4
ದಬ್ಬಾಳಿಕೆ, ಶ್ರಮೆ, ವೈರತ್ವ
ಪುನಃ ನಾನು ಸೂರ್ಯನ ಕೆಳಗೆ ನಡೆಯುತ್ತಿರುವ ದಬ್ಬಾಳಿಕೆಯನ್ನೆಲ್ಲಾ ನೋಡಿದೆನು:
ಹಿಂಸೆಗೊಂಡವರ ಕಣ್ಣೀರನ್ನೂ,
ಅವರನ್ನು ಸಂತೈಸುವವರು ಯಾರೂ ಇಲ್ಲದಿರುವುದನ್ನೂ ನೋಡಿದೆನು.
ಅಧಿಕಾರವು ಅವರ ದಬ್ಬಾಳಿಕೆಗಾರರ ಬಳಿಯಲ್ಲಿತ್ತು.
ಆದರೆ ಅವರನ್ನು ಸಂತೈಸುವವರು ಒಬ್ಬರೂ ಇಲ್ಲ.
ಆದಕಾರಣ ನಾನು ಇದನ್ನು ನೋಡಿ
ಜೀವದಿಂದ ಇರುವವರಿಗಿಂತ,
ಮೃತಪಟ್ಟವರೇ ಮೇಲು
ಎಂದು ನಾನು ತೀರ್ಮಾನಿಸಿದೆ.
ಆದರೆ ಇವರಿಬ್ಬರಿಗಿಂತಲೂ
ಇನ್ನೂ ಹುಟ್ಟದೇ,
ಸೂರ್ಯನ ಕೆಳಗೆ ನಡೆಯುವ
ಕೆಟ್ಟ ಕೃತ್ಯವನ್ನು ನೋಡದಿರುವವನೇ ಶ್ರೇಷ್ಠನು.
ಮನುಷ್ಯನು ಪಡುವ ಎಲ್ಲಾ ಪ್ರಯಾಸವನ್ನೂ ಸಾಧಿಸುವ ಎಲ್ಲಾ ಕಾರ್ಯಗಳನ್ನೂ ನೋಡಿದಾಗ ಇವು ಪರಸ್ಪರ ಮತ್ಸರಕ್ಕೆ ಕಾರಣವೆಂದು ನಾನು ತಿಳಿದುಕೊಂಡೆನು. ಇದು ಕೂಡ ಗಾಳಿಯನ್ನು ಬೆನ್ನಟ್ಟಿದ ಹಾಗೆ ವ್ಯರ್ಥವೇ.
ಸುಮ್ಮನೇ ಕೈಕಟ್ಟಿ ಕುಳಿತುಕೊಂಡು ಬುದ್ಧಿಹೀನರು,
ತಮ್ಮನ್ನು ತಾವೇ ಹಾಳುಮಾಡಿಕೊಳ್ಳುತ್ತಾರೆ.
ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ
ಪ್ರಯಾಸದಿಂದ ತುಂಬಿದ ಎರಡು ಕೈಗಳಿಂದ ಮಾಡಿದ ಕೆಲಸಕ್ಕಿಂತ
ನೆಮ್ಮದಿಯಿಂದ ಒಂದು ಕೈಯಿಂದ ಮಾಡಿದ ಕೆಲಸವೇ ಲೇಸು.
ಆಗ ಮತ್ತೆ ನಾನು ಸೂರ್ಯನ ಕೆಳಗೆ ವ್ಯರ್ಥವಾದದ್ಡನ್ನು ಕಂಡೆನು:
ಜೊತೆಗಾರನಿಲ್ಲದೆ ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದನು.
ಅವನಿಗೆ ಮಗನಾಗಲಿ, ಸಹೋದರನಾಗಲಿ ಇರಲಿಲ್ಲ.
ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ.
ತನ್ನ ಸಂಪತ್ತಿನಿಂದ ಅವನ ಕಣ್ಣು ತೃಪ್ತಿ ಹೊಂದಿರಲಿಲ್ಲ.
ಅವನು, “ನಾನು ಸುಖಸಂತೋಷವನ್ನು ತೊರೆದು,
ಯಾರಿಗೋಸ್ಕರ ಕಷ್ಟಪಡುತ್ತಲೇ ಇದ್ದೇನೆ?” ಎಂದುಕೊಂಡನು.
ಇದು ಕೂಡ ವ್ಯರ್ಥವೇ,
ಪ್ರಯಾಸದ ಕೆಲಸವೇ ಸರಿ.
 
ಒಬ್ಬನಿಗಿಂತ ಇಬ್ಬರು ಲೇಸು,
ಏಕೆಂದರೆ ಅವರ ಪ್ರಯಾಸಕ್ಕೆ ಒಳ್ಳೆಯ ಪ್ರತಿಫಲವಿದೆ:
10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.
ಆದರೆ ಅವನು ಒಬ್ಬೊಂಟಿಗನಾಗಿ ಬಿದ್ದರೆ
ಅವನ ಗತಿ ದುರ್ಗತಿಯೇ
ಏಕೆಂದರೆ ಅವನಿಗೆ ಸಹಾಯ ಮಾಡುವುದಕ್ಕೆ ಯಾರೂ ಇರುವುದಿಲ್ಲ.
11 ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ.
ಆದರೆ ಒಬ್ಬನಷ್ಟೆ ಹೇಗೆ ಬೆಚ್ಚಗಿರುತ್ತಾನೆ?
12 ಒಬ್ಬಂಟಿಗನ ಮೇಲೆ ಜಯ ಸಾಧಿಸಲು,
ಇಬ್ಬರು ಎದುರಾಗಿ ನಿಲ್ಲಬಹುದು.
ಆದರೆ ಮೂರು ಹುರಿಯ ಹಗ್ಗವು ಬೇಗನೆ ಕಿತ್ತು ಹೋಗುವುದಿಲ್ಲ.
ಅಭಿವೃದ್ಧಿ ಸಹ ವ್ಯರ್ಥ
13 ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮೂಢ ಮುದಿ ಅರಸನಿಗಿಂತ ಬಡವನಾದರೂ ಜ್ಞಾನಿಯಾದ ಒಬ್ಬ ಯುವಕನೇ ಮೇಲು. 14 ಆ ಯುವಕನು ಸೆರೆಮನೆಯಿಂದ ರಾಜ್ಯವನ್ನಾಳುವುದಕ್ಕಾಗಿ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು. 15 ಸೂರ್ಯನ ಕೆಳಗೆ ಜೀವಿಸಿ ನಡೆದಾಡಿದವರೆಲ್ಲರೂ ಅರಸನ ಪ್ರತಿಯಾಗಿ ಯುವಕನನ್ನು ಹಿಂಬಾಲಿಸಿದ್ದನ್ನೂ ನಾನು ನೋಡಿದೆನು. 16 ಇವನ ಆಧಿಪತ್ಯಕ್ಕೆ ಒಳಪಟ್ಟ ಜನರ ಸಂಖ್ಯೆಯು ಅಪಾರ. ಆದರೆ ಯುವಕನ ಆಳ್ವಿಕೆಯ ಮುಂಚೆ ಇದ್ದವರು ಮತ್ತು ತರುವಾಯ ಬಂದವರು ಇವನನ್ನು ಮೆಚ್ಚಲಿಲ್ಲ. ಇದು ಸಹ ಗಾಳಿಯನ್ನು ಬೆನ್ನಟ್ಟಿದಂತೆ ವ್ಯರ್ಥವೇ.