ಕೀರ್ತನೆ 32
ದಾವೀದನ ಕೀರ್ತನೆ. ಮಾಸ್ಕಿಲ* ಪದ್ಯ.
ಯಾರ ಉಲ್ಲಂಘನೆಗಳು ಕ್ಷಮಿಸಲಾಗಿವೆಯೋ,
ಯಾರ ಪಾಪಗಳು ಮುಚ್ಚಲಾಗಿವೆಯೋ
ಅವರೇ ಧನ್ಯರು.
ಯೆಹೋವ ದೇವರು ಯಾರ ಅನ್ಯಾಯವನ್ನು ಎಣಿಸುವುದಿಲ್ಲವೋ,
ಯಾರ ಆತ್ಮದಲ್ಲಿ ವಂಚನೆ ಇರುವುದಿಲ್ಲವೋ
ಆ ಮನುಷ್ಯನು ಧನ್ಯನು.
 
ನಾನು ನನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ,
ದಿನವೆಲ್ಲಾ ನರಳುವುದರಿಂದ
ನನ್ನ ಎಲುಬುಗಳು ಸವೆದು ಹೋದವು.
ದೇವರೇ, ರಾತ್ರಿ ಹಗಲು
ನಿಮ್ಮ ಕೈ ನನ್ನ ಮೇಲೆ ಭಾರವಾಗಿತ್ತು;
ನನ್ನ ಬಲವು ಬೇಸಿಗೆಯ ಬಿಸಿಲಿನಲ್ಲಿ
ಕುಂದಿಹೋಗುವಂತೆ ಆಯಿತು.
 
ನನ್ನ ಪಾಪವನ್ನು ನಿಮಗೆ ತಿಳಿಸಿ,
ನನ್ನ ಅನ್ಯಾಯವನ್ನು ಮರೆಮಾಡದೆ,
“ನನ್ನ ಉಲ್ಲಂಘನೆಗಳನ್ನು ಯೆಹೋವ ದೇವರಿಗೆ
ಅರಿಕೆ ಮಾಡುವೆನು,” ಎಂದು ಹೇಳಿದೆನು;
ಆಗ, ನೀವು
ನನ್ನ ಪಾಪದ ಅಪರಾಧವನ್ನು ಪರಿಹರಿಸಿದಿರಿ.
 
ಆದುದರಿಂದ ಭಕ್ತರೆಲ್ಲರು ನೀವು
ಸಿಕ್ಕುವ ಕಾಲದಲ್ಲಿ ನಿಮಗೆ ಪ್ರಾರ್ಥನೆ ಮಾಡಲಿ;
ನಿಶ್ಚಯವಾಗಿ ನೀರಿನ ಮಹಾಪ್ರವಾಹಗಳು
ಅವರ ಸಮೀಪಕ್ಕೆ ಬರುವುದಿಲ್ಲ.
ನೀವು ನನಗೆ ಮರೆಮಾಡುವ ಸ್ಥಳವಾಗಿರುವಿರಿ;
ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀರಿ;
ವಿಮೋಚನಾ ಧ್ವನಿಗಳಿಂದ ನೀವು ನನ್ನನ್ನು ಸುತ್ತುವರಿಯುತ್ತೀರಿ.
 
ಯೆಹೋವ ದೇವರು ಹೇಳುವುದೇನೆಂದರೆ: ನಾನು ನಿನಗೆ ಬುದ್ಧಿ ಹೇಳಿ,
ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು;
ನನ್ನ ಮೆಚ್ಚುಗೆಯಿಂದ ನಿನ್ನನ್ನು ನಡೆಸುವೆನು.
ವಿವೇಕವಿಲ್ಲದ ಕುದುರೆಯ ಹಾಗೆಯೂ,
ಹೇಸರಗತ್ತೆಯ ಹಾಗೆಯೂ ಇರಬೇಡಿರಿ;
ಬಾರಿನಿಂದಲೂ, ಕಡಿವಾಣದಿಂದಲೂ ಅವುಗಳನ್ನು ನಿಯಂತ್ರಿಸಬೇಕು,
ಇಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.
10 ದುಷ್ಟರಿಗೆ ವ್ಯಥೆಗಳು ಬಹಳ;
ಆದರೆ ಯೆಹೋವ ದೇವರಲ್ಲಿ ಭರವಸವಿಡುವವನನ್ನು
ಅದರ ಒಂಡಬಡಿಕೆಯ ಪ್ರೀತಿಯು ಸುತ್ತುವರಿಯುವುದು.
 
11 ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ;
ಯಥಾರ್ಥ ಹೃದಯ ಉಳ್ಳವರೇ, ಜಯಗೀತೆ ಹಾಡಿರಿ.
* ಕೀರ್ತನೆ 32: 32:0 ಮಾಸ್ಕಿಲ ಬಹುಶಃ ಸಾಹಿತ್ಯಿಕ ಅಥವಾ ಸಂಗೀತ ಪದ