ಕೀರ್ತನೆ 49
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯನ ಪುತ್ರರು ಸಂಯೋಜಿಸಿರುವ ಒಂದು ಕೀರ್ತನೆ.
ಎಲ್ಲಾ ಜನರೇ, ಇದನ್ನು ಕೇಳಿರಿ;
ಭೂಲೋಕದ ನಿವಾಸಿಗಳೇ,
ಸಾಮಾನ್ಯರೇ, ಉನ್ನತರೇ, ಐಶ್ವರ್ಯವಂತರೇ,
ಬಡವರೇ ಎಲ್ಲರೂ ಕಿವಿಗೊಡಿರಿ.
ನನ್ನ ಬಾಯಿ ಜ್ಞಾನವನ್ನು ನುಡಿಯುವುದು,
ನನ್ನ ಹೃದಯದ ಧ್ಯಾನವು ವಿವೇಕವಾಗಿರುವುದು.
ಸಾಮ್ಯಕ್ಕೆ ನನ್ನ ಕಿವಿಗೊಟ್ಟು
ಒಗಟನ್ನು ಕಿನ್ನರಿಯಿಂದ ಬಿಚ್ಚುವೆನು.
 
ಕೇಡಿನ ದಿವಸಗಳಲ್ಲಿ ನನಗೆ ಒಳಸಂಚು ಮಾಡುವವರ
ಅಕ್ರಮವು ನನ್ನನ್ನು ಸುತ್ತಿಕೊಳ್ಳುವಾಗ ನಾನು ಏಕೆ ಭಯಪಡಬೇಕು?
ಅವರು ತಮ್ಮ ಸಂಪತ್ತಿನಲ್ಲಿ ಭರವಸೆಯಿಟ್ಟು,
ತಮ್ಮ ಅಧಿಕ ಐಶ್ವರ್ಯಗಳಲ್ಲಿ ಜಂಭಪಡುವರು.
ಯಾರೂ ಇನ್ನೊಬ್ಬರ ಜೀವವನ್ನು ವಿಮೋಚಿಸಲಾರರು;
ಅಥವಾ ಇತರರಿಗಾಗಿ ಯಾರೂ ದೇವರಿಗೆ ಈಡು ಕೊಡಲಾರರು.
ಆತ್ಮದ ವಿಮೋಚನೆಯು ಬಹು ಬೆಲೆಯುಳ್ಳದ್ದು,
ಅದಕ್ಕೆ ಸಾಕಷ್ಟು ಬೆಲೆಯನ್ನು ಕಟ್ಟಲು ಯಾರಿಗೂ ಸಾಧ್ಯವಿಲ್ಲ.
ಮನುಷ್ಯರು ಮರಣ ನಾಶವನ್ನು ಕಾಣದೆ,
ಶಾಶ್ವತವಾಗಿ ಬದುಕುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ.
10 ಏಕೆಂದರೆ, ಜ್ಞಾನಿಗಳು ಸಾಯುವುದನ್ನು ಕಾಣುತ್ತೇವೆ.
ಹಾಗೆಯೇ ಮೂರ್ಖರೂ ಜ್ಞಾನಹೀನರೂ ಸಹ ನಾಶವಾಗುತ್ತಾರೆ.
ಅವರ ಆಸ್ತಿಯನ್ನು ಇತರರು ಪಡೆಯುತ್ತಾರೆ.
11 ಜಮೀನುಗಳಿಗೆ ತಮ್ಮ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ.
ಆದರೂ ಸಮಾಧಿಯೇ ಅವರಿಗೆ ಶಾಶ್ವತಮಂದಿರವು.
ಅದೇ ಅವರ ತಲತಲಾಂತರಕ್ಕೂ ನಿವಾಸಸ್ಥಾನ.
 
12 ಮನುಷ್ಯನು ಎಷ್ಟು ಆಸ್ತಿ ಗೌರವ ಸಂಪಾದಿಸಿದ್ದರೂ,
ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.
 
13 ತಮ್ಮಲ್ಲಿಯೇ ಭರವಸೆ ಇಟ್ಟುಕೊಳ್ಳುವವರಿಗೂ ಇದೇ ಗತಿ.
ಅಂಥವರ ಮಾತುಗಳನ್ನು ಒಪ್ಪಿ ಅನುಸರಿಸುವವರ ಗತಿಯೂ ಇದೆ.
14 ಅವರು ಕುರಿಗಳಂತೆ ಸಾಯಲು ನೇಮಕವಾಗಿದ್ದಾರೆ.
ಮರಣವೇ ಅವರ ಕುರುಬ;
ಅವರ ವೈಭವ ನಿವಾಸದಿಂದ ದೂರ ಸಮಾಧಿಯಲ್ಲಿರುವುದು
ಅವರ ರೂಪ ಕ್ಷಯವಾಗುವುದು.
ಆದರೆ ಯಥಾರ್ಥರು ಬೆಳಿಗ್ಗೆ ಅವರನ್ನು ಬಿಟ್ಟು ಸಾಗುತ್ತಿರುವರು.
15 ಆದರೆ ದೇವರು ನನ್ನ ಪ್ರಾಣವನ್ನು ಮರಣದಿಂದ ವಿಮೋಚನೆ ಮಾಡುವರು.
ದೇವರು ನನ್ನನ್ನು ತಮಗಾಗಿ ಅಂಗೀಕರಿಸುವರು.
16 ಒಬ್ಬನು ಐಶ್ವರ್ಯವಂತನಾದರೆ
ಮತ್ತು ಅವನ ಮನೆಯ ಘನತೆ ದೊಡ್ಡದಾದರೆ ಕಳವಳ ಪಡಬೇಡ.
17 ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗಲಾರನಷ್ಟೆ;
ಅವನ ವೈಭವವು ಅವನೊಡನೆ ಹೋಗುವುದಿಲ್ಲ.
18 ಸಿರಿ ಬಂದಾಗ ಜನರ ಹೊಗಳಿಕೆ ತಪ್ಪದು ಎಂಬಂತೆ ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ,
ಜನಸ್ತುತಿಯಿಂದಲೂ ಕೂಡಿದವನಾದರೂ
19 ಅವನು ತನ್ನ ಪೂರ್ವಿಕರ ಬಳಿಗೆ ಹೋಗುವನು;
ಅವರು ಸದಾಕಾಲಕ್ಕೂ ಜೀವ ಬೆಳಕನ್ನು ಕಾಣುವುದಿಲ್ಲ.
 
20 ಮನುಷ್ಯನು ಎಷ್ಟು ಘನತೆಯಲ್ಲಿದ್ದು ವಿವೇಕವಿಲ್ಲದವರಾದರೆ
ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.