7
ದಾವೀದನಿಗೆ ಯೆಹೋವ ದೇವರ ವಾಗ್ದಾನ
ಯೆಹೋವ ದೇವರು ಅರಸನ ಸುತ್ತಲಿದ್ದ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅರಸನು ವಿಶ್ರಾಂತಿಯಿಂದ ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ, ಒಂದು ದಿನ ಅರಸನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಆದರೆ ದೇವರ ಮಂಜೂಷವು ಗುಡಾರದಲ್ಲಿರುತ್ತದೆ,” ಎಂದನು.
ಆಗ ನಾತಾನನು ಅರಸನಿಗೆ, “ಆಗಲಿ ನಿನ್ನ ಹೃದಯದಲ್ಲಿ ಏನು ಇದೆಯೋ ಅದನ್ನು ಮಾಡು. ಏಕೆಂದರೆ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದನು.
ಅದೇ ರಾತ್ರಿಯಲ್ಲಿ ಯೆಹೋವ ದೇವರ ವಾಕ್ಯವು ನಾತಾನನಿಗೆ ಉಂಟಾಗಿ,
“ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ಯೆಹೋವ ದೇವರು ಹೇಳುವುದೇನೆಂದರೆ: ನಾನು ವಾಸವಾಗಿರುವುದಕ್ಕೆ ನೀನು ನನಗೆ ಆಲಯವನ್ನು ಕಟ್ಟಬೇಕೆಂದಿರುವೆಯೋ? ನಿಶ್ಚಯವಾಗಿ ನಾನು ಈಜಿಪ್ಟಿನಿಂದ ಇಸ್ರಾಯೇಲರನ್ನು ಬರಮಾಡಿದ ದಿವಸ ಮೊದಲುಗೊಂಡು ಇಂದಿನವರೆಗೂ ಆಲಯದಲ್ಲಿ ವಾಸಮಾಡದೆ ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆನು. ನಾನು ನನ್ನ ಜನರಾದ ಇಸ್ರಾಯೇಲರನ್ನು ಪರಿಪಾಲಿಸಲು ಆಜ್ಞಾಪಿಸಿದ ಇಸ್ರಾಯೇಲಿನ ಅಧಿಪತಿಗಳಲ್ಲಿ ಒಬ್ಬನ ಜೊತೆಯಾದರೂ, “ನೀವು ನನಗೆ ದೇವದಾರು ಮನೆಯನ್ನು ಏಕೆ ಕಟ್ಟಲಿಲ್ಲ,” ಎಂದು, ನಾನು ಸಮಸ್ತ ಇಸ್ರಾಯೇಲಿನ ಸಂಗಡ ಸಂಚರಿಸಿದ ಯಾವ ಸ್ಥಳದಲ್ಲಾದರೂ, ಯಾವಾಗಲಾದರೂ ಕೇಳಿದೆನೋ?’
“ಈಗ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, ‘ಸೇನಾಧೀಶ್ವರ ಯೆಹೋವ ದೇವರು ನಿನಗೆ ತಿಳಿಸುವುದೇನೆಂದರೆ: ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡು, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿರುವಂತೆ ನೇಮಿಸಿದೆನು. ನೀನು ಎಲ್ಲಿ ಹೋದರೂ, ಅಲ್ಲಿ ನಿನ್ನ ಸಂಗಡ ಇದ್ದು, ನಿನ್ನ ಶತ್ರುಗಳನ್ನೆಲ್ಲಾ ನಿನ್ನ ಮುಂದೆಯೇ ಸಂಹರಿಸಿದೆನು. ಭೂಮಿಯಲ್ಲಿರುವ ಮಹಾಪುರುಷರ ಹೆಸರಿನ ಹಾಗೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು. 10 ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಏರ್ಪಡಿಸಿ, ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಲೆಗೊಳಿಸುವೆನು. 11 ಪೂರ್ವಕಾಲದಲ್ಲಿ ನಾನು ನನ್ನ ಜನರಾದ ಇಸ್ರಾಯೇಲರ ಮೇಲೆ ನ್ಯಾಯಾಧಿಪತಿಗಳನ್ನು ನೇಮಿಸಿದ ಆ ದಿವಸದಿಂದ ಈಚೆಗೂ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಮೇಲೆ ಕುಗ್ಗಿಸದೆ ಇರುವರು.
“ ‘ನಿನ್ನನ್ನು, ನಿನ್ನ ಸಮಸ್ತ ಶತ್ರುಗಳಿಂದ ತಪ್ಪಿಸಿ, ನಿನಗೆ ವಿಶ್ರಾಂತಿಯನ್ನು ಉಂಟುಮಾಡುವೆನು. ಇದಲ್ಲದೆ ಯೆಹೋವ ದೇವರು ನಿನಗೆ ತಿಳಿಸುವುದೇನೆಂದರೆ, ನಾನು ನಿನ್ನ ರಾಜವಂಶವನ್ನು ಸ್ಥಿರಪಡಿಸುವೆನು. 12 ನಿನ್ನ ಆಯುಷ್ಕಾಲವು ಮುಗಿದ ಮೇಲೆ ನೀನು ನಿನ್ನ ಪಿತೃಗಳ ಜೊತೆ ವಿಶ್ರಮಿಸುವಾಗ, ನಾನು ನಿನ್ನ ಸಂತತಿಯಲ್ಲಿ ಒಬ್ಬನನ್ನು ನಿನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ಅವನ ರಾಜ್ಯವನ್ನು ಸ್ಥಿರಮಾಡುವೆನು. 13 ಅವನೇ ನನ್ನ ಹೆಸರಿಗಾಗಿ ದೇವಾಲಯನ್ನು ಕಟ್ಟುವನು. ನಾನು ಅವನ ರಾಜಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು. 14 ನಾನು ಆತನ ತಂದೆಯಾಗಿರುವೆನು. ಆತನು ನನಗೆ ಮಗನಾಗಿರುವನು. ಅವನು ಕೆಟ್ಟದ್ದನ್ನು ಮಾಡಿದರೆ, ನಾನು ಅವನನ್ನು ಮನುಷ್ಯರಿಂದ ಬೆಸುಗೆ ಹಾಕಿದ ಕೋಲಿನಿಂದಲೂ ಮನುಷ್ಯರ ಕೈಗಳಿಂದ ಹೊಡೆದ ಹೊಡೆತದಿಂದ ದಂಡಿಸುವೆನು. 15 ಆದರೆ ಸೌಲನ ಮೇಲಿದ್ದ ನನ್ನ ಪ್ರೀತಿಯನ್ನು ಹಿಂತೆಗೆದುಕೊಂಡ ಹಾಗೆ, ಎಂದಿಗೂ ಅವನಿಂದ ಹಿಂತೆಗೆಯುವುದಿಲ್ಲ. ನಾನು ಸೌಲನನ್ನು ನಿನ್ನ ಮುಂದೆಯೇ ಹೊರಡಿಸಿಬಿಟ್ಟೆನಲ್ಲಾ. 16 ನಿನ್ನ ಮನೆಯೂ ನಿನ್ನ ರಾಜ್ಯವೂ ನನ್ನ ಮುಂದೆ ಸದಾಕಾಲಕ್ಕೂ ಸ್ಥಿರವಾಗಿರುವವು. ನಿನ್ನ ಸಿಂಹಾಸನವು ಯುಗಯುಗಾಂತರಕ್ಕೂ ಶಾಶ್ವತವಾಗಿರುವುದು,’ ” ಎಂದು ಹೇಳಿದರು.
17 ನಾತಾನನು ಈ ಸಮಸ್ತ ಪ್ರಕಟಣೆಯ ಮಾತುಗಳನ್ನು ದಾವೀದನಿಗೆ ತಿಳಿಸಿದನು.
ದಾವೀದನ ಪ್ರಾರ್ಥನೆ
18 ಅನಂತರ ಅರಸನಾದ ದಾವೀದನು ಒಳಗೆ ಪ್ರವೇಶಿಸಿ, ಯೆಹೋವ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು,
“ಸಾರ್ವಭೌಮ ಯೆಹೋವ ದೇವರೇ, ನನ್ನಂಥವನಿಗೆ ನೀವು ಈ ಪದವಿಯನ್ನು ಅನುಗ್ರಹಿಸಿ, ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು? 19 ಸಾರ್ವಭೌಮ ಯೆಹೋವ ದೇವರೇ, ಇದು ನಿಮ್ಮ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದರೂ ನೀವು ನಿಮ್ಮ ಸೇವಕನ ಸಂತಾನದ ಭವಿಷ್ಯದ ಕುರಿತೂ ವಾಗ್ದಾನಮಾಡಿರುವಿರಿ. ಸಾರ್ವಭೌಮ ಯೆಹೋವ ದೇವರೇ, ಇದು ನೀವು ಮನುಷ್ಯನೊಂದಿಗೆ ವರ್ತಿಸುವ ಕ್ರಮ.
20 “ದಾವೀದನು ಇನ್ನೂ ಹೆಚ್ಚಾಗಿ ಹೇಳಿಕೊಳ್ಳುವುದೇನಿದೆ? ಏಕೆಂದರೆ ನೀವು ನಿಮ್ಮ ಸೇವಕನನ್ನು ಚೆನ್ನಾಗಿ ಬಲ್ಲಿರಿ; ಓ ಸಾರ್ವಭೌಮ ಯೆಹೋವ ದೇವರೇ, 21 ನಿಮ್ಮ ವಾಕ್ಯದ ನಿಮಿತ್ತವಾಗಿಯೂ ನಿಮ್ಮ ಚಿತ್ತಾನುಸಾರವಾಗಿಯೂ ನಿಮ್ಮ ಸೇವಕನಿಗೆ ತಿಳಿಯಪಡಿಸುವ ಹಾಗೆ ಈ ಮಹಾಕಾರ್ಯಗಳನ್ನೆಲ್ಲಾ ಮಾಡಿದಿರಿ.
22 “ಸಾರ್ವಭೌಮ ಯೆಹೋವ ದೇವರೇ, ನೀವು ಮಹೋನ್ನತರಾಗಿದ್ದೀರಿ. ನಮ್ಮ ಕಿವಿಗಳಿಂದ ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿಮ್ಮ ಹಾಗೆ ಯಾರೂ ಇಲ್ಲ; ನಿಮ್ಮ ಹೊರತು ದೇವರು ಯಾರೂ ಇಲ್ಲ. 23 ಭೂಲೋಕದಲ್ಲಿ ನಿಮ್ಮ ಜನರಾದ ಇಸ್ರಾಯೇಲರಿಗೆ ಸಮಾನವಾದ ಜನಾಂಗ ಯಾವುದು? ನೀವೇ ಹೋಗಿ ಅವರನ್ನು ಸ್ವಜನರಾಗಿ ವಿಮೋಚಿಸಿ ನಿಮ್ಮ ಹೆಸರನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟಿನಿಂದ ವಿಮೋಚಿಸಿ ತಂದ ನಿಮ್ಮ ಪ್ರಜೆಗಳ ಎದುರಿನಿಂದ ಜನಾಂಗಗಳನ್ನು ಮತ್ತು ಅವರ ದೇವರುಗಳನ್ನು ಓಡಿಸುವ ಮೂಲಕ ವಿಸ್ಮಯಕರವಾದ ಮಹಾ ಅದ್ಭುತಗಳನ್ನು ಮಾಡಿದ್ದೀರಲ್ಲವೇ? 24 ದೇವರಾದ ಯೆಹೋವ ದೇವರೇ, ಇಸ್ರಾಯೇಲ್ ಜನರನ್ನು ಶಾಶ್ವತವಾಗಿ ನಿಮ್ಮ ಸ್ವಂತ ಜನರಾಗಿ ಇರುವ ಹಾಗೆ ಸ್ಥಿರಪಡಿಸಿದಿರಿ; ಯೆಹೋವ ದೇವರೇ, ನೀವೇ ಅವರಿಗೆ ದೇವರಾದಿರಿ.
25 “ಈಗ ದೇವರಾದ ಯೆಹೋವ ದೇವರೇ, ನೀವು ನಿಮ್ಮ ಸೇವಕನನ್ನು ಕುರಿತೂ, ಅವನ ಕುಟುಂಬವನ್ನು ಕುರಿತೂ ಮಾಡಿದ ವಾಗ್ದಾನವನ್ನು ನೆರವೇರಿಸಿ ಅದನ್ನು ಶಾಶ್ವತವಾಗಿ ಸ್ಥಿರಪಡಿಸಿರಿ. 26 ಹೀಗೆ ನಿಮ್ಮ ಹೆಸರು ಎಂದೆಂದಿಗೂ ಶ್ರೇಷ್ಠವಾಗಿರುತ್ತದೆ. ಆಗ ಜನರು, ‘ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲರ ದೇವರು,’ ಎಂದು ಹೇಳುವರು. ಇದಲ್ಲದೆ ನಿಮ್ಮ ಸೇವಕನಾದ ದಾವೀದನ ಮನೆಯು ನಿಮ್ಮ ಮುಂದೆ ಸ್ಥಿರವಾಗಿರುವುದು.
27 “ಸೇನಾಧೀಶ್ವರ ಯೆಹೋವ ದೇವರೇ, ಇಸ್ರಾಯೇಲಿನ ದೇವರೇ, ‘ನಾನು ನಿಮಗೆ ಮನೆಯನ್ನು ಕಟ್ಟುವೆನೆಂದು’ ನಿಮ್ಮ ಸೇವಕನಿಗೆ ಪ್ರಕಟ ಮಾಡಿದ್ದರಿಂದ, ನಿಮ್ಮನ್ನು ಕುರಿತು ಈ ಪ್ರಾರ್ಥನೆಯನ್ನು ಪ್ರಾರ್ಥಿಸುವುದಕ್ಕೆ ನಿಮ್ಮ ಸೇವಕನ ಹೃದಯದಲ್ಲಿ ಧೈರ್ಯ ಉಂಟಾಯಿತು. 28 ಸಾರ್ವಭೌಮ ಯೆಹೋವ ದೇವರೇ, ನಿಮ್ಮ ವಾಕ್ಯಗಳು ಸತ್ಯವಾದದ್ದು. ನಿಮ್ಮ ಸೇವಕನಿಗೆ ಈ ಒಳ್ಳೆಯ ಸಂಗತಿಗಳನ್ನು ವಾಗ್ದಾನಮಾಡಿದ ನೀವು ದೇವರಾಗಿದ್ದೀರಿ. 29 ಆದಕಾರಣ ಈಗ ನಿಮ್ಮ ಸೇವಕನ ಮನೆಯು ನಿಮ್ಮ ಮುಂದೆ ಶಾಶ್ವತವಾಗಿ ಇರುವ ಹಾಗೆ ಅದನ್ನು ಆಶೀರ್ವದಿಸಲು ಸಂತೋಷಪಡಿರಿ. ಸಾರ್ವಭೌಮ ಯೆಹೋವ ದೇವರೇ, ಅದನ್ನು ಹೇಳಿದವರು ನೀವೇ; ನಿಮ್ಮ ಆಶೀರ್ವಾದದಿಂದ ನಿಮ್ಮ ಸೇವಕನ ಮನೆಯಲ್ಲಿ ನಿತ್ಯವೂ ಸೌಭಾಗ್ಯವಿರಲಿ.”