41
ಇಸ್ರಾಯೇಲಿನ ಸಹಾಯಕನು
ದ್ವೀಪಗಳೇ, ನನ್ನ ಮುಂದೆ ಮೌನದಿಂದಿರಿ.
ರಾಷ್ಟ್ರಗಳು ತಮ್ಮ ಬಲವನ್ನು ನವೀಕರಿಸಲಿ!
ಅವರು ನನ್ನ ಸಮೀಪಕ್ಕೆ ಬಂದು ಮಾತನಾಡಲಿ.
ನ್ಯಾಯಸ್ಥಾನಕ್ಕೆ ಸಮೀಪಕ್ಕೆ ಒಟ್ಟಾಗಿ ಬರೋಣ.
 
ಪೂರ್ವದಿಂದ ನೀತಿವಂತನನ್ನು ಎಬ್ಬಿಸಿ,
ಅವನನ್ನು ತನ್ನ ಪಾದಸನ್ನಿಧಿಗೆ ಕರೆದು,
ರಾಷ್ಟ್ರಗಳನ್ನು ಅವನ ಮುಂದೆ ಕೊಟ್ಟುಬಿಟ್ಟು,
ಅವನನ್ನು ರಾಜರ ಮೇಲೆ ಆಳುವುದಕ್ಕೆ ಮಾಡಿದವನು ಯಾರು?
ಅವನ ಖಡ್ಗವನ್ನು ಧೂಳನ್ನಾಗಿಯೂ,
ಅವನ ಬಿಲ್ಲನ್ನು ಹಾರಿಹೋಗುವ ಹೊಟ್ಟಿನಂತೆಯೂ ಅವರನ್ನು ಕೊಟ್ಟನು.
ತಾನು ಎಂದೂ ಹೆಜ್ಜೆ ಇಡದ ಮಾರ್ಗದಲ್ಲಿ ಸುರಕ್ಷಿತವಾಗಿ
ಆತನು ಅವರನ್ನು ಹಿಂದಟ್ಟುತ್ತಾ ಹೋದನು.
ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನೂ
ಆದಿಯಿಂದ ತಲತಲಾಂತರಗಳನ್ನು ಬರಮಾಡಿದವನು ಯಾರು?
ಯೆಹೋವ ಎಂಬ ನಾನೇ ಮೊದಲನೆಯವನು,
ಅಂತ್ಯಕಾಲದಲ್ಲಿ ಸಂಗಡಿಗನು ಆಗಿರುವಾತನೇ ನಾನು.
 
ದ್ವೀಪಗಳೆಲ್ಲವೂ ಕಂಡು ಬೆರಗಾದವು.
ಭೂಮಿಯ ಕಟ್ಟಕಡೆಯು ನಡುಗಿತು.
ಅವರು ಸಮೀಪಕ್ಕೆ ಬಂದರು.
ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯ ಮಾಡಲಿ.
ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರಿ!” ಎಂದು ಹೇಳಲಿ.
ಹಾಗೆಯೇ ಶಿಲ್ಪಿಯು ಅಕ್ಕಸಾಲಿಗನನ್ನು ಪ್ರೋತ್ಸಾಹಗೊಳಿಸಿದನು.
ಸುತ್ತಿಗೆಯಿಂದ ಸಮಮಾಡುವವನು ಅಡಿಗಲ್ಲಿನ ಮೇಲೆ
ತಟ್ಟುವವನನ್ನು ಉತ್ತೇಜಿಸಿದನು.
ಬೆಸುಗೆ “ಚೆನ್ನಾಗಿದೆ” ಎಂದು ಹೇಳಿ,
ಅದು ಕದಲದ ಹಾಗೆ ಮೊಳೆಗಳಿಂದ ಜಡಿದರು.
 
“ಆದರೆ ನನ್ನ ಸೇವಕನಾದ ಇಸ್ರಾಯೇಲೇ,
ನಾನು ಆಯ್ದುಕೊಂಡ ಯಾಕೋಬೇ,
ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ,
ನಿನ್ನನ್ನು ಭೂಮಿಯ ಕಟ್ಟಕಡೆಗಳಿಂದ ಆರಿಸಿಕೊಂಡು,
ಅದರ ದೂರದ ಕೊನೆಯಿಂದ ಕರೆದು,
‘ನೀನು ನನ್ನ ಸೇವಕನು,’
ನಿನ್ನನ್ನು ನಾನು ಆಯ್ದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವುದಿಲ್ಲ.
10 ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು,
ನಾನು ನಿನ್ನನ್ನು ಬಲಪಡಿಸುತ್ತೇನೆ.
ನಾನು ನಿನಗೆ ಸಹಾಯ ಮಾಡುತ್ತೇನೆ.
ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿಹಿಡಿಯುತ್ತೇನೆ.
 
11 “ನಿನಗೆ ವಿರೋಧವಾಗಿ ಉರಿಗೊಂಡವರೆಲ್ಲರೂ
ಅವಮಾನ ಹೊಂದಿ, ಆಶಾಭಂಗಪಡುವರು.
ನಿನ್ನ ಸಂಗಡ ವ್ಯಾಜ್ಯವಾಡಿದವರು
ನಾಶವಾಗಿ ಇಲ್ಲದೆ ಹೋಗುವರು.
12 ನಿನ್ನೊಡನೆ ಹೋರಾಡಿದವರನ್ನು
ಹುಡುಕಿದವರೂ ಅವರು ನಿನಗೆ ಕಾಣಿಸರು.
ನಿನ್ನ ಸಂಗಡ ಯುದ್ಧ ಮಾಡಿದವರು
ಇಲ್ಲದೆ ಹೋಗಿ ನಿರ್ನಾಮವಾಗುವರು.
13 ನೀನಂತೂ ಹೆದರಬೇಡ;
ಏಕೆಂದರೆ ಯೆಹೋವ ದೇವರಾದ ನಾನೇ ನಿನಗೆ ಸಹಾಯ ಮಾಡುತ್ತೇನೆ,
ನಿನ್ನ ದೇವರಾಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ!
14 ಹುಳುವಿನಂತಿರುವ ಯಾಕೋಬೇ,
ಪುಟ್ಟ ಇಸ್ರಾಯೇಲೇ, ಭಯಪಡಬೇಡ.
ನಾನೇ ನಿನಗೆ ಸಹಾಯ ಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾರಲ್ಲಾ!
15 ಇಗೋ, ನಿನ್ನನ್ನು ಹದವಾದ,
ಹೊಸ ಮೊನೆಹಲ್ಲಿನ ಹಂತೀಕುಂಟೆಯನ್ನಾಗಿ ಮಾಡುವೆನು.
ನೀನು ಬೆಟ್ಟಗಳನ್ನು ಹೊಕ್ಕು, ಪುಡಿಪುಡಿಮಾಡಿ,
ಗುಡ್ಡಗಳನ್ನು ಹೊಟ್ಟಿನಂತೆ ಮಾಡುವೆ.
16 ನೀನು ಅವುಗಳನ್ನು ತೂರಲು, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು.
ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವುದು.
ನೀನಂತೂ ಯೆಹೋವ ದೇವರಲ್ಲಿ ಸಂತೋಷಿಸಿ,
ಇಸ್ರಾಯೇಲಿನ ಪರಿಶುದ್ಧರಲ್ಲಿ ಮಹಿಮೆ ಹೊಂದುವೆ.
 
17 ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ,
ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ,
ಯೆಹೋವನಾದ ನಾನೇ
ಅವರಿಗೆ ಉತ್ತರಕೊಡುವೆನು.
ಇಸ್ರಾಯೇಲ್ ದೇವರಾಗಿರುವ ನಾನು ಅವರನ್ನು ಕೈಬಿಡೆನು.
18 ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು
ತಗ್ಗುಗಳ ಮಧ್ಯದಲ್ಲಿ ಬುಗ್ಗೆಗಳನ್ನು ಹೊರಡಿಸಿ,
ಮರುಭೂಮಿಯನ್ನು ನೀರಿನ ಕೆರೆಯನ್ನಾಗಿಯೂ,
ಒಣನೆಲವನ್ನು ನೀರಿನ ಒರತೆಗಳನ್ನಾಗಿಯೂ ಮಾಡುವೆನು.
19 ಮರುಭೂಮಿಯಲ್ಲಿ ದೇವದಾರು,
ಜಾಲೀಮರ, ಸುಗಂಧ, ಓಲಿವ್ ಮರಗಳನ್ನು ನಾನು ನೆಡುವೆನು.
ಮರುಭೂಮಿಯಲ್ಲಿ ತುರಾಯಿ,
ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.
20 ಆಗ ಯೆಹೋವ ದೇವರ ಹಸ್ತವು ಇದನ್ನು ಮಾಡಿದೆ ಎಂದೂ,
ಇಸ್ರಾಯೇಲಿನ ಪರಿಶುದ್ಧನು ಇದನ್ನು ಸೃಷ್ಟಿಸಿದನು ಎಂದೂ
ಅವರು ಕಂಡು ತಿಳಿದು,
ಮನಸ್ಸಿಗೆ ಗ್ರಹಿಸಿಕೊಳ್ಳುವರು.
 
21 “ನಿಮ್ಮ ವ್ಯಾಜ್ಯವನ್ನು ತನ್ನಿರಿ” ಎಂದು ಯೆಹೋವ ದೇವರು ಹೇಳುತ್ತಾರೆ.
“ನಿಮ್ಮ ಬಲವಾದ ನ್ಯಾಯಗಳನ್ನು ತನ್ನಿರಿ,” ಎಂದು ಯಾಕೋಬ್ಯರ ಅರಸನು ಹೇಳುತ್ತಾನೆ.
22 “ವಿಗ್ರಹಗಳೇ, ಮುಂದೆ ಏನಾಗಲಿದೆ
ಎಂದು ನಮಗೆ ಹೇಳಿ.
ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು,
ಅವುಗಳ ಪರಿಣಾಮವನ್ನು
ಇಲ್ಲವೆ ಮುಂದಿನವುಗಳನ್ನು
ತಿಳಿಸಿದರೆ ಗ್ರಹಿಸುವೆವು.
23 ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ
ಬರುವವುಗಳನ್ನು ನಮಗೆ ತಿಳಿಸಿರಿ.
ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ,
ಕೆಟ್ಟದ್ದನ್ನಾಗಲಿ ಮಾಡಿರಿ.
24 ನೀವು ಶೂನ್ಯವೇ,
ನಿಮ್ಮ ಕಾರ್ಯವು ವ್ಯರ್ಥವೇ.
ನಿಮ್ಮನ್ನು ಆರಿಸಿಕೊಂಡವನು ಅಸಹ್ಯನೇ.
 
25 “ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇ.
ಸೂರ್ಯೋದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸುವನು.
ಅವನು ಜೇಡಿ ಮಣ್ಣಿನಂತೆಯೂ,
ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಅವನು ಬರುವನು.
26 ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ,
ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ?
ಹೌದು, ಯಾರೂ ತೋರಿಸುವವನಿಲ್ಲ,
ತಿಳಿಸುವವನು ಒಬ್ಬನೂ ಇಲ್ಲ.
ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.
27 ನಾನು ಮೊದಲನೆಯವನಾಗಿ ಚೀಯೋನಿಗೆ, ‘ಇಗೋ, ಅವರನ್ನು ನೋಡು’ ಎಂದು ಹೇಳಿ,
ಶುಭಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.
28 ನಾನು ನೋಡಿದಾಗ, ಅಲ್ಲಿ ಯಾರೂ ಇಲ್ಲ.
ನಾನು ಅವರನ್ನು ಕೇಳುವ ಪ್ರಶ್ನೆಗೆ,
ಅವರಲ್ಲಿ ಒಂದು ಮಾತನ್ನು ಉತ್ತರಿಸುವ ಸಲಹೆಗಾರನು ಇಲ್ಲವೇ ಇಲ್ಲ.
29 ಇಗೋ, ಅವರೆಲ್ಲಾ ವ್ಯರ್ಥವೇ,
ಅವರ ಕಾರ್ಯಗಳು ಶೂನ್ಯವೇ.
ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.”