25
ದಾವೀದ, ನಾಬಾಲ ಮತ್ತು ಅಬೀಗೈಲಳು
ಸಮುಯೇಲನು ಮರಣಹೊಂದಿದನು. ಇಸ್ರಾಯೇಲರೆಲ್ಲರು ಕೂಡಿಬಂದು ಅವನಿಗೋಸ್ಕರ ಗೋಳಾಡಿ, ರಾಮದಲ್ಲಿರುವ ಅವನ ಮನೆಯ ಅಂಗಳದಲ್ಲಿ ಅವನನ್ನು ಸಮಾಧಿಮಾಡಿದರು. ಅನಂತರ ದಾವೀದನು ಹೊರಟು ಪಾರಾನ್ ಮರುಭೂಮಿಗೆ ಹೋದನು.
ಆದರೆ ಕರ್ಮೆಲಿನಲ್ಲಿ ಸೊತ್ತುಗಳಿರುವ ಮಾವೋನಿನ ಒಬ್ಬ ಮನುಷ್ಯನಿದ್ದನು. ಅವನು ಬಹು ಸಿರಿವಂತನಾಗಿದ್ದನು. ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು. ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆ ಕತ್ತರಿಸುತ್ತಿದ್ದನು. ಈ ಮನುಷ್ಯನ ಹೆಸರು ನಾಬಾಲನು. ಅವನ ಹೆಂಡತಿಯ ಹೆಸರು ಅಬೀಗೈಲಳು. ಆ ಸ್ತ್ರೀಯು ಬಹು ಬುದ್ಧಿವಂತೆ ಹಾಗು ಸುಂದರಿ. ಆದರೆ ಆ ಮನುಷ್ಯನು ಒರಟಾದವನೂ ದುಷ್ಕರ್ಮಿಯೂ ಆಗಿದ್ದನು. ಅವನು ಕಾಲೇಬನ ವಂಶಸ್ಥನು.
ನಾಬಾಲನು ತನ್ನ ಕುರಿಗಳ ಉಣ್ಣೆ ಕತ್ತರಿಸುವ ವರ್ತಮಾನವನ್ನು ದಾವೀದನು ಮರುಭೂಮಿಯಲ್ಲಿ ಕೇಳಿದನು. ಆಗ ದಾವೀದನು ಹತ್ತು ಮಂದಿ ಯುವಕರನ್ನು ಕಳುಹಿಸಿದನು. ದಾವೀದನು ಅವರಿಗೆ, “ನೀವು ಕರ್ಮೆಲಿಗೆ ಹೋಗಿ ನಾಬಾಲನ ಬಳಿಗೆ ಸೇರಿದಾಗ, ನನ್ನ ಹೆಸರಿನಿಂದ ಅವನ ಕ್ಷೇಮಸಮಾಚಾರವನ್ನು ಕೇಳಿ, ಬಾಳುವವನಾದ ಅವನಿಗೆ ಹೇಳಬೇಕಾದದ್ದೇನೆಂದರೆ: ‘ನಿನಗೆ ಸಮಾಧಾನವೂ, ನಿನ್ನ ಮನೆಗೆ ಸಮಾಧಾನವೂ ನಿನ್ನ ಸರ್ವಸಂಪತ್ತಿಗೂ ಸಮಾಧಾನವೂ ಆಗಲಿ.
“ ‘ಈಗ ನಿನಗೆ ಕುರಿಗಳ ಉಣ್ಣೆ ಕತ್ತರಿಸುವವರು ಉಂಟೆಂದು ಕೇಳಿದ್ದೇನೆ. ಆದರೆ ನಮ್ಮ ಸಂಗಡವಿದ್ದ ನಿನ್ನ ಕುರಿಕಾಯುವವರು ಕರ್ಮೆಲಿನಲ್ಲಿದ್ದ ದಿವಸಗಳೆಲ್ಲಾ ನಾವು ಅವರಿಗೆ ತೊಂದರೆಪಡಿಸಲಿಲ್ಲ. ಅವರು ಒಂದಾದರೂ ಕಳೆದುಕೊಳ್ಳಲಿಲ್ಲ. ನಿನ್ನ ಸೇವಕರನ್ನು ಕೇಳು. ಅವರು ನಿನಗೆ ಹೇಳುವರು. ಆದ್ದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಲಿ. ಏಕೆಂದರೆ ಒಳ್ಳೆಯ ದಿವಸದಲ್ಲಿ ಬಂದೆವು. ನಿನ್ನ ಕೈಯಲ್ಲಿ ದೊರಕುವುದನ್ನು ನಿನ್ನ ಸೇವಕರಿಗೂ, ನಿನ್ನ ಪುತ್ರನಾದ ದಾವೀದನಿಗೂ ದಯಪಾಲಿಸು ಎಂದು ಅವನಿಗೆ ಹೇಳಿರಿ,’ ” ಎಂದು ಅವರನ್ನು ಕಳುಹಿಸಿದನು.
ದಾವೀದನ ಯುವಕರು ಬಂದು ಈ ಮಾತುಗಳನ್ನೆಲ್ಲಾ ದಾವೀದನ ಹೆಸರಿನಲ್ಲಿ ನಾಬಾಲನಿಗೆ ಹೇಳಿ ಮೌನವಾದರು.
10 ನಾಬಾಲನು ದಾವೀದನ ಸೇವಕರಿಗೆ ಉತ್ತರವಾಗಿ, “ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಉಂಟು. 11 ನಾನು ನನ್ನ ರೊಟ್ಟಿಯನ್ನೂ ನೀರನ್ನೂ ಉಣ್ಣೆ ಕತ್ತರಿಸುವವರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನು ತೆಗೆದು, ಎಲ್ಲಿಯವರೆಂದು ನಾನರಿಯದ ಮನುಷ್ಯರಿಗೆ ಕೊಡುವೆನೋ?” ಎಂದನು.
12 ಹೀಗೆ ದಾವೀದನ ಯುವಕರು ತಮ್ಮ ಮಾರ್ಗವಾಗಿ ಹಿಂದಕ್ಕೆ ತಿರುಗಿ ದಾವೀದನ ಬಳಿಗೆ ಬಂದು, ಈ ಮಾತುಗಳನ್ನೆಲ್ಲಾ ತಿಳಿಸಿದರು. 13 ಆಗ ದಾವೀದನು ತನ್ನ ಜನರಿಗೆ, “ನಿಮ್ಮಲ್ಲಿ ಒಬ್ಬೊಬ್ಬನೂ ನಿಮ್ಮ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ,” ಎಂದನು. ಪ್ರತಿಯೊಬ್ಬನೂ ತನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡನು. ಹಾಗೆಯೇ ದಾವೀದನೂ ತನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡನು. ದಾವೀದನ ಹಿಂದೆ ಹೆಚ್ಚು ಕಡಿಮೆ ನಾನೂರು ಮಂದಿ ಹೋದರು. ಇನ್ನೂರು ಮಂದಿ ಸಲಕರಣೆಗಳ ಬಳಿಯಲ್ಲಿ ನಿಂತರು.
14 ಆಗ ಕೆಲಸದವರಲ್ಲಿ ಯುವಕನಾದವನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ, “ನಮ್ಮ ಯಜಮಾನನನ್ನು ವಂದಿಸಲು ದಾವೀದನು ಮರುಭೂಮಿಯಿಂದ ದೂತರನ್ನು ಕಳುಹಿಸಿದನು. 15 ಆದರೆ ಇವನು ಅವರನ್ನು ನಿಂದಿಸಿದನು. ಆ ಜನರು ನಮಗೆ ಮಹಾ ಉಪಕಾರಿಗಳಾಗಿದ್ದರು. ನಾವು ಹೊರಗೆ ಇರುವಾಗ ಅವರು ನಮ್ಮಲ್ಲಿ ಸಂಚರಿಸುತ್ತಿದ್ದ ದಿನಗಳೆಲ್ಲಾ ನಾವು ತೊಂದರೆ ಪಡಲಿಲ್ಲ. ಒಂದನ್ನಾದರೂ ಕಳೆದುಕೊಳ್ಳಲಿಲ್ಲ. 16 ಇದಲ್ಲದೆ ಅವರ ಸಂಗಡ ನಾವು ಕುರಿಗಳನ್ನು ಮೇಯಿಸಿಕೊಂಡು ಇದ್ದ ದಿನಗಳೆಲ್ಲಾ ನಮಗೆ ಅವರು ರಾತ್ರಿ ಹಗಲು ಒಂದು ಕೋಟೆಯಂತೆ ಗೋಡೆಯಾಗಿದ್ದರು. 17 ಈಗ ನೀನು ಮಾಡಬೇಕಾದದ್ದೇನೆಂದು ಆಲೋಚಿಸಿ ನೋಡು. ಏಕೆಂದರೆ ಕೇಡು ನಮ್ಮ ಯಜಮಾನನ ಮೇಲೂ ಅವನ ಮನೆಯ ಮೇಲೆಯೂ ನಿಶ್ಚಯವಾಗಿದೆ. ದುಷ್ಟನಾಗಿರುವ ಅವನ ಸಂಗಡ ಮಾತನಾಡುವುದು ಅಸಾಧ್ಯ,” ಎಂದನು.
18 ಆಗ ಅಬೀಗೈಲಳು ತೀವ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸವನ್ನೂ ಬೇಯಿಸಿದ ಐದು ಕುರಿಗಳ ಮಾಂಸವನ್ನೂ ಐವತ್ತು ಸೇರು ಹುರಿದ ಧಾನ್ಯವನ್ನೂ ಒಣಗಿದ ನೂರು ದ್ರಾಕ್ಷಿ ಗೊನೆಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ಕತ್ತೆಗಳ ಮೇಲೆ ಹೇರಿಸಿಕೊಂಡು, 19 ತನ್ನ ಸೇವಕರಿಗೆ, “ನನಗೆ ಮುಂದಾಗಿ ಹೋಗಿರಿ. ನಾನು ನಿಮ್ಮ ಹಿಂದೆ ಬರುವೆನು,” ಎಂದು ಹೇಳಿದಳು. ಆದರೆ ತನ್ನ ಗಂಡನಾದ ನಾಬಾಲನಿಗೆ ಇದನ್ನು ತಿಳಿಸಲಿಲ್ಲ.
20 ಆಗ, ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಮಾರ್ಗದಲ್ಲಿ ಬೆಟ್ಟದ ಮರೆಗೆ ಬಂದಾಗ, ದಾವೀದನೂ ಅವನ ಜನರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು. 21 ಅಷ್ಟರಲ್ಲಿ ದಾವೀದನು ತನ್ನ ಜನರಿಗೆ, “ಅಡವಿಯಲ್ಲಿದ್ದ ಇವನ ಆಸ್ತಿಯಲ್ಲಿ ಏನೂ ನಷ್ಟವಾಗದಂತೆ ನಾನು ಕಾಪಾಡಿದ್ದು ವ್ಯರ್ಥವಾಯಿತು. ಅವನು ನಾನು ಮಾಡಿದ ಉಪಕಾರಕ್ಕೆ ಅಪಕಾರ ಮಾಡಿದ್ದಾನೆ. 22 ಬೆಳಗಾಗುವಷ್ಟರಲ್ಲಿ ಅವನ ಜನರಲ್ಲಿ ನಾನು ಒಬ್ಬ ಗಂಡಸನನ್ನಾದರೂ ಉಳಿಸಿದರೆ, ದೇವರು ದಾವೀದನಾದ ನನಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ,” ಎಂದು ಹೇಳಿದ್ದನು.
23 ಅಬೀಗೈಲಳು ದಾವೀದನನ್ನು ಕಂಡಾಗ, ಕತ್ತೆಯಿಂದಿಳಿದು ದಾವೀದನಿಗೆ ಎದುರಾಗಿ ಹೋಗಿ, ಅವನ ಮುಂದೆ ಬೋರಲು ಬಿದ್ದು ನಮಸ್ಕರಿಸಿದಳು. 24 ಆಮೇಲೆ ಅವನ ಪಾದಗಳ ಮೇಲೆ ಬಿದ್ದು, “ನನ್ನ ಒಡೆಯನೇ, ಈ ಅಕ್ರಮವು ನನ್ನ ಮೇಲಿರಲಿ; ದಯಮಾಡಿ ನಿನ್ನ ದಾಸಿಯಾದ ನಾನು ಮಾತಾಡುವುದಕ್ಕೆ ಅಪ್ಪಣೆಯಾಗಲಿ. ನಿನ್ನ ದಾಸಿಯ ಮಾತುಗಳನ್ನು ಕೇಳು. 25 ನನ್ನ ಒಡೆಯನೇ, ದಯಮಾಡಿ ದುಷ್ಟನಾದ ನಾಬಾಲನ ಮೇಲೆ ಲಕ್ಷ್ಯವಿಡಬೇಡ. ಏಕೆಂದರೆ ಅವನ ಹೆಸರು ಹೇಗೋ, ಹಾಗೆಯೇ ಅವನು. ಅವನು ನಾಬಾಲನೆಂಬ ಹೆಸರುಳ್ಳವನು. ಬುದ್ಧಿಹೀನತೆ ಅವನಲ್ಲಿ ಇದೆ. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಸೇವಕರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ. 26 ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವುದಕ್ಕೂ, ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಹೋಗುವುದನ್ನು ದೇವರು ತಡೆದದ್ದರಿಂದ, ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ ನಿನ್ನ ಶತ್ರುಗಳೂ, ನನ್ನ ಒಡೆಯನಿಗೆ ಕೇಡನ್ನು ಹುಡುಕುವವರೂ ನಾಬಾಲನ ಹಾಗೆಯೇ ಆಗಲಿ. 27 ಈಗ ನಿನ್ನ ದಾಸಿಯು ನನ್ನ ಒಡೆಯನಿಗೆ ತೆಗೆದುಕೊಂಡು ಬಂದ ಈ ಕಾಣಿಕೆಯು ನನ್ನ ಒಡೆಯನ ಹೆಜ್ಜೆಯಲ್ಲಿ ನಡೆಯುವವರಿಗೆ ಸಲ್ಲಲಿ.
28 “ನೀನು ದಯಮಾಡಿ ನಿನ್ನ ದಾಸಿಯ ತಪ್ಪನ್ನು ಮನ್ನಿಸಬೇಕು. ಏಕೆಂದರೆ ನನ್ನ ಒಡೆಯನು ಯೆಹೋವ ದೇವರ ಯುದ್ಧಗಳನ್ನು ನಡೆಸುತ್ತಾನೆ. ಆದ್ದರಿಂದ ನಿನ್ನ ಜೀವಮಾನದಲ್ಲೆಲ್ಲಾ ನಿನ್ನಲ್ಲಿ ಕೆಟ್ಟತನ ಕಾಣದಿರಲಿ. ಯೆಹೋವ ದೇವರು ನಿಶ್ಚಯವಾಗಿ ನನ್ನ ಒಡೆಯನಾದ ನಿನಗೆ ಶಾಶ್ವತ ರಾಜ್ಯವನ್ನು ಸ್ಥಿರಪಡಿಸುವರು. 29 ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡುಕುವುದಕ್ಕೆ ಒಬ್ಬನು ಎದ್ದಿದ್ದಾನೆ. ಆದರೂ ನನ್ನ ಒಡೆಯನ ಪ್ರಾಣವು ದೇವರಾದ ಯೆಹೋವ ದೇವರ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಿರುವುದು. ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ದೇವರು ಎಸೆದುಬಿಡುವರು. 30 ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಯೆಹೋವ ದೇವರು ಹೇಳಿದ ಒಳ್ಳೆಯದೆಲ್ಲವನ್ನು ನಿನಗೆ ಮಾಡಿ, ನಿನ್ನನ್ನು ಇಸ್ರಾಯೇಲರ ಮೇಲೆ ನಾಯಕನಾಗಿ ನೇಮಿಸಿದಾಗ, 31 ನೀನು ಸುಮ್ಮನೆ ನಿರಪರಾಧಿಯ ರಕ್ತವನ್ನು ಸುರಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡದ್ದರಿಂದ ಉಂಟಾಗುವ ಪಶ್ಚಾತ್ತಾಪ ಮನೋವ್ಯಥೆಗಳಿಗೆ ಕಾರಣವಿರುವದಿಲ್ಲ. ಆದರೆ ನನ್ನ ಒಡೆಯನನ್ನು ಯೆಹೋವ ದೇವರು ಚೆನ್ನಾಗಿ ನಡೆಸಿದಾಗ, ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು,” ಎಂದಳು.
32 ಆಗ ದಾವೀದನು ಅಬೀಗೈಲಳಿಗೆ, “ನನ್ನನ್ನು ಎದುರುಗೊಳ್ಳುವುದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. 33 ನಿನ್ನ ಬುದ್ಧಿಮಾತಿಗಾಗಿಯೂ, ನಾನು ರಕ್ತ ಚೆಲ್ಲುವುದಕ್ಕೂ, ನನ್ನ ಕೈಯಿಂದ ನನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಈ ಹೊತ್ತು ನನ್ನನ್ನು ತಡೆದ ನಿನಗೆ ಆಶೀರ್ವಾದ ಆಗಲಿ. 34 ಏಕೆಂದರೆ ನಿನಗೆ ಕೇಡು ಆಗದ ಹಾಗೆ ನನ್ನನ್ನು ತಡೆದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಜೀವದಾಣೆ, ನೀನು ತ್ವರೆಯಾಗಿ ನನ್ನನ್ನು ಎದುರುಗೊಳ್ಳದಿದ್ದರೆ, ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ,” ಎಂದು ಹೇಳಿದನು.
35 ಅವಳು ತನಗೆ ತಂದದ್ದನ್ನು ದಾವೀದನು ತೆಗೆದುಕೊಂಡು ಅವಳಿಗೆ, “ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ನಾನು ನಿನ್ನ ಮಾತನ್ನು ಕೇಳಿ ನಿನ್ನ ಮುಖ ದಾಕ್ಷಿಣ್ಯವನ್ನು ನೋಡಿದೆನು,” ಎಂದನು.
36 ಅಬೀಗೈಲಳು ನಾಬಾಲನ ಬಳಿಗೆ ಬಂದಾಗ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸಗೊಂಡಿತ್ತು. ಆದಕಾರಣ ಅವಳು ಉದಯವಾಗುವವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ, ಹೆಚ್ಚಾದದ್ದನ್ನಾಗಲಿ ತಿಳಿಸಲಿಲ್ಲ. 37 ಉದಯದಲ್ಲಿ ನಾಬಾಲನ ದ್ರಾಕ್ಷಾರಸದ ಅಮಲು ಇಳಿದಾಗ, ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು, ಹೃದಯಾಘಾತವಾಗಿ ಅವನು ಕಲ್ಲಿನ ಹಾಗಾದನು. 38 ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ, ಯೆಹೋವ ದೇವರ ದಂಡನೆಯ ನಿಮಿತ್ತ ನಾಬಾಲನು ಸತ್ತುಹೋದನು.
39 ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ, “ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ, ತನ್ನ ಸೇವಕನನ್ನು ಕೇಡು ಮಾಡಗೊಡದ ಹಾಗೆ ತಡೆದ ಯೆಹೋವ ದೇವರು ಸ್ತುತಿಹೊಂದಲಿ. ಏಕೆಂದರೆ ಯೆಹೋವ ದೇವರು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದರು,” ಎಂದನು.
ದಾವೀದನು ಅಬೀಗೈಲಳನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ಅವಳ ಸಂಗಡ ಮಾತನಾಡಲು ಸೇವಕರನ್ನು ಕಳುಹಿಸಿದನು. 40 ದಾವೀದನ ಸೇವಕರು ಕರ್ಮೆಲಿನಲ್ಲಿರುವ ಅಬೀಗೈಲಳ ಬಳಿಗೆ ಬಂದಾಗ ಅವಳಿಗೆ, “ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದನು,” ಎಂದು ಹೇಳಿದರು.
41 ಆಗ ಅವಳು ಎದ್ದು ಬೋರಲು ಬಿದ್ದು, “ನಿನ್ನ ದಾಸಿಯಾದ ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೊಳೆಯುವುದಕ್ಕೂ ಸಿದ್ಧಳಾಗಿದ್ದೇನೆ,” ಎಂದಳು. 42 ಅಬೀಗೈಲಳು ತ್ವರೆಯಾಗಿ ಎದ್ದು ಕತ್ತೆಯ ಮೇಲೆ ಹತ್ತಿಕೊಂಡು, ತನ್ನ ಸಂಗಡ ಇರುವ ಐದು ಮಂದಿ ದಾಸಿಯರನ್ನು ಕರೆದುಕೊಂಡು ದಾವೀದನ ಸೇವಕರ ಹಿಂದೆ ಹೋಗಿ, ಅವನಿಗೆ ಹೆಂಡತಿಯಾದಳು. 43 ಇದಲ್ಲದೆ ದಾವೀದನು ಇಜ್ರೆಯೇಲ್ ಊರಿನವಳಾದ ಅಹೀನೋವಮಳನ್ನು ಮದುವೆ ಮಾಡಿಕೊಂಡಿದ್ದನು. ಅವರಿಬ್ಬರೂ ಅವನ ಹೆಂಡತಿಯರಾದರು. 44 ಆದರೆ ಸೌಲನು ದಾವೀದನ ಹೆಂಡತಿಯಾಗಿದ್ದ ಮೀಕಲಳೆಂಬ ತನ್ನ ಮಗಳನ್ನು ಗಲ್ಲೀಮ್ ಪಟ್ಟಣದ ಲಯಿಷನ ಮಗನಾದ ಪಲ್ಟೀ* ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದನು.
* 25:44 25:44 ಪಲ್ಟೀ ಹೀಬ್ರೂ ಭಾಷೆಯಲ್ಲಿ ಪಲ್ಟೀಯೇಲ