54
ಚೀಯೋನಿನ ಮುಂದಿನ ವೈಭವ
“ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ!
ಪ್ರಸವವೇದನೆ ಪಡದವಳೇ,
ಸ್ವರವೆತ್ತಿ ಹರ್ಷದಿಂದ ಕೂಗು!
ಏಕೆಂದರೆ ಗಂಡನುಳ್ಳವಳಿಗಿಂತ
ಗಂಡ ಬಿಟ್ಟವಳಿಗೆ
ಮಕ್ಕಳು ಹೆಚ್ಚು,”
ಎಂದು ಯೆಹೋವ ದೇವರು ಹೇಳುತ್ತಾರೆ.
“ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು
ಮತ್ತು ನಿವಾಸದ ಪರದೆಗಳು ಹರಡಲಿ.
ಹಿಂದೆಗೆಯಬೇಡ; ನಿನ್ನ ಗುಡಾರದ ಹಗ್ಗಗಳನ್ನು ಉದ್ದಮಾಡಿ,
ಅದರ ಗೂಟಗಳನ್ನು ಬಲಪಡಿಸು.
ನೀನು ಬಲಗಡೆಗೂ, ಎಡಗಡೆಗೂ ಹಬ್ಬಿಕೊಳ್ಳುವೆ.
ನಿನ್ನ ಸಂತಾನವು ಜನಾಂಗಗಳನ್ನು ವಶಪಡಿಸಿಕೊಂಡು,
ಹಾಳಾದ ಪಟ್ಟಣಗಳನ್ನು ನಿವಾಸವಾಗ ಮಾಡುವುದು.
 
“ಹೆದರಬೇಡ, ಏಕೆಂದರೆ ನಿನಗೆ ನಾಚಿಕೆಯಾಗುವುದಿಲ್ಲ.
ಗಾಬರಿಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತುಬಿಡುವೆ.
ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು
ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವುದಿಲ್ಲ.
ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ.
ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು.
ನಿನ್ನ ವಿಮೋಚಕನು ಇಸ್ರಾಯೇಲಿನ ಪರಿಶುದ್ಧನೇ.
ಸಮಸ್ತ ಭೂಮಿಯ ದೇವರು ಎಂದು ಆತನನ್ನು ಕರೆಯಲಾಗುತ್ತದೆ.
ನೀನು ತ್ಯಜಿಸಿದ ಮನನೊಂದಿರುವ
ಯೌವನದ ಪತ್ನಿಯ ಹಾಗೆ ತಿರಸ್ಕಾರಹೊಂದಿರುವೆ.
ಯೆಹೋವ ದೇವರು ನಿನ್ನನ್ನು ಕರೆದಿದ್ದಾನೆ,
ಎಂದು ನಿನ್ನ ದೇವರು ಹೇಳುತ್ತಾರೆ.
ಕ್ಷಣಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ.
ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
ನನಗೆ ಬೇಸರವಾದಾಗ ನನ್ನ ಮುಖವನ್ನು
ನಿನಗೆ ಕ್ಷಣಮಾತ್ರವೇ ಮರೆಮಾಡಿಕೊಂಡೆನು.
ಆದರೆ ಶಾಶ್ವತವಾದ ದಯೆಯಿಂದ
ನಿನ್ನ ಮೇಲೆ ಕರುಣೆಯನ್ನು ಇಟ್ಟಿದ್ದೇನೆ,
ಎಂದು ನಿನ್ನ ವಿಮೋಚಕನಾದ ಯೆಹೋವ ದೇವರು ಹೇಳುತ್ತಾರೆ.
 
“ಇದು ನನಗೆ ನೋಹನ ಕಾಲದ ಪ್ರಳಯದಂತಿದೆ.
ನೋಹನ ಕಾಲದ ಪ್ರಳಯವು ಪುನಃ ಭೂಮಿಯನ್ನು ಆವರಿಸುವುದಿಲ್ಲ
ಎಂದು ನಾನು ಪ್ರಮಾಣ ಮಾಡಿದ ಹಾಗೆಯೇ,
ಇನ್ನು ನಿನ್ನ ಮೇಲೆ ಕೋಪಗೊಳ್ಳುವುದಿಲ್ಲ,
ನಿನ್ನನ್ನು ಗದರಿಸುವುದಿಲ್ಲ, ಎಂದು ಪ್ರಮಾಣ ಮಾಡಿದ್ದೇನೆ.
10 ಪರ್ವತಗಳು ಸ್ಥಳವನ್ನು ಬಿಟ್ಟು ಹೋದರೂ,
ಬೆಟ್ಟಗಳು ಕದಲಿ ಹೋದರೂ,
ನನ್ನ ಕುಂದದ ಪ್ರೀತಿಯು ನಿನ್ನನ್ನು ಬಿಟ್ಟು ಹೋಗದು,
ನನ್ನ ಸಮಾಧಾನದ ಒಡಂಬಡಿಕೆಯು ನಿನ್ನನ್ನು ಬಿಟ್ಟು ಕದಲದು,”
ಎಂದು ನಿನ್ನನ್ನು ಕರುಣಿಸುವ ಯೆಹೋವ ದೇವರು ಹೇಳುತ್ತಾರೆ.
 
11 ಸಂಕಟಕ್ಕೊಳಗಾದವಳೇ! ಬಿರುಗಾಳಿಯಿಂದ ಬಡಿಯಲಾಗಿ ಆದರಣೆ ಹೊಂದದವಳೇ,
ನಾನು ನಿನ್ನ ಕಲ್ಲುಗಳನ್ನು ಸುಂದರವಾದ ಬಣ್ಣಗಳೊಂದಿಗೆ ಇಟ್ಟು,
ನಿನ್ನ ಅಸ್ತಿವಾರವನ್ನು ನೀಲಮಣಿಗಳಿಂದ ಹಾಕಿ ಗಾರೆಯಿಂದ ಕಟ್ಟುವೆನು.
12 ನಿನ್ನ ಕಿಟಕಿಗಳನ್ನು ಮಾಣಿಕ್ಯಗಳಿಂದ,
ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ
ಮತ್ತು ನಿನ್ನ ಮೇರೆಗಳನ್ನು ಮನೋಹರವಾದ ರತ್ನಗಳಿಂದ ನಾನು ಮಾಡುವೆನು.
13 ನಿನ್ನ ಮಕ್ಕಳೆಲ್ಲಾ ಯೆಹೋವ ದೇವರಿಂದಲೇ ಬೋಧನೆ ಪಡೆಯುವರು.
ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರುವುದು.
14 ನೀನು ನೀತಿಯಲ್ಲಿ ನೆಲೆಗೊಂಡಿರುವೆ.
ಬಾಧೆಯಿಂದ ದೂರವಾಗಿರುವೆ.
ನೀನು ಭೀತಿಯಿಂದ ಭಯಪಡುವುದಿಲ್ಲ,
ಏಕೆಂದರೆ ಅದು ನಿನ್ನ ಸಮೀಪಕ್ಕೆ ಬಾರದು.
15 ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ, ಅದು ನನ್ನ ಅಪ್ಪಣೆಯಿಂದ ಅಲ್ಲ;
ಯಾರು ನಿನ್ನ ಮೇಲೆ ದಾಳಿಮಾಡುತ್ತಾರೋ, ಅವರು ನಿನಗೆ ಅಧೀನವಾಗುವರು.
 
16 “ಬೆಂಕಿಯಲ್ಲಿ ಕೆಂಡವನ್ನು ಊದುತ್ತಾ,
ತನ್ನ ಕೆಲಸಕ್ಕೆ ಆಯುಧಗಳನ್ನು ತರುವ
ಕಮ್ಮಾರನನ್ನು ಸೃಷ್ಟಿಸಿದವನು ನಾನೇ.
ನಾಶಮಾಡುವ ಕೆಡುಕನನ್ನು ಸೃಷ್ಟಿಸಿದವನೂ ನಾನೇ.
17 ನಿನಗೆ ವಿರೋಧವಾಗಿ ನಿರ್ಮಿಸಿದ ಆಯುಧಗಳು ಸಫಲವಾಗುವುದಿಲ್ಲ.
ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು
ನಾಲಿಗೆಯನ್ನು ನ್ಯಾಯತೀರ್ಪಿನಲ್ಲಿ ನೀನು ಖಂಡಿಸುವೆ.
ಇದೇ ಯೆಹೋವ ದೇವರ ಸೇವಕರ ಬಾಧ್ಯತೆಯು,
ಇದು ನನ್ನಿಂದ ಅವರಿಗೆ ದೊರೆಯುವ ಸಮರ್ಥನೆ,”
ಎಂದು ಯೆಹೋವ ದೇವರು ಹೇಳುತ್ತಾರೆ.