2
ದೇವಾಲಯವನ್ನು ಕಟ್ಟಿಸುವುದಕ್ಕೆ ವ್ಯವಸ್ಥೆ
ಯೆಹೋವ ದೇವರಿಗೋಸ್ಕರ ಒಂದು ಆಲಯವನ್ನೂ, ತನಗೋಸ್ಕರ ಒಂದು ಅರಮನೆಯನ್ನೂ ಕಟ್ಟಿಸಲು ಸೊಲೊಮೋನನು ಅಪ್ಪಣೆಕೊಟ್ಟನು. ಅದಕ್ಕಾಗಿ 70,000 ಹೊರುವವರನ್ನೂ, 80,000 ಬೆಟ್ಟದಲ್ಲಿ ಕಡಿಯುವವರನ್ನೂ, ಇವರ ಮೇಲೆ ಕಾವಲಾಗಿರಲು 3,600 ಮಂದಿಯನ್ನೂ ಆಯ್ಕೆಮಾಡಿದನು.
ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ,
“ನೀನು ನನ್ನ ತಂದೆ ದಾವೀದನಿಗೆ ವಾಸವಾಗಿರುವ ಅರಮನೆಯನ್ನು ಕಟ್ಟಿಸಲು, ದೇವದಾರು ಮರಗಳನ್ನು ಕಳುಹಿಸಿ, ಅವನಿಗೋಸ್ಕರ ಹೇಗೆ ಸಹಾಯ ಮಾಡಿದೆಯೋ, ಹಾಗೆಯೇ ನನಗೂ ಮಾಡು. ನನ್ನ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವುದಕ್ಕೂ, ದೇವಸನ್ನಿಧಿಗೆ ಪರಿಮಳ ಧೂಪವನ್ನು ಅರ್ಪಿಸುವ ನಿತ್ಯ ಸಮ್ಮುಖದ ರೊಟ್ಟಿಗೋಸ್ಕರವೂ, ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಇಸ್ರಾಯೇಲರಿಗೆ ನಿರಂತರವಾಗಿರಲು ನೇಮಿಸಿದ ನಮ್ಮ ದೇವರಾದ ಯೆಹೋವ ದೇವರ ಹಬ್ಬಗಳಲ್ಲಿಯೂ, ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋಸ್ಕರವೂ ನಮ್ಮ ದೇವರಾದ ಯೆಹೋವ ದೇವರ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ.
“ನಾನು ಕಟ್ಟಿಸುವ ಆಲಯವು ದೊಡ್ಡದು. ಏಕೆಂದರೆ ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವರಾಗಿದ್ದಾರೆ. ಆದರೆ ಅವರಿಗೋಸ್ಕರ ಆಲಯವನ್ನು ಕಟ್ಟಿಸಲು ಸಮರ್ಥನಾದವನು ಯಾರು? ಆಕಾಶವೂ ಉನ್ನತೋನ್ನತ ಆಕಾಶವೂ ಅವರಿಗೆ ಸಾಲದು. ಅವರ ಸನ್ನಿಧಿಯಲ್ಲಿ ಯಜ್ಞವನ್ನು ಅರ್ಪಿಸುವುದಕ್ಕೆ ಒಂದು ಆಲಯವನ್ನು ಕಟ್ಟಬಹುದೇ ಹೊರತು ಅವರಿಗೆ ಆಲಯವನ್ನು ಕಟ್ಟಿಸಲು ನಾನು ಎಷ್ಟರವನು?
“ಆದ್ದರಿಂದ ಬಂಗಾರದಲ್ಲಿಯೂ, ಬೆಳ್ಳಿಯಲ್ಲಿಯೂ, ಕಂಚಿನಲ್ಲಿಯೂ, ಕಬ್ಬಿಣದಲ್ಲಿಯೂ, ರಕ್ತವರ್ಣ, ಲೋಹಿತ ವರ್ಣ, ನೀಲ ವರ್ಣಗಳಲ್ಲಿಯೂ ಕೆಲಸವನ್ನು ಮಾಡಲು ಜ್ಞಾನವುಳ್ಳವನನ್ನು, ನನ್ನ ತಂದೆ ದಾವೀದನು ಸಿದ್ಧಮಾಡಿದ ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ, ನನ್ನ ಬಳಿಯಲ್ಲಿರುವ ಕುಶಲಕರ್ಮಿಗಳ ಸಂಗಡ ಕೆತ್ತಲು ತಿಳುವಳಿಕೆಯುಳ್ಳವನಾಗಿ ಇರುವವನನ್ನು ನನ್ನ ಬಳಿಗೆ ಕಳುಹಿಸು.
“ನೀನು ಇಲ್ಲಿಗೆ ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಸುಗಂಧದ ಮರಗಳನ್ನೂ ಲೆಬನೋನಿನಿಂದ ನನ್ನ ಬಳಿಗೆ ಕಳುಹಿಸು. ಲೆಬನೋನಿನಲ್ಲಿ ಮರಗಳನ್ನು ಕಡಿಯಲು ನಿನ್ನ ಸೇವಕರು ನಿಪುಣರಾಗಿದ್ದಾರೆ. ನನ್ನ ಸೇವಕರು ಅವರ ಸಂಗಡ ಇರುವರು. ನನಗೆ ಮರಗಳನ್ನು ಬಹಳವಾಗಿ ಸಿದ್ಧಮಾಡುವುದಕ್ಕೆ ನಾನು ಕಟ್ಟಿಸುವ ಆಲಯವು ದೊಡ್ಡದಾಗಿಯೂ, ಅದ್ಭುತಕರವಾದದ್ದಾಗಿಯೂ ಇರಬೇಕು. 10 ಮರ ಕಡಿಯುವ ನಿನ್ನ ಸೇವಕರಿಗಾಗಿ, ಎರಡು ಸಾವಿರ ಟನ್ ಗೋಧಿಯನ್ನೂ, ಮೂರು ಸಾವಿರ ಟನ್ ಜವೆಗೋಧಿಯನ್ನೂ, ನಾಲ್ಕು ಲಕ್ಷ ನಲವತ್ತು ಸಾವಿರ ಲೀಟರ್ ದ್ರಾಕ್ಷಾರಸವನ್ನೂ, ನಾಲ್ಕು ಲಕ್ಷ ನಲವತ್ತು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು,” ಎಂದು ಹೇಳಿಸಿದನು.
11 ಆಗ ಟೈರಿನ ಅರಸನಾದ ಹೀರಾಮನು ಉತ್ತರವನ್ನು ಬರೆದು ಸೊಲೊಮೋನನಿಗೆ ಕಳುಹಿಸಿದನು:
“ಯೆಹೋವ ದೇವರು ತಮ್ಮ ಜನರನ್ನು ಪ್ರೀತಿಮಾಡಿದ್ದರಿಂದ, ನಿನ್ನನ್ನು ಜನರ ಮೇಲೆ ಅರಸನನ್ನಾಗಿ ಮಾಡಿದ್ದಾರೆ,” ಎಂದು ಹೇಳಿದನು.
12 ಇದಲ್ಲದೆ ಹೀರಾಮನು,
“ಯೆಹೋವ ದೇವರಿಗೋಸ್ಕರ ಆಲಯವನ್ನೂ ತನ್ನ ರಾಜ್ಯಕ್ಕೋಸ್ಕರ ಅರಮನೆಯನ್ನೂ ಕಟ್ಟಿಸುವುದಕ್ಕೆ ಅರಸನಾದ ದಾವೀದನಿಗೆ ಬುದ್ಧಿ ವಿವೇಚನೆಯುಳ್ಳ ಒಬ್ಬ ಮಗನನ್ನು ಕೊಟ್ಟಿದ್ದಾರೆ; ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
13 “ಈಗ ನಾನು ಜ್ಞಾನಿಯೂ, ಕಲಾ ಪ್ರವೀಣನೂ ಆದ ಹೂರಾಮ ಅಬೀ ಎಂಬ ಒಬ್ಬನನ್ನು ಕಳುಹಿಸಿದ್ದೇನೆ. 14 ಅವನು ದಾನನ ಪುತ್ರಿಯರಲ್ಲಿರುವ ಒಬ್ಬಳ ಮಗನಾಗಿದ್ದಾನೆ. ಅವನ ತಂದೆ ಟೈರಿನವನು. ಅವನು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಕಲ್ಲು, ಮರ, ಧೂಮ್ರವರ್ಣ, ನೀಲವರ್ಣ, ನಯವಾದ ನಾರಿನ ವಸ್ತ್ರ, ರಕ್ತವರ್ಣ ಇವುಗಳಲ್ಲಿ ಕೆಲಸವನ್ನು ಮಾಡುವುದಕ್ಕೂ ತರಬೇತಿಯನ್ನು ಹೊಂದಿದ್ದನು. ತನಗೆ ಒಪ್ಪಿಸಲಾಗುವ ಎಲ್ಲಾ ತರಹದ ಕೆತ್ತನೆಯ ಕೆಲಸಗಳನ್ನು ನಡೆಸುವುದಕ್ಕೂ ಇವನು ಸಮರ್ಥನು. ನಿನ್ನ ತಂದೆಯೂ ನನ್ನ ಒಡೆಯನಾದ ದಾವೀದನೂ ಗೊತ್ತುಮಾಡಿದ ಕಲಾಕುಶಲರೊಡನೆ ಇವನು ಕೆಲಸಮಾಡಲಿ.
15 “ಈಗ ನನ್ನ ಒಡೆಯನು ಹೇಳಿದ ಆ ಗೋಧಿಯನ್ನೂ, ಜವೆಗೋಧಿಯನ್ನೂ, ಎಣ್ಣೆಯನ್ನೂ, ದ್ರಾಕ್ಷಾರಸವನ್ನೂ ತನ್ನ ಸೇವಕರಿಗೆ ಕಳುಹಿಸಲಿ. 16 ಇದಲ್ಲದೆ ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ತೆಪ್ಪಗಳಲ್ಲಿ ಸಮುದ್ರದ ಮಾರ್ಗವಾಗಿ ಯೊಪ್ಪಕ್ಕೆ ತೆಗೆದುಕೊಂಡು ಬರುತ್ತೇವೆ. ನೀನು ಅವುಗಳನ್ನು ಯೆರೂಸಲೇಮಿಗೆ ಒಯ್ಯಬಹುದು.”
17 ಆಮೇಲೆ ಸೊಲೊಮೋನನು ತನ್ನ ತಂದೆ ದಾವೀದನು ಮಾಡಿಸಿದ ಜನಗಣತಿಯ ಆಧಾರದಿಂದ, ಇಸ್ರಾಯೇಲ್ ದೇಶದಲ್ಲಿದ್ದ ಪ್ರವಾಸಿಗಳಾಗಿದ್ದ ಇತರ ಜನರ ಜನಗಣತಿ ಮಾಡಿಸಿದ ನಂತರ, ಇತರ ಜನರ ಒಟ್ಟು ಸಂಖ್ಯೆ 1,53,600 ಮಂದಿ ಇದ್ದರು. 18 ಆಗ ಅವರಲ್ಲಿ 70,000 ಮಂದಿಯನ್ನು ಹೊರೆ ಹೊರುವುದಕ್ಕೂ, 80,000 ಮಂದಿಯನ್ನು ಬೆಟ್ಟದಲ್ಲಿ ಕಲ್ಲು ಕಡಿಯುವುದಕ್ಕೂ, 3,600 ಮಂದಿಯನ್ನು ಕೆಲಸದವರ ಮೇಲೆ ಕಾವಲಾಗಿರುವುದಕ್ಕೂ ಇರಿಸಿದನು.