21
ಯೆಹೋಷಾಫಾಟನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದೊಳಗೆ ಅವನ ಪೂರ್ವಜರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಆಗ ಅವನಿಗೆ ಬದಲಾಗಿ ಅವನ ಮಗನಾದ ಯೆಹೋರಾಮನು ಅರಸನಾದನು. ಇವನ ಸಹೋದರರಾಗಿರುವ ಯೆಹೋಷಾಫಾಟನ ಪುತ್ರರಾದ ಅಜರ್ಯನೂ, ಯೆಹೀಯೇಲನೂ, ಜೆಕರ್ಯನೂ, ಅಜರ್ಯನೂ, ಮೀಕಾಯೇಲನೂ, ಶೆಫಟ್ಯನೂ ಇದ್ದರು. ಇವರೆಲ್ಲರು ಯೆಹೂದ್ಯರ ಅರಸನಾದ ಯೆಹೋಷಾಫಾಟನ ಪುತ್ರರು. ಅವರ ತಂದೆ ಯೆಹೂದದಲ್ಲಿ ಕೋಟೆಯುಳ್ಳ ಪಟ್ಟಣಗಳ ಸಂಗಡ ಬೆಳ್ಳಿಯನ್ನೂ, ಬಂಗಾರವನ್ನೂ, ಬೆಲೆಯುಳ್ಳ ವಸ್ತುಗಳನ್ನೂ ಅವರಿಗೆ ದಾನಗಳಾಗಿ ಕೊಟ್ಟನು. ಆದರೆ ಯೆಹೋರಾಮನು ಚೊಚ್ಚಲ ಮಗನಾದುದರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
ಯೆಹೂದ್ಯರ ಅರಸನಾದ ಯೆಹೋರಾಮನು
ಯೆಹೋರಾಮನು ತನ್ನ ತಂದೆಯ ರಾಜ್ಯಕ್ಕೆ ಬಂದ ತರುವಾಯ, ಅವನು ತನ್ನನ್ನು ಬಲಪಡಿಸಿಕೊಂಡು ತನ್ನ ಸಮಸ್ತ ಸಹೋದರರನ್ನೂ, ಇಸ್ರಾಯೇಲಿನ ಪ್ರಧಾನರಲ್ಲಿ ಕೆಲವರನ್ನೂ ಖಡ್ಗದಿಂದ ಕೊಂದುಹಾಕಿದನು. ಯೆಹೋರಾಮನು ಆಳಲಾರಂಭಿಸಿದಾಗ ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು. ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದರಿಂದ ಅವನು ಅಹಾಬನ ಮನೆಯವರು ನಡೆದ ಹಾಗೆ ಇಸ್ರಾಯೇಲರ ಅರಸರ ಮಾರ್ಗವನ್ನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಯೆಹೋವ ದೇವರು ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂದು ಪ್ರಮಾಣ ಮಾಡಿದ ಕಾರಣ, ದೇವರು ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು. ಆಗ ಯೆಹೋರಾಮನು ತನ್ನ ಪ್ರಧಾನರ ಸಂಗಡ, ಎಲ್ಲಾ ರಥಬಲವನ್ನು ತೆಗೆದುಕೊಂಡುಹೋಗಿ, ರಾತ್ರಿಯಲ್ಲಿ ಎದ್ದು, ತನ್ನನ್ನೂ, ತನ್ನ ರಥಗಳ ಅಧಿಪತಿಗಳನ್ನೂ ಸುತ್ತುವರೆದಿದ್ದ ಎದೋಮ್ಯರನ್ನು ಸೋಲಿಸಿದನು. 10 ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ.
ಅದೇ ಕಾಲದಲ್ಲಿ ಯೆಹೋರಾಮನು ತನ್ನ ಪಿತೃಗಳ ದೇವರಾದ ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು. 11 ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಪೂಜಾಸ್ಥಳಗಳನ್ನು ಮಾಡಿ, ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ, ಹಾಗೆಯೇ ಮಾಡಲು ಯೆಹೂದದವರನ್ನು ಬಲವಂತ ಮಾಡಿದನು.
12 ಆದಕಾರಣ ಪ್ರವಾದಿಯಾದ ಎಲೀಯನಿಂದ ಅವನಿಗೆ ಒಂದು ಪತ್ರವು ಬಂತು. ಅದರಲ್ಲಿ ಅವನು,
“ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗಗಳಲ್ಲಿಯೂ, ಯೆಹೂದದ ಅರಸನಾದ ಆಸನ ಮಾರ್ಗಗಳಲ್ಲಿಯೂ ನಡೆಯದೆ, 13 ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದು, ಅಹಾಬನ ಮನೆಯವರು ದೇವದ್ರೋಹ ಮಾಡಿದಂತೆ, ಯೆಹೂದದವರನ್ನೂ, ಯೆರೂಸಲೇಮಿನ ನಿವಾಸಿಗಳನ್ನೂ ದ್ರೋಹ ಮಾಡಲು ಪ್ರೇರೇಪಿಸಿ, ನಿನಗಿಂತ ಉತ್ತಮರಾಗಿರುವ ನಿನ್ನ ತಂದೆಯ ಮನೆಯವರಾದ ನಿನ್ನ ಸಹೋದರರನ್ನು ಕೊಂದುಹಾಕಿದ್ದರಿಂದ, 14 ಯೆಹೋವ ದೇವರು ದೊಡ್ಡ ಬಾಧೆಯಿಂದ ನಿನ್ನ ಜನರನ್ನೂ, ನಿನ್ನ ಮಕ್ಕಳನ್ನೂ, ನಿನ್ನ ಹೆಂಡತಿಯರನ್ನೂ, ನಿನ್ನ ಸಮಸ್ತ ಸ್ಥಿತಿಯನ್ನೂ ಬಾಧಿಸುತ್ತಾರೆ. 15 ಇದಲ್ಲದೆ ದಿನದಿನಕ್ಕೆ ರೋಗ ಅನುಭವಿಸುವುದರಿಂದ ನಿನ್ನ ಕರುಳುಗಳು ಹೊರಕ್ಕೆ ಬರುವವರೆಗೆ ಕರುಳುಬೇನೆಯ ರೋಗದಿಂದ ನಿನಗೆ ಕಠಿಣರೋಗ ಬರುವುದು,’ ” ಎಂದು ಬರೆದಿದ್ದನು.
16 ಇದಲ್ಲದೆ ಕೂಷ್ಯರ ಬಳಿಯಲ್ಲಿದ್ದ ಫಿಲಿಷ್ಟಿಯರ ಮತ್ತು ಅರಬಿಯರ ಮನಸ್ಸನ್ನು ಯೆಹೋರಾಮನಿಗೆ ವಿರೋಧವಾಗಿ ಯೆಹೋವ ದೇವರು ಎಬ್ಬಿಸಿದರು. 17 ಆಗ ಅವರು ಯೆಹೂದದ ಮೇಲೆ ಬಂದು ಅದರಲ್ಲಿ ನುಗ್ಗಿ, ಅರಸನ ಅರಮನೆಯಲ್ಲಿ ಸಿಕ್ಕಿದ ಸಮಸ್ತ ಸ್ಥಿತಿಯನ್ನೂ, ಅವನ ಪುತ್ರರನ್ನೂ, ಅವನ ಹೆಂಡತಿಯರನ್ನೂ ತೆಗೆದುಕೊಂಡು ಹೋದರು. ಆದ್ದರಿಂದ ಅವನ ಪುತ್ರರಲ್ಲಿ ಚಿಕ್ಕವನಾದ ಯೆಹೋವಾಹಾಜನ ಹೊರತು ಅವನಿಗೆ ಪುತ್ರರು ಯಾರೂ ಉಳಿಯಲಿಲ್ಲ.
18 ಇದೆಲ್ಲದರ ತರುವಾಯ ಯೆಹೋವ ದೇವರು ಯೆಹೋರಾಮನ ಕರುಳುಗಳಲ್ಲಿ ವಾಸಿಯಾಗಲಾರದ ರೋಗದಿಂದ ಅವನನ್ನು ಬಾಧಿಸಿದರು. 19 ಎರಡು ವರ್ಷವಾದ ತರುವಾಯ, ಅವನ ರೋಗದಿಂದ ಅವನ ಕರುಳುಗಳು ಹೊರಕ್ಕೆ ಬಂದವು. ಹೀಗೆ ಅವನು ಕಡುಬೇನೆಯಿಂದ ಸತ್ತನು. ಅವನ ಜನರು ಅವನ ಪಿತೃಗಳಿಗೆ ಗೌರವಕ್ಕೋಸ್ಕರ ಅಗ್ನಿಕುಂಡ ಹಚ್ಚಲಿಲ್ಲ.
20 ಯೆಹೋರಾಮ್ ಆಳಲಾರಂಭಿಸಿದಾಗ ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು. ಅವನು ಮರಣಹೊಂದಿದಾಗ ಯಾರೂ ಶೋಕಿಸಲಿಲ್ಲ ಆದರೂ ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಆದರೆ ಅರಸರ ಸಮಾಧಿಗಳಲ್ಲಿ ಅಲ್ಲ.