19
ಅಮ್ಮೋನ್ಯರ ವಿರುದ್ಧ ಯುದ್ಧ
ಇದರ ತರುವಾಯ, ಅಮ್ಮೋನಿಯರ ಅರಸನಾದ ನಾಹಾಷನು ಮರಣಹೊಂದಿದನು; ಅವನಿಗೆ ಬದಲಾಗಿ ಅವನ ಮಗನು ಅರಸನಾದನು. ಆಗ ದಾವೀದನು, “ಹಾನೂನನ ತಂದೆಯಾದ ನಾಹಾಷನು ನನಗೆ ದಯೆ ತೋರಿಸಿದ್ದರಿಂದ, ನಾನೂ ಅವನ ಮಗ ಹಾನೂನನಿಗೆ ದಯೆ ತೋರಿಸುವೆನು,” ಎಂದನು. ದಾವೀದನು ಅವನ ತಂದೆಯನ್ನು ಕುರಿತು ಹಾನೂನನಿಗೆ ಸಂತಾಪ ಸೂಚಿಸಲು ತನ್ನ ಸೇವಕರನ್ನು ಕಳುಹಿಸಿದನು.
ಹೀಗೆಯೇ ದಾವೀದನ ದೂತರು ಹಾನೂನನಿಗೆ ಸಂತಾಪ ಸೂಚಿಸಲು, ಅಮ್ಮೋನಿಯರ ದೇಶಕ್ಕೆ ಬಂದರು. ಆಗ ಅಮ್ಮೋನಿಯರ ಪ್ರಧಾನರು ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತಾಪ ಸೂಚಿಸುವವರನ್ನು ಕಳುಹಿಸಿದ್ದರಿಂದ, ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ಯೋಚಿಸುತ್ತೀಯೋ? ಅವನ ದೂತರು ಈ ದೇಶವನ್ನು ಸಂಚರಿಸಿ ನೋಡುವುದಕ್ಕೂ ಶೋಧಿಸುವುದಕ್ಕೂ ಅದನ್ನು ಕೆಡವಿ ಹಾಕುವುದಕ್ಕೂ ನಿನ್ನ ಬಳಿಗೆ ಬರಲಿಲ್ಲವೋ?” ಎಂದರು. ಆದ್ದರಿಂದ ಹಾನೂನನು ದಾವೀದನ ದೂತರನ್ನು ಹಿಡಿದು ಅವರ ಗಡ್ಡ, ತಲೆ ಬೋಳಿಸಿ, ಅವರ ವಸ್ತ್ರಗಳನ್ನು ಬೆನ್ನ ಹಿಂದೆ ಮಧ್ಯದಿಂದ ಸೊಂಟದ ಕೆಳಗಿನವರೆಗೂ ಕತ್ತರಿಸಿ, ಅವರನ್ನು ಕಳುಹಿಸಿಬಿಟ್ಟನು.
ಆಗ ಕೆಲವರು ಹೋಗಿ, ಈ ಮನುಷ್ಯರನ್ನು ಕುರಿತು ದಾವೀದನಿಗೆ ತಿಳಿಸಿದಾಗ, ಬಹಳ ಅಪಮಾನ ಹೊಂದಿದ ಅವರಿಗೆ ದಾವೀದನು ತನ್ನ ಆಳುಗಳನ್ನು ಅವರಿಗೆದುರಾಗಿ ಕಳುಹಿಸಿ, “ನಿಮ್ಮ ಗಡ್ಡಗಳು ಬೆಳೆಯುವವರೆಗೂ ಯೆರಿಕೋವಿನಲ್ಲಿ ಇರಿ. ಆಮೇಲೆ ತಿರುಗಿ ಬನ್ನಿರಿ,” ಎಂದು ಹೇಳಿಸಿದನು.
ತಾವು ದಾವೀದನಿಗೆ ಅಸಹ್ಯರಾದೆವೆಂದು ಹಾನೂನನಿಗೆ ಮತ್ತು ಅಮ್ಮೋನಿಯರಿಗೆ ತಿಳಿಯಿತು. ಆದ್ದರಿಂದ ಅರಾಮಿನಲ್ಲಿಯೂ*, ಅರಾಮ್ ಮಾಕದಲ್ಲಿಯೂ, ಚೋಬದಲ್ಲಿಯೂ ರಥಗಳನ್ನೂ, ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಮೂವತ್ತು ನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕಳುಹಿಸಿದರು. ಹೀಗೆಯೇ ಅವರು ಮೂವತ್ತೆರಡು ಸಾವಿರ ರಥಗಳನ್ನೂ, ಮಾಕದ ಅರಸನನ್ನೂ, ಅವನ ಜನರನ್ನೂ ಕೂಲಿಗೆ ತೆಗೆದುಕೊಂಡರು. ಇವರು ಬಂದು ಮೇದೆಬ ಊರಿನ ಬಳಿಯಲ್ಲಿ ದಂಡಿಳಿದರು. ಇದಲ್ಲದೆ ಅಮ್ಮೋನಿಯರು ತಮ್ಮ ಪಟ್ಟಣಗಳಿಂದ ಯುದ್ಧಕ್ಕೆ ಕೂಡಿಬಂದರು.
ದಾವೀದನು ಇದನ್ನು ಕೇಳಿದಾಗ, ಅವನು ಯೋವಾಬನನ್ನೂ, ಪರಾಕ್ರಮಶಾಲಿಗಳಾದ ಸಮಸ್ತ ಸೈನಿಕರನ್ನೂ ಕಳುಹಿಸಿದನು. ಆಗ ಅಮ್ಮೋನಿಯರು ಹೊರಟು, ಪಟ್ಟಣದ ದ್ವಾರದ ಹತ್ತಿರ ವ್ಯೂಹ ಕಟ್ಟಿದರು. ಆದರೆ ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಬೈಲಿನಲ್ಲಿ ಇಳಿದುಕೊಂಡಿದ್ದರು.
10 ಯೋವಾಬನು, ಯುದ್ಧವು ತನ್ನ ವಿರೋಧವಾಗಿ ಹಿಂದೆಯೂ, ಮುಂದೆಯೂ ಇರುವುದನ್ನು ಕಂಡಾಗ, ಅವನು ಇಸ್ರಾಯೇಲಿನ ಎಲ್ಲಾ ಶ್ರೇಷ್ಠ ಸೈನಿಕರನ್ನು ಆಯ್ದುಕೊಂಡು, ಅರಾಮ್ಯರಿಗೆ ಎದುರಾಗಿ ನಿಲ್ಲಿಸಿದನು. 11 ಆದರೆ ಉಳಿದ ಜನರನ್ನು ಅಮ್ಮೋನಿಯರಿಗೆದುರಾಗಿ ವ್ಯೂಹ ಕಟ್ಟುವ ಹಾಗೆ, ಅವರನ್ನು ತನ್ನ ತಮ್ಮನಾದ ಅಬೀಷೈಯನ ಕೈಯಲ್ಲಿ ಒಪ್ಪಿಸಿಕೊಟ್ಟು, 12 ಅವನಿಗೆ ಯೋವಾಬನು, “ಅರಾಮ್ಯರು ನನಗಿಂತ ಬಲವುಳ್ಳವರಾದರೆ, ನೀನು ನನಗೆ ಸಹಾಯಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳವರಾದರೆ, ನಾನು ಬಂದು ನಿನಗೆ ಸಹಾಯ ಮಾಡುವೆನು. 13 ದೃಢವಾಗಿರು; ನಾವು ನಮ್ಮ ಜನರಿಗೋಸ್ಕರವೂ, ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಧೈರ್ಯವಾಗಿ ಹೋರಾಡೋಣ. ಯೆಹೋವ ದೇವರು ತಮ್ಮ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ,” ಎಂದನು.
14 ಆಗ ಯೋವಾಬನೂ, ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ದಾಳಿಮಾಡಲು ಹತ್ತಿರವಾದಾಗ, ಅರಾಮ್ಯರು ಓಡಿಹೋದರು. 15 ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನಿಯರು ಕಂಡಾಗ, ಅವರೂ ಸಹ ಯೋವಾಬನ ತಮ್ಮನಾದ ಅಬೀಷೈಯನ ಎದುರಿನಿಂದ ಓಡಿಹೋಗಿ, ಪಟ್ಟಣದೊಳಗೆ ಅಡಗಿಕೊಂಡರು. ಆಗ ಯೋವಾಬನು ಯೆರೂಸಲೇಮಿಗೆ ತಿರುಗಿಹೋದನು.
16 ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಸೋತುಹೋದೆವೆಂದು ತಿಳಿದಾಗ, ಅವರು ದೂತರನ್ನು ಕಳುಹಿಸಿ, ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಇತರ ಅರಾಮ್ಯರನ್ನು ಕರೆಯಿಸಿಕೊಂಡರು. ಹದದೆಜೆರನ ಸೇನಾಧಿಪತಿಯಾದ ಶೋಫಕನು ಅವರ ನಾಯಕನಾದನು.
17 ಅದನ್ನು ದಾವೀದನಿಗೆ ತಿಳಿಸಿದಾಗ, ಅವನು ಸಮಸ್ತ ಇಸ್ರಾಯೇಲರನ್ನು ಕೂಡಿಸಿಕೊಂಡು, ಯೊರ್ದನನ್ನು ದಾಟಿ, ಅವರಿಗೆದುರಾಗಿ ವ್ಯೂಹ ಕಟ್ಟಿದನು. ದಾವೀದನು ಅರಾಮ್ಯರಿಗೆದುರಾಗಿ ಸೈನ್ಯವನ್ನು ವ್ಯೂಹ ಕಟ್ಟಿದ ಮೇಲೆ, ಅವರು ಅವನ ವಿರುದ್ಧ ಯುದ್ಧಮಾಡಿದರು. 18 ಆದರೆ ಅರಾಮ್ಯರು ಇಸ್ರಾಯೇಲರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ಸಾವಿರ ರಥಗಳನ್ನೂ ಹಾಳು ಮಾಡಿ, ನಲವತ್ತು ಸಾವಿರ ಕಾಲಾಳುಗಳನ್ನೂ, ಅವರ ಸೇನಾಧಿಪತಿಯಾದ ಶೋಫಕನನ್ನೂ ಕೊಂದುಹಾಕಿದನು.
19 ಹದದೆಜೆರನ ಅಧೀನ ರಾಜರು ತಾವು ಇಸ್ರಾಯೇಲರ ಮುಂದೆ ಸೋತುಹೋದದ್ದನ್ನು ಕಂಡಾಗ, ಅವರು ದಾವೀದನ ಸಂಗಡ ಸಂಧಾನ ಮಾಡಿಕೊಂಡು, ಅವನಿಗೆ ಅಧೀನರಾದರು.
ತರುವಾಯ ಅರಾಮ್ಯರು ಅಮ್ಮೋನಿಯರಿಗೆ ಮತ್ತೆ ಸಹಾಯ ಮಾಡುವುದಕ್ಕೆ ಮನಸ್ಸಿಲ್ಲದವರಾದರು.
* 19:6 19:6 ಅಂದರೆ, ಅದು ಮೆಸೊಪೊತಾಮ್ಯ