40
ದೇವಜನರ ಸಾಂತ್ವನ
ನೀವು ನನ್ನ ಜನರನ್ನು ಸಂತೈಸಿರಿ,
ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾರೆ.
ಯೆರೂಸಲೇಮಿನ ಸಂಗಡ ನೀವು
ಮೃದುವಾಗಿ ಮಾತನಾಡಿರಿ.
ಅದರ ಕಠಿಣ ಸೇವೆ ತೀರಿತೆಂದೂ,
ಅದರ ಪಾಪಕ್ಕೆ ಪ್ರಾಯಶ್ಚಿತ್ತವಾಗಿದೆ, ಎಂದು ಘೋಷಿಸಿರಿ,
ಏಕೆಂದರೆ ಅದು ಎಲ್ಲಾ ಪಾಪಗಳಿಗೂ
ಯೆಹೋವ ದೇವರ ಕೈಯಿಂದ ಎರಡರಷ್ಟು ಹೊಂದಿದ್ದಾಯಿತು.
 
“ಮರುಭೂಮಿಯಲ್ಲಿ ಯೆಹೋವ ದೇವರ
ಮಾರ್ಗವನ್ನು ಸಿದ್ಧಮಾಡಿರಿ.
ಅರಣ್ಯದಲ್ಲಿ ನಮ್ಮ ದೇವರಿಗೆ
ರಾಜಮಾರ್ಗವನ್ನು ನೆಟ್ಟಗೆಮಾಡಿರಿ.
ಪ್ರತಿಯೊಂದು ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು.
ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು.
ಒರಟಾದ ನೆಲವು ಸಮವಾಗಬೇಕು.
ಆಗ ಯೆಹೋವ ದೇವರ ಮಹಿಮೆಯು ಗೋಚರವಾಗುವುದು.
ಮಾನವರೆಲ್ಲರೂ ಒಟ್ಟಿಗೆ ಅದನ್ನು ಕಾಣುವರು.
ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.”
 
ವಾಣಿಯು, “ಗಟ್ಟಿಯಾಗಿ ಕೂಗು,” ಎಂದಿತು.
ಅದಕ್ಕೆ, “ನಾನು ಏನೆಂದು ಕೂಗಲಿ?” ಎಂದು ಕೇಳಲು,
 
“ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅವರ ಸೊಬಗೆಲ್ಲಾ ಹೊಲದ ಹೂವಿನಂತಿದೆ,
ಯೆಹೋವ ದೇವರ ಶ್ವಾಸವು ಅದರ ಮೇಲೆ ಬೀಸುವುದರಿಂದ, ಹುಲ್ಲು ಒಣಗಿಹೋಗುವುದು.
ಹೂವು ಉದುರಿ ಹೋಗುವುದು.
ಮಾನವರೆಲ್ಲರೂ ಹುಲ್ಲೇ ಆಗಿದ್ದಾರೆ.
ಹುಲ್ಲು ಒಣಗಿಹೋಗುವುದು, ಹೂವು ಬಾಡಿಹೋಗುವುದು.
ಆದರೆ ನಮ್ಮ ದೇವರ ವಾಕ್ಯವಾದರೋ ಸದಾಕಾಲ ಇರುವುದು,” ಎಂದು ಉತ್ತರವಾಯಿತು.
 
ಶುಭಸಮಾಚಾರವನ್ನು ತಿಳಿಸುವ ಚೀಯೋನೇ,
ನೀನು ಉನ್ನತ ಪರ್ವತವನ್ನು ಏರು.
ಶುಭಸಮಾಚಾರವನ್ನು ತಿಳಿಸುವ ಯೆರೂಸಲೇಮೇ,
ಬಲವಾಗಿ ನಿನ್ನ ಧ್ವನಿ ಎತ್ತು, ಭಯಪಡಬೇಡ.
ಯೆಹೂದದ ಪಟ್ಟಣಗಳಿಗೆ,
“ಇಗೋ, ನಿನ್ನ ದೇವರು!” ಎಂದು ಹೇಳು.
10 ಇಗೋ, ಸಾರ್ವಭೌಮ ಯೆಹೋವ ದೇವರು ಬಲದೊಂದಿಗೆ ಬರುವರು.
ಅವರ ತೋಳು ತಮಗೋಸ್ಕರ ಆಳುವುದು.
ಅವರ ಬಹುಮಾನವು ಅವರ ಸಂಗಡ
ಅವರ ಪ್ರತಿಫಲವು ಅವರ ಮುಂದೆಯೂ ಇದೆ.
11 ಅವರು ತಮ್ಮ ಮಂದೆಯನ್ನು ಕುರುಬನಂತೆ ಮೇಯಿಸುವರು.
ಕುರಿಮರಿಗಳನ್ನು ಕೂಡಿಸಿ,
ಅವುಗಳನ್ನು ತಮ್ಮ ಎದೆಗಪ್ಪಿಕೊಳ್ಳುವರು,
ಎಳೆಯ ಮರಿಗಳನ್ನು ಮೆಲ್ಲಗೆ ನಡಿಸುವರು.
 
12 ಸಮುದ್ರದ ನೀರನ್ನು ಬರಿದಾದ ತನ್ನ ಕೈಯಿಂದ ಅಳತೆ ಮಾಡಿದವನೂ,
ಆಕಾಶಗಳ ಮೇರೆಯನ್ನು ಗೇಣಿನಿಂದ ಅಳೆದವನೂ,
ಭೂಮಿಯ ಧೂಳನ್ನು ಅಳತೆಮಾಡಿ ತಿಳಿದುಕೊಂಡವನೂ,
ಬೆಟ್ಟಗಳ ಮಟ್ಟವನ್ನೂ,
ಗುಡ್ಡಗಳನ್ನೂ ತಕ್ಕಡಿಯಿಂದ ತೂಗಿದವನೂ ಯಾರು?
13 ಯೆಹೋವ ದೇವರ ಮನಸ್ಸನ್ನು ಅರ್ಥ ಮಾಡಿಕೊಂಡವನು ಯಾರು?
ಸಲಹೆಗಾರನಾಗಿ ಅವರಿಗೆ ಬೋಧಿಸಿದವನು ಯಾರು?
14 ತನಗೆ ಜ್ಞಾನ ದೊರೆಯಲು ಯೆಹೋವ ದೇವರು ಯಾರ ವಿಚಾರ ತೆಗೆದುಕೊಂಡನು.
ಆತನಿಗೆ ಸರಿಯಾದ ಮಾರ್ಗವನ್ನು ಕಲಿಸಿದವನು ಯಾರು?
ಆತನಿಗೆ ಜ್ಞಾನವನ್ನು ಕಲಿಸಿದವನಾರು ಇಲ್ಲವೆ ತಿಳುವಳಿಕೆಯ
ಮಾರ್ಗವನ್ನು ಆತನಿಗೆ ತೋರಿಸಿದವನಾರು?
 
15 ಇಗೋ, ಆತನ ಎಣಿಕೆಯಲ್ಲಿ ಜನಾಂಗಗಳು ಕಪಿಲೆಯಿಂದ ಉದುರುವ ತುಂತುರಿನಂತೆಯೂ,
ತಕ್ಕಡಿಯಲ್ಲಿನ ಧೂಳಿನ ಹಾಗೂ ಇರುತ್ತವೆ.
ದ್ವೀಪಗಳನ್ನು ಅಣುರೇಣುವಿನಂತೆ ಆತನು ಎತ್ತುತ್ತಾನೆ.
16 ಲೆಬನೋನು ಯಜ್ಞವೇದಿಯ ಬೆಂಕಿಗೆ ಸಾಲದು:
ಅದರ ಪ್ರಾಣಿಗಳು ದಹನಬಲಿಗಳಿಗೆ ಸಾಧನವು.
17 ಸಕಲ ಜನಾಂಗಗಳು ಆತನ ಮುಂದೆ ಏನೂ ಇಲ್ಲದಂತಿವೆ.
ಅವು ಆತನ ಎಣಿಕೆಯಲ್ಲಿ ಶೂನ್ಯವಾಗಿಯೂ,
ವ್ಯರ್ಥವಾಗಿಯೂ ಇವೆ.
 
18 ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ?
ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?
19 ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ.
ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ,
ಬೆಳ್ಳಿಯ ಸರಪಣಿಗಳನ್ನು ಹಾಕುವನು.
20 ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳಲಾರದ ಬಡವನು
ಹುಳಿತುಹೋಗದ ಮರವನ್ನು ಹುಡುಕಿ,
ಬಾಗಿಬೀಳದ ವಿಗ್ರಹವನ್ನು ತಯಾರಿಸುವುದಕ್ಕೆ
ಶಿಲ್ಪಿಯನ್ನು ವಿಚಾರಿಸಿಕೊಳ್ಳುವನು.
 
21 ನಿಮಗೆ ತಿಳಿದಿಲ್ಲವೋ?
ನೀವು ಕೇಳಲಿಲ್ಲವೋ?
ಆದಿಯಿಂದಲೇ ನಿಮಗೆ ತಿಳಿದಿಲ್ಲವೋ?
ಭೂಮಿಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗಲಿಲ್ಲವೋ?
22 ಆಕಾಶಮಂಡಲವನ್ನು ತೆರೆಯಂತೆ ವಿಸ್ತರಿಸಿ,
ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ,
ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು
ಭೂವೃತ್ತದ ಮೇಲೆ ಕೂತಿರುವಾತನು ಆತನೇ.
23 ಅದು ದೇಶಾಧಿಪತಿಗಳನ್ನು ನಿರ್ನಾಮ ಮಾಡುತ್ತದೆ,
ಭೂಮಿಯ ನ್ಯಾಯಾಧಿಪತಿಗಳನ್ನು ಶೂನ್ಯವಾಗುವಂತೆ ಮಾಡುತ್ತದೆ.
24 ಇವರು ನೆಟ್ಟಕೂಡಲೇ, ಬಿತ್ತಿದಾಕ್ಷಣವೇ,
ಭೂಮಿಯಲ್ಲಿ ಬೇರೂರಿದಾಗಲೇ,
ಆತನ ಶ್ವಾಸವನ್ನು ಇವರ ಮೇಲೆ ಊದಿದಾಗಲೇ ಒಣಗಿ ಹೋಗುವರು.
ಬಿರುಗಾಳಿಯು ಇವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವುದು.
 
25 ಹೀಗಿರಲು, “ನನ್ನನ್ನು ಯಾರಿಗೆ ಹೋಲಿಸಿ
ಸರಿಸಮಾನ ಮಾಡುತ್ತೀರಿ?” ಎಂದು ಪರಿಶುದ್ಧ ದೇವರು ಕೇಳುತ್ತಾರೆ.
26 ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ.
ಇಗೋ, ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು?
ಆತನೇ ತನ್ನ ಮಹಾಶಕ್ತಿಯಿಂದಲೂ,
ಅವುಗಳ ಸೈನ್ಯವನ್ನೆಲ್ಲಾ ಲೆಕ್ಕ ಮಾಡಿ ಹೊರಗೆ ತರುವನು.
ಏಕೆಂದರೆ ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವುದರಿಂದ
ಅವುಗಳೊಳಗೆ ಒಂದೂ ತಪ್ಪದು.
 
27 ನನ್ನ ಮಾರ್ಗವು ಯೆಹೋವ ದೇವರಿಗೆ ಮರೆಯಾಗಿದೆ.
ನನ್ನ ನ್ಯಾಯವು ನನ್ನ ದೇವರಿಂದ ದಾಟಿಹೋಯಿತಲ್ಲಾ!
ಎಂದು ಯಾಕೋಬೇ ಏಕೆ ಹೇಳುತ್ತೀ?
ಇಸ್ರಾಯೇಲೇ ಏಕೆ ಮಾತನಾಡುತ್ತೀ?
28 ನಿನಗೆ ಗೊತ್ತಿಲ್ಲವೋ?
ನೀನು ಕೇಳಲಿಲ್ಲವೋ?
ಯೆಹೋವ ದೇವರು ನಿರಂತರವಾದ ದೇವರೂ,
ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವುದಿಲ್ಲ,
ಬಳಲುವುದಿಲ್ಲ, ಆತನ ತಿಳುವಳಿಕೆಯು
ಪರಿಶೋಧನೆಗೆ ಅಗಮ್ಯ.
29 ಆತನು ದಣಿದವನಿಗೆ ಶಕ್ತಿಯನ್ನೂ,
ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ.
30 ಯೌವನಸ್ಥರೋ ದಣಿದು ಬಳಲುವರು
ಮತ್ತು ತರುಣರು ಸಂಪೂರ್ಣವಾಗಿ ಬೀಳುವರು.
31 ಆದರೆ ಯೆಹೋವ ದೇವರನ್ನು ನಿರೀಕ್ಷಿಸುವವರೋ
ಹೊಸ ಬಲವನ್ನು ಹೊಂದುವರು.
ಅವರು ಹದ್ದುಗಳಂತೆ
ರೆಕ್ಕೆಗಳಿಂದ ಬೆಟ್ಟವನ್ನು ಏರುವರು.
ಅವರು ಓಡಿ ದಣಿಯರು. ನಡೆದು ಬಳಲರು.