ಕೀರ್ತನೆ 78
ಆಸಾಫನ ಮಸ್ಕೀಲ್ ಕೀರ್ತನೆ.
ನನ್ನ ಜನರೇ, ನನ್ನ ಬೋಧನೆಗೆ ಕಿವಿಗೊಡಿರಿ;
ನನ್ನ ಬಾಯಿ ಮಾತುಗಳನ್ನು ಲಾಲಿಸಿರಿ.
ನಾನು ಸಾಮ್ಯವನ್ನು ಹೇಳಲು ನನ್ನ ಬಾಯಿ ತೆರೆಯುವೆನು.
ಪೂರ್ವದಿಂದಿರುವ ಗುಪ್ತವಾದವುಗಳನ್ನು ನುಡಿಯುವೆನು.
ಅವುಗಳನ್ನು ನಾವು ಕೇಳಿ ತಿಳಿದಿದ್ದೇವೆ.
ನಮ್ಮ ಪಿತೃಗಳು ನಮಗೆ ವಿವರಿಸಿದರು.
ನಾವು ಸಹ ಯೆಹೋವ ದೇವರ ಸ್ತೋತ್ರಗಳನ್ನೂ ಅವರ ಶಕ್ತಿಯನ್ನೂ
ದೇವರು ಮಾಡಿದ ಅದ್ಭುತಗಳನ್ನೂ ನಮ್ಮ ಮಕ್ಕಳಿಗೆ ವಿವರಿಸುವೆವು.
ನಮ್ಮ ಮಕ್ಕಳು ಮುಂದಿನ ತಲೆಮಾರಿಗೆ ಮರೆಮಾಡದಿರುವರು.
ಅವರು ಯಾಕೋಬ ವಂಶದಲ್ಲಿ ಶಾಸನಗಳನ್ನು ಸ್ಥಾಪಿಸಿ,
ಇಸ್ರಾಯೇಲಿನಲ್ಲಿ ನಿಯಮವನ್ನು ಇಟ್ಟು,
ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ,
ಅವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ,
ಇದರಿಂದ ಮುಂದಿನ ತಲೆಮಾರಿಗೆ ವಾಕ್ಯವು ಗೊತ್ತಾಗಿ,
ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು
ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು.
ಆಗ ಅವರು ದೇವರಲ್ಲಿ ತಮ್ಮ ಭರವಸೆ ಇಡುವರು.
ಮತ್ತು ದೇವರ ಕ್ರಿಯೆಗಳನ್ನು ಮರೆತು ಬಿಡದೆ
ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವರು.
ಆಗ ಅವರು ತಮ್ಮ ಪಿತೃಗಳ ಹಾಗೆ ಹಟಮಾರಿ ಮತ್ತು ದಂಗೆಕೋರ ಸಂತತಿಯವರು ಆಗಿರುವುದಿಲ್ಲ,
ಅವರ ಹೃದಯವು ದೇವರಿಗೆ ಸತ್ಯವಾಗಿರಲಿಲ್ಲ,
ಅವರ ಆತ್ಮವು ದೇವರಲ್ಲಿ
ನಂಬಿಗಸ್ತಿಕೆಯಿಂದಲೂ ಇರಲಿಲ್ಲ.
 
ಎಫ್ರಾಯೀಮನ ಮಕ್ಕಳು ಆಯುಧಗಳನ್ನು ಧರಿಸಿ, ಬಿಲ್ಲುಗಳನ್ನು ಹೊತ್ತುಕೊಂಡಿದ್ದರೂ
ಕಾಳಗದ ದಿವಸದಲ್ಲಿ ಹಿಂತಿರುಗಿಕೊಂಡರು.
10 ಅವರು ದೇವರ ಒಡಂಬಡಿಕೆಯನ್ನು ಕೈಗೊಳ್ಳಲಿಲ್ಲ.
ದೇವರ ನಿಯಮದಲ್ಲಿ ನಡೆಯಲೊಲ್ಲದೆ ಇದ್ದರು.
11 ದೇವರು ಅವರಿಗೆ ತೋರಿಸಿದ ಕೃತ್ಯಗಳನ್ನೂ
ದೇವರು ಮಾಡಿದ ಅದ್ಭುತಗಳನ್ನೂ ಮರೆತುಬಿಟ್ಟರು.
12 ದೇವರು ಪಿತೃಗಳ ಮುಂದೆ ಈಜಿಪ್ಟ್ ದೇಶದಲ್ಲಿ,
ಚೋವನ್ ಬೈಲಿನಲ್ಲಿ ಅದ್ಭುತಗಳನ್ನು ಮಾಡಿದರು.
13 ದೇವರು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದರು.
ನೀರನ್ನು ಗೋಡೆಯಾಗಿ ನಿಲ್ಲಿಸಿದರು.
14 ದೇವರು ಹಗಲಿನಲ್ಲಿ ಮೇಘದಿಂದಲೂ
ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡೆಸಿದರು.
15 ಮರುಭೂಮಿಯಲ್ಲಿ ದೇವರು ಬಂಡೆಗಳನ್ನು ಸೀಳಿ,
ಜನರಿಗೆ ಮಹಾ ಜಲಾಗಾಧಗಳ ಹಾಗೆ ನೀರನ್ನು ಕುಡಿಯಲು ಕೊಟ್ಟರು.
16 ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು,
ನದಿಗಳನ್ನು ನೀರನ್ನು ಹರಿಯಮಾಡಿದರು.
 
17 ಆದರೆ ಜನರು ಇನ್ನೂ ದೇವರಿಗೆ ವಿರೋಧವಾಗಿ ಪಾಪಮಾಡಿ,
ಮರುಭೂಮಿಯಲ್ಲಿ ಮಹೋನ್ನತರಿಗೆ ವಿರೋಧವಾಗಿ ಕೋಪವನ್ನೆಬ್ಬಿಸಿದರು.
18 ದೇವರನ್ನು ತಮ್ಮ ಹೃದಯದಲ್ಲಿ ಬೇಕೆಂದು ಪರೀಕ್ಷಿಸಿ,
ತಮ್ಮ ದುರಾಶೆಗಳಿಗೋಸ್ಕರ ಆಹಾರವನ್ನು ಕೇಳಿದರು.
19 ಹೌದು, ಅವರು ದೇವರಿಗೆ
ವಿರೋಧವಾಗಿ ಮಾತನಾಡಿ,
“ದೇವರು ಅರಣ್ಯದಲ್ಲಿ ಭೋಜನವನ್ನು ಸಿದ್ಧ ಮಾಡಬಲ್ಲನೋ?
20 ಇಗೋ, ದೇವರು ಬಂಡೆಯನ್ನು ಹೊಡೆಯಲಾಗಿ,
ನೀರು ಚಿಮ್ಮಿ ಹೊರಟಿತು.
ಹಳ್ಳಗಳು ದಡಮೀರಿ ಹರಿದವು.
ಅರಣ್ಯದಲ್ಲಿ, ರೊಟ್ಟಿಯನ್ನು ಸಹ ಕೊಡಬಲ್ಲನೋ?
ತಮ್ಮ ಜನರಿಗೆ ಮಾಂಸವನ್ನು ಸಿದ್ಧಮಾಡುವನೋ?” ಎಂದರು.
21 ಯೆಹೋವ ದೇವರು ಇದನ್ನು ಕೇಳಿ ಬೇಸರಗೊಂಡರು.
ಯಾಕೋಬ್ಯರಲ್ಲಿ ಬೆಂಕಿ ಹೊತ್ತಿತು.
ಇಸ್ರಾಯೇಲರು ದಂಡನೆಗೆ ಒಳಗಾದರು.
22 ಏಕೆಂದರೆ ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ.
ದೇವರ ರಕ್ಷಣೆಯಲ್ಲಿ ಭರವಸೆ ಇಡಲಿಲ್ಲ.
23 ಆದರೆ ದೇವರು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ,
ಆಕಾಶದ ಕದಗಳನ್ನು ತೆರೆದರು.
24 ಉಣ್ಣುವುದಕ್ಕೆ ಮನ್ನವನ್ನು ಜನರ ಮೇಲೆ ಸುರಿಸಿ,
ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟರು.
25 ದೇವದೂತರ ಆಹಾರವನ್ನು ಮಾನವರು ತಿಂದರು.
ದೇವರು ಅವರಿಗೆ ಬೇಕಾದಷ್ಟು ಕಳುಹಿಸಿದರು.
26 ಮೂಡಣ ಗಾಳಿಯನ್ನು ಆಕಾಶದಲ್ಲಿ ಹುಟ್ಟಿಸಿ,
ತಮ್ಮ ಶಕ್ತಿಯಿಂದ ದಕ್ಷಿಣ ಗಾಳಿಯನ್ನು ಬರಮಾಡಿದರು.
27 ಧೂಳಿನಂತೆ ಮಾಂಸವನ್ನು ಸುರಿಸಿದರು.
ಸಮುದ್ರದ ಮರಳಿನಂತೆ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿದರು.
28 ಅವರ ಮಧ್ಯದಲ್ಲಿಯೂ
ಅವರ ಗುಡಾರಗಳ ಸುತ್ತಲೂ ಸುರಿಸಿದರು.
29 ಆಗ ಅವರು ತಿಂದು ಬಹಳ ತೃಪ್ತಿಗೊಂಡರು.
ಅವರು ಆಶಿಸಿದ್ದನ್ನು ದೇವರು ಕೊಟ್ಟರು.
30 ಅವರು ತಮ್ಮ ಆಶೆಯನ್ನು ಬಿಡದೆ,
ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ,
31 ದೇವರ ಶಿಕ್ಷೆ ಅವರ ಮೇಲೆ ಬಿತ್ತು.
ಅವರಲ್ಲಿ ಕೊಬ್ಬಿದವರು ಸತ್ತರು.
ಇಸ್ರಾಯೇಲರ ಪ್ರಾಯಸ್ಥರು ಸಹ ಸತ್ತುಹೋದರು.
 
32 ಇದೆಲ್ಲಾ ಆದಾಗ್ಯೂ ಜನರು ಇನ್ನೂ ಪಾಪಮಾಡುತ್ತಿದ್ದರು.
ದೇವರ ಅದ್ಭುತಗಳನ್ನು ಕಂಡರೂ ನಂಬಲಿಲ್ಲ.
33 ಆಗ ದೇವರು ಅವರ ದಿವಸಗಳನ್ನು ವ್ಯರ್ಥವಾಗಿಯೂ
ಅವರ ವರ್ಷಗಳನ್ನು ಕಳವಳದಲ್ಲಿಯೂ ಕಳೆಯ ಹೋಗಲು ಅನುಮತಿಸಿದರು.
34 ದೇವರು ಜನರನ್ನು ದಂಡಿಸುವಾಗೆಲ್ಲಾ ಅವರು ದೇವರನ್ನು ಹುಡುಕಿದರು.
ಆಸಕ್ತಿಯಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು.
35 ದೇವರು ತಮ್ಮ ಬಂಡೆ ಎಂದೂ ಮಹೋನ್ನತರಾದ ದೇವರು
ತಮ್ಮ ವಿಮೋಚಕರೆಂದೂ ಜ್ಞಾಪಕ ಮಾಡಿಕೊಳ್ಳುತ್ತಿದ್ದರು.
36 ಆದರೂ ಅವರು ತಮ್ಮ ಬಾಯಿಗಳಿಂದ ದೇವರಿಗೆ ಮುಖಸ್ತುತಿ ಮಾಡಿ,
ತಮ್ಮ ನಾಲಿಗೆಯಿಂದ ದೇವರನ್ನು ಸುಳ್ಳಾಗಿ ಹೋಗಳುತ್ತಿದ್ದರು.
37 ಅವರ ಹೃದಯವು ದೇವರ ಸಂಗಡ ಸ್ಥಿರವಾಗಿರಲಿಲ್ಲ.
ಅವರು ದೇವರ ಒಡಂಬಡಿಕೆಯಲ್ಲಿ ನಂಬಿಗಸ್ತರಾಗಿರಲಿಲ್ಲ.
38 ಆದಾಗ್ಯೂ ದೇವರು ಅವರನ್ನು ಕರುಣಿಸಿ,
ಅವರ ಅಕ್ರಮವನ್ನು ಕ್ಷಮಿಸಿ,
ನಾಶಮಾಡದೆ ಬಿಟ್ಟುಬಿಟ್ಟರು.
ಹೌದು, ಅನೇಕ ಸಾರಿ ದೇವರು ಕೋಪಿಸಿಕೊಳ್ಳದಿದ್ದರು,
ತಮ್ಮ ಬೇಸರವನ್ನು ದೇವರು ಪ್ರಯೋಗಿಸಲಿಲ್ಲ.
39 ಜನರು ಬರೀ ಮಾಂಸ ಮಾತ್ರದವರೂ
ತಿರುಗಿಕೊಳ್ಳದೆ ಹೋಗುವ ಗಾಳಿಯೂ ಆಗಿದ್ದಾರೆಂದು ದೇವರು ಜ್ಞಾಪಕಮಾಡಿಕೊಂಡರು.
 
40 ಎಷ್ಟೋ ಸಾರಿ ಜನರು ಮರುಭೂಮಿಯಲ್ಲಿ ದೇವರಿಗೆ ಬೇಸರಮಾಡಿದರು.
ಕಾಡಿನಲ್ಲಿ ದೇವರನ್ನು ದುಃಖಪಡಿಸಿದರು.
41 ಅವರು ತಿರುಗಿಬಿದ್ದು ದೇವರನ್ನು ಪರೀಕ್ಷಿಸಿದರು.
ಇಸ್ರಾಯೇಲರ ಪರಿಶುದ್ಧರಿಗೆ ಬೇಸರಗೊಳಿಸಿದರು.
42 ದೇವರು ಅವರನ್ನು
ವೈರಿಯಿಂದ ವಿಮೋಚಿಸಿದ್ದನ್ನೂ ತಾವು ತೋರಿಸಿದ ಶಕ್ತಿಯನ್ನೂ ಅವರು ಸ್ಮರಿಸಲಿಲ್ಲ.
43 ಈಜಿಪ್ಟಿನಲ್ಲಿ ಆದ ಸೂಚಕಕಾರ್ಯಗಳನ್ನೂ,
ಚೋವನ್ ಬಯಲಿನಲ್ಲಿ ನಡೆಸಿದ ಅದ್ಭುತಗಳನ್ನು
ಮಾಡಿದ ದಿವಸವನ್ನೂ ಅವರು ಜ್ಞಾಪಕ ಮಾಡಿಕೊಳ್ಳಲಿಲ್ಲ.
44 ಅವರು ಕುಡಿಯಲಾರದ ಹಾಗೆ ಅವರ ನದಿಗಳು ರಕ್ತವಾದವು.
ಅವರ ಹೊಳೆಗಳು ಸಹ ರಕ್ತವಾಗಿ ಮಾರ್ಪಟ್ಟವು.
45 ಅವರಲ್ಲಿ ವಿವಿಧ ಹುಳುಗಳು ಬಂದವು.
ಅವು ಅವರನ್ನು ಹಾನಿಮಾಡಿದವು. ಕಪ್ಪೆಗಳು ಸಹ ಕಳುಹಿಸಲಾದವು.
ಅವು ಸಹ ಅವರನ್ನು ಹಾನಿಮಾಡಿದವು.
46 ಅವರ ಬೆಳೆಗಳು ಕಂಬಳಿ ಹುಳುಗಳಿಗೂ
ಅವರ ವ್ಯವಸಾಯ ಮಿಡತೆಗಳಿಗೂ ತುತ್ತಾದವು.
47 ಅವರ ದ್ರಾಕ್ಷಿಬಳ್ಳಿಗಳು ಕಲ್ಮಳೆಯಿಂದಲೂ
ಅವರ ಅತ್ತಿಮರಗಳು ಮಂಜಿನಿಂದಲೂ ನಾಶವಾದವು.
48 ಅವರ ದನಗಳು ಕಲ್ಮಳೆಗೂ
ಅವರ ಪಶುಗಳು ಸಿಡಿಲಿಗೂ ಒಳಪಟ್ಟವು.
49 ದೇವರು ನಾಶದ ದೇವದೂತರನ್ನು ಕಳುಹಿಸುತ್ತಾ
ತಮ್ಮ ಬೇಸರದಿಂದಲೂ ದುಃಖದಿಂದಲೂ
ಇಕ್ಕಟ್ಟುಗಳನ್ನೂ ಅವರ ಮೇಲೆ ಸುರಿಯಮಾಡಿದರು.
50 ತಮ್ಮ ಬೇಸರಕ್ಕೆ ದಾರಿಯನ್ನು ಮಾಡಿ,
ಅವರನ್ನು ಪೂರ್ಣವಾಗಿ ದಂಡಿಸಿದರು.
ಅವರ ಜೀವವನ್ನು ವ್ಯಾಧಿಗೆ ಒಪ್ಪಿಸಿಬಿಟ್ಟು,
51 ಈಜಿಪ್ಟಿನಲ್ಲಿ ಚೊಚ್ಚಲರೆಲ್ಲರನ್ನೂ,
ಹಾಮನ ಗುಡಾರಗಳಲ್ಲಿ ಪುರುಷತ್ವದ ಪ್ರಥಮ ಫಲವನ್ನೂ ದಂಡಿಸಿದರು.
52 ಆದರೆ ದೇವರು ಮಂದೆಯ ಹಾಗೆ ತಮ್ಮ ಜನರನ್ನು ಹೊರತಂದು,
ಕುರಿಗಳನ್ನು ನಡೆಸುವಂತೆ ಮರುಭೂಮಿಯಲ್ಲಿ ಅವರನ್ನು ನಡೆಸಿದರು.
53 ಜನರನ್ನು ಸುರಕ್ಷಿತವಾಗಿ ನಡೆಸಿದ ಕಾರಣ ಅವರು ಹೆದರಲಿಲ್ಲ.
ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.
54 ಹೀಗೆ ದೇವರು ತಮ್ಮ ಭುಜಬಲದಿಂದ ಪವಿತ್ರ ನಾಡಿನ ತಮ್ಮ ಮೇರೆಗೂ,
ಈ ಪರ್ವತ ನಾಡಿಗೂ ಅವರನ್ನು ಬರಮಾಡಿದರು.
55 ದೇವರು ಜನಾಂಗಗಳನ್ನು ಅವರ ಮುಂದೆ ಹೊರಗೆ ಹಾಕಿ,
ಅವರ ಬಾಧ್ಯತೆಯನ್ನು ಹಂಚಿ,
ಅವರ ಗುಡಾರಗಳಲ್ಲಿ ಇಸ್ರಾಯೇಲರನ್ನು ವಾಸಿಸುವಂತೆ ಮಾಡಿದರು.
 
56 ಆದರೆ ಜನರು ಮಹೋನ್ನತರಾದ ದೇವರನ್ನು
ಪರೀಕ್ಷಿಸಿ ವಿರೋಧಿಸಿದರು;
ದೇವರ ಶಾಸನಗಳನ್ನು ಅವರು ಕೈಗೊಳ್ಳಲಿಲ್ಲ.
57 ತಮ್ಮ ಪಿತೃಗಳ ಹಾಗೆ ಉಪಕಾರ ನೆನಸದೆ,
ಅಪನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ಓರೆಯಾದರು.
58 ತಮ್ಮ ಉನ್ನತ ಸ್ಥಳಗಳಿಂದ ದೇವರಿಗೆ ಬೇಸರಗೊಳಿಸಿದರು.
ತಮ್ಮ ಮೂರ್ತಿಗಳಿಂದ ದೇವರಿಗೆ ದುಃಖಪಡಿಸಿದರು.
59 ದೇವರು ಇದನ್ನು ಕಂಡಾಗ, ಬೇಸರಗೊಂಡು
ಇಸ್ರಾಯೇಲನ್ನು ಪರಿಪೂರ್ಣವಾಗಿ ತಿರಸ್ಕರಿಸಿಬಿಟ್ಟರು.
60 ದೇವರು ಸಿಲೋವಿನ ಗುಡಾರನ್ನೂ
ಜನರೊಳಗೆ ಹಾಕಿದ ಗುಡಾರವನ್ನೂ ತಳ್ಳಿಬಿಟ್ಟರು.
61 ತಮ್ಮ ಬಲದ ಮಂಜೂಷವನ್ನು ಸೆರೆಗೆ ಒಪ್ಪಿಸಿಬಿಟ್ಟರು.
ತಮ್ಮ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟರು.
62 ದೇವರು ತಮ್ಮ ಜನರನ್ನು ಖಡ್ಗಕ್ಕೆ ಒಪ್ಪಿಸಿಕೊಟ್ಟರು.
ತಮ್ಮ ಸ್ವಾಸ್ಥತೆಗೆ ವಿರೋಧವಾಗಿದ್ದರು.
63 ಅವರ ಯುವಕರನ್ನು ಬೆಂಕಿಯು ದಹಿಸಿಬಿಟ್ಟಿತು.
ಅವರ ಕನ್ಯೆಯರು ವಿವಾಹ ಗೀತೆಗಳನ್ನು ಹಾಡಲಿಲ್ಲ.
64 ಅವರ ಯಾಜಕರು ಖಡ್ಗದಿಂದ ಸಂಹಾರವಾದರು.
ಅವರ ವಿಧವೆಯರು ಗೋಳಾಡಲಿಲ್ಲ.
 
65 ಆಗ ಯೆಹೋವ ದೇವರು ಪ್ರತಿಕ್ರಿಯೆಯನ್ನು ಪ್ರಕಟಿಸಿದರು.
ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆ ಸಂರಕ್ಷಿಸಲಾದರು.
66 ತಮ್ಮ ವೈರಿಗಳನ್ನು ದಂಡಿಸಿದರು.
ನಿತ್ಯನಿಂದೆಯೇ ಅವರ ಪಾಲಾಯಿತು.
67 ಆಗ ದೇವರು ಯೋಸೇಫನ ಗುಡಾರವನ್ನು ತಿರಸ್ಕರಿಸಿ,
ಎಫ್ರಾಯೀಮನ ಗೋತ್ರವನ್ನು ಆಯ್ದುಕೊಳ್ಳದೆ,
68 ಯೆಹೂದನ ಕುಲವನ್ನೂ,
ತಾನು ಪ್ರೀತಿಮಾಡಿದ ಚೀಯೋನ್ ಪರ್ವತವನ್ನೂ ಆಯ್ದುಕೊಂಡರು.
69 ಉನ್ನತವಾದವುಗಳಂತೆಯೂ, ಯುಗಯುಗಕ್ಕೂ ತಾವು ಅಸ್ತಿವಾರ ಹಾಕಿದ
ಭೂಮಿಯಂತೆಯೂ ತಮ್ಮ ಪರಿಶುದ್ಧ ಸ್ಥಳವನ್ನು ಕಟ್ಟಿದರು.
70 ತಮ್ಮ ಸೇವಕ ದಾವೀದನನ್ನು ಆಯ್ದುಕೊಂಡು,
ಕುರಿಹಟ್ಟಿಯಿಂದ ಅವನನ್ನು ತೆಗೆದುಕೊಂಡರು.
71 ತಮ್ಮ ಪ್ರಜೆಯಾದ ಯಾಕೋಬ್ಯರನ್ನೂ
ತಮ್ಮ ಬಾಧ್ಯತೆಯಾದ ಇಸ್ರಾಯೇಲರನ್ನೂ
ಮೇಯಿಸುವ ಕುರುಬನನ್ನಾಗಿ ದಾವೀದನನ್ನು ನೇಮಿಸಿದರು.
72 ದಾವೀದನು ತಮ್ಮ ಹೃದಯದ ಯಥಾರ್ಥತೆಯ ಪ್ರಕಾರ ಜನರನ್ನು ಪೋಷಿಸಿ
ತಮ್ಮ ಹಸ್ತ ಕೌಶಲ್ಯದಿಂದ ಅವರನ್ನು ನಡೆಸಿದನು.