17
ಯಾವುದೇ ಊನತೆ ಅಥವಾ ಅವಲಕ್ಷಣವುಳ್ಳ ಹೋರಿಯನ್ನಾಗಲಿ, ಕುರಿಯನ್ನಾಗಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು. ಏಕೆಂದರೆ ಅದು ನಿಮ್ಮ ದೇವರಾದ ಯೆಹೋವ ದೇವರಿಗೆ ಅಸಹ್ಯವೇ.
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಯಾವುದೇ ಊರಿನಲ್ಲಿ, ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಯೆಹೋವ ದೇವರ ಒಡಂಬಡಿಕೆಯನ್ನು ಮೀರಿ ಅವರ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ನಡೆಸಲು ಸಾಧ್ಯ. ಅಂದರೆ, ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ನಕ್ಷತ್ರಗಳನ್ನಾಗಲಿ, ಬೇರೆ ದೇವರುಗಳನ್ನಾಗಲಿ, ನನ್ನ ಆಜ್ಞೆಗೆ ವಿರೋಧವಾಗಿ ಅವುಗಳನ್ನು ಆರಾಧಿಸಿದರೆ, ಆ ಸಂಗತಿಯನ್ನು ನೀವು ಕೇಳಿದಾಗ ಅದನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಆಗ ಇಸ್ರಾಯೇಲರಲ್ಲಿ ಯಾರಿಂದಾದರೂ ಆ ಅಸಹ್ಯಕರವಾದ ಕಾರ್ಯವು ನಡೆದದ್ದು ಸತ್ಯವೆಂದು ತಿಳಿದುಬಂದರೆ, ಆಗ ನೀವು ಆ ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಊರ ಹೊರಗೆ ತಂದು, ಅವರು ಸಾಯುವಂತೆ ಅವರ ಮೇಲೆ ಕಲ್ಲೆಸೆಯಬೇಕು. ಒಬ್ಬನ ಸಾಕ್ಷಿಯ ಮಾತಿನಿಂದ ಮಾತ್ರ ಯಾರಿಗೂ ಮರಣಶಿಕ್ಷೆಯಾಗಬಾರದು. ಮರಣಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಸಾಕ್ಷಿಗಳು ಇಲ್ಲವೆ ಮೂವರು ಸಾಕ್ಷಿಗಳು ಬೇಕು. ಅವನನ್ನು ಕೊಲ್ಲುವ ಮೊದಲು ಸಾಕ್ಷಿಗಳಾದ ಎಲ್ಲಾ ಜನರು ತಮ್ಮ ಕೈಗಳನ್ನು ಅವನ ಮೇಲೆ ಇಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
ನ್ಯಾಯಾಲಯಗಳು
ನಿಮ್ಮ ಊರುಗಳಲ್ಲಿ ಉಂಟಾದ ವಿವಾದಗಳ ವಿಷಯವಾಗಿ ಅಂದರೆ, ಕೊಲೆಯ ವ್ಯಾಜ್ಯವಾಗಲಿ, ವಾದಿ ಪ್ರತಿವಾದ ವ್ಯಾಜ್ಯವಾಗಲಿ, ಹೊಡೆದಾಟದ ವ್ಯಾಜ್ಯವಾಗಲಿ, ನಿಮಗೆ ನ್ಯಾಯತೀರಿಸುವುದು ಕಷ್ಟವಾದರೆ, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ. ನೀವು ಯಾಜಕರಾದ ಲೇವಿಯರ ಬಳಿಗೂ, ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು. ಅವರು ನಿಮಗೆ ಆ ತೀರ್ಪನ್ನು ತಿಳಿಸುವರು. 10 ಅವರು ನಿಮಗೆ ಯೆಹೋವ ದೇವರು ಆಯ್ದುಕೊಳ್ಳುವ ಆ ಸ್ಥಳದಿಂದ ತಿಳಿಸುವ ತೀರ್ಪಿನ ಪ್ರಕಾರ ನೀವು ಮಾಡಿ, ಅವರು ನಿಮಗೆ ಬೋಧಿಸುವುದನ್ನೇ ನೀವು ಕೈಗೊಂಡು ನಡೆಯಬೇಕು. 11 ಅವರು ನಿಮಗೆ ಬೋಧಿಸುವ ತೀರ್ಪಿನ ಪ್ರಕಾರವೂ, ಅವರು ನಿಮಗೆ ಹೇಳುವ ನ್ಯಾಯದ ಪ್ರಕಾರವೂ ನೀವು ಮಾಡಬೇಕು. ಅವರು ನಿಮಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ತಿರುಗಬಾರದು. 12 ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸೇವೆ ಮಾಡುವುದಕ್ಕೆ ನಿಂತ ಯಾಜಕನ ಮಾತನ್ನಾದರೂ, ನ್ಯಾಯಾಧಿಪತಿಯ ಮಾತನ್ನಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವುದಾದರೆ, ಆ ಮನುಷ್ಯನು ಸಾಯಲೇಬೇಕು. ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು. 13 ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಹಾಗೆ ಮಾಡಲಾರರು.
ಅರಸನ ಪಾತ್ರ
14 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಬಂದು, ಅದನ್ನು ಸ್ವಾಧೀನಪಡಿಸಿಕೊಂಡು, ಅದರಲ್ಲಿ ವಾಸವಾಗಿರುವಾಗ, “ನಮ್ಮ ಸುತ್ತಲಿರುವ ಎಲ್ಲಾ ಜನಾಂಗಗಳ ಹಾಗೆ ನಮಗೆ ಅರಸನನ್ನು ಇಟ್ಟುಕೊಳ್ಳುತ್ತೇವೆ,” ಎಂದು ಹೇಳಿಕೊಳ್ಳಬಹುದು. 15 ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವವನನ್ನು ನಿಮಗೆ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಇಸ್ರಾಯೇಲ್ ಸಹೋದರರಲ್ಲಿಂದ ಒಬ್ಬನನ್ನು ನಿಮ್ಮ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಸಹೋದರನಲ್ಲದ ಅನ್ಯದೇಶದವನನ್ನು ನಿಮ್ಮ ಮೇಲೆ ನೇಮಿಸಿಕೊಳ್ಳಬಾರದು. 16 ಅರಸನು ತನಗಾಗಿ ಕುದುರೆಗಳನ್ನು ಹೆಚ್ಚಿಸಿಕೊಳ್ಳಬಾರದು. ಕುದುರೆಗಳನ್ನು ಹೆಚ್ಚಿಸಿಕೊಳ್ಳುವ ಹಾಗೆ ಜನರನ್ನು ಈಜಿಪ್ಟ್ ದೇಶಕ್ಕೆ ಕಳುಹಿಸಬಾರದು. “ಆ ಮಾರ್ಗವಾಗಿ ನೀವು ಇನ್ನು ತಿರುಗಿ ಹೋಗಬಾರದು,” ಎಂದು ಯೆಹೋವ ದೇವರು ನಿಮಗೆ ಹೇಳಿದ್ದಾರೆ. 17 ಅರಸನು ದಾರಿತಪ್ಪಿ ಹೋಗದಂತೆ ತನಗೆ ಹೆಚ್ಚು ಜನ ಹೆಂಡತಿಯರನ್ನು ಮದುವೆ ಮಾಡಿಕೊಳ್ಳಬಾರದು. ಅವನು ತನಗಾಗಿ ಹೆಚ್ಚು ಬೆಳ್ಳಿಬಂಗಾರವನ್ನು ಕೂಡಿಸಿಟ್ಟುಕೊಳ್ಳಬಾರದು.
18 ಅರಸನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆ ಮಾಡುವ ಲೇವಿಯರ ವಶದಲ್ಲಿ ಇರುವ ಈ ದೇವರ ನಿಯಮ ಗ್ರಂಥದ ಒಂದು ಪ್ರತಿಯನ್ನು ತನಗಾಗಿ ಪುಸ್ತಕ ರೂಪವಾಗಿ ಬರೆಯಿಸಿಕೊಳ್ಳಬೇಕು. 19 ಅವನು ಗರ್ವದಿಂದ ತನ್ನ ಸ್ವದೇಶದವರನ್ನು ಹೀಯಾಳಿಸಬಾರದು. ಯೆಹೋವ ದೇವರ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳಬಾರದು. ದೇವರಾದ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವನಾಗಿರಬೇಕು. ಈ ದೇವರ ನಿಯಮದ ಎಲ್ಲಾ ವಾಕ್ಯಗಳನ್ನು, ತೀರ್ಪುಗಳನ್ನು ಅನುಸರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಈ ಕಾರಣ ಈ ಗ್ರಂಥ ಅವನ ಬಳಿಯಲ್ಲೇ ಇರಬೇಕು. ಅವನು ತನ್ನ ಜೀವಮಾನವೆಲ್ಲಾ ಇದನ್ನು ಓದಿಕೊಳ್ಳುತ್ತಾ ಇರಬೇಕು. 20 ಹೀಗೆ ಮಾಡಿದರೆ, ಅವನೂ, ಅವನ ಸಂತತಿಯವರೂ ದೀರ್ಘಕಾಲ ಇಸ್ರಾಯೇಲರ ಮೇಲೆ ರಾಜ್ಯಾಧಿಕಾರ ನಡೆಸುವರು.