15
ಅಬ್ಷಾಲೋಮನ ಒಳಸಂಚು
ಇದರ ತರುವಾಯ ಅಬ್ಷಾಲೋಮನು ತನಗೋಸ್ಕರ ರಥಗಳನ್ನೂ ಕುದುರೆಗಳನ್ನೂ ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿಯನ್ನೂ ಸಿದ್ಧಮಾಡಿಕೊಂಡನು. ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಿಲ ಬಳಿಯಲ್ಲಿ ನಿಂತುಕೊಂಡು, ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು, “ನೀನು ಯಾವ ಪಟ್ಟಣದವನು?” ಎಂದು ಕೇಳಿದನು. ಅದಕ್ಕವನು, “ನಿನ್ನ ಸೇವಕರಾದ ನಾವು ಇಸ್ರಾಯೇಲರ ಇಂಥ ಕುಲಕ್ಕೆ ಸೇರಿದವರು,” ಎಂದು ಉತ್ತರ ಕೊಡುವನು. ಆಗ ಅಬ್ಷಾಲೋಮನು ಅವನಿಗೆ, “ನೋಡು ನಿನ್ನ ಕಾರ್ಯವು ಒಳ್ಳೆಯದೂ, ನ್ಯಾಯವಾದದದ್ದೂ ಆಗಿದೆ. ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವುದಕ್ಕೆ ಯಾವನೂ ಇಲ್ಲ,” ಅನ್ನುವನು. ಇದಲ್ಲದೆ ಅಬ್ಷಾಲೋಮನು, “ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ನೇಮಕವಾಗಿದ್ದರೆ ಎಷ್ಟೋ ಒಳ್ಳೆಯದು. ಆಗ ವ್ಯಾಜ್ಯವಾದರೂ, ನ್ಯಾಯವಿಚಾರಣೆಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ, ನಾನು ಅವನಿಗೆ ನೀತಿಯಿಂದ ನ್ಯಾಯತೀರಿಸುವೆನು,” ಅನ್ನುವನು.
ಯಾವನಾದರೂ ಅವನಿಗೆ ವಂದಿಸುವುದಕ್ಕೆ ಬಂದರೆ, ಕೂಡಲೆ ತನ್ನ ಕೈಯನ್ನು ಚಾಚಿ ಅಂಥವನನ್ನು ಎತ್ತಿ ಮುದ್ದಿಡುತ್ತಿದ್ದನು. ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲರೆಲ್ಲರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲರ ಹೃದಯಗಳನ್ನು ಗೆದ್ದುಕೊಂಡನು.
ನಾಲ್ಕು ವರ್ಷಗಳಾದ ತರುವಾಯ ಅಬ್ಷಾಲೋಮನು ಅರಸನಿಗೆ, “ನಾನು ಯೆಹೋವ ದೇವರಿಗೆ ಮಾಡಿಕೊಂಡಿದ್ದ ನನ್ನ ಹರಕೆಯನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವುದಕ್ಕೆ ಅಪ್ಪಣೆಕೊಡಬೇಕು. ಏಕೆಂದರೆ, ‘ಯೆಹೋವ ದೇವರು ನನ್ನನ್ನು ಯೆರೂಸಲೇಮಿಗೆ ತಿರುಗಿ ನಿಜವಾಗಿಯೂ ಬರಮಾಡಿದರೆ, ನಾನು ಯೆಹೋವ ದೇವರನ್ನು ಸೇವಿಸುವೆನು,’ ಎಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಹರಕೆ ಮಾಡಿಕೊಂಡಿದ್ದನು,” ಎಂದನು.
ಅರಸನು ಅವನಿಗೆ, “ಸಮಾಧಾನವಾಗಿ ಹೋಗು,” ಎಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.
10 ಅಬ್ಷಾಲೋಮನು ಇಸ್ರಾಯೇಲಿನ ಸಮಸ್ತ ಗೋತ್ರಗಳಿಗೆ ಗೂಢಚಾರರನ್ನು ಕಳುಹಿಸಿ ಅವರಿಗೆ, “ನೀವು ತುತೂರಿಯ ಶಬ್ದ ಕೇಳಿದಾಗ, ‘ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸನಾದನೆಂದು ಘೋಷಿಸಿರಿ’ ಎಂದು ಹೇಳಿರಿ,” ಎಂದನು. 11 ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲಾದ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ಒಳಸಂಚನ್ನು ಏನೂ ತಿಳಿಯದೆ ಯಥಾರ್ಥ ಮನಸ್ಸುಳ್ಳವರಾಗಿದ್ದರು. 12 ಅಬ್ಷಾಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ, ದಾವೀದನ ಆಲೋಚನಾಗಾರನಾಗಿರುವ ಗಿಲೋವಿನ ಅಹೀತೋಫೆಲನನ್ನು ಗಿಲೋವೆಂಬ ಅವನ ಪಟ್ಟಣದಿಂದ ಕರೆಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ, ಒಳಸಂಚಿನ ಗುಂಪು ಬಲವಾಯಿತು.
ದಾವೀದನು ಓಡಿಹೋದದ್ದು
13 ದಾವೀದನ ಬಳಿಗೆ ಒಬ್ಬ ದೂತನು ಬಂದು, “ಇಸ್ರಾಯೇಲರ ಹೃದಯಗಳು ಅಬ್ಷಾಲೋಮನ ಕಡೆ ತಿರುಗಿಕೊಂಡಿವೆ,” ಎಂದನು.
14 ಆಗ ದಾವೀದನು ಯೆರೂಸಲೇಮಿನಲ್ಲಿ ತನ್ನ ಹತ್ತಿರ ಇರುವ ತನ್ನ ಸಮಸ್ತ ಸೇವಕರಿಗೆ, “ಏಳಿರಿ, ನಾವು ಓಡಿಹೋಗೋಣ. ಇಲ್ಲದಿದ್ದರೆ ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಂಡು ಹೋಗಲಾರೆವು. ಅವನು ಫಕ್ಕನೆ ನಮ್ಮನ್ನು ಹಿಡಿದು, ನಮ್ಮ ಮೇಲೆ ಕೇಡನ್ನು ಬರಮಾಡಿ, ಪಟ್ಟಣವನ್ನು ಖಡ್ಗದಿಂದ ಹೊಡೆಯದ ಹಾಗೆ ಹೊರಟು ಹೋಗುವುದಕ್ಕೆ ತ್ವರೆಮಾಡಿರಿ,” ಎಂದನು.
15 ಆಗ ಅರಸನ ಸೇವಕರು ಅರಸನಿಗೆ, “ಅರಸನಾದ ನಮ್ಮ ಒಡೆಯನು ನಮಗೆ ಏನೇನು ಆಜ್ಞಾಪಿಸುವನೋ, ಅದನ್ನು ಮಾಡುವುದಕ್ಕೆ ನಿನ್ನ ಸೇವಕರು ಸಿದ್ಧವಾಗಿದ್ದೇವೆ,” ಎಂದರು.
16 ಅರಸನು ಮನೆಗೆ ಕಾವಲಿರುವಂತೆ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ಬಿಟ್ಟು, ಅವನೂ, ಅವನ ಮನೆಯವರೆಲ್ಲರೂ ಅವನ ಹಿಂದೆ ಹೊರಟು ಹೋದರು. 17 ಅರಸನೂ, ಅವನ ಹಿಂದೆ ಸಮಸ್ತ ಜನರೂ ಹೊರಟುಹೋಗಿ ಪಟ್ಟಣದ ಕಡೆಯ ಮನೆಯ ಬಳಿ ಬಂದು ಅಲ್ಲಿ ನಿಂತರು. 18 ಅವನ ಸಮಸ್ತ ಸೇವಕರೂ, ಸಮಸ್ತ ಕೆರೇತ್ಯರೂ, ಸಮಸ್ತ ಪೆಲೇತ್ಯರೂ ಅವನ ಹಿಂದೆ ಗತ್ ಊರಿನಿಂದ ಅವನ ಸಂಗಡ ಬಂದ ಗಿತ್ತೀಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.
19 ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ಕಂಡು, “ನೀನು ನಮ್ಮ ಸಂಗಡ ಬರುವುದು ಏಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ, ಅರಸನ ಸಂಗಡ ಇರು. ಏಕೆಂದರೆ ನೀನು ವಿದೇಶಿ. ನಿನ್ನ ದೇಶದಿಂದ ಸೆರೆಯಾಳಾಗಿ ಬಂದವನು. 20 ನೀನು ನಿನ್ನೆ ಬಂದವನು. ನಾನು ಎಲ್ಲಿಗೆ ಹೋಗುತ್ತೇನೋ ನನಗೇ ಗೊತ್ತಿಲ್ಲ. ಆದುದರಿಂದ ನಾನು ನಿನ್ನನ್ನು ನಮ್ಮ ಸಂಗಡ ಸುಮ್ಮನೇ ತಿರುಗಾಡಿಸುವುದು ಏಕೆ? ನೀನು ನಿನ್ನ ಸಹೋದರರನ್ನು ಕರೆದುಕೊಂಡು ಹಿಂದಕ್ಕೆ ಹೋಗು. ದಯೆಯೂ, ನಂಬಿಗಸ್ತಿಕೆಯೂ ನಿನ್ನ ಸಂಗಡ ಇರಲಿ,” ಎಂದನು.
21 ಆದರೆ ಇತ್ತೈಯೂ ಅರಸನಿಗೆ ಉತ್ತರವಾಗಿ, “ಯೆಹೋವ ದೇವರ ಜೀವದಾಣೆ, ಅರಸನಾದ ನನ್ನ ಒಡೆಯನ ಜೀವದಾಣೆ, ಅರಸನಾದ ನನ್ನ ಒಡೆಯನು ಎಲ್ಲಿ ಇರುವನೋ, ಸಾವಾದರೂ ಬದುಕಾದರೂ ನಿಶ್ಚಯವಾಗಿ ಅಲ್ಲಿ ನಿನ್ನ ಸೇವಕನು ಇರುವನು,” ಎಂದನು.
22 ಆಗ ದಾವೀದನು ಇತ್ತೈಗೆ, “ನೀನು ಹೋಗಿ ದಾಟು,” ಎಂದನು. ಆದ್ದರಿಂದ ಗಿತ್ತೀಯನಾದ ಇತ್ತೈಯೂ, ಅವನ ಸಮಸ್ತ ಮನುಷ್ಯರೂ, ಅವನ ಸಂಗಡ ಇರುವ ಸಮಸ್ತ ಚಿಕ್ಕವರೂ ಕೂಡ ದಾಟಿಹೋದರು.
23 ಜನರೆಲ್ಲಾ ದಾಟಿಹೋಗುವಾಗ, ದೇಶದವರೆಲ್ಲಾ ಮಹಾಧ್ವನಿಯಿಂದ ಅತ್ತರು. ಅರಸನು ಕಿದ್ರೋನ್ ಹಳ್ಳವನ್ನು ದಾಟಿದನು. ಹಾಗೆಯೇ ಅವನ ಜನರೆಲ್ಲರೂ ದಾಟಿ ಮರುಭೂಮಿಯ ಮಾರ್ಗವಾಗಿ ನಡೆದುಹೋದರು.
24 ಚಾದೋಕನೂ, ಅವನ ಸಂಗಡ ಇರುವ ಸಮಸ್ತ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಇಳಿಸಿದರು. ಅಬಿಯಾತರನು, ಜನರೆಲ್ಲರು ಪಟ್ಟಣದಿಂದ ದಾಟಿಹೋಗುವವರೆಗೆ ಯಜ್ಞ ಸಮರ್ಪಿಸುತ್ತಾ ಮುಂದೆ ನಡೆಯುತ್ತಿದ್ದನು.
25 ಆಗ ಅರಸನು ಚಾದೋಕನಿಗೆ, “ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರುಗಿ ತೆಗೆದುಕೊಂಡು ಹೋಗು. ಯೆಹೋವ ದೇವರ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ, ಅವರು ತಿರುಗಿ ನನ್ನನ್ನು ಬರಮಾಡಿ ಅದನ್ನೂ, ಅದರ ವಾಸಸ್ಥಳವನ್ನೂ ನನಗೆ ತೋರಿಸುವರು. 26 ಒಂದು ವೇಳೆ ಅವರು, ‘ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು’ ಹೇಳಿದರೆ ಇಗೋ, ಅವರು ತಮ್ಮ ದೃಷ್ಟಿಗೆ ತೋಚಿದ ಹಾಗೆ ನನಗೆ ಮಾಡಲಿ,” ಎಂದನು.
27 ಅರಸನು ಯಾಜಕನಾದ ಚಾದೋಕನಿಗೆ, “ನೀನು ದರ್ಶಿಯಲ್ಲವೇ? ನೀನು ಸಮಾಧಾನದಿಂದ ಪಟ್ಟಣಕ್ಕೆ ತಿರುಗಿ ಹೋಗು; ಇದಲ್ಲದೆ ನಿನ್ನ ಇಬ್ಬರು ಮಕ್ಕಳು ಅಹೀಮಾಚನೂ, ಅಬಿಯಾತರನ ಮಗ ಯೋನಾತಾನನೂ ನಿನ್ನ ಸಂಗಡ ಹೋಗಲಿ. 28 ನೋಡು, ನನಗೆ ತಿಳಿಸುವುದಕ್ಕೆ ನಿಮ್ಮ ಬಳಿಯಿಂದ ವರ್ತಮಾನ ಬರುವವರೆಗೂ, ನಾನು ಮರುಭೂಮಿಯ ಬಳಿಯಲ್ಲಿ ಇರುವೆನು,” ಎಂದನು. 29 ಹಾಗೆಯೇ ಚಾದೋಕನೂ, ಅಬಿಯಾತರನೂ ದೇವರ ಮಂಜೂಷವನ್ನು ತಿರುಗಿ ಯೆರೂಸಲೇಮಿಗೆ ತೆಗೆದುಕೊಂಡುಹೋಗಿ ಅಲ್ಲಿದ್ದರು.
30 ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿಕೊಂಡು, ಬರಿಗಾಲಿನಿಂದ ಎಣ್ಣೆಮರಗಳ ಗುಡ್ಡವನ್ನು ಏರಿದನು. ಅವನ ಸಂಗಡ ಇರುವ ಸಮಸ್ತ ಜನರೂ, ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆ ಏರಿದರು. 31 ಅಹೀತೋಫೆಲನು ಅಬ್ಷಾಲೋಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾನೆಂದು ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು, “ಯೆಹೋವ ದೇವರೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವನ್ನಾಗಿ ಮಾಡಿಬಿಡು,” ಎಂದನು.
32 ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿದಾಗ, ಅರ್ಕಿಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಅವನನ್ನು ಎದುರುಗೊಳ್ಳಲು ಬಂದನು. 33 ಆಗ ದಾವೀದನು ಅವನಿಗೆ, “ನೀನು ನನ್ನ ಸಂಗಡ ಬಂದರೆ, ನನಗೆ ಭಾರವಾಗಿರುವೆ. 34 ನೀನು ಪಟ್ಟಣಕ್ಕೆ ತಿರುಗಿ ಹೋಗಿ ಅಬ್ಷಾಲೋಮನಿಗೆ, ‘ಅರಸನೇ, ನಾನು ನಿನ್ನ ಸೇವಕನಾಗಿರುವೆನು. ನಾನು ಇಂದಿನವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ, ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು,’ ಎಂದು ಹೇಳಿದರೆ, ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಬಹುದು. 35 ಅಲ್ಲಿ ಯಾಜಕರಾದ ಚಾದೋಕನೂ, ಅಬಿಯಾತರನೂ ನಿನ್ನ ಬಳಿಯಲ್ಲಿ ಇಲ್ಲವೋ? ಆದ್ದರಿಂದ ನೀನು ಅರಸನ ಮನೆಯಲ್ಲಿ ಯಾವ ವರ್ತಮಾನವನ್ನು ಕೇಳುತ್ತೀಯೋ, ಅದನ್ನು ಯಾಜಕರಾದ ಚಾದೋಕನಿಗೂ, ಎಬ್ಯಾತಾರನಿಗೂ ತಿಳಿಸು. 36 ಅಲ್ಲಿ ಅವರ ಸಂಗಡ ಅವರ ಇಬ್ಬರು ಮಕ್ಕಳು ಇದ್ದಾರೆ. ಚಾದೋಕನ ಮಗ ಅಹೀಮಾಚನೂ, ಅಬಿಯಾತರನ ಮಗ ಯೋನಾತಾನನೂ. ನೀವು ಕೇಳಿದ ವರ್ತಮಾನವನ್ನೆಲ್ಲಾ ಅವರ ಕೈಯಿಂದ ನನಗೆ ಹೇಳಿ ಕಳುಹಿಸಬೇಕು,” ಎಂದನು.
37 ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣದೊಳಗೆ ಬಂದನು. ಆಗ ಅಬ್ಷಾಲೋಮನು ಯೆರೂಸಲೇಮಿಗೆ ಬಂದನು.