14
ಆ ಕಾಲದಲ್ಲಿ, ಸೌಲನ ಮಗನಾದ ಯೋನಾತಾನನು ತನ್ನ ಆಯುಧಗಳನ್ನು ಹೊರುವ ಯುವಕನಿಗೆ, “ನಾವು ನಮಗೆದುರಾಗಿರುವ ಆಚೆಯಲ್ಲಿರುವ ಫಿಲಿಷ್ಟಿಯರ ಠಾಣಕ್ಕೆ ಹೋಗೋಣ ಬಾ,” ಎಂದನು. ಆದರೆ ತಂದೆಗೆ ತಿಳಿಸಲಿಲ್ಲ.
ಸೌಲನು ಗಿಬೆಯದ ಕಟ್ಟಕಡೆಯ ಮೇರೆಯಾದ ಮಿಗ್ರೋನಿನಲ್ಲಿರುವ ದಾಳಿಂಬೆ ಮರದ ಕೆಳಗಿದ್ದನು. ಅವನ ಸಂಗಡ ಸುಮಾರು ಆರುನೂರು ಜನರಿದ್ದರು. ಆಗ ಏಲಿಯ ಮಗ ಫೀನೆಹಾಸನ ಮಗ ಈಕಾಬೋದನ ಸಹೋದರ ಅಹೀಟೂಬನ ಮಗ ಅಹೀಯನು ಶೀಲೋವಿನಲ್ಲಿ ಏಫೋದನ್ನು ಧರಿಸಿಕೊಂಡು ಯೆಹೋವ ದೇವರ ಯಾಜಕನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.
ಯೋನಾತಾನನು ಫಿಲಿಷ್ಟಿಯರ ಠಾಣಕ್ಕೆ ದಾಟಿ ಹೋಗಬೇಕೆಂದು ಹುಡುಕಿದ ಮಾರ್ಗದ ಮಧ್ಯದಲ್ಲಿ ಈ ಕಡೆ ಆ ಕಡೆಯಲ್ಲಿ ಬೊಚೇಚ್, ಸೆನೆ ಎಂಬ ಚೂಪಾದ ಎರಡು ಬಂಡೆಗಳಿದ್ದವು. ಆ ಬಂಡೆಗಳಲ್ಲಿ ಒಂದು ಉತ್ತರಕ್ಕೆ ಮಿಕ್ಮಾಷಿಗೆ ಎದುರಾಗಿಯೂ, ಮತ್ತೊಂದು ದಕ್ಷಿಣಕ್ಕೆ ಗಿಬೆಯಕ್ಕೆ ಎದುರಾಗಿಯೂ ಇತ್ತು.
ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯುವಕನಿಗೆ, “ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿ ಹೋಗೋಣ ಬಾ; ಒಂದು ವೇಳೆ ಯೆಹೋವ ದೇವರು ನಮಗೋಸ್ಕರ ಕಾರ್ಯವನ್ನು ನಡೆಸುವರು. ಏಕೆಂದರೆ ಅನೇಕ ಜನರಿಂದಲಾದರೂ, ಸ್ವಲ್ಪ ಜನರಿಂದಲಾದರೂ ರಕ್ಷಿಸುವುದಕ್ಕೆ ಯೆಹೋವ ದೇವರಿಗೆ ಅಸಾಧ್ಯವಲ್ಲ,” ಎಂದನು.
ಅದಕ್ಕೆ ಅವನ ಆಯುಧಗಳನ್ನು ಹೊರುವವನು ಅವನಿಗೆ, “ನಿನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಮಾಡು; ನಡಿ, ನಾನು ನನ್ನ ಸಂಪೂರ್ಣ ಹೃದಯದಿಂದ ನಿನ್ನ ಸಂಗಡ ಇದ್ದೇನೆ,” ಎಂದನು.
ಆಗ ಯೋನಾತಾನನು, “ನಾವು ಆ ಮನುಷ್ಯರ ಬಳಿಗೆ ದಾಟಿ ಹೋಗಿ ಅವರಿಗೆ ಕಾಣಿಸಿಕೊಳ್ಳುವೆವು. ಅವರು, ‘ನಾವು ನಿಮ್ಮ ಬಳಿಗೆ ಬರುವವರೆಗೆ ಸುಮ್ಮನೆ ನಿಲ್ಲಿರಿ,’ ಎಂದು ನಮ್ಮ ಸಂಗಡ ಹೇಳಿದರೆ; ನಾವು ಅವರ ಬಳಿಗೆ ಹೋಗದೆ ನಮ್ಮ ಸ್ಥಳದಲ್ಲಿ ನಿಲ್ಲುವೆವು. 10 ಆದರೆ ಅವರು, ‘ಮೇಲೆ ಹತ್ತಿ ನಮ್ಮ ಬಳಿಗೆ ಬನ್ನಿರಿ,’ ಎಂದು ಹೇಳಿದರೆ ನಾವು ಮೇಲೆ ಹತ್ತಿ ಹೋಗೋಣ. ಏಕೆಂದರೆ ಯೆಹೋವ ದೇವರು ಅವರನ್ನು ನಮ್ಮ ಕೈಗೆ ಒಪ್ಪಿಸಿಕೊಟ್ಟರೆಂಬುದಕ್ಕೆ ಇದೇ ನಮಗೆ ಗುರುತಾಗಿರುವುದು,” ಎಂದನು.
11 ಹಾಗೆಯೇ ಅವರಿಬ್ಬರೂ ತಾವು ಫಿಲಿಷ್ಟಿಯರ ಠಾಣ್ಯದವರೆಗೂ ಕಾಣಿಸಿಕೊಂಡರು. ಆಗ ಫಿಲಿಷ್ಟಿಯರು, “ಗುಹೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಹಿಬ್ರಿಯರು ಹೊರಟು ಬರುತ್ತಾರೆ,” ಎಂದರು. 12 ಠಾಣ್ಯಕ್ಕೆ ಮನುಷ್ಯರು ಯೋನಾತಾನನಿಗೂ, ಅವನ ಆಯುಧ ಹೊರುವವನಿಗೂ, “ಮೇಲೆ ಹತ್ತಿ ನಮ್ಮ ಬಳಿಗೆ ಬನ್ನಿರಿ, ನಿಮಗೆ ಪಾಠ ಕಲಿಸುತ್ತೇನೆ,” ಎಂದು ಕೂಗಿದರು.
ಆಗ ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ನನ್ನ ಹಿಂದೆ ಏರಿ ಬಾ. ಏಕೆಂದರೆ ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು,” ಎಂದನು.
13 ಯೋನಾತಾನನು ತನ್ನ ಕೈಗಳಿಂದಲೂ, ಕಾಲುಗಳಿಂದಲೂ ಹತ್ತಿದನು. ಅವನ ಆಯುಧಗಳನ್ನು ಹೊರುವವನು ಅವನ ಹಿಂದೆ ಹತ್ತಿದನು. ಆಗ ಫಿಲಿಷ್ಟಿಯರು ಯೋನಾತಾನನ ಮುಂದೆ ಬಿದ್ದರು. ಅವನ ಆಯುಧಗಳನ್ನು ಹೊರುವವನು ಅವನ ಹಿಂದೆ ಕೊಲ್ಲುತ್ತಾ ಹೋದನು. 14 ಯೋನಾತಾನನೂ, ಅವನ ಆಯುಧಗಳನ್ನು ಹೊರುವವನೂ ಹೊಡೆದ ಆ ಮೊದಲ ಸಂಹಾರದಲ್ಲಿ ಅರ್ಧ ಎಕರೆ ಭೂಮಿಯಲ್ಲಿ ಸತ್ತವರು ಸುಮಾರು ಇಪ್ಪತ್ತು ಜನರಾಗಿದ್ದರು.
ಇಸ್ರಾಯೇಲರು ಫಿಲಿಷ್ಟಿಯರನ್ನು ಓಡಿಸಿದ್ದು
15 ಆಗ ಪಾಳೆಯಲ್ಲಿಯ ಹೊಲದಲ್ಲಿ ಇದ್ದ ಸಕಲ ಜನರಲ್ಲಿಯೂ ಭಯದಿಂದ ನಡುಕ ಉಂಟಾಯಿತು. ಠಾಣ್ಯದವರೂ, ಕೊಳ್ಳೆಗಾರರೂ ಹೆದರಿಕೊಂಡರು. ಇದಲ್ಲದೆ, ದೇವರು ಭೂಕಂಪವನ್ನುಂಟುಮಾಡಿದರು. ಹೀಗೆ ಅಲ್ಲಿ ದೊಡ್ಡ ಕಳವಳವಾಯಿತು.
16 ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ಕಂಡಾಗ, ಆ ಗುಂಪಿನವರು ಕರಗಿ ಹೋಗುತ್ತಾ, ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು. 17 ಆಗ ಸೌಲನು ತನ್ನ ಬಳಿಯಲ್ಲಿದ್ದ ಜನರಿಗೆ, “ನಮ್ಮ ಬಳಿಯಿಂದ ಹೋದವರು ಯಾರೆಂದು ಲೆಕ್ಕವನ್ನು ನೋಡಿರಿ,” ಎಂದನು. ಅವರು ಲೆಕ್ಕ ನೋಡುವಾಗ, ಯೋನಾತಾನನೂ, ಅವನ ಆಯುಧಗಳನ್ನು ಹೊರುವವನೂ ಇರಲಿಲ್ಲ.
18 ಆಗ ಸೌಲನು ಅಹೀಯನಿಗೆ, “ನೀನು ದೇವರ ಮಂಜೂಷವನ್ನು ತೆಗೆದುಕೊಂಡು ಬಾ,” ಎಂದನು. ಏಕೆಂದರೆ ದೇವರ ಮಂಜೂಷವು ಆ ಕಾಲದಲ್ಲಿ ಇಸ್ರಾಯೇಲರ ಬಳಿಯಲ್ಲಿತ್ತು. 19 ಸೌಲನು ಯಾಜಕನ ಸಂಗಡ ಇನ್ನೂ ಮಾತನಾಡುತ್ತಿರುವಾಗ, ಫಿಲಿಷ್ಟಿಯರ ದಂಡಿನಲ್ಲಿ ಕೋಲಾಹಲವು ಹೆಚ್ಚಾಯಿತು. ಆದ್ದರಿಂದ ಸೌಲನು ಯಾಜಕನಿಗೆ, “ನಿನ್ನ ಕೈ ಹಿಂದೆ ತೆಗೆದುಕೋ,” ಎಂದನು.
20 ಆಗ ಸೌಲನೂ, ಅವನ ಸಂಗಡ ಯುದ್ಧಕ್ಕಿದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ, ಫಿಲಿಷ್ಟಿಯರಲ್ಲಿ ಗಲಿಬಿಲಿಯುಂಟಾಗಿ ಒಬ್ಬನ ಖಡ್ಗವು ಒಬ್ಬನಿಗೆ ವಿರೋಧವಾಗಿ ಮತ್ತೊಬ್ಬನನ್ನು ಕೊಂದುಹಾಕುತ್ತಿದ್ದರು. 21 ಇದಲ್ಲದೆ ಪೂರ್ವದಲ್ಲಿ ಫಿಲಿಷ್ಟಿಯರ ಬಳಿಯಲ್ಲಿದ್ದು ಅವರೊಡನೆ ದಂಡಿನ ಸಂಗಡ ಸುತ್ತಲಿರುವ ದೇಶದಿಂದ ಬಂದ ಹಿಬ್ರಿಯರು ಸೌಲ ಮತ್ತು, ಯೋನಾತಾನನ ಜೊತೆ ಇರುವ ಇಸ್ರಾಯೇಲರ ಸಂಗಡ ಕೂಡಿಕೊಂಡರು. 22 ಫಿಲಿಷ್ಟಿಯರು ಓಡಿಹೋದರೆಂದು ಎಫ್ರಾಯೀಮ್ ಬೆಟ್ಟದಲ್ಲಿ ಅಡಗಿಕೊಂಡಿದ್ದ ಸಮಸ್ತ ಇಸ್ರಾಯೇಲರು ಕೇಳಿದಾಗ, ಅವರೂ ಹಾಗೆಯೇ ಯುದ್ಧದಲ್ಲಿ ಅವರನ್ನು ಬಿಡದೆ ಹಿಂದಟ್ಟಿದ್ದರು. 23 ಹೀಗೆ ಯೆಹೋವ ದೇವರು ಆ ದಿನದಲ್ಲಿ ಇಸ್ರಾಯೇಲನ್ನು ರಕ್ಷಿಸಿದರು. ಆ ಯುದ್ಧವು ಬೇತಾವೆನಿನವರೆಗೂ ನಡೆಯಿತು.
ಯೋನಾತಾನನು ಜೇನು ತಿಂದದ್ದು
24 ಇಸ್ರಾಯೇಲರು ಆ ದಿವಸ ಬಹಳ ಬಳಲಿ ಹೋದರು. ಏಕೆಂದರೆ ಸೌಲನು, “ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾಲದವರೆಗೆ ಯಾವನು ಆಹಾರ ತಿನ್ನುತ್ತಾನೋ, ಅವನು ಶಾಪಗ್ರಸ್ತನಾಗಲಿ,” ಎಂದು ಆಣೆ ಇಟ್ಟದ್ದರಿಂದ, ಜನರೆಲ್ಲರು ಆಹಾರದ ರುಚಿ ನೋಡದೆ ಇದ್ದರು.
25 ದೇಶದ ಜನರೆಲ್ಲರೂ ಅಡವಿಯಲ್ಲಿ ಹೋಗುತ್ತಿರುವಾಗ, ಅಲ್ಲಿ ನೆಲದ ಮೇಲೆ ಜೇನುಗೂಡು ಇತ್ತು. 26 ಜನರು ಆ ಅಡವಿಯಲ್ಲಿ ಹೋಗುವಾಗ, ಜೇನುತುಪ್ಪ ಸುರಿಯುತ್ತಿತ್ತು. ಆದರೆ ಜನರು ಆ ಆಣೆಯ ನಿಮಿತ್ತ ಭಯಪಟ್ಟದ್ದರಿಂದ ಒಬ್ಬನಾದರೂ ತನ್ನ ಬಾಯಿಗೆ ಹಾಕಿಕೊಳ್ಳಲಿಲ್ಲ. 27 ಆದರೆ ಯೋನಾತಾನನು ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಕೇಳದೆ ಇದ್ದ ಕಾರಣ, ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ, ಅದನ್ನು ಜೇನು ತೊಟ್ಟಿಯಲ್ಲಿ ಅದ್ದಿ, ತನ್ನ ಬಾಯಿಗೆ ಹಾಕಿಕೊಂಡನು. ಅದರಿಂದ ಅವನ ಕಣ್ಣುಗಳು ಕಳೆಯನ್ನು ಹೊಂದಿದವು. 28 ಆಗ ಜನರಲ್ಲಿ ಒಬ್ಬನು ಅವನಿಗೆ, “ ‘ಈ ಹೊತ್ತು ಆಹಾರ ತಿನ್ನುವವರು ಶಾಪಗ್ರಸ್ತರಾಗಲಿ,’ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ,” ಎಂದನು.
29 ಅದಕ್ಕೆ ಯೋನಾತಾನನು, “ನನ್ನ ತಂದೆಯು ದೇಶವನ್ನು ಶ್ರಮೆಪಡಿಸಿದ್ದಾನೆ. ನಾನು ಈ ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ, ನನ್ನ ಕಣ್ಣುಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು. 30 ಈ ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು. ಏಕೆಂದರೆ ಫಿಲಿಷ್ಟಿಯರಲ್ಲಿ ಹತರಾಗದವರು ಇನ್ನು ಹೆಚ್ಚು ಮಂದಿ ಇದ್ದಾರೆ,” ಎಂದನು.
31 ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋನಿನವರೆಗೂ ಫಿಲಿಷ್ಟಿಯರನ್ನುಳಿಸದೆ ಹೊಡೆದುದರಿಂದ ಅವರು ಬಹಳವಾಗಿ ದಣಿದು ಹೋದರು. 32 ಆದ್ದರಿಂದ ಅವರು ಕೊಳ್ಳೆ ಹೊಡೆದವುಗಳ ಮೇಲೆ ಬಿದ್ದು ಕುರಿಗಳನ್ನೂ, ದನಗಳನ್ನೂ, ಕರುಗಳನ್ನೂ ಹಿಡಿದು, ನೆಲದ ಮೇಲೆ ಕೊಯ್ದು, ಮಾಂಸವನ್ನು ರಕ್ತದ ಸಂಗಡ ತಿಂದರು. 33 ಆಗ ಅವರು ಸೌಲನಿಗೆ, “ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವುದರಿಂದ, ಯೆಹೋವ ದೇವರಿಗೆ ವಿರೋಧವಾಗಿ ಪಾಪ ಮಾಡುತ್ತಾರೆ,” ಎಂದು ತಿಳಿಸಿದರು.
ಅದಕ್ಕವನು, “ನೀವು ನಂಬಿಕೆದ್ರೋಹ ಮಾಡಿದಿರಿ. ಈಗ ಒಂದು ದೊಡ್ಡ ಕಲ್ಲನ್ನು ನನ್ನ ಬಳಿಗೆ ಹೊರಳಿಸಿ ಬಿಡಿರಿ,” ಅಂದನು. 34 ಸೌಲನು ಅವರಿಗೆ, “ನೀವು ಜನರಲ್ಲಿ ಚದರಿಹೋಗಿ, ರಕ್ತ ಸಹಿತವಾಗಿ ತಿಂದು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡದೆ, ಪ್ರತಿಯೊಬ್ಬನು ತನ್ನ ಎತ್ತನ್ನೂ, ತನ್ನ ಕುರಿಯನ್ನೂ ನನ್ನ ಬಳಿಗೆ ತಂದು, ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ,” ಎಂದನು.
ಆದ್ದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತೆಗೆದುಕೊಂಡು ಬಂದು, ಅಲ್ಲಿ ಕೊಯ್ದನು. 35 ಸೌಲನು ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು. ಅದೇ ಯೆಹೋವ ದೇವರಿಗೆ ಅವನು ಕಟ್ಟಿಸಿದ ಮೊದಲನೆಯ ಬಲಿಪೀಠವು.
36 ಸೌಲನು ಜನರಿಗೆ, “ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿ ಹೋಗಿ, ಉದಯಕಾಲದವರೆಗೆ ಅವರನ್ನು ಸುಲಿದುಕೊಂಡು, ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು,” ಎಂದನು.
ಅದಕ್ಕೆ ಜನರು, “ನಿನ್ನ ದೃಷ್ಟಿಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ಮಾಡು,” ಎಂದರು.
ಆಗ ಯಾಜಕನು, “ದೇವರ ಸನ್ನಿಧಿಗೆ ಹೋಗೋಣ,” ಎಂದನು.
37 ಅದಕ್ಕೆ ಸೌಲನು, “ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀವು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿಕೊಡುವಿರೋ?” ಎಂದು ದೇವರ ಆಲೋಚನೆಯನ್ನು ಕೇಳಿದನು. ಆದರೆ ಅವರು ಅವನಿಗೆ ಆ ದಿವಸದಲ್ಲಿ ಉತ್ತರ ಕೊಡದೆ ಹೋದರು.
38 ಆಗ ಸೌಲನು, “ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ. ಈ ಹೊತ್ತು ಈ ಪಾಪ ಯಾವುದರಿಂದ ಉಂಟಾಯಿತೆಂದು ತಿಳಿದುಕೊಂಡು ನೋಡಿರಿ. 39 ಏಕೆಂದರೆ ನನ್ನ ಪುತ್ರನಾದ ಯೋನಾತಾನನಿಂದಾದರೂ ಉಂಟಾಗಿದ್ದರೆ, ಅವನು ಸತ್ತೇ ಸಾಯುವನೆಂದು ಇಸ್ರಾಯೇಲರನ್ನು ರಕ್ಷಿಸುವ ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ,” ಎಂದನು. ಆದರೆ ಸಮಸ್ತ ಜನರಲ್ಲಿ ಒಬ್ಬನಾದರೂ ಅವನಿಗೆ ಉತ್ತರ ಕೊಡಲಿಲ್ಲ.
40 ಆಗ ಸೌಲನು ಸಮಸ್ತ ಇಸ್ರಾಯೇಲರಿಗೆ, “ನೀವು ಒಂದು ಕಡೆಯಲ್ಲಿ ಇರಿ. ನಾನೂ, ನನ್ನ ಮಗ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ,” ಎಂದನು.
ಜನರು ಸೌಲನಿಗೆ, “ನಿನ್ನ ದೃಷ್ಟಿಗೆ ಒಳ್ಳೆಯದಾಗಿ ತೋರುವುದನ್ನು ಮಾಡು,” ಎಂದರು.
41 ಸೌಲನು ಇಸ್ರಾಯೇಲರ ದೇವರಾದ ಯೆಹೋವ ದೇವರಿಗೆ, “ನೀವು ಪೂರ್ಣ ನಿರ್ಣಯವನ್ನು ದಯಪಾಲಿಸಿರಿ,” ಎಂದು ಹೇಳಿ ಚೀಟು ಹಾಕಿದನು. ಆಗ ಸೌಲನಿಗೂ ಯೋನಾತಾನನಿಗೂ ಚೀಟು ಬಂತು. ಆದರೆ ಜನರು ಪಾರಾದರು. 42 ಸೌಲನು ಅವರಿಗೆ, “ನನ್ನ ಮೇಲೆಯೂ ನನ್ನ ಮಗ ಯೋನಾತಾನನ ಮೇಲೆಯೂ ಚೀಟುಹಾಕಿರಿ,” ಎಂದಾಗ, ಯೋನಾತಾನನಿಗೆ ಚೀಟು ಬಿತ್ತು.
43 ಆಗ ಸೌಲನು ಯೋನಾತಾನನಿಗೆ, “ನೀನು ಮಾಡಿದ್ದನ್ನು ನನಗೆ ತಿಳಿಸು,” ಎಂದನು.
ಅದಕ್ಕೆ ಯೋನಾತಾನನು, “ನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ರುಚಿ ನೋಡಿದೆನು, ನಾನು ಸಾಯಬೇಕು,” ಎಂದನು.
44 ಅದಕ್ಕೆ ಸೌಲನು, “ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ,” ಎಂದನು.
45 ಆದರೆ ಜನರು ಸೌಲನಿಗೆ, “ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆಯನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಎಂದಿಗೂ ಇಲ್ಲ. ಯೆಹೋವ ದೇವರ ಜೀವದಾಣೆ, ಇದನ್ನು ಅವನು ದೇವರ ಸಹಾಯದಿಂದ ಮಾಡಿದ್ದರಿಂದ, ಅವನ ಒಂದು ಕೂದಲು ನೆಲಕ್ಕೆ ಬೀಳಬಾರದು,” ಎಂದು ಹೇಳಿ ಯೋನಾತಾನನು ಸಾಯದ ಹಾಗೆ ಪ್ರಾಯಶ್ಚಿತ್ತವನ್ನು ಮಾಡಿ ಬಿಡಿಸಿಕೊಂಡರು.
46 ಆಗ ಸೌಲನು ಫಿಲಿಷ್ಟಿಯರನ್ನು ಹಿಂಬಾಲಿಸುವುದನ್ನು ಬಿಟ್ಟುಬಿಟ್ಟನು. ಫಿಲಿಷ್ಟಿಯರು ತಮ್ಮ ಸ್ಥಳಕ್ಕೆ ಹೋದರು.
47 ಹೀಗೆ ಸೌಲನು ಇಸ್ರಾಯೇಲಿನ ದೊರೆತನವನ್ನು ತೆಗೆದುಕೊಂಡು, ಸುತ್ತಲಿರುವ ತನ್ನ ಸಮಸ್ತ ಶತ್ರುಗಳಾದ ಮೋವಾಬ್ಯರ ಮೇಲೆಯೂ, ಅಮ್ಮೋನ್ಯರ ಮೇಲೆಯೂ, ಎದೋಮ್ಯರ ಮೇಲೆಯೂ, ಚೋಬದ ಅರಸರ ಮೇಲೆಯೂ, ಫಿಲಿಷ್ಟಿಯರ ಮೇಲೆಯೂ ಯುದ್ಧಮಾಡಿದನು. ಯಾರ ಮೇಲೆ ತಿರುಗಿದನೋ, ಅವರನ್ನು ಪೀಡಿಸಿದನು. 48 ಅವನು ಸೈನ್ಯವನ್ನು ಕೂಡಿಸಿಕೊಂಡು, ಅಮಾಲೇಕ್ಯರನ್ನು ಸಂಹರಿಸಿದನು. ಇಸ್ರಾಯೇಲನ್ನು ಸುಲಿದುಕೊಳ್ಳುವವರ ಸಮಸ್ತರ ಕೈಗೂ ತಪ್ಪಿಸಿದನು.
ಸೌಲನ ಕುಟುಂಬ
49 ಸೌಲನಿಗೆ ಯೋನಾತಾನನೂ, ಇಷ್ವಿಯೂ, ಮಲ್ಕೀಷೂವನೂ ಎಂಬ ಮೂವರು ಪುತ್ರರೂ; ಹಿರಿಯವಳಾದ ಮೇರಬಳು, ಚಿಕ್ಕವಳಾದ ಮೀಕಲಳು ಎಂಬ ಇಬ್ಬರು ಪುತ್ರಿಯರೂ ಇದ್ದರು. 50 ಅಹೀಮಾಚನ ಪುತ್ರಿಯಾದ ಅಹೀನೋವಮಳು ಸೌಲನ ಹೆಂಡತಿಯಾಗಿದ್ದಳು. ಸೌಲನ ಚಿಕ್ಕಪ್ಪ ನೇರನ ಮಗ ಅಬ್ನೇರನೆಂಬವನು ಅವನ ಸೈನ್ಯಾಧಿಪತಿಯಾಗಿದ್ದನು. 51 ಸೌಲನ ತಂದೆಯಾದ ಕೀಷನೂ ಅಬ್ನೇರನ ತಂದೆಯಾದ ನೇರನೂ ಅಬೀಯೇಲನ ಮಕ್ಕಳು.
52 ಸೌಲನ ಜೀವಮಾನದಲ್ಲೆಲ್ಲಾ ಫಿಲಿಷ್ಟಿಯರಿಗೂ ಇಸ್ರಾಯೇಲರಿಗೂ ಘೋರ ಯುದ್ಧ ನಡೆಯುತ್ತಿತ್ತು. ಸೌಲನು ಯಾವ ಪರಾಕ್ರಮಶಾಲಿಯನ್ನಾದರೂ, ಧೈರ್ಯಶಾಲಿಯನ್ನಾದರೂ ಕಂಡರೆ, ಅಂಥವನನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದನು.