ಭಾಗ-5
107
ಕೀರ್ತನೆಗಳು 107–150
ಯೆಹೋವ ದೇವರನ್ನು ಕೊಂಡಾಡಿರಿ, ಅವರು ಒಳ್ಳೆಯವರು;
ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.
 
ಯೆಹೋವ ದೇವರು ವಿಮೋಚಿಸಿದವರು ಹಾಗೆ ಹೇಳಲಿ;
ವೈರಿಯ ಕೈಯಿಂದ ಬಿಡುಗಡೆಯಾದವರು ಆ ಕಥೆಯನ್ನು ಹೇಳಲಿ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ
ದೇಶಗಳಿಂದ ಕೂಡಿಸಿದವರು ಸಹ ಹಾಗೆ ಹೇಳಲಿ.
 
ಮರುಭೂಮಿಯಲ್ಲಿಯೂ, ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು,
ವಾಸಿಸುವುದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ ಹೋದರು.
ಹಸಿದು, ದಾಹಗೊಂಡು
ಅವರ ಪ್ರಾಣವು ಕುಗ್ಗಿಹೋಯಿತು.
ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು;
ದೇವರು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿದರು.
ಜನರು ವಾಸಿಸುವ ಪಟ್ಟಣಕ್ಕೆ ಹೋಗುವಹಾಗೆ,
ಜನರನ್ನು ಸರಿಯಾದ ಹಾದಿಯಲ್ಲಿ ನಡೆಸಿದರು.
ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರ ಉಪಕಾರಮಾಡಲಿ,
ಮಾನವರಿಗೆ ದೇವರು ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
ದೇವರು ದಾಹಪಟ್ಟ ಪ್ರಾಣವನ್ನು ತೃಪ್ತಿಪಡಿಸಿ,
ಹಸಿದ ಪ್ರಾಣವನ್ನು ಒಳ್ಳೆಯದರಿಂದ ತುಂಬಿಸಿದ್ದಾರೆ.
 
10 ಕೆಲವರು ಕತ್ತಲಲ್ಲಿ ಮತ್ತು ಮರಣದ ನೆರಳಿನಲ್ಲಿ ಕುಳಿತರು, ಕೆಲವರು ಸಂಕಟದಲ್ಲಿಯೂ,
ಕಬ್ಬಿಣದ ಬೇಡಿಗಳಲ್ಲಿ ಬಂಧಿತರಾಗಿ ಸೆರೆಬಿದ್ದವರು ಕೆಲವರು.
11 ಅವರು ದೇವರ ಮಾತುಗಳನ್ನು ಎದುರಿಸಿ,
ಮಹೋನ್ನತರ ಯೋಜನೆಯ ಬಗ್ಗೆ ಹೀನೈಯಿಸಿದ್ದರಿಂದ ಅವರಿಗೆ ಹಾಗಾಯಿತು.
12 ದೇವರು ಅವರ ಹೃದಯವನ್ನು
ಕಷ್ಟದಿಂದ ತಗ್ಗಿಸಿದಾಗ ಸಹಾಯಕನಿಲ್ಲದೆ ಕೆಳಗೆ ಬಿದ್ದರು.
13 ಆಗ ಅವರು ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆ ಇಟ್ಟರು;
ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.
14 ಕತ್ತಲೆಯೊಳಗಿಂದಲೂ, ಮರಣದ ನೆರಳಿನಿಂದಲೂ ದೇವರು
ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟರು.
15 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ,
ದೇವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
16 ದೇವರು ಕಂಚಿನ ಕದಗಳನ್ನು ಮುರಿದು
ಕಬ್ಬಿಣದ ಅಗುಳಿಗಳನ್ನು ಕಡಿದುಬಿಟ್ಟಿದ್ದಾರೆ.
 
17 ಮೂಢರು ತಮ್ಮ ದ್ರೋಹದಿಂದಲೂ ಕೆಲವರು
ತಮ್ಮ ಅಕ್ರಮಗಳಿಂದಲೂ ಶ್ರಮೆ ಪಡುತ್ತಾರೆ.
18 ಅವರ ಪ್ರಾಣವು ಎಲ್ಲಾ ಆಹಾರಕ್ಕೂ ಅಸಹ್ಯಪಡುವಷ್ಟು ಅಸ್ವಸ್ಥರಾಗುತ್ತಾರೆ.
ಅವರು ಮರಣದ ಬಾಗಿಲುಗಳಿಗೆ ಸಮೀಪಿಸುತ್ತಾರೆ.
19 ಆಗ ಅವರು ಸಹ ಇಕ್ಕಟ್ಟಿನಲ್ಲಿ ಅವರು ಯೆಹೋವ ದೇವರಿಗೆ ಕೂಗಿದರು;
ದೇವರು ಅವರ ಸಂಕಟಗಳೊಳಗಿಂದ ಅವರನ್ನು ರಕ್ಷಿಸಿದರು.
20 ದೇವರು ತಮ್ಮ ವಾಕ್ಯವನ್ನು ಕಳುಹಿಸಿ, ಅವರನ್ನು ಸ್ವಸ್ಥಮಾಡಿದರು;
ನಾಶನದಿಂದಲೂ ಅವರನ್ನು ತಪ್ಪಿಸಿದರು.
21 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಕುಂದದ ಪ್ರೀತಿಗೋಸ್ಕರವೂ,
ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
22 ಧನ್ಯವಾದ ಬಲಿಗಳನ್ನು ಅರ್ಪಿಸಿ,
ದೇವರ ಕೆಲಸಗಳನ್ನು ಉತ್ಸಾಹದಿಂದ ಸಾರಲಿ.
 
23 ಕೆಲವರು ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುತ್ತಾರೆ.
ಅವರು ಜಲರಾಶಿಯಲ್ಲಿ ವ್ಯಾಪಾರ ಮಾಡುವವರು,
24 ಯೆಹೋವ ದೇವರ ಕೆಲಸಗಳನ್ನೂ,
ಅಗಾಧ ಜಲದಲ್ಲಿ ದೇವರ ಅದ್ಭುತಗಳನ್ನೂ ಕಾಣುತ್ತಾರೆ.
25 ದೇವರು ಆಜ್ಞಾಪಿಸಿ ಬಿರುಗಾಳಿಯನ್ನು ಎಬ್ಬಿಸಿದರು;
ಅದು ಅದರ ತೆರೆಗಳನ್ನು ಎಬ್ಬಿಸಿತು.
26 ಅವರು ಆಕಾಶದವರೆಗೆ ಏರುತ್ತಾರೆ, ತಿರುಗಿ ಅಗಾಧಗಳವರೆಗೆ ಇಳಿಯುತ್ತಾರೆ;
ಅಪಾಯದಲ್ಲಿ ಅವರ ಪ್ರಾಣವು ಕಳವಳದಿಂದ ಕರಗಿ ಹೋಗುತ್ತದೆ.
27 ಅವರು ಅತ್ತಿತ್ತ ತೂಗಾಡಿ ಕುಡುಕರಂತೆ ಓಲಾಡುತ್ತಿದ್ದರು.
ಅವರ ಜ್ಞಾನವೆಲ್ಲಾ ಮುಗಿದು ಹೋಯಿತು.
28 ಆಗ ಅವರು ಸಹ ಇಕ್ಕಟ್ಟಿನಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟರು;
ದೇವರು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿದನು.
29 ದೇವರು ಬಿರುಗಾಳಿಯನ್ನು ಶಾಂತ ಮಾಡಿದರು.
ಅದರ ತೆರೆಗಳು ನಿಂತುಹೋದವು.
30 ಅವು ಶಾಂತವಾದಾಗ ಜನರು ಸಂತೋಷಪಟ್ಟರು.
ಹೀಗೆ ಅವರು ಅಪೇಕ್ಷಿಸಿದ ಬಂದರಿಗೆ ದೇವರು ಅವರನ್ನು ನಡೆಸಿದರು.
31 ಅವರು ಯೆಹೋವ ದೇವರನ್ನು ಒಡಂಬಡಿಕೆಯ ಪ್ರೀತಿಗೋಸ್ಕರವೂ,
ಅವರು ಮಾನವರಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
32 ಜನರ ಸಭೆಯಲ್ಲಿ ದೇವರನ್ನು ಕೊಂಡಾಡಲಿ,
ಹಿರಿಯರ ಸಭೆಯಲ್ಲಿ ದೇವರನ್ನು ಸ್ತುತಿಸಲಿ.
 
33 ದೇವರು ನದಿಗಳನ್ನು ಮರುಭೂಮಿಯಾಗಿ ಮಾರ್ಪಡಿಸಿದರು,
ನೀರಿನ ಬುಗ್ಗೆಗಳನ್ನು ದಾಹಗೊಂಡ ಭೂಮಿಯಂತೆ ಮಾಡಿದರು.
34 ದೇವರು ಫಲವುಳ್ಳ ಭೂಮಿಯನ್ನು ಬಂಜರಾಗುವಂತೆ ಮಾಡಿದರು.
ಇದಕ್ಕೆಲ್ಲ ಕಾರಣ ಅದರ ನಿವಾಸಿಗಳ ಕೆಟ್ಟತನವೇ ಆಗಿತ್ತು.
35 ದೇವರು ಮರುಭೂಮಿಯನ್ನು ನೀರಿನ ಕೆರೆಯಾಗಿಯೂ,
ಒಣ ಭೂಮಿಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸಿದರು.
36 ಆದರೆ ದೇವರು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದರು;
ಆ ಜನರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿದರು.
37 ಅವರು ಹೊಲಗಳನ್ನು ಬಿತ್ತಿ, ದ್ರಾಕ್ಷಿಯ ಬಳ್ಳಿಗಳನ್ನು ನೆಟ್ಟರು;
ಅವು ಹುಟ್ಟುವಳಿಯ ಫಲವನ್ನು ಕೊಡುವವು.
38 ದೇವರು ಅವರನ್ನು ಆಶೀರ್ವದಿಸಿದ್ದರಿಂದ, ಅವರು ಬಹಳವಾಗಿ ಹೆಚ್ಚಿದರು;
ದೇವರು ದನಗಳು ಕಡಿಮೆಯಾಗುವಂತೆ ಮಾಡಲಿಲ್ಲ.
 
39 ಆದರೆ ಜನರು ಸಂಖ್ಯೆಯಲ್ಲಿ ಕಡಿಮೆಯಾಗಿ
ಚಿಂತೆ ಸಂಕಟದಿಂದ ಕುಗ್ಗಿಹೋದರು.
40 ದೇವರು ಅಧಿಪತಿಗಳಿಗೆ ಶಿಸ್ತನ್ನು ನೀಡಿ,
ಅವರನ್ನು ದಾರಿಯಿಲ್ಲದ ಕಾಡಿನಲ್ಲಿ ಅಲೆಯುವಂತೆ ಮಾಡಿದರು.
41 ಆದರೂ ದೇವರು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ,
ಅವನ ಕುಟುಂಬಗಳನ್ನು ಮಂದೆಯ ಹಾಗೆ ಮಾಡಿದರು.
42 ನೀತಿವಂತರು ನೋಡಿ ಸಂತೋಷಪಡುವರು;
ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.
 
43 ಜ್ಞಾನಿಗಳು ಇವುಗಳನ್ನು ಗಮನಿಸಲಿ,
ಯೆಹೋವ ದೇವರ ಪ್ರೀತಿಕೃತ್ಯಗಳನ್ನು ಗ್ರಹಿಸಿಕೊಳ್ಳಲಿ.