ಚೆಫನ್ಯ
1
ಯೆಹೂದದ ಅರಸನಾದ ಆಮೋನನ ಮಗನಾದ ಯೋಷೀಯನ ಕಾಲದಲ್ಲಿ ಕೂಷಿಯ ಮಗನೂ ಗೆದಲ್ಯನ ಮೊಮ್ಮಗನೂ ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವ ದೇವರು ದಯಪಾಲಿಸಿದ ವಾಕ್ಯ:
 
ಯೆಹೋವ ದೇವರ ದಿನದಂದು ಇಡೀ ಭೂಮಿಯ ಮೇಲೆ ತೀರ್ಪು
ಯೆಹೋವ ದೇವರು ಹೇಳುವುದೇನೆಂದರೆ,
“ನಾನು ದೇಶದೊಳಗಿಂದ ಎಲ್ಲವುಗಳನ್ನು
ಸಂಪೂರ್ಣವಾಗಿ ನಾಶಮಾಡುವೆನು.”
“ಮನುಷ್ಯರನ್ನೂ ಮೃಗಗಳನ್ನೂ ನಾಶಮಾಡುವೆನು.
ಆಕಾಶದ ಪಕ್ಷಿಗಳನ್ನೂ
ಸಮುದ್ರದ ಮೀನುಗಳನ್ನೂ ನಾಶಮಾಡುವೆನು.”
 
“ಮನುಷ್ಯರನ್ನು ದೇಶದೊಳಗಿಂದ ಕಡಿದು ಬಿಡುವಾಗ
ದುಷ್ಟರಿಗೆ ಉಳಿಯುವುದು ಕಸದರಾಶಿಯೇ,”
ಎಂದು ಯೆಹೋವ ದೇವರು ಹೇಳುತ್ತಾರೆ.
“ಯೆಹೂದದ ಮೇಲೆಯೂ ಯೆರೂಸಲೇಮಿನ
ಎಲ್ಲಾ ನಿವಾಸಿಗಳ ಮೇಲೆಯೂ ನನ್ನ ಕೈಚಾಚುವೆನು.
ಈ ಸ್ಥಳದಲ್ಲಿ ಬಾಳನ ಪೂಜೆಗಳನ್ನು
ಮತ್ತು ಉಳಿದಿರುವ ವಿಗ್ರಹಾರಾಧಕ ಯಾಜಕರ
ಹೆಸರುಗಳನ್ನು ತೆಗೆದುಬಿಡುವೆನು.
ಮಾಳಿಗೆಗಳ ಮೇಲೆ ತಲೆಬಾಗಿಸಿ
ಆಕಾಶದ ನಕ್ಷತ್ರಗಣಕ್ಕೆ
ಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂ
ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ
ಯೆಹೋವ ದೇವರನ್ನು ಅನುಸರಿಸದೆ ಹಿಂತಿರುಗಿ ಹೋಗುವವರನ್ನು
ಯೆಹೋವ ದೇವರನ್ನು ಹುಡುಕದೆಯೂ ವಿಚಾರಿಸದೆಯೂ ಇರುವವರನ್ನೂ ಕಡಿದುಬಿಡುವೆನು.”
 
ಸಾರ್ವಭೌಮ ಯೆಹೋವ ದೇವರ ಮುಂದೆ ಮೌನವಾಗಿರಿ.
ಏಕೆಂದರೆ ಯೆಹೋವ ದೇವರ ದಿನವು ಸಮೀಪವಾಗಿದೆ.
ಯೆಹೋವ ದೇವರು ಯಜ್ಞವನ್ನು ಸಿದ್ಧಮಾಡಿದ್ದಾರೆ.
ಅವರು ಆಮಂತ್ರಿಸಿದವರನ್ನು ಅವರು ಪವಿತ್ರೀಕರಿಸಿದ್ದಾರೆ.
 
ಯೆಹೋವ ದೇವರ ಯಜ್ಞದ ದಿನದಲ್ಲಿ
ನಾನು ಪ್ರಧಾನರನ್ನು, ರಾಜಪುತ್ರರನ್ನು
ಮತ್ತು ವಿದೇಶಿಯರ ಉಡುಪನ್ನು ತೊಟ್ಟುಕೊಳ್ಳುವವರೆಲ್ಲರನ್ನೂ ದಂಡಿಸುವೆನು.
ಆ ದಿನದಲ್ಲಿ
ಹೊಸ್ತಿಲನ್ನು ದಾಟುವವರೆಲ್ಲರನ್ನೂ
ತಮ್ಮ ದೇವರುಗಳ ಆಲಯಗಳನ್ನು
ಹಿಂಸಾಚಾರದಿಂದಲೂ ಮೋಸದಿಂದಲೂ ತುಂಬಿಸುವವರನ್ನೂ ದಂಡಿಸುವೆನು.
 
10 “ಆ ದಿನದಲ್ಲಿ,
ಮೀನಿನ ಬಾಗಿಲಿನಿಂದ ಕೂಗಿನ ಶಬ್ದವೂ
ಹೊಸ ಮನೆಯಿಂದ ಗೋಳಾಟವೂ
ಗುಡ್ಡಗಳ ಕಡೆಯಿಂದ ಮುರಿಯುವ ಬಲವಾದ ಶಬ್ದವೂ ಕೇಳಿಬರುವುದು, ಎಂದು
ಯೆಹೋವ ದೇವರು ಹೇಳುತ್ತಾರೆ.
11 ಮಾರುಕಟ್ಟೆಗಳ ಜಿಲ್ಲೆಯಲ್ಲಿ ವಾಸಿಸುವವರೇ,
ಗೋಳಾಡಿರಿ. ಏಕೆಂದರೆ ವರ್ತಕರ ಜನರೆಲ್ಲಾ ಸಂಹಾರವಾದರು.
ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.
12 ಆ ಕಾಲದಲ್ಲಿ, ನಾನು ಯೆರೂಸಲೇಮನ್ನು ದೀಪಗಳಿಂದ ಹುಡುಕಿಬಿಡುವೆನು.
‘ಯೆಹೋವ ದೇವರು ಒಳ್ಳೆಯದನ್ನಾದರೂ ಕೆಟ್ಟದ್ದನ್ನಾದರೂ ಮಾಡುವುದಿಲ್ಲ’ ಎಂದುಕೊಂಡು
ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ
ಸಮಾನರಾದ ಜನರನ್ನೂ ದಂಡಿಸುವೆನು.
13 ಆದ್ದರಿಂದ ಅವರ ಸಂಪತ್ತು ಕೊಳ್ಳೆಯಾಗುವುದು,
ಅವರ ಮನೆಗಳು ಹಾಳಾಗುವುವು.
ಅವರು ಮನೆಗಳನ್ನು ಕಟ್ಟಿಕೊಂಡರೂ
ಅವುಗಳಲ್ಲಿ ವಾಸಮಾಡರು.
ದ್ರಾಕ್ಷಿತೋಟಗಳನ್ನು ನೆಟ್ಟು
ಅವುಗಳ ರಸವನ್ನು ಕುಡಿಯರು.”
 
14 ಯೆಹೋವ ದೇವರ ಮಹಾದಿವಸವು ಸಮೀಪವಾಗಿದೆ,
ಬಹು ತ್ವರೆಯಾಗಿ ಬರುತ್ತಿದೆ.
ಕೇಳಿರಿ. ಯೆಹೋವ ದೇವರ ದಿನದಂದು ಕೂಗು ಕಹಿಯಾಗಿರುವುದು.
ಶೂರನು ಅಲ್ಲಿ ಬೊಬ್ಬೆ ಹಾಕುವನು.
15 ಆ ದಿವಸವು ರೌದ್ರದ ದಿವಸವು,
ಇಕ್ಕಟ್ಟು ಸಂಕಟಗಳ ದಿವಸವು,
ಹಾಳುಪಾಳುಗಳ ದಿವಸವು,
ಕತ್ತಲೆ ಮಬ್ಬುಗಳ ದಿವಸವು,
ಕಾರ್ಮುಗಿಲ ಕಗ್ಗತ್ತಲ ದಿವಸವು,
16 ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂ
ಉನ್ನತವಾದ ಗೋಪುರಗಳಿಗೆ
ವಿರೋಧವಾಗಿಯೂ ತುತೂರಿ ಆರ್ಭಟಗಳ ದಿವಸವು.
 
17 “ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು.
ಅವರು ಕುರುಡರ ಹಾಗೆ ತಡಕುವರು.
ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ.
ಅವರ ರಕ್ತವು ಧೂಳಿನಂತೆಯೂ
ಅವರ ಮಾಂಸವು ಗೊಬ್ಬರದಂತೆಯೂ ಸುರಿದಿರುವುದು.
18 ಯೆಹೋವ ದೇವರ ರೌದ್ರದಿನದಂದು
ಅವರ ಬೆಳ್ಳಿಯಾದರೂ ಅವರ ಬಂಗಾರವಾದರೂ
ಅವರನ್ನು ರಕ್ಷಿಸಲಾರವು.”
 
ಅವರ ಅಸೂಯೆಯ ಬೆಂಕಿಯು
ದೇಶವನ್ನೆಲ್ಲಾ ನುಂಗುವುದು.
ಏಕೆಂದರೆ ದೇಶದ ನಿವಾಸಿಗಳನ್ನೆಲ್ಲಾ
ಬೇಗ ನಿರ್ಮೂಲ ಮಾಡಿಬಿಡುವರು.