21
ನೋಬ್ ಊರಲ್ಲಿ ದಾವೀದ
ದಾವೀದನು ನೋಬಿನಲ್ಲಿರುವ ಯಾಜಕನಾದ ಅಹೀಮೆಲೆಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಎದುರುಗೊಳ್ಳಬಂದಾಗ ಹೆದರಿ, “ಒಬ್ಬರೂ ನಿನ್ನ ಸಂಗಡ ಬಾರದೆ, ನೀನು ಒಂಟಿಯಾಗಿ ಬಂದದ್ದೇನು?” ಎಂದು ಅವನನ್ನು ಕೇಳಿದನು.
ದಾವೀದನು ಯಾಜಕನಾದ ಅಹೀಮೆಲೆಕನಿಗೆ, “ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿದ್ದು, ಇಂಥದ್ದೆಂದು ಒಬ್ಬರಿಗೂ ತಿಳಿಯಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ. ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ಐದು ರೊಟ್ಟಿಗಳನ್ನಾದರೂ, ನಿನಗೆ ದೊರಕಿದ ಯಾವುದನ್ನಾದರೂ ನನಗೆ ಕೊಡು,” ಎಂದನು.
ಯಾಜಕನು ದಾವೀದನಿಗೆ ಉತ್ತರವಾಗಿ, “ಪರಿಶುದ್ಧವಾಗಿಸಿದ ರೊಟ್ಟಿಯ ಹೊರತಾಗಿ, ನನ್ನ ಕೈಯಲ್ಲಿ ಸಾಧಾರಣವಾದ ಒಂದು ರೊಟ್ಟಿಯಾದರೂ ಇಲ್ಲ. ಆ ರೊಟ್ಟಿಗಳನ್ನು ಸ್ತ್ರೀಯರೊಂದಿಗೆ ಸಂಪರ್ಕ ಮಾಡದವರಿಗೆ ಕೊಡಬಹುದು,” ಎಂದನು.
ದಾವೀದನು ಯಾಜಕನಿಗೆ ಉತ್ತರವಾಗಿ, “ನಾನು ಹೊರಡುವುದಕ್ಕಿಂತ ಮುಂಚೆ ನಿನ್ನೆಯೂ, ಮೊನ್ನೆಯೂ ಸ್ತ್ರೀಯರು ನಮಗೆ ದೂರವಾಗಿದ್ದರು. ಅಪವಿತ್ರವಾದ ಕಾರ್ಯಗಳಿಗೆ ಹೋಗುವಾಗಲೂ ಪುರುಷರು ಶುದ್ಧರಾಗಿರುತ್ತಾರೆ. ಇಂದು ಅದಕ್ಕಿಂತಲೂ ಹೆಚ್ಚಾಗಿರುವರಲ್ಲವೇ?” ಎಂದನು. ಆಗ ಯೆಹೋವ ದೇವರ ಸನ್ನಿಧಿಯಿಂದ ತೆಗೆಯಲಾದ ಸಮ್ಮುಖದ ರೊಟ್ಟಿಗಳ ಹೊರತು, ಬೇರೆ ರೊಟ್ಟಿ ಅಲ್ಲಿ ಇಲ್ಲದ್ದರಿಂದ ಯಾಜಕನು ಅವನಿಗೆ ಪರಿಶುದ್ಧವಾಗಿಸಿದ ರೊಟ್ಟಿಯನ್ನು ಕೊಟ್ಟನು. ಏಕೆಂದರೆ ಅವುಗಳನ್ನು ತೆಗೆದುಕೊಳ್ಳುವ ದಿನದಲ್ಲಿ ಅವುಗಳಿಗೆ ಬದಲಾಗಿ ಬಿಸಿ ರೊಟ್ಟಿಗಳನ್ನು ಇಡಲೇಬೇಕು.
ಸೌಲನ ಸೇವಕರಲ್ಲಿ ಎದೋಮ್ಯನಾದ ದೋಯೇಗನೆಂಬ ಹೆಸರುಳ್ಳ ಒಬ್ಬನು ಆ ದಿವಸ ಅಲ್ಲಿ ಯೆಹೋವ ದೇವರ ಆಲಯದ ಮುಂದೆ ಉಳಿದುಕೊಂಡಿದ್ದನು. ಅವನು ಸೌಲನ ಹಿಂಡು ಕಾಯುವವರಲ್ಲಿ ಮುಖ್ಯಸ್ಥನಾಗಿದ್ದನು.
ಆಗ ದಾವೀದನು ಅಹೀಮೆಲೆಕನಿಗೆ, “ಇಲ್ಲಿ ನಿನ್ನ ಕೈ ವಶದಲ್ಲಿ ಈಟಿಯಾದರೂ, ಖಡ್ಗವಾದರೂ ಇಲ್ಲವೋ? ಏಕೆಂದರೆ ಅರಸನ ಕಾರ್ಯವು ಅವಸರವಾದುದರಿಂದ ನಾನು ನನ್ನ ಖಡ್ಗವನ್ನಾದರೂ, ಆಯುಧಗಳನ್ನಾದರೂ ತೆಗೆದುಕೊಂಡು ಬರಲಿಲ್ಲ,” ಎಂದನು.
ಅದಕ್ಕೆ ಯಾಜಕನು, “ನೀನು ಏಲಾ ತಗ್ಗಿನಲ್ಲಿ ಸಂಹರಿಸಿದ ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನು ಏಫೋದಿನ ಹಿಂದೆ ಒಂದು ಬಟ್ಟೆಯಲ್ಲಿ ಸುತ್ತಿ ಇಟ್ಟಿದೆ. ಅದನ್ನು ನೀನು ತೆಗೆದುಕೋ. ಏಕೆಂದರೆ ಅದು ಒಂದೇ ಅಲ್ಲದೆ ಇಲ್ಲಿ ಬೇರೊಂದು ಇಲ್ಲ,” ಎಂದನು.
ಅದಕ್ಕೆ ದಾವೀದನು, “ಅದರಂಥದ್ದು ಮತ್ತೊಂದಿಲ್ಲ, ಅದನ್ನೇ ಕೊಡು,” ಎಂದನು.
ದಾವೀದನು ಗಾತಿನಲ್ಲಿ
10 ದಾವೀದನು ಎದ್ದು ಆ ದಿನ ಸೌಲನ ಭಯದಿಂದ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿಹೋದನು. 11 ಆಕೀಷನ ಸೇವಕರು ಅವನಿಗೆ, “ಇವನು ನಾಡಿನ ಅರಸನಾದ ದಾವೀದನಲ್ಲವೋ?
“ ‘ಸೌಲನು ಸಾವಿರಗಳನ್ನೂ,
ದಾವೀದನು ಹತ್ತು ಸಾವಿರಗಳನ್ನೂ ಸಂಹರಿಸಿದನು,’
ಎಂದು ಸ್ತ್ರೀಯರು ನೃತ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದ್ದು ಇವನನ್ನು ಕುರಿತಲ್ಲವೋ?”
12 ಆಗ ದಾವೀದನು ಈ ಮಾತುಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಗತ್ ಊರಿನ ಅರಸನಾದ ಆಕೀಷನಿಗೆ ಹೆದರಿ, 13 ಅವರ ಕಣ್ಣು ಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿ, ಅವರಿಗೆ ತನ್ನನ್ನು ಹುಚ್ಚನ ಹಾಗೆಯೇ ತೋರಮಾಡಿ, ದ್ವಾರದ ಕದಗಳನ್ನು ಕೆರೆಯುತ್ತಾ, ತನ್ನ ಬಾಯಿಯ ಜೊಲ್ಲನ್ನು ತನ್ನ ಗಡ್ಡದ ಮೇಲೆ ಸುರಿಸಿಕೊಂಡನು.
14 ಆಗ ಆಕೀಷನು ತನ್ನ ಸೇವಕರಿಗೆ, “ಈ ಮನುಷ್ಯನು ನೋಡಿರಿ! ಅವನು ಹುಚ್ಚನಾಗಿದ್ದಾನೆ. ಇವನನ್ನು ನನ್ನ ಬಳಿಗೆ ಏಕೆ ತೆಗೆದುಕೊಂಡು ಬಂದಿರಿ? 15 ಹುಚ್ಚರು ನನಗೆ ಅವಶ್ಯವೆಂದು ನೆನಸಿ ನನ್ನನ್ನು ಮರುಳುಮಾಡಿ ಬೇಸರಗೊಳಿಸುವುದಕ್ಕಾಗಿ ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇವನು ನನ್ನ ಮನೆಯಲ್ಲಿ ಬರಬೇಕೋ?” ಎಂದನು.