28
ಜ್ಞಾನದ ಅನ್ವೇಷಣೆ
ಬೆಳ್ಳಿ ದೊರಕುವ ಗಣಿ ಇದೆ.
ಬಂಗಾರ ಪರಿಷ್ಕರಿಸಲು ಸ್ಥಳವೂ ಇದೆ.
ಕಬ್ಬಿಣವನ್ನು ಭೂಮಿಯಿಂದ ತೆಗೆಯುತ್ತಾರೆ;
ಅದಿರನ್ನು ತಾಮ್ರವಾಗಲು ಕರಗಿಸುತ್ತಾರೆ.
ಮನುಷ್ಯರು ಕತ್ತಲನ್ನು ಹೋಗಲಾಡಿಸುತ್ತಾರೆ;
ಕಾರ್ಗತ್ತಲಲ್ಲಿಯೂ ಮರೆಯಾಗಿರುವ ಲೋಹಗಳಿಗಾಗಿ
ಭೂಮಿಯ ಆಳ ಪ್ರದೇಶದೊಳಗೆ ಅವರು ಶೋಧಿಸುತ್ತಾರೆ.
ಜನ ನಿವಾಸದಿಂದ ದೂರವಾಗಿ ಗಣಿ ತೋಡಿ,
ಮನುಷ್ಯರು ನಡೆದಾಡದ ಸ್ಥಳಗಳಲ್ಲಿ ಇತರರಿಂದ
ಪ್ರತ್ಯೇಕವಾಗಿ ಕೆಲಸ ಮಾಡುತ್ತಾರೆ.
ಭೂಮಿ ಆಹಾರವನ್ನು ಕೊಡುತ್ತದೆ;
ಆದರೆ ಅದರ ಕೆಳಭಾಗವು ಬೆಂಕಿಯ ಹಾಗೆ ಬದಲಾಗುವುದು.
ಭೂಮಿಯ ಬಂಡೆಗಳು ಇಂದ್ರನೀಲಗಳು ಸಿಗುತ್ತವೆ;
ಅದರ ಧೂಳಿನಲ್ಲಿ ಬಂಗಾರದ ಗಟ್ಟಿಗಳು ಇರುತ್ತವೆ.
ಆ ದಾರಿ ಯಾವ ಪಕ್ಷಿಗೂ ತಿಳಿಯದು;
ಹದ್ದಿನ ಕಣ್ಣು ಸಹ ಅದನ್ನು ಕಂಡಿಲ್ಲ.
ಕಾಡುಮೃಗಗಳು ಅದರ ಮೇಲೆ ನಡೆಯಲಿಲ್ಲ;
ಸಿಂಹವು ಅದನ್ನು ದಾಟಲಿಲ್ಲ.
ಮಾನವನ ಹಸ್ತವು ಬಂಡೆಗಳನ್ನು ಒಡೆಯುತ್ತದೆ;
ಪರ್ವತಗಳ ಬುಡಗಳನ್ನು ಸಹ ಬರಿದಾಗಿ ಮಾಡುತ್ತವೆ.
10 ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುತ್ತಾರೆ;
ಅವರ ಕಣ್ಣು ಅದರ ಎಲ್ಲಾ ಸಂಪತ್ತನ್ನು ನೋಡುತ್ತದೆ.
11 ಜನರು ನದಿಗಳ ಮೂಲಗಳನ್ನು ಹುಡುಕುತ್ತಾರೆ;
ಅಡಗಿದ್ದ ಸಂಗತಿಗಳನ್ನು ಬೆಳಕಿಗೆ ತರುತ್ತಾರೆ.
 
12 ಆದರೆ ಜ್ಞಾನವು ಎಲ್ಲಿ ದೊರಕುವುದು?
ಗ್ರಹಿಕೆ ಇರುವ ಸ್ಥಳ ಎಲ್ಲಿ?
13 ಜ್ಞಾನದ ಮೌಲ್ಯ ಯಾರಿಗೂ ಗೊತ್ತಿಲ್ಲ;
ಜೀವಿಸುವವರಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.
14 ಸಾಗರ, “ಜ್ಞಾನವು ನನ್ನ ಹತ್ತಿರ ಇಲ್ಲ,” ಎನ್ನುತ್ತದೆ;
ಸಮುದ್ರವು, “ಜ್ಞಾನವು ನನ್ನ ಬಳಿಯಲ್ಲಿ ಇಲ್ಲ,” ಎನ್ನುತ್ತದೆ.
15 ಚೊಕ್ಕ ಬಂಗಾರಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲಾಗದು;
ಜ್ಞಾನದ ಬೆಲೆಗೆ ಬೆಳ್ಳಿಯನ್ನು ತೂಕಮಾಡಲಾಗದು.
16 ಜ್ಞಾನವನ್ನು ಓಫಿರಿನ ಬಂಗಾರಕ್ಕೂ,
ಅಮೂಲ್ಯವಾದ ಗೋಮೇಧಿಕಕ್ಕೂ, ಇಂದ್ರನೀಲಕ್ಕೂ ಬೆಲೆ ಕಟ್ಟಲಾಗದು.
17 ಬಂಗಾರವೂ, ಸ್ಪಟಿಕವೂ ಜ್ಞಾನಕ್ಕೆ ಸಮವಾಗಿರುವುದಿಲ್ಲ;
ಬಂಗಾರದ ಆಭರಣಗಳು ಸಹ ಜ್ಞಾನಕ್ಕೆ ಸಮವಲ್ಲ.
18 ಹವಳವೂ, ಸೂರ್ಯಕಾಂತ ಶಿಲೆಯೂ ಜ್ಞಾನಕ್ಕೆ ಹೋಲಿಸಲು ಅರ್ಹವಲ್ಲ;
ಜ್ಞಾನದ ಬೆಲೆಯು ಮಾಣಿಕ್ಯಗಳಿಗಿಂತ ಎಷ್ಟೋ ಶ್ರೇಷ್ಠ!
19 ಕೂಷ್ ದೇಶದ ಪುಷ್ಯರಾಗವು ಸಹ ಜ್ಞಾನಕ್ಕೆ ಹೋಲಿಸಲಾಗುವುದಿಲ್ಲ;
ಶುದ್ಧ ಬಂಗಾರದಿಂದಲೂ ಜ್ಞಾನವನ್ನು ಕೊಂಡುಕೊಳ್ಳಲಾಗದು.
 
20 ಆದರೆ ಜ್ಞಾನವು ಎಲ್ಲಿಂದ ಬರುವುದು?
ಗ್ರಹಿಕೆಯ ಸ್ಥಳವು ಎಲ್ಲಿ?
21 ಎಲ್ಲಾ ಜೀವಿಗಳ ಕಣ್ಣಿಗೂ ಜ್ಞಾನ ಮರೆಯಾಗಿದೆ;
ಆಕಾಶದ ಪಕ್ಷಿಗಳಿಗೂ ಅದು ಗೋಚರವಾಗದು.
22 ನಾಶಲೋಕವೂ ಮರಣವೂ, “ನಾವು ಜ್ಞಾನದ ಸುದ್ದಿಯನ್ನು
ನಮ್ಮ ಕಿವಿಗಳಿಂದ ಕೇಳಿದ್ದೇವೆ ಅಷ್ಟೇ,” ಎನ್ನುತ್ತವೆ.
23 ದೇವರು ಮಾತ್ರ ಜ್ಞಾನ ಮಾರ್ಗವನ್ನು ತಿಳಿದಿರುತ್ತಾರೆ;
ಹೌದು, ದೇವರೇ ಜ್ಞಾನ ಸ್ಥಳವನ್ನು ತಿಳಿದಿದ್ದಾರೆ.
24 ದೇವರೊಬ್ಬರೇ ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಿ,
ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವರಾಗಿದ್ದಾರೆ.
25 ದೇವರು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿ,
ನೀರುಗಳನ್ನು ತಕ್ಕ ಪ್ರಮಾಣಗಳಿಂದ ಅಳತೆಮಾಡಿ,
26 ಮಳೆಗೆ ಕಟ್ಟಳೆಯನ್ನೂ,
ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ
27 ಜ್ಞಾನವನ್ನು ಕಂಡು ಲಕ್ಷಿಸಿದರು.
ಹೌದು, ದೇವರು ಜ್ಞಾನವನ್ನು ದೃಢಪಡಿಸಿದ್ದಲ್ಲದೆ, ಅದನ್ನು ಪರೀಕ್ಷೆಮಾಡಿದರು.
28 ದೇವರು ಮನುಷ್ಯನಿಗೆ,
“ಇಗೋ, ಕರ್ತ ದೇವರಲ್ಲಿ ಭಯಭಕ್ತಿ ಇಡುವುದೇ ಜ್ಞಾನ!
ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ,” ಎಂದು ಹೇಳಿದರು.