12
ದಾವೀದನನ್ನು ಕೂಡಿಕೊಂಡ ಯುದ್ಧವೀರರು
ಕೀಷನ ಮಗ ಸೌಲನ ನಿಮಿತ್ತ ದಾವೀದನು ಇನ್ನೂ ಬಚ್ಚಿಟ್ಟುಕೊಂಡಿರುವಾಗ, ಚಿಕ್ಲಗಿನಲ್ಲಿರುವ ದಾವೀದನ ಬಳಿಗೆ ಬಂದವರು ಇವರೇ. ಅವರು ಪರಾಕ್ರಮಶಾಲಿಗಳಲ್ಲಿ ಸೇರಿದವರೂ, ಯುದ್ಧಕ್ಕೆ ಸಹಾಯಕರೂ. ಎಡಬಲ ಕೈಗಳಿಂದ ಕಲ್ಲುಗಳನ್ನು ಎಸೆಯಲೂ, ಬಿಲ್ಲುಗಳಿಂದ ಬಾಣಗಳನ್ನು ಎಸೆಯಲೂ, ಇವರು ಬೆನ್ಯಾಮೀನನ ಗೋತ್ರದ ಸೌಲನ ಸಂಬಂಧಿಕರೂ ಆಗಿದ್ದರು.
 
ಅವರ ಮುಖ್ಯಸ್ಥ ಅಹೀಗೆಜೆರ್, ಇವನ ನಂತರ ಯೋವಾಷ್. ಇವರಿಬ್ಬರೂ ಗಿಬೆಯ ಊರಿನ ಶೇಮಾನ ಪುತ್ರರು.
ಅಜ್ಮಾವೆತನ ಪುತ್ರರಾದ ಯೆಜಿಯೇಲ್ ಮತ್ತು ಪೆಲೆಟ್,
ಅನಾತೋತ್ ಊರಿನವರಾದ ಬೆರಾಕಾ, ಯೇಹು. ಗಿಬ್ಯೋನ್ಯನಾದ ಇಷ್ಮಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾಗಿದ್ದ ಮತ್ತು ಮೂವತ್ತು ಮಂದಿಯ ಮುಖ್ಯಸ್ಥನಾಗಿದ್ದ;
ಯೆರೆಮೀಯ, ಯಹಜಿಯೇಲ್, ಯೋಹಾನಾನ್, ಗೆದೇರದವನಾದ ಯೋಜಾಬಾದ್, ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಹರುಫ್ಯನಾದ ಶೆಫಟ್ಯ,
ಕೋರಹಿಯರಾದ ಎಲ್ಕಾನ, ಇಷ್ಷೀಯ, ಅಜರಯೇಲ್, ಯೋವೆಜೆರ್, ಯಾಷೊಬ್ಬಾಮ,
ಗೆದೋರಿನಲ್ಲಿರುವ ಯೆರೋಹಾಮನ ಪುತ್ರರಾದ ಯೋಯೇಲಹ, ಜೆಬದ್ಯ.
 
ಇದಲ್ಲದೆ ಮರುಭೂಮಿಯಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ, ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು. ಅವರ ಮುಖಗಳು ಸಿಂಹಗಳಂತೆ ಭೀಕರವಾಗಿದ್ದವು. ಪರ್ವತಗಳ ಮೇಲೆ ಇವರು ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು.
 
ಅಧಿಕಾರದಲ್ಲಿ ಏಜೆರ್ ಮುಖ್ಯಸ್ಥನು;
ಎರಡನೆಯವನು ಓಬದ್ಯ; ಮೂರನೆಯವನು ಎಲೀಯಾಬ್;
10 ನಾಲ್ಕನೆಯವನು ಮಿಷ್ಮನ್ನ, ಐದನೆಯವನು ಯೆರೆಮೀಯ;
11 ಆರನೆಯವನು ಅತ್ತೈ; ಏಳನೆಯವನು ಎಲೀಯೇಲ್;
12 ಎಂಟನೆಯವನು ಯೋಹಾನಾನ್, ಒಂಬತ್ತನೆಯವನು ಎಲ್ಜಾಬಾದ್;
13 ಹತ್ತನೆಯವನು ಯೆರೆಮೀಯ; ಹನ್ನೊಂದನೆಯವನು ಮಕ್ಬನ್ನೈ.
 
14 ಗಾದನ ಪುತ್ರರಾದ ಇವರು ಸೈನ್ಯದಲ್ಲಿ ಅಧಿಪತಿಗಳಾಗಿದ್ದರು. ಕಿರಿಯನು ನೂರು ಮಂದಿಯ ಮೇಲೆಯೂ ಹಿರಿಯನು ಸಾವಿರ ಮಂದಿಯ ಮೇಲೆಯೂ ಇದ್ದರು. 15 ಇವರು ಮೊದಲನೆಯ ತಿಂಗಳಲ್ಲಿ ಯೊರ್ದನ್ ಹೊಳೆ ದಡಮೀರಿ ಹರಿಯುತ್ತಿದ್ದಾಗ, ಅದನ್ನು ದಾಟಿ ಪೂರ್ವ ಕಡೆಯಲ್ಲಿಯೂ, ಪಶ್ಚಿಮ ಕಡೆಯಲ್ಲಿಯೂ ತಗ್ಗುಗಳಲ್ಲಿ ಇರುವವರೆಲ್ಲರನ್ನು ಓಡಿಸಿಬಿಟ್ಟರು.
16 ಬೆನ್ಯಾಮೀನನ ಮತ್ತು ಯೆಹೂದ್ಯರಲ್ಲಿ ಕೆಲವರು ಕೋಟೆಯ ಸ್ಥಳದಲ್ಲಿದ್ದ ದಾವೀದನ ಬಳಿಗೆ ಬಂದರು. 17 ಆಗ ದಾವೀದನು ಅವರನ್ನು ಎದುರುಗೊಳ್ಳಲು ಹೊರಟುಹೋಗಿ ಅವರಿಗೆ ಉತ್ತರವಾಗಿ, “ನನಗೆ ಸಹಾಯವಾಗಿ ನನ್ನ ಬಳಿಗೆ ನೀವು ಸಮಾಧಾನವಾಗಿ ಬಂದರೆ, ನನ್ನ ಹೃದಯವು ನಿಮ್ಮ ಸಂಗಡ ಒಂದಾಗಿರುವುದು. ಆದರೆ ದೋಷವು ನನ್ನ ಕೈಯಲ್ಲಿ ಇಲ್ಲದಿರುವಾಗ, ನೀವು ನನ್ನ ವೈರಿಗಳಿಗೆ ನನ್ನನ್ನು ಮೋಸದಿಂದ ಒಪ್ಪಿಸಿಕೊಡಲು ಬಂದರೆ, ನಮ್ಮ ಪಿತೃಗಳ ದೇವರು ನೋಡಿ ನ್ಯಾಯತೀರಿಸಲಿ,” ಎಂದನು.
18 ಆಗ ಆತ್ಮವು ಮೂವತ್ತು ಮಂದಿ ಅಧಿಪತಿಗಳ ಮುಖ್ಯಸ್ಥನಾದ ಅಮಾಸೈಯ ಮೇಲೆ ಬಂತು. ಅವನು ಹೀಗೆ ಹೇಳಿದನು,
“ದಾವೀದನೇ, ನಾವು ನಿನ್ನವರು.
ಇಷಯನ ಮಗನೇ, ನಾವು ನಿನ್ನ ಜೊತೆಯಿದ್ದೇವೆ;
ಜಯವು ನಿನ್ನದೇ,
ನಿನಗೆ ಸಹಾಯ ಮಾಡುವವರಿಗೆ ಜಯವು;
ಏಕೆಂದರೆ ನಿನ್ನ ದೇವರು ನಿನಗೆ ಸಹಾಯ ಮಾಡುತ್ತಾರೆ.”
ಆಗ ದಾವೀದನು ಅವರನ್ನು ಅಂಗೀಕರಿಸಿ, ಅವರನ್ನು ದಂಡಿನ ಅಧಿಪತಿಗಳಾಗಿ ಮಾಡಿದನು.
19 ದಾವೀದನು ಸೌಲನ ಮೇಲೆ ಯುದ್ಧಮಾಡಲು ಫಿಲಿಷ್ಟಿಯರ ಸಂಗಡ ಬರುತ್ತಿರುವಾಗ, ಮನಸ್ಸೆಯವರಲ್ಲಿ ಕೆಲವರು ದಾವೀದನ ಕಡೆಗೆ ಸೇರಿದರು. ಆದರೆ ಇವರು ಅವರಿಗೆ ಸಹಾಯ ಕೊಡದೆ ಇದ್ದರು. ಏಕೆಂದರೆ ಫಿಲಿಷ್ಟಿಯರ ಅಧಿಪತಿಗಳು ಯೋಚನೆ ಮಾಡಿದ ತರುವಾಯ, “ಅವನು ನಮಗೆ ಮೋಸಮಾಡಿ, ತನ್ನ ಯಜಮಾನನಾದ ಸೌಲನ ಕಡೆಗೆ ಸೇರಿದರೆ, ನಮ್ಮ ತಲೆಗಳು ಬಿದ್ದು ಹೋಗುವುವು,” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟರು. 20 ದಾವೀದನು ಹಿಂದಿರುಗಿ ಚಿಕ್ಲಗಿಗೆ ಹಿಂದಿರುಗುತ್ತಿದ್ದಾಗ ಅವನೊಂದಿಗೆ ಮನಸ್ಸೆ ಗೋತ್ರದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹು, ಚಿಲ್ಲೆತೈ ಎಂಬವರು ಬಂದು ಸೇರಿಕೊಂಡರು. 21 ಇವರು ಗುಂಪಿಗೆ ವಿರೋಧವಾಗಿ ದಾವೀದನಿಗೆ ಸಹಾಯಕರಾಗಿದ್ದರು; ಅವರೆಲ್ಲರೂ ಬಲವುಳ್ಳ ಪರಾಕ್ರಮಶಾಲಿಗಳಾಗಿಯೂ ದಂಡಿನ ಪ್ರಧಾನರಾಗಿಯೂ ಇದ್ದರು. 22 ಅದೇ ಕಾಲದಲ್ಲಿ ದಿನೇ ದಿನೇ ದೊಡ್ಡ ಸೈನ್ಯವು ದೇವರ ಸೈನ್ಯದ ಹಾಗೆ ಆಗುವವರೆಗೆ, ದಾವೀದನಿಗೆ ಸಹಾಯ ಕೊಡುವುದಕ್ಕೆ ಅವನ ಕಡೆಗೆ ಬರುತ್ತಿದ್ದರು.
ಇತರರು ದಾವೀದನನ್ನು ಹೆಬ್ರೋನಿನಲ್ಲಿ ಸೇರಿಕೊಂಡದ್ದು
23 ಯೆಹೋವ ದೇವರ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವುದಕ್ಕೆ, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿಕೊಂಡು ಬಂದ ದಂಡುಗಳ ಸಂಖ್ಯೆ ಇದು:
 
24 ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದುಕೊಂಡು, ಯುದ್ಧಕ್ಕೆ ಸಿದ್ಧರಾದ ಯೆಹೂದನ ಮಕ್ಕಳು 6,800 ಮಂದಿ.
25 ಯುದ್ಧಕ್ಕೆ ಪರಾಕ್ರಮಶಾಲಿಗಳಾದ ಸಿಮೆಯೋನನ ಮಕ್ಕಳಲ್ಲಿ 7,100 ಮಂದಿ.
26 ಲೇವಿಯ ಮಕ್ಕಳಲ್ಲಿ 4,600 ಮಂದಿ. 27 ಆರೋನಿಯರಲ್ಲಿ ಯೆಹೋಯಾದಾವನು ನಾಯಕನಾಗಿದ್ದನು. ಅವನ ಸಂಗಡ 3,700 ಮಂದಿ. 28 ಇದಲ್ಲದೆ ಬಲವುಳ್ಳ ಪರಾಕ್ರಮಶಾಲಿಯಾದ ಪ್ರಾಯಸ್ತನಾಗಿದ್ದ ಚಾದೋಕನೂ, ಅವನ ತಂದೆಯ ಮನೆಯಿಂದ 22 ಮಂದಿ ಪ್ರಧಾನರೂ.
29 ಸೌಲನ ಸಹೋದರರಾಗಿರುವ ಬೆನ್ಯಾಮೀನನ ಮಕ್ಕಳಲ್ಲಿ 3,000 ಮಂದಿ. ಇಂದಿನವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.
30 ಎಫ್ರಾಯೀಮನ ಮಕ್ಕಳಲ್ಲಿ 20,800 ಮಂದಿ, ಬಲವುಳ್ಳ ಪರಾಕ್ರಮಶಾಲಿಗಳೂ, ತಮ್ಮ ಪಿತೃಗಳ ಮನೆಯಲ್ಲಿ ಹೆಸರುಗೊಂಡವರೂ ಆಗಿದ್ದರು.
31 ಮನಸ್ಸೆಯ ಅರ್ಧಗೋತ್ರದಲ್ಲಿ 18,000 ಮಂದಿ. ಅವರು ದಾವೀದನನ್ನು ಅರಸನಾಗಿ ಮಾಡಲು ಬಂದವರ ಹೆಸರು ಹೆಸರಾಗಿ ಹೇಳಲು ಆಯ್ಕೆಯಾದವರು.
32 ಇಸ್ಸಾಕಾರನ ಮಕ್ಕಳಲ್ಲಿ ಇಸ್ರಾಯೇಲರು ಮಾಡತಕ್ಕದ್ದು ಯಾವುದೆಂದು ತಿಳಿಯತಕ್ಕಂಥ ಕಾಲಗಳನ್ನು ಪರೀಕ್ಷಿಸಿ ತಿಳಿದವರು ಬಂದರು. ಅವರ ಯಜಮಾನರು 200 ಮಂದಿಯಾಗಿದ್ದರು. ಅವರ ಸಹೋದರರೆಲ್ಲರು ಇವರ ಆಜ್ಞಾಧೀನರಾಗಿದ್ದರು.
33 ಜೆಬುಲೂನನವರಲ್ಲಿ ದೃಢಹೃದಯದಿಂದ ಸಾಲಾಗಿ ನಡೆಯುವ ಸಕಲ ಆಯುಧಗಳನ್ನು ಧರಿಸಿಕೊಂಡ ಯುದ್ಧ ನಿಪುಣರಾದ ಸೈನ್ಯವಾಗಿ ಹೊರಡುವವರು 50,000 ಮಂದಿ.
34 ನಫ್ತಾಲಿಯವರಲ್ಲಿ 1,000 ಜನ ನಾಯಕರೂ ಗುರಾಣಿಬರ್ಜಿಗಳನ್ನು ಹಿಡಿದಿರುವ 37,000 ಸೈನಿಕರೂ
35 ದಾನನವರಲ್ಲಿ 28,600 ಮಂದಿ ಯುದ್ಧ ನಿಪುಣರು.
36 ಆಶೇರನವರಲ್ಲಿ ಯುದ್ಧಕ್ಕೆ ಹೋಗತಕ್ಕ ಹಾಗೆ ಯುದ್ಧ ನಿಪುಣರು ಸೈನ್ಯವಾಗಿ ಹೋಗುವವರು 40,000 ಮಂದಿ.
37 ಯೊರ್ದನ್ ನದಿ ಆಚೆಯಲ್ಲಿರುವ ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಯುದ್ಧಕ್ಕೆ ತಕ್ಕಂಥ ಸಕಲ ಆಯುಧಗಳನ್ನು ಧರಿಸಿಕೊಂಡವರು 1,20,000 ಮಂದಿ.
 
38 ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲರ ಮೇಲೆ ಅರಸನಾಗಿ ಮಾಡಲು ಹೆಬ್ರೋನಿಗೆ ಪೂರ್ಣಮನಸ್ಸಿನಿಂದ ಬಂದರು.
 
ಇದಲ್ಲದೆ ಇಸ್ರಾಯೇಲಿನಲ್ಲಿದ್ದ ಮಿಕ್ಕಾದವರೆಲ್ಲರು ದಾವೀದನನ್ನು ಅರಸನಾಗಿ ಮಾಡಲು ಒಂದೇ ಮನಸ್ಸುಳ್ಳವರಾಗಿದ್ದರು. 39 ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಅವರ ಕುಟುಂಬದವರು ಅವರಿಗೋಸ್ಕರ ಸಿದ್ಧಮಾಡಿದ ಆಹಾರವನ್ನು ತಿನ್ನುತ್ತಾ, ಕುಡಿಯುತ್ತಾ ಇದ್ದರು. 40 ಇದಲ್ಲದೆ ಅವರ ನೆರೆಯವನಾದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ತಮ್ಮ ಎತ್ತು, ಕತ್ತೆ, ಹೇಸರಗತ್ತೆ ಮತ್ತು ಒಂಟೆಗಳ ಮೇಲೆಯೂ ರೊಟ್ಟಿಗಳನ್ನೂ ಆಹಾರವನ್ನೂ, ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷಿ ಗೊಂಚಲುಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ದನಕುರಿಗಳನ್ನೂ ಬಹಳವಾಗಿ ತಂದರು. ಇಸ್ರಾಯೇಲಿನಲ್ಲಿ ಸಂತೋಷವಿತ್ತು.