33
ಯೆಹೂದ್ಯರ ಅರಸನಾದ ಮನಸ್ಸೆಯು
ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಐವತ್ತೈದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಆದರೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಜನಾಂಗಗಳ ಅಸಹ್ಯವಾದವುಗಳನ್ನು ಅವನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು. ಇದಲ್ಲದೆ ಯೆರೂಸಲೇಮಿನಲ್ಲಿ, “ನನ್ನ ಹೆಸರು ಯುಗಯುಗಕ್ಕೂ ಇರುವುದು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಹಳ ಬಲಿಪೀಠಗಳನ್ನು ಕಟ್ಟಿಸಿದನು. ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು. ಇದಲ್ಲದೆ ಮನಸ್ಸೆಯು ಬೆನ್ ಹಿನ್ನೋಮ್ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನೂ ಮಾಟವನ್ನೂ ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು.
ಮನಸ್ಸೆಯು ತಾನು ಮಾಡಿದ ವಿಗ್ರಹವನ್ನು ದೇವರ ಆಲಯದಲ್ಲಿ ಇಟ್ಟನು. ಆ ಆಲಯದ ಬಗ್ಗೆ ದೇವರು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಹೇಳಿದ್ದೇನೆಂದರೆ, “ನಾನು ಈ ಆಲಯದಲ್ಲಿ ಮತ್ತು ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿ ನಾನು ಆಯ್ದುಕೊಂಡ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಶಾಶ್ವತವಾಗಿ ಸ್ಥಾಪಿಸುತ್ತೇನೆ. ನಾನು ಮೋಶೆಯ ಮುಖಾಂತರ ಆಜ್ಞಾಪಿಸಿದ ಎಲ್ಲಾ ಅಪ್ಪಣೆಗಳನ್ನೂ, ಕಾನೂನುಗಳನ್ನೂ, ವಿಧಿಗಳನ್ನೂ ಕೈಗೊಂಡು ನಡೆಯುವುದರಲ್ಲಿ ಅವರು ಜಾಗರೂಕರಾಗಿದ್ದರೆ, ನಾನು ಅವರ ಪಿತೃಗಳಿಗೆ ನೇಮಕ ಮಾಡಿದ ದೇಶವನ್ನು ಪುನಃ ಇಸ್ರಾಯೇಲರು ಬಿಟ್ಟುಹೋಗುವಂತೆ ಮಾಡುವುದಿಲ್ಲ,” ಎಂದು ಹೇಳಿದ್ದರು. ಆದರೆ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಇಸ್ರಾಯೇಲರ ಮುಂದೆಯೇ ಯೆಹೋವ ದೇವರಿಂದ ನಾಶಹೊಂದಿದ ಇತರ ಜನಾಂಗಗಳಿಗಿಂತ ಅಧಿಕವಾಗಿ ಕೆಟ್ಟದ್ದನ್ನು ಮಾಡಲು ಮನಸ್ಸೆಯು ಅವರನ್ನು ಪ್ರೇರೇಪಿಸಿದನು.
10 ಯೆಹೋವ ದೇವರು ಮನಸ್ಸೆಯೊಂದಿಗೂ, ಅವನ ಜನರೊಂದಿಗೂ ಮಾತನಾಡಿದರು. ಆದರೆ ಅವರು ಲಕ್ಷಿಸಲಿಲ್ಲ. 11 ಆದಕಾರಣ ಯೆಹೋವ ದೇವರು ಅಸ್ಸೀರಿಯದ ಅರಸನ ಸೈನ್ಯದ ಅಧಿಪತಿಗಳನ್ನೂ ಅವನ ಮೇಲೆ ಬರಮಾಡಿದರು. ಆ ಅಧಿಪತಿಗಳು ಮನಸ್ಸೆಯ ಮೂಗಿಗೆ ಕೊಂಡಿಗಳನ್ನು ಹಾಕಿ, ಅವನಿಗೆ ಕಂಚಿನ ಸಂಕೋಲೆಗಳಿಂದ ಬಂಧಿಸಿ, ಅವನನ್ನು ಬಾಬಿಲೋನಿಗೆ ಒಯ್ದರು. 12 ಮನಸ್ಸೆಯು ಬಾಧೆಯಲ್ಲಿರುವಾಗ ತನ್ನ ದೇವರಾದ ಯೆಹೋವ ದೇವರನ್ನು ಬೇಡಿಕೊಂಡನು ಮತ್ತು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಪ್ರಾರ್ಥನೆಮಾಡಿದನು. 13 ಆಗ ಯೆಹೋವ ದೇವರು ಕನಿಕರಪಟ್ಟು, ಅವನ ಬಿನ್ನಹವನ್ನು ಕೇಳಿ, ಯೆರೂಸಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರುಗಿ ಬರಮಾಡಿದರು. ಆಗ ಯೆಹೋವ ದೇವರೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
14 ಇದಾದ ತರುವಾಯ ಮನಸ್ಸೆಯು ದಾವೀದನ ಪಟ್ಟಣದ ಹೊರಭಾಗದಲ್ಲಿ ಗೀಹೋನಿನ ಪಶ್ಚಿಮ ಕಡೆಯ ತಗ್ಗಿನಲ್ಲಿ ಮೀನು ಬಾಗಿಲ ದ್ವಾರದವರೆಗಿರುವ ತಗ್ಗಿನಲ್ಲಿ ಓಫೇಲ್ ಗುಡ್ಡದ ಸುತ್ತಲೂ ಗೋಡೆಯನ್ನು ಕಟ್ಟಿಸಿ, ಅದನ್ನು ಬಹಳ ಎತ್ತರಮಾಡಿ, ಯೆಹೂದದ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯದ ಅಧಿಪತಿಗಳನ್ನು ಇಟ್ಟನು.
15 ಅವನು ಅನ್ಯದೇವರುಗಳನ್ನೂ, ಯೆಹೋವ ದೇವರ ಆಲಯದಲ್ಲಿರುವ ವಿಗ್ರಹವನ್ನೂ ಯೆಹೋವ ದೇವರ ಆಲಯದ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ತಾನು ಕಟ್ಟಿಸಿದ ಸಮಸ್ತ ಬಲಿಪೀಠಗಳನ್ನೂ ತೆಗೆದುಹಾಕಿ, ಅವುಗಳನ್ನು ಪಟ್ಟಣದ ಹೊರಗೆ ಬಿಸಾಡಿ ಬಿಟ್ಟನು. 16 ಅವನು ಯೆಹೋವ ದೇವರ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ಸಮಾಧಾನದ ಬಲಿಗಳನ್ನೂ, ಸ್ತೋತ್ರದ ಬಲಿಗಳನ್ನೂ ಅರ್ಪಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸೇವಿಸಲು ಯೆಹೂದದವರಿಗೆ ಆಜ್ಞಾಪಿಸಿದನು. 17 ಜನರು ತಮ್ಮ ದೇವರಾದ ಯೆಹೋವ ದೇವರಿಗೆ ಮಾತ್ರ ಬಲಿಯನ್ನರ್ಪಿಸುವಾಗ, ಇನ್ನೂ ಉನ್ನತ ಸ್ಥಳಗಳಲ್ಲಿಯೇ ಬಲಿಯನ್ನು ಅರ್ಪಿಸುತ್ತಾ ಇದ್ದರು.
18 ಮನಸ್ಸೆಯ ಇತರ ಕ್ರಿಯೆಗಳೂ, ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ನಾಮದಲ್ಲಿ ಅವನ ಸಂಗಡ ಮಾತನಾಡಿದ ಪ್ರವಾದಿಗಳ ಮಾತುಗಳೂ, ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 19 ಇದಲ್ಲದೆ ಅವನ ಪ್ರಾರ್ಥನೆಯೂ, ಅವನು ದೇವರಿಗೆ ಭಿನ್ನವಿಸಿದ್ದೂ, ಅವನ ಸಮಸ್ತ ಪಾಪವೂ, ಅವನ ಅಪನಂಬಿಕೆಯೂ, ಅವನು ತಗ್ಗಿಸಿಕೊಳ್ಳುವುದಕ್ಕಿಂತ ಮುಂಚೆ ಕಟ್ಟಿಸಿದ ಉನ್ನತ ಸ್ಥಳಗಳನ್ನೂ, ನಿಲ್ಲಿಸಿದ ಅಶೇರ ಸ್ತಂಭಗಳೂ, ಕೆತ್ತಿಸಿದ ವಿಗ್ರಹಗಳೂ, ಸ್ಥಾಪಿಸಿದ ಸ್ಥಳಗಳೂ ಪ್ರವಾದಿಗಳ ದಾಖಲೆಗಳಲ್ಲಿ ಬರೆದಿರುತ್ತವೆ. 20 ಮನಸ್ಸೆಯು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ಅವನ ಅರಮನೆಯಲ್ಲಿ ಹೂಳಿಟ್ಟರು. ಅವನ ಮಗ ಆಮೋನನು ಅವನಿಗೆ ಬದಲಾಗಿ ಅರಸನಾದನು.
ಯೆಹೂದ ಪ್ರಾಂತದ ಅರಸನಾದ ಆಮೋನನು
21 ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷದವನಾಗಿದ್ದನು, ಅವನು ಯೆರೂಸಲೇಮಿನಲ್ಲಿ ಎರಡು ವರ್ಷ ಆಳಿದನು. 22 ಆದರೆ ಅವನು ತನ್ನ ತಂದೆ ಮನಸ್ಸೆಯು ಮಾಡಿದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. ಆಮೋನನು ತನ್ನ ತಂದೆ ಮನಸ್ಸೆಯು ಮಾಡಿದ ಕೆತ್ತಿದ ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸಿ ಅವುಗಳನ್ನು ಪೂಜಿಸಿದನು. 23 ಆಮೋನನು ತನ್ನ ತಂದೆ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ, ಯೆಹೋವ ದೇವರ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ. ಆದರೆ ಆಮೋನನು ಅಧಿಕವಾಗಿ ಅಪರಾಧ ಮಾಡಿದನು.
24 ಆದ್ದರಿಂದ ಆಮೋನನ ಸೇವಕರು ಅವನ ವಿರುದ್ಧ ಒಳಸಂಚುಮಾಡಿ, ಅವನ ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು. 25 ಆದರೆ ದೇಶದ ಜನರು ಅರಸನಾದ ಆಮೋನನ ವಿರುದ್ಧ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ, ದೇಶದ ಜನರು ಅವನ ಮಗ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.