ನ್ಯಾಯದ ಮಾರ್ಗಗಳನ್ನು ತಿರುಗಿಸಿಬಿಡುವುದಕ್ಕೆ
ದುಷ್ಟನು ಗುಪ್ತವಾಗಿ ಲಂಚವನ್ನು ತೆಗೆದುಕೊಳ್ಳುತ್ತಾನೆ.
 
24 ವಿವೇಕಿಯು ಜ್ಞಾನವನ್ನು ತನ್ನ ಮುಂದೆ ಇಟ್ಟುಕೊಳ್ಳುತ್ತಾನೆ.
ಆದರೆ ಬುದ್ಧಿಹೀನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಅಲೆಯುವವು.
 
25 ಬುದ್ಧಿಹೀನನಾದ ಮಗನು ತನ್ನ ತಂದೆಗೆ ದುಃಖವೂ,
ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
 
26 ನೀತಿವಂತನಿಗೆ ದಂಡ ವಿಧಿಸುವುದು ಒಳ್ಳೆಯದಲ್ಲದಿದ್ದರೆ,
ಖಂಡಿತವಾಗಿಯೂ ಪ್ರಾಮಾಣಿಕ ಅಧಿಕಾರಿಗಳನ್ನು ಹೊಡೆಯುವುದು ಸರಿಯಲ್ಲ.
 
27 ಪರಿಜ್ಞಾನ ಹೊಂದಿರುವವನು ಮಿತವಾಗಿ ಮಾತನಾಡುತ್ತಾನೆ;
ತಿಳುವಳಿಕೆಯನ್ನು ಹೊಂದಿರುವವನು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
 
28 ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆನಿಸಿಕೊಳ್ಳುವನು;
ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿ ಎನಿಸಿಕೊಳ್ಳುವನು.