ಕೀರ್ತನೆ 14
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
“ದೇವರು ಇಲ್ಲಾ,” ಎಂದು
ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ.
ಅವರು ಕೆಟ್ಟು ಹೋಗಿ, ಅಸಹ್ಯ ಕೃತ್ಯಗಳನ್ನು ಮಾಡುತ್ತಾರೆ;
ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ.
 
ದೇವರನ್ನು ಹುಡುಕುವ
ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ
ಯೆಹೋವ ದೇವರು ಸ್ವರ್ಗದಿಂದ,
ಮನುಷ್ಯರ ಮೇಲೆ ದೃಷ್ಟಿಸಿದರು.
ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದಾರೆ;
ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ,
ಒಬ್ಬರಾದರೂ ಇಲ್ಲ.
 
ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ?
 
ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ?
ಆದರೆ ಅವರು ಯೆಹೋವ ದೇವರಿಗೆ ಎಂದೂ ಮೊರೆಯಿಡುವುದಿಲ್ಲ.
ದೇವರು ನೀತಿವಂತರ ಸಹವಾಸದಲ್ಲಿ ಇರುವುದರಿಂದ,
ದುಷ್ಟತ್ವವನ್ನು ನಡೆಸುವವರು ಅತ್ಯಂತ ಭಯಭ್ರಾಂತರಾಗುವರು.
ದುಷ್ಟತ್ವ ನಡೆಸುವವರೇ, ನೀವು ಬಡವರ ಯೋಜನೆಗಳನ್ನು ನಿರಾಶೆಗೊಳಿಸುತ್ತೀರಿ,
ಆದರೆ ಯೆಹೋವ ದೇವರೇ ಅವರ ಆಶ್ರಯವಾಗಿದ್ದಾರೆ.
 
ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು!
ಯೆಹೋವ ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ,
ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.