8
ಇಸ್ರಾಯೇಲ್ ಸುಂಟರಗಾಳಿಯನ್ನು ಕೊಯ್ಲು ಮಾಡುವುದು
“ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ.
ಅವರು ನನ್ನ ಒಡಂಬಡಿಕೆಯನ್ನು ಮೀರಿ,
ನನ್ನ ನ್ಯಾಯ ಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ
ಶತ್ರುಗಳು ಹದ್ದಿನ ಹಾಗೆ ಯೆಹೋವ ದೇವರ ಆಲಯದ ಮೇಲೆ ಬರುವರು.
ಇಸ್ರಾಯೇಲಿನವರು, ‘ನನ್ನ ದೇವರೇ, ನಾವು ನಿಮ್ಮನ್ನು ತಿಳಿದಿದ್ದೇವೆ,’
ಎಂದು ನನಗೆ ಕೂಗುತ್ತಿದ್ದಾರೆ.
ಆದರೆ ಇಸ್ರಾಯೇಲು ಒಳ್ಳೆಯ ಸಂಗತಿಯನ್ನು ತಳ್ಳಿಬಿಟ್ಟಿದೆ.
ಒಬ್ಬ ಶತ್ರುವು ಅವನನ್ನು ಹಿಂದಟ್ಟುವನು.
ಅವರು ಅರಸರನ್ನು ನೇಮಿಸಿದ್ದಾರೆ.
ಆದರೆ ನನ್ನಿಂದಲ್ಲ. ಅವರು ನನ್ನ ಅನುಮತಿಯಿಲ್ಲದೆ
ರಾಜಕುಮಾರರನ್ನು ಆಯ್ಕೆ ಮಾಡಿದ್ದಾರೆ.
ಅವರು ತಾವು ನಾಶವಾಗುವಂತೆ
ತಮ್ಮ ಬೆಳ್ಳಿಯಿಂದಲೂ, ತಮ್ಮ ಬಂಗಾರದಿಂದಲೂ
ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
ಸಮಾರ್ಯವೇ, ನಿನ್ನ ಬಸವ ವಿಗ್ರಹವನ್ನು ಬಿಸಾಡಿಬಿಡು.
ನನ್ನ ಕೋಪವು ಅವರ ಮೇಲೆ ಉರಿಯುತ್ತದೆ.
ಅವರು ಎಷ್ಟು ಕಾಲ ಶುದ್ಧತೆಗೆ ಅಸಮರ್ಥರಾಗಿರುತ್ತಾರೆ?
ಅವರು ಇಸ್ರಾಯೇಲಿನಿಂದ ಬಂದವರು.
ಕಮ್ಮಾರನು ಈ ಬಸವ ವಿಗ್ರಹವನ್ನು ಮಾಡಿದನು.
ಅದು ದೇವರಲ್ಲ,
ಆದರೆ ಸಮಾರ್ಯದ
ಬಸವನನ್ನು ಚೂರುಚೂರಾಗುವುದು.
 
“ಅವರು ಗಾಳಿಯನ್ನು ಬಿತ್ತಿದ್ದಾರೆ.
ಬಿರುಗಾಳಿಯನ್ನು ಕೊಯ್ಯುತ್ತಾರೆ.
ಇಸ್ರಾಯೇಲರ ಪೈರು ತೆನೆಗೆ ಬಾರದು.
ಮೊಳಕೆಯು ಆಹಾರವನ್ನು ಕೊಡುವುದಿಲ್ಲ.
ಒಂದು ವೇಳೆ ಅದು ಕೊಟ್ಟರೂ
ವಿದೇಶಿಯರು ಅದನ್ನು ನುಂಗುತ್ತಾರೆ.
ಇಸ್ರಾಯೇಲನ್ನು ಕಬಳಿಸಲಾಗಿದೆ.
ಅವರು ಜನಾಂಗಗಳಲ್ಲಿ
ಬೇಡವಾದ ಪಾತ್ರೆಯ ಹಾಗೆ ಇದ್ದಾರೆ.
ಅವರು ಒಂಟಿಯಾದ ಕಾಡುಕತ್ತೆಯ ಹಾಗೆ
ಅಸ್ಸೀರಿಯಗೆ ಹೋಗಿದ್ದಾರೆ.
ಎಫ್ರಾಯೀಮು ಪ್ರೇಮಿಗಳಿಗೆ ತನ್ನನ್ನು ಮಾರಿಕೊಂಡಿದೆ.
10 ಎಫ್ರಾಯೀಮು ಜನಾಂಗಗಳಿಗೆ ತಮ್ಮನ್ನು ಮಾರಿಕೊಂಡಿದ್ದರೂ
ಅವರನ್ನು ನಾನು ಈಗ ಒಟ್ಟುಗೂಡಿಸುವೆನು.
ಅವರು ಪ್ರಬಲ ಅರಸನ ಹಿಂಸೆಯಿಂದಾಗಿ ಕಷ್ಟಪಡುವರು.
 
11 “ಎಫ್ರಾಯೀಮು ಪಾಪ ಪರಿಹಾರಕ್ಕಾಗಿ ಅನೇಕ ಬಲಿಪೀಠಗಳನ್ನು ಕಟ್ಟಿದ್ದರೂ,
ಈ ಬಲಿಪೀಠಗಳೇ ಅವರ ಪಾಪಕ್ಕೆ ಕಾರಣವಾಗಿವೆ.
12 ನಾನು ನನ್ನ ನಿಯಮದ ಅನೇಕ ಸಂಗತಿಗಳನ್ನು ಅವನಿಗೆ ಬರೆದಿದ್ದೇನೆ.
ಆದರೆ ಅವನು ಅವುಗಳನ್ನು ಅನ್ಯವಾದವುಗಳೆಂದು ಪರಿಗಣಿಸಿದನು.
13 ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ,
ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ.
ಆದರೆ ಯೆಹೋವ ದೇವರು ಅವುಗಳಿಗೆ ಮೆಚ್ಚುವುದಿಲ್ಲ.
ಈಗ ಅವರ ಅಕ್ರಮಗಳನ್ನು ಜ್ಞಾಪಕಮಾಡಿಕೊಂಡು,
ಅವರ ಪಾಪಗಳನ್ನು ಶಿಕ್ಷಿಸಿದರು.
ಅವರು ಈಜಿಪ್ಟಿಗೆ ಹಿಂದಿರುಗುವರು.
14 ಇಸ್ರಾಯೇಲರು ತಮ್ಮ ಸೃಷ್ಟಿಕರ್ತನನ್ನು ಮರೆತುಬಿಟ್ಟು,
ಅರಮನೆಗಳನ್ನು ಕಟ್ಟುತ್ತಾರೆ.
ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚುಮಾಡಿಕೊಂಡಿದೆ.
ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು.
ಅದು ಅವರ ಕೋಟೆಗಳನ್ನು ನುಂಗಿಬಿಡುವುದು.”