6
ದೇವರ ನಾಮವೂ ನಮ್ಮ ಬೋಧನೆಯೂ ದೂಷಣೆಗೆ ಗುರಿಯಾಗದಂತೆ ದಾಸತ್ವದ ನೊಗ ಹೊತ್ತಿರುವವರು ತಮ್ಮ ಸ್ವಂತ ಯಜಮಾನರನ್ನು ಪೂರ್ಣ ಗೌರವಕ್ಕೆ ಯೋಗ್ಯರೆಂದೆಣಿಸಲಿ. ವಿಶ್ವಾಸಿಗಳಾದ ಯಜಮಾನರಿರುವವರು ಆ ಯಜಮಾನರು ಸಹೋದರನಾಗಿರುವುದರಿಂದ ಅವರನ್ನು ತಾತ್ಸಾರ ಮಾಡದಿರಲಿ. ಏಕೆಂದರೆ ತಮ್ಮ ಸೇವೆಯಿಂದ ಲಾಭ ಹೊಂದುವವರು ವಿಶ್ವಾಸಿಗಳು ಮತ್ತು ತಮಗೆ ಪ್ರಿಯರಾಗಿದ್ದಾರೆ ಎಂದು ತಿಳಿದು ಅವರಿಗೆ ಉತ್ತಮ ಸೇವೆಮಾಡಲಿ. ಇವುಗಳನ್ನು ಅವರಿಗೆ ಬೋಧಿಸಿ ಎಚ್ಚರಿಸು.
ಸುಳ್ಳು ಬೋಧಕರು ಹಾಗೂ ಹಣದಾಶೆ
ಯಾವನಾದರೂ ಬೇರೆ ವಿಧವಾದ ಉಪದೇಶವನ್ನು ಮಾಡಿ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶುದ್ಧವಾದ ಮಾತುಗಳಿಗೂ ಭಕ್ತಿಗೆ ಅನುಸಾರವಾದ ಬೋಧನೆಗೂ ಸಮ್ಮತಿಸದೆ ಹೋದರೆ, ಅಂಥವರು ಅಹಂಕಾರಿಯೂ ವಿವೇಕರಹಿತನಾಗಿದ್ದಾರೆ. ಅವರು ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯಪಡುವ ಭ್ರಾಂತರಾಗಿ ಸತ್ಯವನ್ನು ಬಿಟ್ಟು, ಕುತರ್ಕ ವಾಗ್ವಾದಗಳನ್ನು ಮಾಡುವವರಾಗಿದ್ದಾರೆ. ಹೀಗೆ ಅನಾರೋಗ್ಯಕರವಾದ ವಿವಾದಗಳನ್ನೂ ಕೆಲವು ಮಾತುಗಳ ಕುರಿತಾಗಿರುವ ತರ್ಕಗಳನ್ನೂ ಸೃಷ್ಟಿಸುವ ಪ್ರಸಿದ್ಧರಾಗಿದ್ದಾರೆ. ಅಂಥವರು ದೇವಭಕ್ತಿಯನ್ನು ಆರ್ಥಿಕ ಲಾಭವನ್ನಾಗಿ ಭಾವಿಸುವವರಾಗಿದ್ದಾರೆ.
ಸಂತೃಪ್ತಿಯೊಂದಿಗಿರುವ ದೇವಭಕ್ತಿಯೇ ದೊಡ್ಡ ಲಾಭವು. ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬರಲಿಲ್ಲ. ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು. ಆದರೆ ಅನ್ನವಸ್ತ್ರಗಳು ನಮಗಿರುವುದಾದರೆ, ನಾವು ಅದರಲ್ಲಿ ತೃಪ್ತರಾಗಿರೋಣ. ಆದರೆ ಐಶ್ವರ್ಯವಂತರಾಗಬೇಕೆಂದು ಬಯಸುವವರು ಶೋಧನೆಯಲ್ಲಿಯೂ ಉರುಲಿನಲ್ಲಿಯೂ ಬಿದ್ದು ಅನೇಕ ಬುದ್ಧಿಹೀನವಾದ ಹಾಗೂ ಹಾನಿಕರವಾದ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ವಿನಾಶನಗಳಲ್ಲಿ ಮುಳುಗಿಸುತ್ತವೆ. 10 ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಬೇರಾಗಿದೆ. ಕೆಲವರು ಹಣಕ್ಕಾಗಿ ಆತುರಪಟ್ಟು ನಂಬಿಕೆಯಿಂದ ದೂರಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.
ತಿಮೊಥೆಗೆ ಪೌಲನ ಅಪ್ಪಣೆ
11 ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ಓಡಿಹೋಗು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತ್ವ ಇವುಗಳನ್ನು ಹಿಂಬಾಲಿಸು. 12 ವಿಶ್ವಾಸದ ಒಳ್ಳೆಯ ಹೋರಾಟವನ್ನು ಮಾಡು. ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ದೇವರು ನಿನ್ನನ್ನು ಕರೆದಿದ್ದಾರೆ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಅರಿಕೆಯನ್ನು ಮಾಡಿದ್ದೀಯಲ್ಲಾ? 13 ಎಲ್ಲಕ್ಕೂ ಜೀವ ನೀಡುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಒಳ್ಳೆಯ ಅರಿಕೆಯನ್ನು ಸಾಕ್ಷಿಯಾಗಿ ನೀಡಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳವುದೇನೆಂದರೆ: 14 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು. 15 ರಾಜಾಧಿರಾಜನೂ ಕರ್ತರ ಕರ್ತನೂ ಭಾಗ್ಯವಂತರಾದ ಏಕಾಧಿಪತಿಯು ತಮ್ಮ ಸಮಯಗಳಲ್ಲೆ ಕ್ರಿಸ್ತ ಯೇಸುವನ್ನು ಪ್ರತ್ಯಕ್ಷಪಡಿಸುವರು. 16 ದೇವರೊಬ್ಬರೇ ಅಮರತ್ವವುಳ್ಳವರೂ ಯಾರೂ ಸಮೀಪಿಸಲಾರದ ಬೆಳಕಿನಲ್ಲಿ ವಾಸಿಸುವವರೂ ಆಗಿದ್ದಾರೆ. ಯಾವ ಮನುಷ್ಯನೂ ದೇವರನ್ನು ಕಾಣಲಿಲ್ಲ. ಯಾರೂ ಕಾಣಲಾರರು. ದೇವರಿಗೆ ಮಾನವೂ ಬಲವೂ ಸದಾಕಾಲಕ್ಕೂ ಇರಲಿ. ಆಮೆನ್.
17 ಈ ಲೋಕದಲ್ಲಿ ಅಹಂಕಾರಿಗಳಾಗಿರದೆ, ಅಸ್ತಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಸುಖಕ್ಕೋಸ್ಕರ ಎಲ್ಲವನ್ನೂ ಸಮೃದ್ಧಿಯಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು ಐಶ್ವರ್ಯವಂತರಿಗೆ ಆಜ್ಞಾಪಿಸು. 18 ಅಂಥವರು ಒಳ್ಳೆಯದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲು ಕೊಡುವುದರಲ್ಲಿ ಸಿದ್ಧರಾಗಿರುವವರೂ ಪರೋಪಕಾರ ಮಾಡುವವರೂ ಆಗಿರಬೇಕೆಂದು ಅವರನ್ನು ಪ್ರಬೋಧಿಸು. 19 ಹೀಗೆ ಮುಂದಿನ ಕಾಲಕ್ಕೆ ಯಥಾರ್ಥ ಜೀವವಾಗಿರುವ ನಿತ್ಯಜೀವವನ್ನು ಹಿಡಿದುಕೊಳ್ಳುವಂತೆ ತಮಗೋಸ್ಕರ ಸ್ಥಿರವಾದ ಅಸ್ತಿವಾರಕ್ಕಾಗಿ ನಿಕ್ಷೇಪಗಳನ್ನು ಕೂಡಿಸಿಟ್ಟುಕೊಳ್ಳಲಿ.
20 ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ಸುಳ್ಳು ತರ್ಕಗಳಿಗೂ ಒಳಪಡದಿರು. 21 ಕೆಲವರು ಇಂಥವುಗಳಿಗೆ ಒಳಪಟ್ಟು ನಂಬಿಕೆಯಿಂದ ಗುರಿತಪ್ಪಿ ಹೋಗಿದ್ದಾರೆ.
 
 
ಕೃಪೆಯು ನಿಮ್ಮೊಂದಿಗಿರಲಿ.