22
ಯೆರೂಸಲೇಮನ್ನು ಕುರಿತು ಪ್ರವಾದನೆ
ದಿವ್ಯ ದರ್ಶನದ ತಗ್ಗಿನ ವಿಷಯವಾದ ಪ್ರವಾದನೆ:
ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ,
ಈಗ ನಿನಗೆ ಏನಾಯಿತು?
ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ,
ಸಂಭ್ರಮದ ಪಟ್ಟಣವೇ,
ನಿನ್ನಲ್ಲಿ ಹತರಾದವರು ಖಡ್ಗದಿಂದ ಹತರಾದವರಲ್ಲ;
ಯುದ್ಧದಲ್ಲಿ ಸತ್ತವರೂ ಅಲ್ಲ.
ನಿನ್ನ ಅಧಿಕಾರಸ್ಥರೆಲ್ಲ ಒಟ್ಟಿಗೆ
ಓಡಿದರೂ ಬಿಲ್ಲುಗಾರರಿಲ್ಲದೆಯೇ ಸೆರೆಯಾಗಿದ್ದಾರೆ.
ದೂರದಿಂದ ಓಡಿಬಂದರೂ ನಿನ್ನ ಜನರು
ಶತ್ರುವಿನ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹೀಗಿರಲು ನಾನು ಹೀಗೆ ಹೇಳಿದೆನು,
“ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ.
ಬಹು ಸಂಕಟದಿಂದ ನಾನು ಅಳುವೆನು.
ಏಕೆಂದರೆ ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ
ನನ್ನನ್ನು ಸಂತೈಸುವುದಕ್ಕೆ ತವಕಗೊಳ್ಳದಿರಿ.”
 
ಕರ್ತ ಆಗಿರುವವರೂ, ಸರ್ವಶಕ್ತರೂ ಆದ ಯೆಹೋವ ದೇವರು,
ದರ್ಶನದ ತಗ್ಗಿನಲ್ಲಿ ಶ್ರಮೆಯ
ತುಳಿದಾಟದ ಭಯಭ್ರಾಂತಿಯ ದಿನವನ್ನು ಇಟ್ಟಿದ್ದಾರೆ.
ಅದು ಗೋಡೆಗಳು ಹೊಡೆದುರುಳಿಸುವ ದಿನವು.
ಪರ್ವತಗಳಿಗೆ ಜನರು ಕೂಗಾಡುವ ದಿನವದು.
ಏಲಾಮಿನವರು ಕುದುರೆಗಳ,
ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು.
ಕೀರಿನವರು ಗುರಾಣಿಯನ್ನು ತೆರೆದರು.
ನಿಮ್ಮ ಪ್ರಿಯವಾದ ಕಣಿವೆಗಳಲ್ಲಿ ರಥಗಳು ತುಂಬಿರುವುವು.
ರಾಹುತರು ಪಟ್ಟಣದ ಬಾಗಿಲಿನ ಹತ್ತಿರ ಸಿದ್ಧಮಾಡಿಕೊಳ್ಳುವರು.
 
ಕರ್ತರು ಯೆಹೂದದ ಸಂರಕ್ಷಣೆಯ ಮುಸುಕನ್ನು ತೆಗೆದಿದ್ದಾರೆ.
ಆ ದಿವಸದಲ್ಲಿ ಅಡವಿ ಅರಮನೆಯ
ಯುದ್ಧ ಸಾಮಗ್ರಿಯ ಕಡೆಗೆ ದೃಷ್ಟಿ ಇಡುತ್ತೀಯೆ.
ದಾವೀದನ ಪಟ್ಟಣದ ಕೋಟೆಯ
ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ.
ಕೆಳಗಿನ ಕೊಳಕ್ಕೆ ನೀರನ್ನು ತುಂಬಿಸುತ್ತೀರಿ.
10 ಯೆರೂಸಲೇಮಿನ ಮನೆಗಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು
ಭದ್ರಪಡಿಸುವುದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ.
11 ಎರಡು ಗೋಡೆಗಳ ನಡುವೆ ಹಳೆಯ ಕೆರೆಯ
ನೀರಿಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ,
ಕಾಲುವೆ ಮಾಡುತ್ತೀರಿ. ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸುವುದಿಲ್ಲ.
ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದವರನ್ನು ನೀನು ಲಕ್ಷಿಸುವುದಿಲ್ಲ.
 
12 ಆ ದಿವಸದಲ್ಲಿ ಅತ್ತು, ದುಃಖಿಸಿ,
ತಲೆ ಬೋಳಿಸಿಕೊಂಡು,
ಗೋಣಿತಟ್ಟನ್ನು ಸುತ್ತಿಕೊಳ್ಳಬೇಕೆಂದು
ಸರ್ವಶಕ್ತ ದೇವರಾದ ಯೆಹೋವ ದೇವರು ನಿಮ್ಮನ್ನು ಕರೆದರು.
13 ಆದರೆ ಉತ್ಸಾಹವು, ಸಂತೋಷವು,
ದನ ಕೊಳ್ಳುವುದು, ಕುರಿ ಕಡಿಯುವುದು,
ಮಾಂಸವನ್ನು ತಿನ್ನುವುದು, ದ್ರಾಕ್ಷಾರಸ ಕುಡಿಯುವುದು,
ನಾಳೆ ಸಾಯುತ್ತೇವೆಂದು ತಿಂದು
ಕುಡಿಯುವುದೇ ನಿಮ್ಮ ಕಾರ್ಯ.
14 ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದು ಏನೆಂದರೆ: “ನಿಶ್ಚಯವಾಗಿ ಈ ದುಷ್ಕೃತ್ಯಗಳನ್ನು ನೀವು ಸಾಯುವ ತನಕ ಮನ್ನಿಸುವುದೇ ಇಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳಿದ್ದಾರೆ.
 
15 ಸೇನಾಧೀಶ್ವರ ಯೆಹೋವ ದೇವರು ಪುನಃ ಹೀಗೆ ನುಡಿದಿದ್ದಾರೆ:
“ಹೋಗು, ಅರಮನೆಯ ಉಗ್ರಾಣದವನಾದ
ಶೆಬ್ನ ಎಂಬ ಖಜಾಂಚಿಯ ಬಳಿಗೆ ಹೋಗಿ ಹೀಗೆ ಹೇಳು:
16 ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ?
ನೀನು ಉನ್ನತದಲ್ಲಿ ನಿನಗೆ ಸಮಾಧಿಯನ್ನು ತೋಡಿಸಿದೆ,
ಬಂಡೆಯಲ್ಲಿ ನಿನಗೆ ನಿವಾಸವನ್ನು ಕೆತ್ತಿಸುವವನ ಹಾಗೆ,
ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದಿ ಅಲ್ಲವೇ?
 
17 “ಯೆಹೋವ ದೇವರು ನಿನ್ನನ್ನು ಬಲವಾದ
ಬಂಧನದೊಂದಿಗೆ ಹಿಡಿದೇ ಹಿಡಿಯುವರು.
18 ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ತಿರುಗಿಸಿ,
ವಿಸ್ತಾರವಾದ ದೇಶಕ್ಕೆ ಬಿಸಾಡುವರು.
ಅಲ್ಲೇ ನೀನು ಸಾಯುವೆ,
ನಿನ್ನ ವೈಭವದ ರಥಗಳು ನಿನ್ನ ಧಣಿಯ ಮನೆಗೆ
ಅವಮಾನವನ್ನುಂಟು ಮಾಡುವುವು.
19 ನಿನ್ನನ್ನು ನಿನ್ನ ಉದ್ಯೋಗದಿಂದ ತಳ್ಳಿಬಿಡುವೆನು.
ನಿನ್ನ ಪದವಿಯಿಂದ ನಿನ್ನನ್ನು ಕೆಳಗೆ ಎಳೆದುಬಿಡುವೆನು.
20 “ಆ ದಿನದಲ್ಲಿ ನನ್ನ ಸೇವಕನೂ, ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು, 21 ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟಿನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಜನರಿಗೂ ತಂದೆಯಾಗಿರುವನು. 22 ದಾವೀದನ ಮನೆಗೆ ಬೀಗದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು. ಅವನು ತೆರೆದರೆ ಯಾರೂ ಮುಚ್ಚರು, ಅವನು ಮುಚ್ಚಿದರೆ ಯಾರೂ ತೆರೆಯರು. 23 ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ತಂದೆಯ ಮನೆಗೆ ವೈಭವವುಳ್ಳ ಸಿಂಹಾಸನವಾಗಿರುವನು. 24 ಬಟ್ಟಲು ಮೊದಲುಗೊಂಡು ಕೊಡದ ತನಕ, ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ಎಲ್ಲಾ ವೈಭವವನ್ನು ಅವರು ಅವನಿಗೆ ವಹಿಸುವರು.
25 “ಆ ದಿನದಲ್ಲಿ,” ಸೇನಾಧೀಶ್ವರ ಯೆಹೋವ ದೇವರು ಪ್ರಕಟಿಸುವುದು ಏನೆಂದರೆ, “ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಕುಸಿದುಬೀಳುವುದು. ಮೊಳೆಯ ಮೇಲೆ ಇದ್ದ ಭಾರವೂ ತೆಗೆದುಹಾಕಲಾಗುವುದು,” ಇದು ಯೆಹೋವ ದೇವರ ನುಡಿ.