20
ಶೆಬನು ದಾವೀದನಿಗೆ ವಿರುದ್ಧ ದಂಗೆ ಎದ್ದದ್ದು
ಬೆನ್ಯಾಮೀನ್ಯನಾದ ಬಿಕ್ರಿಯ ಮಗ ಶೆಬನೆಂಬ ಹೆಸರುಳ್ಳ ಒಬ್ಬ ನೀಚ ವ್ಯಕ್ತಿ ಅಲ್ಲಿದ್ದನು. ಅವನು ತುತೂರಿಯನ್ನು ಊದಿ ಹೀಗಂದನು,
“ನಮಗೆ ದಾವೀದನಲ್ಲಿ ಪಾಲಿಲ್ಲ,
ಇಷಯನ ಮಗನ ಬಳಿಯಲ್ಲಿ ನಮಗೆ ಬಾಧ್ಯತೆಯೂ ಇಲ್ಲ.
ಇಸ್ರಾಯೇಲರೇ, ನಿಮ್ಮ ನಿಮ್ಮ ಗುಡಾರಗಳಿಗೆ ಹೋಗಿರಿ.”
ಆಗ ಇಸ್ರಾಯೇಲರೆಲ್ಲರೂ ದಾವೀದನನ್ನು ಬಿಟ್ಟು ಸರಿದು, ಬಿಕ್ರಿಯ ಮಗ ಶೆಬನ ಹಿಂದೆ ಹೋದರು. ಆದರೆ ಯೊರ್ದನಿನಿಂದ ಯೆರೂಸಲೇಮಿನವರೆಗೂ ಇರುವ ಯೆಹೂದ ಜನರು ತಮ್ಮ ಅರಸನನ್ನು ಅಂಟಿಕೊಂಡಿದ್ದರು.
ದಾವೀದನು ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ಬಂದನು. ಅರಸನು ಮನೆಯಲ್ಲಿ ಕಾಯಲು ಇಟ್ಟ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ತೆಗೆದುಕೊಂಡು, ಅವರನ್ನು ಒಂದು ಕಾವಲಿನಲ್ಲಿರಿಸಿ ಸಾಕುತ್ತಿದ್ದನು. ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಅವರ ಸಂಪರ್ಕ ಮಾಡಲಿಲ್ಲ. ಹಾಗೆಯೇ ಅವರು ಸಾಯುವ ದಿವಸದವರೆಗೂ ವಿಧವೆಯರಂತೆ ಇದ್ದು ಕಾವಲಲ್ಲಿರಬೇಕಾಯಿತು.
ಅರಸನು ಅಮಾಸನಿಗೆ, “ನೀನು ಮೂರು ದಿವಸಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ನನ್ನ ಬಳಿಗೆ ಬಾ ಮತ್ತು ನೀನೇ ಇಲ್ಲಿ ಇರು,” ಎಂದನು. ಹಾಗೆಯೇ ಅಮಾಸನು ಯೆಹೂದ ಜನರನ್ನು ಕೂಡಿಸಲು ಹೋದನು. ಆದರೆ ಅವನು ತನಗೆ ನೇಮಿಸಿದ ಕಾಲಕ್ಕಿಂತ ಬಾರದೆ ಹೆಚ್ಚು ತಡಮಾಡಿದನು.
ಆದ್ದರಿಂದ ದಾವೀದನು ಅಬೀಷೈಯನಿಗೆ, “ಈಗ ಅಬ್ಷಾಲೋಮನಿಗಿಂತ ಬಿಕ್ರಿಯ ಮಗ ಶೆಬನು ನಮಗೆ ಹೆಚ್ಚಿನ ಕೇಡನ್ನು ಮಾಡುವನು. ಅವನು ತನಗೆ ಗಡಿ ಪಟ್ಟಣಗಳನ್ನು ಸಂಪಾದಿಸಿಕೊಂಡು, ನಮ್ಮಿಂದ ತಪ್ಪಿಸಿಕೊಳ್ಳದೆ ಹಾಗೆ ನೀನು ನಿನ್ನ ಯಜಮಾನನ ಸೇವಕರನ್ನು ತೆಗೆದುಕೊಂಡು ಹೊರಟು ಅವನನ್ನು ಹಿಂದಟ್ಟು,” ಎಂದನು. ಹಾಗೆಯೇ ಅವನ ಹಿಂದೆ ಯೋವಾಬನ ಜನರೂ, ಕೆರೇತ್ಯರೂ, ಪೆಲೇತ್ಯರೂ, ಸಮಸ್ತ ಪರಾಕ್ರಮಶಾಲಿಗಳೂ ಅಬೀಷೈಯನ ನೇತೃತ್ವದಲ್ಲಿ ಬಿಕ್ರಿಯ ಮಗ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.
ಅವರು ಗಿಬ್ಯೋನಿನ ಸಮೀಪದಲ್ಲಿರುವ ದೊಡ್ಡ ಕಲ್ಲಿನ ಬಳಿಗೆ ಬಂದಾಗ, ಅಮಾಸನು ಅವರೆದುರಿಗೆ ಬಂದನು. ಯೋವಾಬನು ತಾನು ಧರಿಸಿದ್ದ ಅಂಗಿಯ ಮೇಲೆ ಒಂದು ನಡುಕಟ್ಟನ್ನು ಕಟ್ಟಿಕೊಂಡಿದ್ದನು. ಅದರಲ್ಲಿ ಒರೆಯ ಸಂಗಡ ಒಂದು ಕಠಾರಿ ಅವನ ನಡುವಿನಲ್ಲಿ ತೂಗುತ್ತಿತ್ತು. ಅವನು ನಡೆಯುವಾಗ ಕಠಾರಿ ಒರೆಯಿಂದ ಕೆಳಗೆ ಬಿದ್ದಿತು.
ಆಗ ಯೋವಾಬನು ಅಮಾಸನಿಗೆ, “ನನ್ನ ಸಹೋದರನೇ, ಕ್ಷೇಮವೋ?” ಎಂದನು. ಯೋವಾಬನು ಅವನನ್ನು ಮುದ್ದಿಟ್ಟುಕೊಳ್ಳಲು ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು. 10 ಆದರೆ ಅಮಾಸನು ಯೋವಾಬನ ಕೈಯಲ್ಲಿ ಕಠಾರಿ ಇದ್ದುದರಿಂದ ಎಚ್ಚರಿಕೆ ತೆಗೆದುಕೊಳ್ಳದಿರುವಾಗ, ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಹೊಟ್ಟೆಯಲ್ಲಿ ತಿವಿದನು. ಎರಡನೆಯ ಸಾರಿ ಹೊಡೆಯಲಿಲ್ಲ. ಅವನು ಸತ್ತನು. ಯೋವಾಬನೂ, ಅವನ ಸಹೋದರನಾದ ಅಬೀಷೈಯನೂ ಬಿಕ್ರಿಯ ಮಗ ಶೆಬನನ್ನು ಹಿಂದಟ್ಟಿದರು.
11 ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು, “ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ, ಯಾವನು ದಾವೀದನಿಗೆ ಹೊಂದಿದವನೋ, ಅವನು ಯೋವಾಬನ ಹಿಂದೆ ಹೋಗಲಿ,” ಎಂದನು. 12 ಆದರೆ ಅಮಾಸನು ರಾಜಮಾರ್ಗದೊಳಗೆ ರಕ್ತದಲ್ಲಿ ಹೊರಳಾಡುತ್ತಾ ಇದ್ದನು. ಜನರೆಲ್ಲರು ನಿಂತಿರುವುದನ್ನು ಆ ಮನುಷ್ಯನು ಕಂಡಾಗ, ಅವನು ಅಮಾಸನನ್ನು ದಾರಿಯಿಂದ ಹೊಲಕ್ಕೆ ಎಳೆದು ಹಾಕಿ, ಅವನ ಮೇಲೆ ಒಂದು ವಸ್ತ್ರವನ್ನು ಹಾಕಿದನು. 13 ಶವವನ್ನು ರಾಜಮಾರ್ಗದಿಂದ ಎಳೆದು ಆಚೆ ಹಾಕಿದ ತರುವಾಯ ಜನರೆಲ್ಲರೂ ಮುಂದಕ್ಕೆ ಹೋಗಿ, ಬಿಕ್ರಿಯ ಮಗನಾದ ಶೆಬನನ್ನು ಹಿಂದಟ್ಟಿ ಯೋವಾಬನ ಹಿಂದೆ ಹೋದರು.
14 ಶೆಬನು ಇಸ್ರಾಯೇಲಿನ ಎಲ್ಲಾ ಗೋತ್ರಗಳಲ್ಲಿ ಹಾದು ಬೇತ್ ಮಾಕದ ಆಬೇಲಿಗೆ ಬಂದು, ಬೇರ‍್ಯರ ಪ್ರದೇಶದ ಮಾರ್ಗವಾಗಿ ಹೋದನು. ಆಗ ಬೇರ‍್ಯರು ಕೂಡಿಕೊಂಡು ಅವನ ಸಂಗಡ ಹೋದರು. 15 ಯೋವಾಬನ ಜೊತೆಗಿದ್ದ ಸೈನಿಕರು ಬಂದು ಆಬೇಲ್ ಬೇತ್ ಮಾಕಾ ಊರಿಗೆ ಮುತ್ತಿಗೆ ಹಾಕಿ, ಪಟ್ಟಣಕ್ಕೆದುರಾಗಿ ಊರು ಗೋಡೆಯವರೆಗೆ ಮಣ್ಣಿನ ದಿಬ್ಬವನ್ನು ಮಾಡಿದರು. ಯೋವಾಬನ ಸಂಗಡದಲ್ಲಿರುವ ಜನರೆಲ್ಲರೂ ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು. 16 ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ, “ಕೇಳಿರಿ, ಕೇಳಿರಿ. ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸಮೀಪಿಸಲು ಬರಹೇಳಿರಿ,” ಎಂದು ಕೂಗಿ ಬೇಡಿಕೊಂಡಳು. 17 ಅವನು ಅವಳ ಬಳಿಗೆ ಸಮೀಪಿಸಿ ಬಂದಾಗ, ಆ ಸ್ತ್ರೀಯು, “ನೀನು ಯೋವಾಬನೋ?” ಎಂದಳು.
ಅದಕ್ಕೆ ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು.
ಆಕೆ, “ನಿನ್ನ ದಾಸಿಯ ಮಾತನ್ನು ಕೇಳಿ,” ಎಂದಳು.
ಅದಕ್ಕೆ ಅವನು, “ನಾನು ಕೇಳುತ್ತೇನೆ,” ಎಂದನು.
18 ಅವಳು ಮಾತನಾಡುತ್ತಾ, “ಪೂರ್ವಕಾಲದಲ್ಲಿ, ‘ಆಬೇಲಿನವರ ಉತ್ತರ ಪಡೆಯಿರಿ’ ಎಂದು ಹೇಗೆ ವ್ಯಾಜ್ಯ ತೀರಿಸಿಕೊಳ್ಳುತ್ತಿದ್ದರು. 19 ಹಾಗೆ ನಾವು ಇಸ್ರಾಯೇಲಿನಲ್ಲಿ ಸಮಾಧಾನವುಳ್ಳವರೂ, ನಂಬಿಗಸ್ತರೂ ಆಗಿದ್ದೇವೆ. ಇಸ್ರಾಯೇಲಿನ ತಾಯಿಯಂತಿರುವ ನಮ್ಮ ಪಟ್ಟಣವನ್ನು ಹಾಳುಮಾಡಲು ಯೆಹೋವ ದೇವರ ಸೊತ್ತನ್ನು ಕಬಳಿಸುವುದಕ್ಕೆ ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದಳು.
20 ಅದಕ್ಕೆ ಯೋವಾಬನು ಉತ್ತರವಾಗಿ, “ನಾನು ಅದನ್ನು ಎಂದಿಗೂ ಮಾಡುವುದಿಲ್ಲ. ನುಂಗುವುದನ್ನೂ ಹಾಳುಮಾಡುವುದನ್ನೂ ನಾನು ಎಂದಿಗೂ ಮಾಡುವುದಿಲ್ಲ. 21 ಕಾರ್ಯವು ಹಾಗಲ್ಲ. ಏಕೆಂದರೆ ಬಿಕ್ರಿಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯೀಮ್ ಬೆಟ್ಟದವನಾದ ಒಬ್ಬ ಮನುಷ್ಯನು, ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ. ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು,” ಎಂದನು.
ಆ ಸ್ತ್ರೀಯು ಯೋವಾಬನಿಗೆ, “ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು,” ಎಂದಳು.
22 ಆ ಸ್ತ್ರೀಯು ತನ್ನ ಜ್ಞಾನದಿಂದ ಸಮಸ್ತ ಜನರ ಬಳಿಗೆ ಹೋದಳು. ಆಗ ಅವರು ಬಿಕ್ರಿಯ ಮಗ ಶೆಬನ ತಲೆಯನ್ನು ಕಡಿದು ಯೋವಾಬನ ಬಳಿ ಹಾಕಿದರು. ಅವನು ತುತೂರಿಯನ್ನು ಊದಿದ್ದರಿಂದ, ಅವರು ಪಟ್ಟಣದಿಂದ ಚದರಿ ಪ್ರತಿ ಮನುಷ್ಯನೂ ತಮ್ಮ ತಮ್ಮ ಮನೆಗಳಿಗೆ ಹೋದರು. ಯೋವಾಬನು ಯೆರೂಸಲೇಮಿನಲ್ಲಿರುವ ಅರಸನ ಬಳಿಗೆ ಹಿಂದಿರುಗಿ ಬಂದನು.
ದಾವೀದನ ಅಧಿಕಾರಿಗಳು
23 ಯೋವಾಬನು ಇಸ್ರಾಯೇಲಿನ ಸಮಸ್ತ ಸೈನ್ಯದ ಅಧಿಪತಿಯಾಗಿದ್ದನು.
ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು.
24 ಅದೋನೀರಾಮನು* ದಾಸರ ಮೇಲೆ ಉಸ್ತುವಾರಿ ವಹಿಸಿದ್ದನು.
ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
25 ಶೆವನು ಕಾರ್ಯದರ್ಶಿಯಾಗಿದ್ದನು.
ಚಾದೋಕನೂ ಅಬಿಯಾತರನೂ ಯಾಜಕರಾಗಿದ್ದರು.
26 ಯಾಯೀರಿನವನಾದ ಈರನೂ ದಾವೀದನ ಯಾಜಕನಾಗಿದ್ದನು.
* 20:24 20:24 ಅದೋನೀರಾಮನು ಅಥವಾ ಅದೋರಾಮ