5
ದೇವರನ್ನು ಗೌರವಿಸಿ, ಅವರಿಗೆ ಭಯಪಡು
ದೇವರ ಆಲಯಕ್ಕೆ ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು. ಮೂರ್ಖರು ಅರ್ಪಿಸುವ ಯಜ್ಞಕ್ಕಿಂತ, ದೇವರ ಸಮೀಪವಾಗಿದ್ದು ಅವರಿಗೆ ಕಿವಿಗೊಟ್ಟು ಆಲಿಸುವುದು ಲೇಸು. ತಾವು ತಪ್ಪು ಮಾಡುತ್ತಿದ್ದಾರೆಂದು ಮೂಢರಿಗೆ ತಿಳಿಯುವುದಿಲ್ಲ.
ನೀನು ದುಡುಕಿ ಮಾತನಾಡಬೇಡ,
ದೇವರ ಮುಂದೆ ಮಾತನಾಡಲು
ನಿನ್ನ ಹೃದಯವು ಆತುರಪಡದೇ ಇರಲಿ.
ದೇವರು ಪರಲೋಕದಲ್ಲಿದ್ದಾರೆ.
ನೀನಾದರೋ ಭೂಮಿಯ ಮೇಲೆ ಇರುವೆ,
ಆದಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.
ಬಹಳ ಚಿಂತೆ ಇದ್ದಾಗಲೂ ಕನಸು ಬರುತ್ತದೆ.
ಮೂಢನು ಮಾತಾಡಿದರೆ ಸಾಕು, ಬಹು ಮಾತುಗಳು ಬರುತ್ತವೆ.
ದೇವರಿಗೆ ನೀನು ಹರಕೆಯನ್ನು ಮಾಡಿದರೆ, ಅದನ್ನು ತೀರಿಸಲು ತಡಮಾಡಬೇಡ. ದೇವರು ಮೂಢರನ್ನು ಮೆಚ್ಚುವುದಿಲ್ಲ. ನೀನು ಹರಕೆ ಮಾಡಿದ್ದನ್ನು ತೀರಿಸು. ಹರಕೆಮಾಡಿ ತೀರಿಸದೆ ಇರುವುದಕ್ಕಿಂತ, ಹರಕೆ ಮಾಡದೆ ಇರುವುದು ಒಳ್ಳೆಯದು. ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ನಡೆಸದಂತೆ ನೋಡಿಕೋ. “ನಾನು ಹರಕೆ ಮಾಡಿದ್ದು ತಪ್ಪು,” ಎಂದು ದೂತನ ಮುಂದೆ ಹೇಳಬೇಡ. ಇದರಿಂದ ದೇವರು ನಿನ್ನ ಮಾತಿಗೆ ಮೆಚ್ಚದೆ, ನಿನ್ನನ್ನು ಏಕೆ ದಂಡಿಸಬೇಕು? ಬಹು ಕನಸುಗಳೂ ಬಹು ಮಾತುಗಳೂ ವ್ಯರ್ಥವಾದವುಗಳು. ಆದ್ದರಿಂದ ನೀನು ದೇವರಿಗೆ ಭಯಪಡು.
ಐಶ್ವರ್ಯವು ವ್ಯರ್ಥ
ದೇಶದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯ ನಿರಾಕರಿಸಿದ್ದನ್ನೂ ನೀನು ನೋಡಿದರೆ, ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಮತ್ತೊಬ್ಬ ಉನ್ನತ ಅಧಿಕಾರಿಗಳು ಇದ್ದಾರೆ. ಭೂಮಿಯಿಂದ ಲಾಭವು ಎಲ್ಲರಿಗೂ ಇದೆ. ಹೊಲಗದ್ದೆಗಳಿಂದ ಅರಸನಿಗೂ ಲಾಭವಿದೆ.
10 ಹಣವನ್ನು ಪ್ರೀತಿಸುವವರಿಗೆ ಎಷ್ಟು ಹಣ ಇದ್ದರೂ ಸಾಕಾಗದು.
ಆಸ್ತಿಯನ್ನು ಪ್ರೀತಿಸುವವನು ತನ್ನ ಆದಾಯದಿಂದ ತೃಪ್ತಿಗೊಳ್ಳುವುದಿಲ್ಲ.
ಇದೂ ಸಹ ವ್ಯರ್ಥವೇ.
 
11 ಸೊತ್ತು ಹೆಚ್ಚಿದರೆ,
ಅದನ್ನು ಅನುಭವಿಸುವವರು ಹೆಚ್ಚಾಗುವರು.
ಯಜಮಾನರು ಅದನ್ನು ತಮ್ಮ ಕಣ್ಣಿಂದ ನೋಡುವುದೇ ಅವರಿಗಾಗುವ ಲಾಭ,
ಬೇರೆ ಯಾವ ಪ್ರಯೋಜನವಿದೆ?
 
12 ಪ್ರಯಾಸ ಪಡುವವನು ಸ್ವಲ್ಪ ತಿಂದರೂ
ಹೆಚ್ಚು ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ.
ಆದರೆ ಐಶ್ವರ್ಯವಂತನ ಸಮೃದ್ಧಿಯು
ಅವನನ್ನು ನಿದ್ರೆ ಮಾಡಗೊಡಿಸದು.
13 ಸೂರ್ಯನ ಕೆಳಗೆ ವ್ಯಸನಕರವಾದ ಕೇಡನ್ನು ನಾನು ನೋಡಿದೆ. ಅದು ಯಾವುದೆಂದರೆ:
ಸಂಗ್ರಹಿಸಿದ ಆಸ್ತಿ ಯಜಮಾನನಿಗೆ ಹಾನಿ.
14 ಅದು ಹೇಗೆಂದರೆ, ಅನಾಹುತದಿಂದ ಆಸ್ತಿ ಕಳೆದುಹೋಗುತ್ತದೆ.
ಅವನಿಗೆ ಮಗನಿದ್ದರೆ,
ಅವನಿಗೆ ಏನೂ ಇರುವುದಿಲ್ಲ.
15 ತಾಯಿಯ ಗರ್ಭದಿಂದ ಅವನು ಹೇಗೆ ಬರಿಗೈಯಲ್ಲಿ ಬಂದನೋ,
ಹಾಗೆ ಬರಿಗೈಯಲ್ಲಿ ಗತಿಸಿ ಹೋಗುವನು.
ಅವನು ಪ್ರಯಾಸ ಪಟ್ಟದ್ದಕ್ಕಾಗಿ ಯಾವುದನ್ನು
ತೆಗೆದುಕೊಂಡು ಹೋಗುವುದಿಲ್ಲ.
16 ಇದು ಕೂಡ ವ್ಯಸನಕರವಾದ ಕೇಡು:
ಮನುಷ್ಯನು ಹೇಗೆ ಬಂದನೋ,
ಹಾಗೆಯೇ ಹೋಗುವನು.
ಗಾಳಿಗಾಗಿ ಪ್ರಯಾಸಪಟ್ಟವನಿಗೆ ಲಾಭವೇನಿದೆ?
17 ತನ್ನ ಜೀವಮಾನವೆಲ್ಲಾ ಅವನು ಕತ್ತಲೆಯಲ್ಲಿ ಕಳೆಯುತ್ತಾನೆ.
ಅವನಿಗೆ ವ್ಯಾಧಿಯೊಂದಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.
18 ದೇವರು ಮನುಷ್ಯನಿಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ಅವನು ಕೈಗೊಂಡ ಪ್ರಯಾಸದ ಸುಖವನ್ನು ಅನುಭವಿಸಿ, ತಿಂದು, ಕುಡಿಯುವುದು ತೃಪ್ತಿಕರವಾದದ್ದೂ ಆಗಿದೆ, ಎಂದು ಒಂದು ಒಳ್ಳೆಯದನ್ನು ಕಂಡುಕೊಂಡೆನು. ಏಕೆಂದರೆ ಇದು ಮನುಷ್ಯನ ಪಾಲು. 19 ಮನುಷ್ಯನಿಗೆ ದೇವರು ಆಸ್ತಿಪಾಸ್ತಿಗಳನ್ನು ದಯಪಾಲಿಸಿ, ಅವುಗಳನ್ನು ಅನುಭವಿಸುವುದಕ್ಕೆ ಸಾಮರ್ಥ್ಯ ಕೊಟ್ಟಿದ್ದರೆ, ಅವನು ತನ್ನ ಪಾಲನ್ನು ತೆಗೆದುಕೊಂಡು, ತನ್ನ ಪ್ರಯಾಸದಲ್ಲಿ ಆನಂದಿಸುವುದೂ ದೇವರ ದಾನದಿಂದಲೇ. 20 ಇಂಥವನು ತನ್ನ ಜೀವಮಾನದ ದಿನಗಳನ್ನು ಗಣನೆಗೆ ತಂದುಕೊಳ್ಳನು. ಏಕೆಂದರೆ ಇವನು ತನ್ನ ಹೃದಯಾನಂದದಲ್ಲಿ ಮಗ್ನನಾಗಿರುವಂತೆ ದೇವರು ಮಾಡಿದ್ದಾರೆ.