27
ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ;
ಏಕೆಂದರೆ ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು.
 
ನಿನ್ನ ಬಾಯಿ ಅಲ್ಲ, ಮತ್ತೊಬ್ಬನು ನಿನ್ನನ್ನು ಹೊಗಳಲಿ;
ನಿನ್ನ ಸ್ವಂತ ತುಟಿಗಳಲ್ಲ, ಪರನೇ ನಿನ್ನನ್ನು ಹೊಗಳಲಿ.
 
ಕಲ್ಲು ಭಾರ, ಮರಳು ಭಾರ;
ಆದರೆ ಇವೆರಡಕ್ಕಿಂತ ಮೂಢನ ಕೋಪವು ಬಹು ಭಾರ.
 
ಕ್ರೋಧವು ಕ್ರೂರ, ಕೋಪವು ಪ್ರವಾಹ;
ಆದರೆ ಅಸೂಯೆದ ಮುಂದೆ ಯಾವನು ನಿಂತಾನು?
 
ರಹಸ್ಯವಾದ ಪ್ರೀತಿಗಿಂತಲೂ
ಬಹಿರಂಗವಾದ ಗದರಿಕೆಯೇ ಲೇಸು.
 
ಸ್ನೇಹಿತನು ಮಾಡುವ ಗಾಯಗಳು ಭರವಸೆಗೆ ಯೋಗ್ಯವಾದದ್ದು;
ಆದರೆ ಶತ್ರುವಿನ ಮುದ್ದುಗಳು ಹೇರಳವಾಗಿವೆ.
 
ತೃಪ್ತಿ ಹೊಂದಿದವನು ಜೇನುತುಪ್ಪವನ್ನೂ ಅಸಹ್ಯಿಸಿಕೊಳ್ಳುತ್ತಾನೆ;
ಆದರೆ ಹಸಿದವನಿಗೆ ಕಹಿಯಾದ ಪ್ರತಿಯೊಂದು ವಸ್ತುವು ಸಿಹಿಯಾಗಿದೆ.
 
ತನ್ನ ಮನೆಯನ್ನು ಬಿಟ್ಟು ಅಲೆಯುವ ಮನುಷ್ಯನು
ತನ್ನ ಗೂಡನ್ನು ಬಿಟ್ಟು ಅಲೆಯುವ ಪಕ್ಷಿಯಂತೆ ಇದ್ದಾನೆ.
 
ತೈಲವೂ ಸುಗಂಧದ್ರವ್ಯವೂ ಹೃದಯವನ್ನು ಸಂತೋಷಪಡಿಸುವ ಹಾಗೆ,
ಆದರಣೆಯ ಸಲಹೆಯೂ ಸ್ನೇಹಿತನಿಗೆ ಮಧುರವಾಗಿರುತ್ತದೆ.
 
10 ನಿನ್ನ ಸ್ನೇಹಿತನನ್ನೂ ನಿನ್ನ ತಂದೆಯ ಸ್ನೇಹಿತನನ್ನೂ ತ್ಯಜಿಸಬೇಡ;
ಅಲ್ಲದೆ ನಿನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನ ಸಹೋದರನ ಮನೆಗೆ ಹೋಗಬೇಡ;
ಏಕೆಂದರೆ ದೂರವಾಗಿರುವ ಸಹೋದರನಿಗಿಂತ ಹತ್ತಿರವಾಗಿರುವ ನೆರೆಯವನೇ ಲೇಸು.
 
11 ನನ್ನನ್ನು ನಿಂದಿಸುವವರಿಗೆ ನಾನು ಉತ್ತರಿಸುವಂತೆಯೂ,
ನನ್ನ ಹೃದಯವನ್ನು ಸಂತೋಷಪಡಿಸುವಂತೆಯೂ, ನನ್ನ ಮಗುವೇ, ಜ್ಞಾನಿಯಾಗಿರು.
 
12 ಜಾಣನು ಕೇಡನ್ನು ಮುಂದಾಗಿ ಕಂಡು ಅಡಗಿಕೊಳ್ಳುತ್ತಾನೆ;
ಆದರೆ ಮುಗ್ಧನು ಮುಂದೆ ಹೋಗಿ ಹಾನಿಗೆ ಈಡಾಗುತ್ತಾನೆ.
 
13 ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ;
ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.
 
14 ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ,
ಅದು ಶಾಪವೆಂದು ಪರಿಗಣಿಸಲಾಗುವುದು.
 
15 ಜಗಳ ಮಾಡುವ ಹೆಂಡತಿಯು
ಮಳೆಗಾಲದಲ್ಲಿ ಸೋರುವ ಛಾವಣಿಯಂತಿದೆ.
16 ಅವಳನ್ನು ಅಡಗಿಸುವುದು, ಗಾಳಿಯನ್ನು ಅಡಗಿಸಿದಂತೆ;
ಕೈಯಿಂದ ಎಣ್ಣೆಯನ್ನು ಹಿಡಿದಂತೆ.
 
17 ಕಬ್ಬಿಣವು ಕಬ್ಬಿಣವನ್ನು ಹರಿತ ಮಾಡುವಂತೆ
ಒಬ್ಬನು ಮತ್ತೊಬ್ಬನನ್ನು ಹರಿತ ಮಾಡುವನು.
 
18 ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು;
ಹಾಗೆಯೇ ಯಜಮಾನನಿಗಾಗಿ ಕಾಯುವವನು ಸನ್ಮಾನ ಹೊಂದುವನು.
 
19 ನೀರಿನಲ್ಲಿ ಮುಖವು ಪ್ರತಿಬಿಂಬಿಸುವಂತೆ ಮನುಷ್ಯನ ಜೀವನವು
ಅವನ ಹೃದಯವನ್ನು ಪ್ರತಿಬಿಂಬಿಸುತ್ತದೆ.*
 
20 ಪಾತಾಳಕ್ಕೂ ವಿನಾಶಕ್ಕೂ ತೃಪ್ತಿ ಇಲ್ಲವೇ ಇಲ್ಲ;
ಹಾಗೆಯೇ, ಮನುಷ್ಯನ ಕಣ್ಣುಗಳು ಎಂದಿಗೂ ತೃಪ್ತಿಹೊಂದುವುದಿಲ್ಲ.
 
21 ಬೆಳ್ಳಿ, ಬಂಗಾರಗಳ ಪುಟಕ್ಕೆ ಕುಲುಮೆ ಹೇಗೆಯೋ,
ಹಾಗೆಯೇ ಹೊಗಳಿಕೆಯು ಮನುಷ್ಯನನ್ನು ಪರೀಕ್ಷಿಸುತ್ತದೆ.
 
22 ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಹಾಕಿ,
ಒಣಕೆಯಿಂದ ಕುಟ್ಟಿದರೂ,
ಅವನಿಂದ ಮೂರ್ಖನತವು ತೊಲಗುವುದಿಲ್ಲ.
 
23 ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು;
ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ.
24 ಐಶ್ವರ್ಯವು ಶಾಶ್ವತವಲ್ಲ;
ಕಿರೀಟವು ತಲತಲಾಂತರಕ್ಕೂ ಇರುವುದಿಲ್ಲ.
25 ಒಣಹುಲ್ಲನ್ನು ಕೊಯ್ದು ನಂತರ ಹೊಸ ಬೆಳೆ ಕಾಣಿಸಿಕೊಂಡಾಗ
ಮತ್ತು ಬೆಟ್ಟಗಳಿಂದ ಹುಲ್ಲು ಸಂಗ್ರಹಿಸಿದಾಗ,
26 ಆಗ ಕುರಿಮರಿಗಳು ನಿಮಗೆ ಬಟ್ಟೆಗಳನ್ನು ಒದಗಿಸುತ್ತವೆ,
ಆಡುಗಳ ಬೆಲೆಗೆ ನೀವು ಹೊಲವನ್ನು ಖರೀದಿಸಬಹುದು,
27 ನಿನ್ನ ಊಟಕ್ಕಾಗಿಯೂ, ನಿನ್ನ ಮನೆಯವರ ಆಹಾರಕ್ಕಾಗಿಯೂ
ನಿನ್ನ ದಾಸಿಯರ ಜೀವನಕ್ಕಾಗಿಯೂ ಬೇಕಾದಷ್ಟು ಆಡುಗಳ ಹಾಲು ಸಾಕಾಗುತ್ತದೆ.
 
* 27:19 27:19 ಆದ್ದರಿಂದ ಇತರರು ನಿಮ್ಮ ಹೃದಯವನ್ನು ನಿಮಗೆ ಹಿಂದಿರುಗಿಸುತ್ತಾರೆ