17
ದಾವೀದ ಮತ್ತು ಗೊಲ್ಯಾತ
ಫಿಲಿಷ್ಟಿಯರು ಯುದ್ಧಮಾಡುವುದಕ್ಕೆ ತಮ್ಮ ಸೈನ್ಯವನ್ನು ಯೆಹೂದ ದೇಶದ ಸೋಕೋವಿನಲ್ಲಿ ಕೂಡಿಸಿದರು. ಅಜೇಕಕ್ಕೂ ಸೋಕೋವಿಗೂ ಮಧ್ಯದಲ್ಲಿರುವ ಎಫೆಸ ದಮ್ಮೀಮಿನಲ್ಲಿ ದಂಡಿಳಿದರು. ಸೌಲನೂ, ಇಸ್ರಾಯೇಲರೂ ಕೂಡಿಕೊಂಡರು. ಏಲಾ ತಗ್ಗಿನ ಬಳಿಯಲ್ಲಿ ದಂಡಿಳಿದು, ಫಿಲಿಷ್ಟಿಯರಿಗೆ ಎದುರಾಗಿ ಯುದ್ಧಮಾಡಲು ವ್ಯೂಹ ಕಟ್ಟಿದರು. ಫಿಲಿಷ್ಟಿಯರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ, ಇಸ್ರಾಯೇಲರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ ನಿಂತರು. ಅವರ ಮಧ್ಯದಲ್ಲಿ ತಗ್ಗು ಇತ್ತು.
ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಬಂದನು. ಅವನ ಎತ್ತರ ಸುಮಾರು ಮೂರು ಮೀಟರ್. ಅವನ ತಲೆಯ ಮೇಲೆ ಕಂಚಿನ ಶಿರಸ್ತ್ರಾಣ ಇತ್ತು. ಪರೆಪರೆಯಾಗಿ ಜೋಡಿಸಲಾಗಿದ್ದ ಕವಚವನ್ನು ಅವನು ತೊಟ್ಟುಕೊಂಡಿದ್ದನು. ಆ ಕವಚವು ಸುಮಾರು ಐವತ್ತೇಳು ಕಿಲೋಗ್ರಾಂ ತೂಕವಾಗಿತ್ತು. ಅವನ ಕಾಲುಗಳಲ್ಲಿ ಕಂಚಿನ ಚಮ್ಮಳಿಗೆ. ಅವನ ತೋಳುಗಳ ಮಧ್ಯದಲ್ಲಿ ಭರ್ಜಿ ಇದ್ದವು. ಅವನ ಈಟಿಯ ಕೋಲು ನೇಕಾರರ ಕುಂಟೆಯಷ್ಟು ಗಾತ್ರದಾಗಿತ್ತು. ಅವನ ಈಟಿಯ ಅಲಗು ಏಳು ಕಿಲೋಗ್ರಾಂ ತೂಕವಾಗಿತ್ತು.
ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾಯೇಲ್ ಸೈನ್ಯಗಳಿಗೆ ಕೂಗಿ ಹೇಳಿದ್ದೇನೆಂದರೆ, “ಏಕೆ ನೀವು ವ್ಯೂಹ ಕಟ್ಟಿಕೊಳ್ಳ ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆಯ್ದುಕೊಳ್ಳಿರಿ. ಅವನು ನನ್ನ ಮುಂದೆ ಬರಲಿ. ಅವನು ನನ್ನ ಸಂಗಡ ಯುದ್ಧಮಾಡಿ ನನ್ನನ್ನು ಕೊಂದರೆ, ನಾವು ನಿಮಗೆ ಸೇವಕರಾಗುವೆವು. ಆದರೆ ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮಗೆ ಸೇವಕರಾಗಿದ್ದು ನಮ್ಮನ್ನು ಸೇವಿಸಬೇಕು,” ಎಂದನು. 10 ಆ ಫಿಲಿಷ್ಟಿಯನು, “ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ. ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ,” ಎಂದನು. 11 ಸೌಲನೂ, ಸಮಸ್ತ ಇಸ್ರಾಯೇಲರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿದಾಗ ಹೆದರಿಕೊಂಡು ಬಹು ಭಯಪಟ್ಟರು.
12 ದಾವೀದನು ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನ ಮಗನಾಗಿದ್ದನು. ಈ ಇಷಯನಿಗೆ ಎಂಟು ಮಂದಿ ಪುತ್ರರಿದ್ದರು. ಸೌಲನ ಕಾಲದಲ್ಲಿ ಇಷಯನು ವೃದ್ಧನಾಗಿದ್ದನು. 13 ಇಷಯನ ಮೂವರು ಹಿರಿಯ ಪುತ್ರರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು. ಯುದ್ಧಕ್ಕೆ ಹೋದ ಆ ಮೂವರು ಪುತ್ರರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬನು, ಎರಡನೆಯವನ ಹೆಸರು ಅಬೀನಾದಾಬನು; ಮೂರನೆಯವನ ಹೆಸರು ಶಮ್ಮನು; 14 ಆದರೆ ದಾವೀದನು ಚಿಕ್ಕವನಾಗಿದ್ದನು. ಹಿರಿಯರಾದ ಆ ಮೂವರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು. 15 ದಾವೀದನು ಸೌಲನನ್ನು ಬಿಟ್ಟು, ತನ್ನ ತಂದೆಯ ಕುರಿಗಳನ್ನು ಮೇಯಿಸಲು ಬೇತ್ಲೆಹೇಮಿಗೆ ಆಗಾಗ ಹೋಗುತ್ತಿದ್ದನು.
16 ಆದರೆ ಆ ಫಿಲಿಷ್ಟಿಯನು ಪ್ರತಿ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ ಬಂದು ನಾಲ್ವತ್ತು ದಿವಸ ನಿಂತುಕೊಳ್ಳುತ್ತಿದ್ದನು.
17 ಇಷಯನು ತನ್ನ ಮಗನಾದ ದಾವೀದನಿಗೆ, “ನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ, ಈ ಹತ್ತು ರೊಟ್ಟಿಗಳನ್ನೂ ತೆಗೆದುಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಹೋಗು. 18 ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಪ್ರಧಾನನಿಗೆ ಕೊಟ್ಟು, ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ, ಅವರ ಗುರುತನ್ನು ತೆಗೆದುಕೊಂಡು ಬಾ,” ಎಂದನು. 19 ಆಗ ಸೌಲನೂ, ಇಸ್ರಾಯೇಲರೆಲ್ಲರೂ ಫಿಲಿಷ್ಟಿಯರ ಸಂಗಡ ಏಲಾ ತಗ್ಗಿನಲ್ಲಿ ಯುದ್ಧ ಮಾಡುತ್ತಿದ್ದರು.
20 ದಾವೀದನು ಉದಯಕಾಲದಲ್ಲಿ ಎದ್ದು, ಕುರಿ ಕಾಯುವವನ ವಶಕ್ಕೆ ಕುರಿಗಳನ್ನು ಬಿಟ್ಟು, ತನ್ನ ತಂದೆ ಇಷಯನು ತನಗೆ ಆಜ್ಞಾಪಿಸಿದ ಹಾಗೆಯೇ ತೆಗೆದುಕೊಂಡುಹೋಗಿ ಸೈನ್ಯವು ಯುದ್ಧಕ್ಕೆ ಆರ್ಭಟಿಸಿ ಹೊರಡುವಾಗ, ಸಲಕರಣೆಗಳು ಇರುವ ಸ್ಥಳಕ್ಕೆ ಬಂದನು. 21 ಇಸ್ರಾಯೇಲರೂ, ಫಿಲಿಷ್ಟಿಯರೂ ಸೈನ್ಯಕ್ಕೆದುರಾಗಿ ಸೈನ್ಯ ವ್ಯೂಹ ಕಟ್ಟಿಕೊಂಡಿದ್ದರು. 22 ಆಗ ದಾವೀದನು ತಾನು ತೆಗೆದುಕೊಂಡು ಬಂದದ್ದನ್ನು, ವಸ್ತುಗಳನ್ನು ಕಾಯುವವನ ಕೈಯಲ್ಲಿ ಇಟ್ಟುಬಿಟ್ಟು, ರಣರಂಗಕ್ಕೆ ಓಡಿಹೋಗಿ, ತನ್ನ ಸಹೋದರರ ಬಳಿಗೆ ಬಂದು, ಯೋಗಕ್ಷೇಮ ವಿಚಾರಿಸಿದನು. 23 ಅವನು ಇವರ ಸಂಗಡ ಮಾತನಾಡಿಕೊಳ್ಳುತ್ತಾ ಇರುವಾಗ, ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ಫಿಲಿಷ್ಟಿಯರ ಸೈನ್ಯದಿಂದ ಹೊರಟು, ಮೊದಲಿನ ಹಾಗೆಯೇ ಮಾತನಾಡಿದನು. ಆ ಮಾತುಗಳನ್ನು ದಾವೀದನು ಕೇಳಿದನು. 24 ಇಸ್ರಾಯೇಲರೆಲ್ಲರೂ ಅವನನ್ನು ಕಂಡಾಗ, ಅವನ ಬಳಿಯಿಂದ ಓಡಿಹೋದರು; ಬಹು ಭಯಪಟ್ಟರು.
25 ಇಸ್ರಾಯೇಲರು, “ಏರಿ ಬಂದ ಈ ಮನುಷ್ಯನನ್ನು ಕಂಡಿರೋ? ಇಸ್ರಾಯೇಲನ್ನು ಪ್ರತಿಭಟಿಸಿ ಏರಿ ಬಂದಿದ್ದಾನಲ್ಲ. ಯಾವನು ಇವನನ್ನು ಕೊಂದು ಬಿಡುವನೋ, ಅವನನ್ನು ಅರಸನು ಬಹಳ ಐಶ್ವರ್ಯವಂತನನ್ನಾಗಿ ಮಾಡಿ, ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸುವನು ಮತ್ತು ಅವನ ತಂದೆಯ ಮನೆಯನ್ನು ಇಸ್ರಾಯೇಲರಲ್ಲಿ ತೆರಿಗೆಯಿಂದ ವಿಮೋಚಿಸುವನು,” ಎಂದರು.
26 ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ, “ಈ ಫಿಲಿಷ್ಟಿಯನನ್ನು ಕೊಂದು, ಇಸ್ರಾಯೇಲಿನ ಮೇಲಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಸಿಕ್ಕುವುದು? ಏಕೆಂದರೆ ಸುನ್ನತಿ ಇಲ್ಲದ ಆ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸುವುದಕ್ಕೆ ಎಷ್ಟರವನು,” ಎಂದನು.
27 ಜನರು ಆ ಮಾತಿಗೆ ಸರಿಯಾಗಿ, “ಅವನನ್ನು ಕೊಂದವನಿಗೆ ಈ ಪ್ರಕಾರ ಮಾಡಲಾಗುವುದು,” ಎಂದು ಹೇಳಿದರು.
28 ದಾವೀದನು ಆ ಮನುಷ್ಯರ ಸಂಗಡ ಮಾತನಾಡುತ್ತಿರುವುದನ್ನು ಅವನ ಹಿರಿಯ ಸಹೋದರನಾದ ಎಲೀಯಾಬನು ಕೇಳಿ, ಅವನ ಮೇಲೆ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ, ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು. ಏಕೆಂದರೆ ಯುದ್ಧವನ್ನು ನೋಡಲು ಇಳಿದು ಬಂದಿದ್ದೀ,” ಎಂದನು.
29 ಅದಕ್ಕೆ ದಾವೀದನು, “ನಾನು ಈಗ ಮಾಡಿದ್ದೇನು? ಮಾತನಾಡಿದೆನಷ್ಟೇ?” ಎಂದನು. 30 ಅವನನ್ನು ಬಿಟ್ಟು ಬೇರೊಬ್ಬನ ಕಡೆಗೆ ತಿರುಗಿಕೊಂಡು ಹಾಗೆಯೇ ಕೇಳಿದನು. ಆಗ ಜನರು ಮೊದಲು ಹೇಳಿದ ಹಾಗೆಯೇ ಅವನಿಗೆ ಉತ್ತರವನ್ನು ಹೇಳಿದರು. 31 ದಾವೀದನು ಹೇಳಿದ ಮಾತುಗಳನ್ನು ಕೇಳಿದವರು ಸೌಲನ ಮುಂದೆ ತಿಳಿಸಿದರು. ಸೌಲನು ದಾವೀದನನ್ನು ಕರೆಯಿಸಿದನು.
32 ಆಗ ದಾವೀದನು ಸೌಲನಿಗೆ, “ಅವನ ನಿಮಿತ್ತವಾಗಿ ಯಾವ ಹೃದಯವೂ ಕುಗ್ಗಬಾರದು. ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧಮಾಡುವನು,” ಎಂದನು.
33 ಆಗ ಸೌಲನು ದಾವೀದನಿಗೆ, “ಈ ಫಿಲಿಷ್ಟಿಯನ ಮೇಲೆ ಯುದ್ಧಮಾಡಲು ನಿನ್ನಿಂದಾಗದು, ಏಕೆಂದರೆ ನೀನು ಹುಡುಗನಾಗಿದ್ದೀಯೆ. ಆದರೆ ಅವನು ಚಿಕ್ಕಂದಿನಿಂದ ಯುದ್ಧದ ಮನುಷ್ಯನಾಗಿದ್ದಾನೆ,” ಎಂದನು.
34 ದಾವೀದನು ಸೌಲನಿಗೆ, “ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿರುವ ಕುರಿಮರಿಯನ್ನು ಹಿಡಿದವು. 35 ಆಗ ನಾನು ಅದರ ಹಿಂದೆ ಹೋಗಿ, ಅದನ್ನು ಹೊಡೆದುಬಿಟ್ಟು, ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂದಿರುಗಿ ಬಿದ್ದಾಗ, ನಾನು ಅದರ ಗಡ್ಡವನ್ನು ಹಿಡಿದು, ಹೊಡೆದು ಕೊಂದುಹಾಕಿದೆನು. 36 ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ, ಆ ಕರಡಿಯನ್ನೂ ಕೊಂದುಬಿಟ್ಟೆನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸಿದ್ದರಿಂದ, ಅವುಗಳಲ್ಲಿ ಒಂದರ ಹಾಗೆ ಇರುವನು,” ಎಂದನು. 37 ಇದಲ್ಲದೆ ದಾವೀದನು, “ನನ್ನನ್ನು ಸಿಂಹದ ಕೈಗೂ, ಕರಡಿಯ ಕೈಗೂ ತಪ್ಪಿಸಿಬಿಟ್ಟ ಯೆಹೋವ ದೇವರು, ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವರು,” ಎಂದನು.
ಆಗ ಸೌಲನು ದಾವೀದನಿಗೆ, “ನೀನು ಹೋಗು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.
38 ಸೌಲನು ದಾವೀದನಿಗೆ ತನ್ನ ಆಯುಧಗಳನ್ನು ಧರಿಸಲು ಹೇಳಿ, ಅವನ ತಲೆಯ ಮೇಲೆ ಒಂದು ಕಂಚಿನ ಶಿರಸ್ತ್ರಾಣವನ್ನು ಇಟ್ಟು, ಅವನಿಗೆ ಕವಚವನ್ನು ತೊಡಿಸಿದನು. 39 ದಾವೀದನು ಅವನ ಖಡ್ಗವನ್ನು ತನ್ನ ಕವಚಗಳ ಮೇಲೆ ಕಟ್ಟಿಕೊಂಡು ನಡೆದು ಪರೀಕ್ಷಿಸಿದನು. ಆದರೆ ಅವನಿಗೆ ಅದರ ಅಭ್ಯಾಸವಿರಲಿಲ್ಲ.
ಆಗ ದಾವೀದನು ಸೌಲನಿಗೆ, “ನನಗೆ ಅವುಗಳ ಅಭ್ಯಾಸವಿಲ್ಲದ್ದರಿಂದ ಇವುಗಳ ಸಂಗಡ ಹೋಗಲಾರೆನು,” ಎಂದು ಹೇಳಿ, ಅವುಗಳನ್ನು ಬಿಚ್ಚಿಹಾಕಿ 40 ತನ್ನ ಕೋಲನ್ನು ಕೈಯಲ್ಲಿ ಹಿಡಿದು, ಹಳ್ಳದಲ್ಲಿರುವ ಐದು ನುಣುಪಾದ ಕಲ್ಲುಗಳನ್ನು ಆಯ್ದುಕೊಂಡು, ಅವುಗಳನ್ನು ಕುರಿಕಾಯಲು ಬಳಸುವ ತನ್ನ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಆ ಫಿಲಿಷ್ಟಿಯನ ಬಳಿಗೆ ಹೋದನು.
41 ಫಿಲಿಷ್ಟಿಯನು ನಡೆದು ದಾವೀದನ ಬಳಿಗೆ ಸಮೀಪಿಸಿ ಬಂದನು. 42 ಅವನ ಖೇಡ್ಯವನ್ನು ಹಿಡಿಯುವವನು ಅವನ ಮುಂದೆ ನಡೆದನು. ಫಿಲಿಷ್ಟಿಯನು ದಾವೀದನನ್ನು ದೃಷ್ಟಿಸಿ ನೋಡಿದಾಗ, ಅವನು ಕೆಂಪಾದವನಾಗಿಯೂ, ಸುಂದರ ರೂಪವುಳ್ಳವನಾಗಿಯೂ ಇರುವ ಹುಡುಗನಾಗಿದ್ದುದರಿಂದ, ಅವನನ್ನು ತಿರಸ್ಕರಿಸಿ ದಾವೀದನಿಗೆ, 43 “ನೀನು ಕೋಲು ಹಿಡಿದುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ?” ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು. 44 ದಾವೀದನಿಗೆ, “ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು,” ಎಂದನು.
45 ದಾವೀದನು ಫಿಲಿಷ್ಟಿಯನಿಗೆ, “ನೀನು ಖಡ್ಗ, ಈಟಿ ಮತ್ತು ಗುರಾಣಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ. ಆದರೆ ನಾನು, ನೀನು ನಿಂದಿಸಿದ ಇಸ್ರಾಯೇಲಿನ ಸೈನ್ಯಗಳ ದೇವರಾದ ಸೇನಾಧೀಶ್ವರ ಯೆಹೋವ ದೇವರ ಹೆಸರಿನಲ್ಲಿ ನಿನ್ನ ಬಳಿಗೆ ಬರುತ್ತೇನೆ. 46 ಯೆಹೋವ ದೇವರು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವರು; ನಾನು ನಿನ್ನನ್ನು ಹೊಡೆದುಬಿಟ್ಟು, ನಿನ್ನ ತಲೆಯನ್ನು ನಿನ್ನಿಂದ ತೆಗೆದುಹಾಕಿ, ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲರಲ್ಲಿ ದೇವರು ಇದ್ದಾರೆಂದು ಭೂಲೋಕದವರೆಲ್ಲರೂ ತಿಳಿಯುವರು. 47 ಯೆಹೋವ ದೇವರು ಖಡ್ಗದಿಂದಲೂ, ಈಟಿಯಿಂದಲೂ ರಕ್ಷಿಸುವುದಿಲ್ಲ ಎಂಬುದು ಈ ಸಮೂಹವೆಲ್ಲಾ ತಿಳಿದುಕೊಳ್ಳುವುದು. ಏಕೆಂದರೆ ಯುದ್ಧವು ಯೆಹೋವ ದೇವರದ್ದು, ಅವರು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.
48 ಆಗ ಆ ಫಿಲಿಷ್ಟಿಯನು ಎದ್ದು ದಾವೀದನಿಗೆ ಎದುರಾಗಿ ಸಮೀಪಿಸಿ ಬರುವಾಗ, 49 ದಾವೀದನು ತ್ವರೆಯಾಗಿ ಆ ಫಿಲಿಷ್ಟಿಯನಿಗೆದುರಾಗಿ ಓಡಿಹೋಗಿ, ತನ್ನ ಕೈಯನ್ನು ಚೀಲದಲ್ಲಿ ಹಾಕಿ, ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು, ಕವಣೆಯಲ್ಲಿಟ್ಟು ಬೀಸಿ, ಫಿಲಿಷ್ಟಿಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕದ್ದರಿಂದ, ಅವನು ನೆಲದ ಮೇಲೆ ಬೋರಲು ಬಿದ್ದನು.
50 ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಹೊಡೆದು, ಅವನನ್ನು ಕೊಂದುಹಾಕಿದನು.
51 ದಾವೀದನ ಕೈಯಲ್ಲಿ ಖಡ್ಗ ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಖಡ್ಗವನ್ನು ತೆಗೆದುಕೊಂಡು, ಅದನ್ನು ಒರೆಯಿಂದ ಕಿತ್ತು, ಅವನನ್ನು ಕೊಂದು, ಅವನ ತಲೆಯನ್ನು ಕಡಿದುಹಾಕಿದನು.
ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತು ಹೋದದ್ದನ್ನು ಕಂಡಾಗ ಓಡಿಹೋದರು. 52 ಇಸ್ರಾಯೇಲರೂ, ಯೆಹೂದದ ಜನರೂ ಎದ್ದು ಆರ್ಭಟಿಸಿ, ತಗ್ಗಿನ ಮೇರೆಯವರೆಗೂ, ಎಕ್ರೋನಿನ ಬಾಗಿಲಿನವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದ್ದರಿಂದ ಹತರಾದ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ಎಕ್ರೋನಿನವರೆಗೂ ಬಿದ್ದಿದ್ದರು. 53 ಇಸ್ರಾಯೇಲರು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರುಗಿಬಂದು ಅವರ ಡೇರೆಗಳನ್ನು ಸೂರೆಮಾಡಿದರು.
54 ದಾವೀದನು ಫಿಲಿಷ್ಟಿಯನ ತಲೆಯನ್ನು ತೆಗೆದುಕೊಂಡು, ಅದನ್ನು ಯೆರೂಸಲೇಮಿಗೆ ತಂದನು. ಆದರೆ ಅವನ ಆಯುಧಗಳನ್ನು ತನ್ನ ಡೇರೆಯಲ್ಲಿ ಇಟ್ಟನು.
55 ದಾವೀದನು ಫಿಲಿಷ್ಟಿಯನಿಗೆ ಎದುರಾಗಿ ಹೊರಟು ಹೋಗುವುದನ್ನು ಸೌಲನು ಕಂಡಾಗ, ತನ್ನ ಸೈನ್ಯಾಧಿಪತಿಯಾದ ಅಬ್ನೇರನಿಗೆ, “ಅಬ್ನೇರನೇ, ಈ ಯುವಕನು ಯಾರ ಮಗನು?” ಎಂದನು.
ಅದಕ್ಕೆ ಅಬ್ನೇರನು, “ಅರಸನೇ, ನಿನ್ನ ಪ್ರಾಣದಾಣೆ ನಾನರಿಯೆ,” ಎಂದನು.
56 ಅದಕ್ಕೆ ಅರಸನು, “ಆ ಯೌವನಸ್ಥನು ಯಾರ ಮಗನೆಂದು ವಿಚಾರಿಸು,” ಎಂದನು.
57 ಆಗ ದಾವೀದನು ಫಿಲಿಷ್ಟಿಯನನ್ನು ಕೊಂದು, ಅವನ ತಲೆಯನ್ನು ತೆಗೆದುಕೊಂಡು ಹಿಂದಿರುಗಿ ಬರುವಾಗ, ಅಬ್ನೇರನು ಅವನನ್ನು ಕರೆದು, ಸೌಲನ ಮುಂದೆ ತಂದು ಬಿಟ್ಟನು.
58 ಆಗ ಸೌಲನು, “ಯೌವನಸ್ಥನೇ, ನೀನು ಯಾರ ಮಗನು?” ಎಂದು ಅವನನ್ನು ಕೇಳಿದನು.
ಅದಕ್ಕೆ ದಾವೀದನು, “ನಾನು ನಿನ್ನ ಸೇವಕನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು,” ಎಂದನು.