7
ದೇವಾಲಯದ ಪ್ರತಿಷ್ಠಾಪನೆ
ಸೊಲೊಮೋನನು ತನ್ನ ಪ್ರಾರ್ಥನೆಯನ್ನು ಮುಗಿಸಿದ ಕೂಡಲೆ, ಬೆಂಕಿಯು ಆಕಾಶದಿಂದ ಇಳಿದು ದಹನಬಲಿಗಳನ್ನೆಲ್ಲಾ ದಹಿಸಿಬಿಟ್ಟಿತು. ಯೆಹೋವ ದೇವರ ಮಹಿಮೆಯು ಆಲಯವನ್ನು ತುಂಬಿತು. ಯೆಹೋವ ದೇವರ ಮಹಿಮೆಯು ಆಲಯವನ್ನು ತುಂಬಿದ್ದರಿಂದ ಯಾಜಕರು ಆಲಯದಲ್ಲಿ ಹೋಗಲಾರದೆ ಇದ್ದರು. ಇಸ್ರಾಯೇಲರೆಲ್ಲರೂ ಬೆಂಕಿಯು ಇಳಿದದ್ದನ್ನೂ, ಆಲಯದ ಮೇಲೆ ಇರುವ ಯೆಹೋವ ದೇವರ ಮಹಿಮೆಯನ್ನೂ ಕಂಡಾಗ, ಅವರು ನೆಲಕ್ಕೆ ತಮ್ಮ ಮುಖಗಳನ್ನು ಬಾಗಿ, ನೆಲಗಟ್ಟಿನ ಮೇಲೆ ಮೊಣಕಾಲೂರಿ ಆರಾಧಿಸುತ್ತಾ, ಯೆಹೋವ ದೇವರನ್ನು ಕೊಂಡಾಡಿ ಹೇಳಿದ್ದೇನೆಂದರೆ,
“ಯೆಹೋವ ದೇವರು ಒಳ್ಳೆಯವರು,
ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.”
ಆಗ ಅರಸನೂ, ಸಮಸ್ತ ಜನರೂ ಯೆಹೋವ ದೇವರ ಮುಂದೆ ಬಲಿಗಳನ್ನು ಅರ್ಪಿಸಿದರು. ಅರಸನಾದ ಸೊಲೊಮೋನನು 22,000 ಹೋರಿಗಳನ್ನೂ, 1,20,000 ಕುರಿಗಳನ್ನೂ ಬಲಿಯಾಗಿ ಅರ್ಪಿಸಿದನು. ಹೀಗೆಯೇ ಅರಸನೂ, ಸಮಸ್ತ ಜನರೂ ದೇವರ ಆಲಯವನ್ನು ಪ್ರತಿಷ್ಠೆ ಮಾಡಿದರು. ಯಾಜಕರು ತಮ್ಮ ತಮ್ಮ ಸೇವೆಯಲ್ಲಿ ನಿಂತರು. ಹಾಗೆಯೇ ಲೇವಿಯರು ಯೆಹೋವ ದೇವರ ಗೀತವಾದ್ಯಗಳನ್ನು ಹಿಡಿದುಕೊಂಡು ನಿಂತರು. ಅರಸನಾದ ದಾವೀದನು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಇವುಗಳನ್ನು ಮಾಡಿಸಿದ್ದನು. “ಯೆಹೋವ ದೇವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಲೇವಿಯರ ಮುಂದೆ ನಿಂತು ತುತೂರಿಗಳನ್ನು ಊದುತ್ತಿದ್ದರು. ಸಮಸ್ತ ಇಸ್ರಾಯೇಲರೂ ನಿಂತಿದ್ದರು.
ಸೊಲೊಮೋನನು ಮಾಡಿಸಿದ ಕಂಚಿನ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಯ ಕೊಬ್ಬನ್ನೂ ಇಡುವುದಕ್ಕೆ ಸ್ಥಳ ಸಾಲದೆ ಇದ್ದುದರಿಂದ, ಸೊಲೊಮೋನನು ಯೆಹೋವ ದೇವರ ಆಲಯದ ಮುಂದಿರುವ ಮಧ್ಯದ ಅಂಗಳವನ್ನು ಪ್ರತಿಷ್ಠೆಮಾಡಿ, ಅಲ್ಲಿ ಅವನು ದಹನಬಲಿಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
ಅದೇ ಕಾಲದಲ್ಲಿ ಸೊಲೊಮೋನನೂ, ಅವನ ಸಂಗಡ ಲೆಬೊ ಹಮಾತಿನ ಪ್ರದೇಶ ಮೊದಲುಗೊಂಡು ಈಜಿಪ್ಟಿನ ನದಿಯವರೆಗೆ ಇರುವ ಮಹಾ ಜನಾಂಗವಾಗಿ ಕೂಡಿಬಂದಿದ್ದ ಸಮಸ್ತ ಇಸ್ರಾಯೇಲರೂ ಅವನ ಸಂಗಡ ಏಳು ದಿವಸ ಹಬ್ಬವನ್ನು ಮಾಡಿದರು. ಎಂಟನೆಯ ದಿನದಲ್ಲಿ ಪರಿಶುದ್ಧ ಸಮೂಹವನ್ನು ನಡೆಸಿದರು. ಏಕೆಂದರೆ ಏಳು ದಿವಸ ಬಲಿಪೀಠದ ಪ್ರತಿಷ್ಠೆಯನ್ನು ಮತ್ತು ಇನ್ನು ಏಳು ದಿವಸ ಹಬ್ಬವನ್ನು ಆಚರಿಸಿದರು. 10 ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿವಸದಲ್ಲಿ ಅವನು ಜನರಿಗೆ ಅವರವರ ಡೇರೆಗಳಿಗೆ ಹೋಗುವುದಕ್ಕೆ ಅಪ್ಪಣೆಕೊಡಲು, ಆಗ ಅವರು ಯೆಹೋವ ದೇವರು ದಾವೀದನಿಗೂ, ಸೊಲೊಮೋನನಿಗೂ, ತನ್ನ ಜನರಾದ ಇಸ್ರಾಯೇಲರಿಗೂ ಮಾಡಿದ ಉಪಕಾರದ ನಿಮಿತ್ತ ಅವರು ಹೃದಯದಲ್ಲಿ ಆನಂದಭರಿತರಾಗಿ ಸಂತೋಷಪಡುತ್ತಾ ಹೋದರು.
ಯೆಹೋವ ದೇವರು ಸೊಲೊಮೋನನಿಗೆ ಕಾಣಿಸಿಕೊಂಡದ್ದು
11 ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದನು. ಅವನು ಯೆಹೋವ ದೇವರ ಆಲಯದಲ್ಲಿಯೂ, ತನ್ನ ಅರಮನೆಯಲ್ಲಿಯೂ ಮಾಡಬೇಕಾದ ತನ್ನ ಮನಸ್ಸಿನಲ್ಲಿ ಇದ್ದ ಯೋಜನೆಯನ್ನು ಈಡೇರಿಸುವಲ್ಲಿ ಯಶಸ್ವಿಯಾದನು. 12 ಯೆಹೋವ ದೇವರು ರಾತ್ರಿಯಲ್ಲಿ ಸೊಲೊಮೋನನಿಗೆ ಪ್ರತ್ಯಕ್ಷರಾಗಿ ಅವನಿಗೆ,
“ನಾನು ನಿನ್ನ ಪ್ರಾರ್ಥನೆಯನ್ನು ಕೇಳಿ ಬಲಿಯನ್ನು ಅರ್ಪಿಸುವ ಆಲಯವಾಗಿ ನನಗೆ ಈ ಸ್ಥಳವನ್ನು ಆಯ್ದುಕೊಂಡಿದ್ದೇನೆ.
13 “ಮಳೆಯಿಲ್ಲದಂತೆ ನಾನು ಆಕಾಶವನ್ನು ಮುಚ್ಚಿದರೂ ದೇಶವನ್ನು ತಿಂದುಬಿಡಲು ಮಿಡತೆಗಳಿಗೆ ಆಜ್ಞಾಪಿಸಿದರೂ, ಇಲ್ಲವೆ ನನ್ನ ಜನರ ಮಧ್ಯದಲ್ಲಿ ಘೋರ ವ್ಯಾಧಿಯನ್ನು ಕಳುಹಿಸಿದರೂ, 14 ನನ್ನ ಹೆಸರಿನಿಂದ ಕರೆಯಲಾದ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆಮಾಡಿ, ನನ್ನನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ, ಆಗ ನಾನು ಪರಲೋಕದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ, ಅವರ ದೇಶವನ್ನು ಗುಣ ಮಾಡುವೆನು. 15 ಈಗ ಈ ಸ್ಥಳದ ಪ್ರಾರ್ಥನೆಗೆ ನನ್ನ ಕಣ್ಣುಗಳು ತೆರೆದಿರುವುವು, ನನ್ನ ಕಿವಿಗಳು ಆಲೈಸುತ್ತಿರುವುವು. 16 ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ಈ ಆಲಯವನ್ನು ಆಯ್ದುಕೊಂಡು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು.
17 “ನೀನು ನಿನ್ನ ತಂದೆಯಾದ ದಾವೀದನಂತೆ, ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ, 18 ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿನಗೆ ಉತ್ತರಾಧಿಕಾರಿಯ ಕೊರತೆಯಾಗುವುದಿಲ್ಲ,’ ಎಂದು ನಾನು ನಿನ್ನ ತಂದೆ ದಾವೀದನ ಸಂಗಡ ಮಾಡಿದ ಒಡಂಬಡಿಕೆಯ ಪ್ರಕಾರ ನಿನ್ನ ರಾಜ್ಯದ ಸಿಂಹಾಸನವನ್ನು ಸ್ಥಿರಪಡಿಸುತ್ತೇನೆ.
19 “ಆದರೆ ನೀವು, ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ತೊರೆದುಬಿಟ್ಟು, ನನ್ನಿಂದ ದೂರಹೋಗಿ ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ, 20 ಆಗ ನಾನು ಇಸ್ರಾಯೇಲಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ಕಿತ್ತುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಅದನ್ನು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಆಸ್ಪದವಾಗುವಂತೆ ಮಾಡುವೆನು. 21 ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು, ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು. 22 ಅದಕ್ಕೆ ಜನರು, ‘ತಮ್ಮ ತಂದೆಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ಅನ್ಯದೇವರುಗಳನ್ನು ಹಿಂಬಾಲಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ, ಅವರು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಾರೆಂದು ಹೇಳುವರು,’ ” ಎಂದರು.