19
ಸೌಲನು ದಾವೀದನನ್ನು ಕೊಲ್ಲಲು ಪ್ರಯತ್ನಿಸಿದ್ದು
ಸೌಲನು ತನ್ನ ಮಗ ಯೋನಾತಾನ ಮತ್ತು ತನ್ನ ಸಮಸ್ತ ಸೇವಕರಿಗೆ ದಾವೀದನನ್ನು ಕೊಲ್ಲಬೇಕೆಂದು ಹೇಳಿದನು. ಆದರೆ ಸೌಲನ ಮಗನಾದ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಯೋನಾತಾನನು ದಾವೀದನನ್ನು, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದು ಹುಡುಕುತ್ತಾನೆ. ನೀನು ನಾಳೆ ಬೆಳಗಿನವರೆಗೆ ಎಚ್ಚರಿಕೆಯಾಗಿದ್ದು, ಮರೆಯಾದ ಸ್ಥಳಗಳಲ್ಲಿ ಅಡಗಿಕೋ. ಆಗ ನನ್ನ ತಂದೆಯ ಬಳಿಯಲ್ಲಿ ನಿಂತುಕೊಂಡು, ನಿನಗೋಸ್ಕರ ನನ್ನ ತಂದೆಯ ಸಂಗಡ ಮಾತನಾಡಿ, ನಾನು ನೋಡುವುದನ್ನು ಹೊರಟುಬಂದು ನೀನು ಇರುವ ಹೊಲದಲ್ಲಿ ನಿನಗೆ ತಿಳಿಸುವೆನು,” ಎಂದನು.
ಹಾಗೆಯೇ ಯೋನಾತಾನನು ತನ್ನ ತಂದೆ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೆಯದನ್ನು ಮಾತನಾಡಿ ಅವನಿಗೆ, “ಅರಸನು ತನ್ನ ಸೇವಕನಾದ ದಾವೀದನಿಗೆ ದ್ರೋಹಮಾಡದೆ ಇರಲಿ. ಏಕೆಂದರೆ ಅವನು ನಿನಗೆ ದ್ರೋಹಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ. ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಫಿಲಿಷ್ಟಿಯನನ್ನು ಹೊಡೆದನು. ಯೆಹೋವ ದೇವರು ಸಮಸ್ತ ಇಸ್ರಾಯೇಲರಿಗೋಸ್ಕರ ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ನೀನೂ ಕಂಡು ಸಂತೋಷಪಟ್ಟೆ. ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರ್ದೋಷಿಯ ರಕ್ತಕ್ಕೆ ವಿರೋಧವಾಗಿ ಅಪರಾಧವನ್ನು ಮಾಡುವುದೇಕೆ?” ಎಂದನು.
ಆಗ ಸೌಲನು ಯೋನಾತಾನನ ಮಾತನ್ನು ಕೇಳಿ, “ಯೆಹೋವ ದೇವರಾಣೆ ಅವನು ಕೊಲೆಯಾಗುವುದಿಲ್ಲ,” ಎಂದನು.
ಆಗ ಯೋನಾತಾನನು ದಾವೀದನನ್ನು ಕರೆದು, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿ, ದಾವೀದನನ್ನು ಸೌಲನ ಬಳಿಗೆ ಕರೆತಂದನು. ಅವನು ಮುಂಚಿನ ಹಾಗೆಯೇ ಸೌಲನ ಬಳಿಯಲ್ಲಿ ಇದ್ದನು.
ತಿರುಗಿ ಯುದ್ಧ ಉಂಟಾಯಿತು. ಆಗ ದಾವೀದನು ಹೊರಟು, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರನ್ನು ಸಾಹಸದಿಂದ ಹೊಡೆದನು. ಅವರು ಅವನ ಎದುರಿನಿಂದ ಓಡಿಹೋದರು.
ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು, ತನ್ನ ಮನೆಯೊಳಗೆ ಕುಳಿತಿರುವಾಗ, ಯೆಹೋವ ದೇವರಿಂದ ಕಳುಹಿಸಲಾದ ದುರಾತ್ಮವು ಅವನ ಮೇಲೆ ಬಂತು. ದಾವೀದನು ತನ್ನ ಕೈಯಿಂದ ಕಿನ್ನರಿ ಬಾರಿಸಿದನು. 10 ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಹುಡುಕಿದನು. ಆದರೆ ದಾವೀದನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಅವನ ಈಟಿಯು ಗೋಡೆಯಲ್ಲಿ ಹತ್ತಿಕೊಳ್ಳುವಂತೆ ಹೊಡೆದನು. ದಾವೀದನು ಓಡಿಹೋಗಿ ಆ ರಾತ್ರಿಯಲ್ಲಿ ತಪ್ಪಿಸಿಕೊಂಡನು.
11 ಆದರೆ ದಾವೀದನನ್ನು ಕಾದುಕೊಂಡಿದ್ದು, ಉದಯದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ, ನಾಳೆ ಹತನಾಗುವಿ,” ಎಂದು ಹೇಳಿ 12 ದಾವೀದನನ್ನು ಕಿಟಿಕಿಯ ಮಾರ್ಗವಾಗಿ ಇಳಿಸಿಬಿಡಲು ಅವನು ತಪ್ಪಿಸಿಕೊಂಡು ಓಡಿಹೋದನು. 13 ತರುವಾಯ ಮೀಕಲಳು ಒಂದು ವಿಗ್ರಹವನ್ನು ತೆಗೆದುಕೊಂಡು, ಮಂಚದ ಮೇಲೆ ಮಲಗಿಸಿ, ಅದರ ತಲೆ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ, ಅದನ್ನು ವಸ್ತ್ರದಿಂದ ಮುಚ್ಚಿದಳು.
14 ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದಾಗ, ಮೀಕಲಳು ಅವರಿಗೆ, “ಅವನು ಖಾಯಿಲೆಯಲ್ಲಿದ್ದಾನೆ,” ಎಂದಳು.
15 ತಿರುಗಿ ಸೌಲನು ದಾವೀದನನ್ನು ನೋಡುವುದಕ್ಕೋಸ್ಕರ ದೂತರನ್ನು ಕಳುಹಿಸಿ, “ಅವನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದನು. 16 ಹಾಗೆಯೇ ಸೇವಕರು ಬಂದು ಕಂಡಾಗ, ವಿಗ್ರಹವು ಮಂಚದ ಮೇಲೆ ಇತ್ತು. ಅದರ ತಲೆಗೆ ಒಂದು ಆಡಿನ ಉಣ್ಣೆಯ ತಲೆದಿಂಬು ಇತ್ತು.
17 ಆಗ ಸೌಲನು ಮೀಕಲಳಿಗೆ, “ನೀನು ಈ ಪ್ರಕಾರ ನನಗೆ ಮೋಸಮಾಡಿ, ನನ್ನ ಶತ್ರುವನ್ನು ಕಳುಹಿಸಿದ್ದೇನು? ಅವನು ತಪ್ಪಿಸಿಕೊಂಡನಲ್ಲಾ,” ಎಂದನು.
ಆಗ ಮೀಕಲಳು ಸೌಲನಿಗೆ ಉತ್ತರವಾಗಿ, “ಅವನು ನನಗೆ, ‘ನಾನು ನಿನ್ನನ್ನು ಕೊಂದು ಹಾಕುವುದು ಏಕೆ? ನನ್ನನ್ನು ಹೋಗಗೊಡಿಸು,’ ಎಂದು ಹೇಳಿದನು,” ಎಂದಳು.
18 ಹೀಗೆಯೇ ದಾವೀದನು ಓಡಿಹೋಗಿ ತಪ್ಪಿಸಿಕೊಂಡು ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು, ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುಯೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು. 19 ಆಗ, “ದಾವೀದನು ರಾಮದ ನಯೋತಿನಲ್ಲಿ ಇದ್ದಾನೆ,” ಎಂದು ಸೌಲನಿಗೆ ಗೊತ್ತಾಯಿತು. 20 ಆದ್ದರಿಂದ ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದನು. ಪ್ರವಾದಿಗಳ ಗುಂಪು ಪ್ರವಾದಿಸುವುದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುಯೇಲನು ನಿಂತಿರುವುದನ್ನೂ ಕಂಡಾಗ, ದೇವರ ಆತ್ಮ ಸೌಲನ ದೂತರ ಮೇಲೆ ಬಂದಿತು, ಅವರೂ ಸಹ ಪ್ರವಾದಿಸಿದರು. 21 ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ, ಅವನು ಬೇರೆ ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು. 22 ಆಗ ಸೌಲನು ತಾನೇ ರಾಮಕ್ಕೆ ಹೋದನು. ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, ಸಮುಯೇಲನೂ ದಾವೀದನೂ ಎಲ್ಲಿದ್ದಾರೆ ಎಂದು ಕೇಳಿದನು.
ಆಗ ಒಬ್ಬನು, “ಅವರು ರಾಮದ ನಯೋತಿನಲ್ಲಿದ್ದಾರೆ,” ಎಂದನು.
23 ಹಾಗೆಯೇ ಅವನು ರಾಮದ ನಯೋತಿಗೆ ಹೋದನು. ಆಗ ದೇವರ ಆತ್ಮ ಮೇಲೆ ಬರಲು, ಅವನು ರಾಮದ ನಯೋತಿಗೆ ಸೇರುವವರೆಗೂ ಪ್ರವಾದಿಸುತ್ತಾ ಬಂದನು. 24 ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ, ತಾನೂ ಹಾಗೆಯೇ ಸಮುಯೇಲನ ಮುಂದೆ ಪ್ರವಾದಿಸಿದನು. ಆ ದಿನ ಹಗಲೆಲ್ಲವೂ, ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದ್ದರಿಂದ, “ಸೌಲನು ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ?” ಎಂಬ ಮಾತು ಪ್ರಚಲಿತವಾಯಿತು.