12
ಶೀಶಕನು ಯೆರೂಸಲೇಮಿಗೆ ಮುತ್ತಿಗೆ ಹಾಕಿದ್ದು
ರೆಹಬ್ಬಾಮನು ರಾಜ್ಯವನ್ನು ಸ್ಥಿರಮಾಡಿ ತನ್ನನ್ನು ಬಲಪಡಿಸಿಕೊಂಡಾಗ, ಅವನೂ, ಅವನ ಸಂಗಡ ಸಮಸ್ತ ಇಸ್ರಾಯೇಲರೂ ಯೆಹೋವ ದೇವರ ನಿಯಮವನ್ನು ಬಿಟ್ಟುಬಿಟ್ಟರು. ಅವರು ಯೆಹೋವ ದೇವರಿಗೆ ವಿಶ್ವಾಸದ್ರೋಹಮಾಡಿದ್ದರಿಂದ, ರೆಹಬ್ಬಾಮನು ಅರಸನಾದ ಐದನೆಯ ವರ್ಷದಲ್ಲಿ ಈಜಿಪ್ಟ್ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿದನು. ಅವನ ಸಂಗಡ ಸಾವಿರದ ಇನ್ನೂರು ರಥಗಳೂ, ಅರವತ್ತು ಸಾವಿರ ರಾಹುತರೂ ಇದ್ದರು. ಇದಲ್ಲದೆ ತನ್ನ ಸಂಗಡ ಈಜಿಪ್ಟಿನಿಂದ ಬಂದ ಲಿಬಿಯದವರೂ, ಸುಕ್ಕೀಯರೂ, ಕೂಷ್ಯರೂ ಲೆಕ್ಕವಿಲ್ಲದಷ್ಟು ಬಂದರು. ಅವನು ಯೆಹೂದಕ್ಕೆ ಇದ್ದ ಕೋಟೆಯುಳ್ಳ ಪಟ್ಟಣಗಳನ್ನು ಹಿಡಿದು ಯೆರೂಸಲೇಮಿಗೆ ಬಂದನು.
ಆಗ ಪ್ರವಾದಿಯಾದ ಶೆಮಾಯನು ರೆಹಬ್ಬಾಮನ ಬಳಿಗೂ, ಶೀಶಕನ ನಿಮಿತ್ತ ಯೆರೂಸಲೇಮಿನಲ್ಲಿ ಕೂಡಿಕೊಂಡ ಯೆಹೂದದ ಪ್ರಧಾನರ ಬಳಿಗೂ ಬಂದು ಅವರಿಗೆ, “ನೀವು ನನ್ನನ್ನು ಬಿಟ್ಟುಬಿಟ್ಟದ್ದರಿಂದ ನಾನು ನಿಮ್ಮನ್ನು ಶೀಶಕನ ಕೈಯಲ್ಲಿ ಕೊಟ್ಟುಬಿಟ್ಟೆನೆಂದು ಯೆಹೋವ ದೇವರು ನಿಮಗೆ ಹೇಳುತ್ತಾರೆ,” ಎಂದನು.
ಆದ್ದರಿಂದ ಇಸ್ರಾಯೇಲಿನ ಪ್ರಧಾನರೂ, ಅರಸನೂ ತಮ್ಮನ್ನು ತಗ್ಗಿಸಿಕೊಂಡು, “ಯೆಹೋವ ದೇವರು ನೀತಿವಂತರು,” ಎಂದರು.
ಅವರು ತಮ್ಮನ್ನು ತಗ್ಗಿಸಿಕೊಂಡದ್ದನ್ನು ಯೆಹೋವ ದೇವರು ನೋಡಿದಾಗ, ಯೆಹೋವ ದೇವರ ವಾಕ್ಯವು ಶೆಮಾಯನಿಗೆ ಉಂಟಾಗಿ, “ಅವರು ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಮಾಡದೆ, ಅವರು ತಪ್ಪಿಸಿಕೊಳ್ಳುವಂತೆ ಮಾಡುವೆನು. ಶೀಶಕನ ಮುಖಾಂತರ ನನ್ನ ಕೋಪವನ್ನು ಯೆರೂಸಲೇಮಿನ ಮೇಲೆ ಸುರಿದುಬಿಡುವುದಿಲ್ಲ. ಆದರೂ ಅವರು ನನ್ನ ಸೇವೆಗೂ, ದೇಶಗಳ ಅರಸರ ಸೇವೆಗೂ ಇರುವ ವ್ಯತ್ಯಾಸವನ್ನು ಇವರು ತಿಳಿಯುವ ಹಾಗೆ ಅವನಿಗೆ ಸೇವಕರಾಗುವರು,” ಎಂದು ಹೇಳಿದನು.
ಈಜಿಪ್ಟಿನ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿ ಯೆಹೋವ ದೇವರ ಆಲಯ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ದೋಚಿಕೊಂಡನು, ಇದಲ್ಲದೆ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ಒಳಗೊಂಡಂತೆ ಅವನು ಸಮಸ್ತವನ್ನೂ ದೋಚಿಕೊಂಡು ಹೋದನು. 10 ಆದಕಾರಣ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ಪ್ರವೇಶದ್ವಾರದ ಕರ್ತವ್ಯದಲ್ಲಿದ್ದ ಕಾವಲುಗಾರರ ಅಧಿಪತಿಗಳ ಕೈಯಲ್ಲಿ ಒಪ್ಪಿಸಿದನು. 11 ಅರಸನು ಯೆಹೋವ ದೇವರ ಆಲಯಕ್ಕೆ ಹೋಗುವಾಗಲೆಲ್ಲಾ, ಕಾವಲುಗಾರರು ಅವುಗಳನ್ನು ಎತ್ತಿಕೊಂಡು ಬರುತ್ತಿದ್ದರು. ಅಲ್ಲಿಂದ ಹಿಂದಕ್ಕೆ ಬಂದ ನಂತರ ಕಾವಲಿನ ಚಾವಡಿಗೆ ತರುತ್ತಿದ್ದರು.
12 ರೆಹಬ್ಬಾಮನು ತನ್ನನ್ನು ತಗ್ಗಿಸಿಕೊಂಡಾಗ, ಯೆಹೋವ ದೇವರ ಕೋಪವು ಅವನನ್ನು ಬಿಟ್ಟು ತಿರುಗಿತು. ಆತನು ಪೂರ್ಣವಾಗಿ ನಾಶಮಾಡಲಿಲ್ಲ. ಯೆಹೂದದಲ್ಲಿ ಸಹ ಕೆಲವು ಕಾರ್ಯಗಳು ಸುಲಕ್ಷಣಗಳು ಕಂಡುಬಂದವು.
13 ಅರಸನಾದ ರೆಹಬ್ಬಾಮನು ಯೆರೂಸಲೇಮಿನಲ್ಲಿ ತನ್ನನ್ನು ಬಲಪಡಿಸಿಕೊಂಡು ರಾಜ್ಯವನ್ನು ಆಳಿದನು. ರೆಹಬ್ಬಾಮನು ಆಳಲು ಆರಂಭಿಸಿದಾಗ, ನಲವತ್ತೊಂದು ವರ್ಷದವನಾಗಿದ್ದು, ಅಲ್ಲಿ ಯೆಹೋವ ದೇವರು ತಮ್ಮ ಹೆಸರಿಗೋಸ್ಕರ ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ಅವನ ತಾಯಿಯ ಹೆಸರು ನಯಮಾ. 14 ಅವನು ಯೆಹೋವ ದೇವರನ್ನು ಹುಡುಕಲು ತನ್ನ ಹೃದಯವನ್ನು ಸ್ಥಿರಪಡಿಸದೆ ಇದ್ದುದರಿಂದ, ಕೆಟ್ಟದ್ದನ್ನು ಮಾಡಿದನು.
15 ರೆಹಬ್ಬಾಮನು ಅರಸನಾಗಿದ್ದಾಗ ತನ್ನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಕಾರ್ಯಗಳು ಪ್ರವಾದಿಯಾದ ಶೆಮಾಯನ ಪುಸ್ತಕದಲ್ಲಿಯೂ, ವಂಶಾವಳಿಗಳನ್ನು ಕುರಿತು ಬರೆದ ದರ್ಶಿಯಾದ ಇದ್ದೋವನ ಪುಸ್ತಕದಲ್ಲಿಯೂ ಬರೆದಿರುತ್ತವೆ. ಇದಲ್ಲದೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು. 16 ರೆಹಬ್ಬಾಮನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಅಬೀಯನು ಅವನಿಗೆ ಬದಲಾಗಿ ಅರಸನಾದನು.