5
ಅನನೀಯ ಮತ್ತು ಸಪ್ಫೈರ
ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಆಸ್ತಿಯ ಒಂದು ಭಾಗವನ್ನು ಮಾರಿದನು. ತನ್ನ ಹೆಂಡತಿಯ ಪೂರ್ಣ ತಿಳುವಳಿಕೆಯಿಂದ, ಬಂದ ಹಣದಲ್ಲಿ ಒಂದು ಭಾಗವನ್ನು ತನಗಾಗಿ ಇಟ್ಟುಕೊಂಡು, ಉಳಿದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿಟ್ಟನು.
ಆದರೆ ಪೇತ್ರನು, “ಅನನೀಯಾ, ಪವಿತ್ರಾತ್ಮ ದೇವರಿಗೆ ಸುಳ್ಳು ಹೇಳುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿಸಿದ್ದು ಏಕೆ? ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಒಂದು ಭಾಗವನ್ನು ಇಟ್ಟುಕೊಂಡದ್ದೇಕೆ? ಮಾರುವುದಕ್ಕಿಂತ ಮೊದಲು ಅದು ನಿನ್ನ ಅಧೀನದಲ್ಲಿತ್ತಲ್ಲವೇ? ಮಾರಿದ ನಂತರವೂ ಆ ಹಣ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ಇಂಥ ಕಾರ್ಯ ಮಾಡಲು ನಿನ್ನ ಹೃದಯದಲ್ಲಿ ಯೋಚನೆ ಬಂದದ್ದು ಏಕೆ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ, ದೇವರಿಗೇ,” ಎಂದು ನುಡಿದನು.
ಇದನ್ನು ಅನನೀಯನು ಕೇಳಿಸಿಕೊಂಡಾಗ, ಕೆಳಗೆ ಬಿದ್ದು ಸತ್ತುಹೋದನು. ನಡೆದ ಸಂಗತಿಯನ್ನು ಕೇಳಿದವರೆಲ್ಲರಿಗೂ ಮಹಾ ಭಯವು ಉಂಟಾಯಿತು. ಆಗ ಯುವಕರು ಬಂದು ಅವನ ಶವವನ್ನು ಬಟ್ಟೆಯಲ್ಲಿ ಸುತ್ತಿ, ಹೊತ್ತುಕೊಂಡು ಹೋಗಿ ಹೂಣಿಟ್ಟರು.
ಏನು ಸಂಭವಿಸಿತೆಂಬುದನ್ನು ತಿಳಿಯದೆ, ಸುಮಾರು ಮೂರು ತಾಸುಗಳ ನಂತರ ಅವನ ಹೆಂಡತಿ ಒಳಗೆ ಪ್ರವೇಶಿಸಿದಳು. ಆಗ ಪೇತ್ರನು, “ನನಗೆ ಹೇಳು ನೀನು ಮತ್ತು ನಿನ್ನ ಗಂಡ ಅನನೀಯನು ಆಸ್ತಿಯನ್ನು ಮಾರಿದ್ದರಿಂದ ಬಂದ ಹಣ ಇಷ್ಟೆಯೋ?” ಎಂದು ಆಕೆಯನ್ನು ಕೇಳಲು,
“ಹೌದು, ಅಷ್ಟೇ ಕ್ರಯ ಬಂದಿತು,” ಎಂದಳು.
“ನೀವಿಬ್ಬರೂ ಕರ್ತದೇವರ ಆತ್ಮವನ್ನು ಪರೀಕ್ಷಿಸಲು ಒಪ್ಪಿಕೊಂಡದ್ದೇಕೆ? ಇಗೋ! ನಿನ್ನ ಗಂಡನ ಶವವನ್ನು ಹೂಣಿಟ್ಟು ಬಂದವರು ಬಾಗಿಲ ಬಳಿಯಲ್ಲೇ ಇದ್ದಾರೆ. ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು,” ಎಂದು ಆಕೆಗೆ ಪೇತ್ರನು ಹೇಳಿದನು.
10 ಆ ಕ್ಷಣದಲ್ಲಿಯೇ ಆಕೆ ಅವನ ಪಾದಗಳ ಬಳಿಯಲ್ಲಿ ಬಿದ್ದು ಸತ್ತುಹೋದಳು. ಆಗ ಯುವಕರು ಒಳಗೆ ಬಂದು ಆಕೆ ಸತ್ತು ಹೋಗಿರುವುದನ್ನು ಕಂಡು, ಆಕೆಯ ಶವವನ್ನು ಹೊತ್ತುಕೊಂಡು ಹೋಗಿ ಆಕೆಯ ಗಂಡನ ಪಕ್ಕದಲ್ಲಿಯೇ ಸಮಾಧಿಮಾಡಿದರು. 11 ಇಡೀ ಸಭೆಗೂ ಈ ಘಟನೆಗಳ ಬಗ್ಗೆ ಕೇಳಿದವರಿಗೂ ಮಹಾ ಭಯವು ಉಂಟಾಯಿತು.
ಅಪೊಸ್ತಲರು ಅನೇಕರನ್ನು ಗುಣಪಡಿಸಿದ್ದು
12 ಜನರ ಮಧ್ಯದಲ್ಲಿ ಅಪೊಸ್ತಲರಿಂದ ಅನೇಕ ಸೂಚಕಕಾರ್ಯಗಳೂ ಅದ್ಭುತಕಾರ್ಯಗಳೂ ನಡೆದವು. ಅವರೆಲ್ಲರೂ ಒಂದೇ ಮನಸ್ಸುಳ್ಳವರಾಗಿ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳದಲ್ಲಿ ಸೇರುತ್ತಿದ್ದರು. 13 ಅವರೆಲ್ಲರೂ ಜನರಿಂದ ಬಹಳ ಗೌರವಕ್ಕೆ ಪಾತ್ರರಾಗಿದ್ದರೂ ಬೇರೆಯವರು ಅವರ ಜೊತೆ ಸೇರಲು ಧೈರ್ಯಗೊಳ್ಳಲಿಲ್ಲ. 14 ಆದರೂ ಹೆಚ್ಚು ಜನ ಪುರುಷರೂ ಸ್ತ್ರೀಯರೂ ಕರ್ತ ದೇವರಲ್ಲಿ ವಿಶ್ವಾಸವನ್ನಿಟ್ಟು ಅವರ ಜೊತೆ ಸೇರಿಕೊಂಡರು. ಅವರು ವಿಶ್ವಾಸಿಗಳ ಸಂಖ್ಯೆಯಲ್ಲಿ ಸೇರಿದರು. 15 ಇದರ ಪರಿಣಾಮವಾಗಿ, ಪೇತ್ರನು ಬೀದಿಗಳಲ್ಲಿ ಹಾದುಹೋಗುತ್ತಿದ್ದಾಗ ಅವನ ನೆರಳು ಕೆಲವರ ಮೇಲಾದರೂ ಬೀಳಲೆಂದು ಜನರು ತಮ್ಮಲ್ಲಿ ಅಸ್ವಸ್ಥತೆಯಿದ್ದವರನ್ನು ಹಾಸಿಗೆ ಮತ್ತು ಡೋಲಿಗಳ ಸಮೇತ ತಂದು ಬೀದಿಗಳಲ್ಲಿ ಮಲಗಿಸುತ್ತಿದ್ದರು. 16 ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳಿಂದ ಜನರ ಗುಂಪುಗಳು ತಮ್ಮಲ್ಲಿ ಅಸ್ವಸ್ಥರಾದವರನ್ನೂ ಅಶುದ್ಧಾತ್ಮ ಪೀಡಿತರನ್ನೂ ಕರೆದುಕೊಂಡು ಬರುತ್ತಿದ್ದರು. ಬಂದವರೆಲ್ಲರೂ ಸ್ವಸ್ಥರಾಗುತ್ತಿದ್ದರು.
ಅಪೊಸ್ತಲರಿಗಾದ ಹಿಂಸೆ
17 ಹೀಗಿರಲು ಮಹಾಯಾಜಕನೂ ಅವನ ಬಳಿಯಲ್ಲಿದ್ದ ಸದ್ದುಕಾಯರೆಲ್ಲರೂ ಬಹಳ ಅಸೂಯೆಪಟ್ಟರು. 18 ಅವರು ಅಪೊಸ್ತಲರನ್ನು ಬಂಧಿಸಿ ಸಾರ್ವಜನಿಕ ಸೆರೆಮನೆಯಲ್ಲಿ ಹಾಕಿಸಿದರು. 19 ಆದರೆ ರಾತ್ರಿಯಲ್ಲಿ ಕರ್ತದೇವರ ದೂತನೊಬ್ಬನು ಸೆರೆಮೆನೆಯ ದ್ವಾರಗಳನ್ನು ತೆರೆದು ಅವರನ್ನು ಹೊರಗೆ ನಡೆಸಿಕೊಂಡು ಬಂದು, 20 “ಹೋಗಿರಿ, ದೇವಾಲಯದ ಅಂಗಳದಲ್ಲಿ ನಿಂತುಕೊಂಡು, ಈ ಜೀವವಾಕ್ಯಗಳನ್ನೆಲ್ಲಾ ಜನರಿಗೆ ಬೋಧಿಸಿರಿ,” ಎಂದು ಹೇಳಿದನು.
21 ಪ್ರಾತಃಕಾಲದಲ್ಲಿ ಅವರು ತಮಗೆ ಹೇಳಿದಂತೆಯೇ ದೇವಾಲಯವನ್ನು ಪ್ರವೇಶಿಸಿ ಜನರಿಗೆ ಬೋಧಿಸಲು ಪ್ರಾರಂಭಿಸಿದರು.
ಮಹಾಯಾಜಕನು ಮತ್ತು ಅವನೊಂದಿಗಿದ್ದವರು ಕೂಡಿಬಂದಾಗ, ನ್ಯಾಯಸಭೆಯನ್ನೂ ಇಸ್ರಾಯೇಲರ ಹಿರಿಯರ ಪೂರ್ಣಮಂಡಳಿಯನ್ನೂ ಕೂಡಿಸಿ, ಸೆರೆಮನೆಯಿಂದ ಅಪೊಸ್ತಲರನ್ನು ಕರೆಕಳುಹಿಸಿದರು. 22 ಆದರೆ ಅಧಿಕಾರಿಗಳು ಸೆರೆಮನೆಗೆ ಬಂದಾಗ, ಅಪೊಸ್ತಲರು ಸೆರೆಮನೆಯಲ್ಲಿ ಇರಲಿಲ್ಲ. ಇವರು ಹಿಂತಿರುಗಿ ಹೋಗಿ, 23 “ಸೆರೆಮನೆಯ ಬಾಗಿಲುಗಳು ಭದ್ರಪಡಿಸಿರುವುದನ್ನೂ ದ್ವಾರಗಳ ಬಳಿ ಕಾವಲುಗಾರರು ನಿಂತಿರುವುದನ್ನೂ ಕಂಡೆವು. ಆದರೆ ದ್ವಾರಗಳನ್ನು ನಾವು ತೆರೆದಾಗ ಒಳಗೆ ಯಾರೂ ಇರಲಿಲ್ಲ,” ಎಂದು ವರದಿಮಾಡಿದರು. 24 ಈ ವರದಿಯನ್ನು ಕೇಳಿದಾಗ, ದೇವಾಲಯದ ಕಾವಲುಗಾರರ ದಳಪತಿಯೂ ಮುಖ್ಯಯಾಜಕರೂ ಇದರಿಂದ ಏನಾಗುವುದೋ ಎಂದು ಕಳವಳಪಟ್ಟರು.
25 ಆಗ ಯಾರೋ ಒಬ್ಬನು ಬಂದು, “ನೋಡಿರಿ! ನೀವು ಸೆರೆಮನೆಯಲ್ಲಿ ಬಂಧಿಸಿಟ್ಟಿದ್ದ ಆ ಪುರುಷರು ದೇವಾಲಯದ ಅಂಗಳದಲ್ಲಿ ನಿಂತುಕೊಂಡು ಜನರಿಗೆ ಬೋಧಿಸುತ್ತಿದ್ದಾರೆ,” ಎಂದು ವರದಿ ಮಾಡಿದನು. 26 ಆಗ ದಳಪತಿಯು ತನ್ನ ಅಧಿಕಾರಿಗಳೊಂದಿಗೆ ಹೋಗಿ ಅಪೊಸ್ತಲರನ್ನು ಕರೆದುಕೊಂಡು ಬಂದನು. ಜನರು ತಮಗೆ ಕಲ್ಲೆಸೆದಾರೆಂಬ ಭಯ ಅವರಿಗಿದ್ದುದರಿಂದ ಅಪೊಸ್ತಲರನ್ನು ಬಲವಂತಮಾಡದೆ ಕರೆದುಕೊಂಡು ಬಂದನು.
27 ಅಪೊಸ್ತಲರನ್ನು ಕರೆತಂದು, ಮಹಾಯಾಜಕನು ಪ್ರಶ್ನಿಸಲೆಂದು ಅವರನ್ನು ನ್ಯಾಯಸಭೆಯ ಎದುರಿನಲ್ಲಿ ನಿಲ್ಲಿಸಿದರು. 28 ಅವನು, “ಈ ಹೆಸರಿನಲ್ಲಿ ಉಪದೇಶ ಮಾಡಬಾರದೆಂದು ನಾವು ನಿಮಗೆ ಕಟ್ಟುನಿಟ್ಟಾಗಿ ಅಪ್ಪಣೆಕೊಟ್ಟೆವು. ಇಗೋ ನೀವಾದರೋ ನಿಮ್ಮ ಬೋಧನೆಯಿಂದ ಇಡೀ ಯೆರೂಸಲೇಮನ್ನು ತುಂಬಿಸಿರುವಿರಿ. ಅಲ್ಲದೆ ಈ ಮನುಷ್ಯನನ್ನು ಕೊಂದು ರಕ್ತ ಸುರಿಸಿದ ಅಪರಾಧಕ್ಕೆ ನಮ್ಮನ್ನು ನೀವು ಹೊಣೆಮಾಡಲು ಉದ್ದೇಶಿಸಿದ್ದೀರಿ,” ಎಂದು ಹೇಳಿದನು.
29 ಪೇತ್ರ ಮತ್ತು ಇತರ ಅಪೊಸ್ತಲರು ಉತ್ತರವಾಗಿ, “ನಾವು ಮನುಷ್ಯರಿಗೆ ವಿಧೇಯರಾಗಿರುವುದಕ್ಕಿಂತ ದೇವರಿಗೆ ವಿಧೇಯರಾಗಿರಬೇಕಲ್ಲ! 30 ನೀವು ಮರಕ್ಕೆ ತೂಗುಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ. 31 ಯೇಸು ಇಸ್ರಾಯೇಲಿಗೆ ಪಶ್ಚಾತ್ತಾಪವನ್ನೂ ಪಾಪಗಳ ಕ್ಷಮಾಪಣೆಯನ್ನೂ ಕೊಡಲು ಸಾಧ್ಯವಾಗುವಂತೆ ದೇವರು ಯೇಸುವನ್ನು ತಮ್ಮ ಬಲಗಡೆಯಲ್ಲಿ ಅಧಿಪತಿಯನ್ನಾಗಿಯೂ ರಕ್ಷಕನನ್ನಾಗಿಯೂ ಉನ್ನತಿಗೇರಿಸಿದ್ದಾರೆ. 32 ಈ ಸಂಗತಿಗಳಿಗೆ ನಾವೇ ಸಾಕ್ಷಿಗಳು; ತನಗೆ ವಿಧೇಯರಾಗಿರುವವರಿಗೆ ದೇವರು ದಯಪಾಲಿಸಿದ ಪವಿತ್ರಾತ್ಮ ದೇವರು ಸಾಕ್ಷಿ,” ಎಂದರು.
33 ಅವರು ಇದನ್ನು ಕೇಳಿದಾಗ ಬಹುಕೋಪಗೊಂಡು ಅವರನ್ನು ಕೊಲ್ಲಬೇಕೆಂದಿದ್ದರು. 34 ಆದರೆ ಗಮಲಿಯೇಲ್ ಎಂಬ ಹೆಸರಿನ ಒಬ್ಬ ಫರಿಸಾಯನಿದ್ದನು. ಅವನು ನಿಯಮ ಬೋಧಕನೂ ಎಲ್ಲಾ ಜನರ ಗೌರವಕ್ಕೆ ಪಾತ್ರನೂ ಆಗಿದ್ದನು. ಅವನು ನ್ಯಾಯಸಭೆಯಲ್ಲಿ ಎದ್ದು ನಿಂತುಕೊಂಡು, ಸ್ವಲ್ಪ ಸಮಯ ಅಪೊಸ್ತಲರನ್ನು ಹೊರಗೆ ಕಳುಹಿಸಬೇಕೆಂದು ಆಜ್ಞಾಪಿಸಿದನು. 35 ಗಮಲಿಯೇಲನು ಸಭೆಯನ್ನುದ್ದೇಶಿಸಿ, “ಇಸ್ರಾಯೇಲರೇ, ಈ ಜನರ ವಿರುದ್ಧ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯುಳ್ಳವರಾಗಿರಿ. 36 ಕೆಲವು ದಿನಗಳ ಹಿಂದೆ ಥೈದನೆಂಬವನು ಕಾಣಿಸಿಕೊಂಡು, ತಾನು ಒಬ್ಬ ಗಣ್ಯವ್ಯಕ್ತಿಯೆಂದು ಹೇಳಿಕೊಳ್ಳುತ್ತಾ ಬಂದನು. ಸುಮಾರು ನಾಲ್ಕುನೂರು ಜನರು ಅವನ ಹಿಂಬಾಲಕರಾದರು. ಅವನು ಕೊಲೆಗೀಡಾದನು. ಅವನಿಗೆ ವಿಧೇಯರಾದವರೆಲ್ಲರೂ ಚದರಿಹೋಗಿ ಇಲ್ಲದಂತಾದರು. 37 ಅವನ ನಂತರ ಗಲಿಲಾಯದ ಯೂದ ಎಂಬುವವನು ಜನಗಣತಿಯ ದಿನಗಳಲ್ಲಿ ಕಾಣಿಸಿಕೊಂಡು, ಜನರ ಗುಂಪನ್ನು ತಿರುಗಿಬೀಳಲು ನಡೆಸಿದನು. ಅವನು ಸಹ ನಾಶವಾದನು. ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. 38 ಆದ್ದರಿಂದ, ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ! ಅವರನ್ನು ಬಿಟ್ಟುಬಿಡಿರಿ! ಏಕೆಂದರೆ ಅವರ ಉದ್ದೇಶ ಅಥವಾ ಕಾರ್ಯವು ಮನುಷ್ಯರಿಂದ ಬಂದದ್ದಾಗಿದ್ದರೆ, ಅದೇ ವ್ಯರ್ಥವಾಗುವುದು. 39 ಒಂದು ವೇಳೆ ಇದು ದೇವರಿಂದ ಬಂದದ್ದಾಗಿದ್ದರೆ, ಅವರನ್ನು ನಿಲ್ಲಿಸಲು ನಿಮ್ಮಿಂದಾಗದು. ಹಾಗೆ ಮಾಡಲು ಪ್ರಯತ್ನಿಸಿದರೆ ನೀವು ದೇವರಿಗೆ ವಿರೋಧವಾಗಿ ಹೋರಾಡುವವರಾಗಿ ಕಂಡು ಬರುವಿರಿ,” ಎಂದು ಹೇಳಿದನು.
40 ಅವರು ಗಮಲಿಯೇಲನ ಸಲಹೆಯನ್ನು ಒಪ್ಪಿದರು. ಅವರು ಅಪೊಸ್ತಲರನ್ನು ಕರೆಯಿರಿ ಅವರನ್ನು ಛಡಿಗಳಿಂದ ಹೊಡೆಸಿ, ಯೇಸುವಿನ ಹೆಸರಿನಲ್ಲಿ ಮಾತನಾಡಬಾರದೆಂದು ಆಜ್ಞಾಪಿಸಿ ಬಿಡುಗಡೆ ಮಾಡಿದರು.
41 ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ಯೋಗ್ಯರಾದೆವಲ್ಲಾ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು. 42 ದಿನದಿನವೂ ಅವರು ದೇವಾಲಯಗಳಲ್ಲಿ ಮತ್ತು ಮನೆಯಿಂದ ಮನೆಗೆ ಹೋಗಿ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದನ್ನೂ ಬೋಧಿಸುವುದನ್ನೂ ನಿಲ್ಲಿಸಲೇ ಇಲ್ಲ.