27
ಯೋಬನ ಕೊನೆಯ ಮಾತುಗಳು
ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:
ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ,
ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ,
“ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ;
ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಆಡುತ್ತಿದೆ.
ನನ್ನ ತುಟಿಗಳು ಸುಳ್ಳನ್ನು ನುಡಿಯುವುದೇ ಇಲ್ಲ.
ನನ್ನ ನಾಲಿಗೆಯು ಎಷ್ಟು ಮಾತ್ರಕ್ಕೂ ಮೋಸದ ಮಾತುಗಳನ್ನಾಡುವುದಿಲ್ಲ.
ನೀವು ನ್ಯಾಯವಂತರೆಂದು ನಾನು ಒಪ್ಪುವುದಿಲ್ಲ;
ನಾನು ಸಾಯುವ ತನಕ, ನನ್ನ ಪ್ರಾಮಾಣಿಕತ್ವವನ್ನು ಬಿಡುವುದಿಲ್ಲ.
ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ;
ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ;
ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ.
 
“ನನ್ನ ಶತ್ರು ದುಷ್ಟನ ಹಾಗಿರಲಿ;
ನನ್ನ ವಿರುದ್ಧ ಏಳುವವನು ಅನ್ಯಾಯವಂತನ ಹಾಗಿರಲಿ.
ದೇವರು ಭಕ್ತಿಹೀನನನ್ನು ಕಡಿದುಬಿಟ್ಟರೆ, ಅವನ ಪ್ರಾಣ ತೆಗೆದುಕೊಂಡರೆ,
ಅವನಿಗೆ ನಿರೀಕ್ಷೆ ಎಲ್ಲಿ?
ಭಕ್ತಿಹೀನನಿಗೆ ಯಾತನೆ ಬಂದರೆ,
ದೇವರು ಅವನ ಮೊರೆಯನ್ನು ಕೇಳುವರೋ?
10 ಭಕ್ತಿಹೀನನು ಸರ್ವಶಕ್ತರಲ್ಲಿ ಆನಂದವಾಗಿರುವನೋ?
ಸರ್ವಕಾಲದಲ್ಲಿಯೂ ದೇವರನ್ನು ಕರೆಯುವನೋ?
 
11 “ನಾನು ದೇವರ ಶಕ್ತಿಯ ಬಗ್ಗೆ ನಿಮಗೆ ಬೋಧಿಸುವೆನು;
ಸರ್ವಶಕ್ತರ ಮಾರ್ಗಗಳನ್ನು ನಾನು ಮರೆಮಾಡೆನು.
12 ನೀವೆಲ್ಲರೂ ಇದನ್ನು ನೋಡಿದ್ದರೂ,
ಮತ್ತೆ ಏಕೆ ಈ ಪ್ರಕಾರ ವ್ಯರ್ಥವಾಗಿ ವಾದಿಸುತ್ತೀರಿ?
 
13 “ಇದು ದುಷ್ಟರಿಗೆ ದೇವರಿಂದ ಬಂದ ಪಾಲಾಗಿದೆ;
ಹಿಂಸಕರಿಗೆ ಸರ್ವಶಕ್ತರಿಂದ ಹೊಂದುವ ಪಾಲು ಹೀಗಿರುತ್ತವೆ:
14 ಅವರ ಮಕ್ಕಳು ಹೆಚ್ಚಿದರೂ ಖಡ್ಗಕ್ಕೆ ಗುರಿಯಾಗುವರು;
ಅವರ ಸಂತತಿಯವರಿಗೆ ಆಹಾರದ ಕೊರತೆ ಇರುವುದು.
15 ಅವರ ಮನೆಯಲ್ಲಿ ಯಾರಾದರೂ ಉಳಿದರೆ, ವ್ಯಾಧಿಯಿಂದ ಸತ್ತು ಸಮಾಧಿ ಸೇರುವರು;
ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.
16 ದುಷ್ಟರು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ,
ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿಕೊಂಡಿದ್ದರೂ,
17 ಅವರು ಕೂಡಿಸಿಟ್ಟಿದ್ದನ್ನು ನೀತಿವಂತರು ಹಂಚಿಕೊಳ್ಳುವರು;
ಅವರ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
18 ದುಷ್ಟರು ಕಟ್ಟಿಕೊಂಡ ಮನೆಯು ಜೇಡ ಹುಳದ ಗೂಡಿನಂತೆಯೂ,
ಕಾವಲುಗಾರನ ಗುಡಿಸಿಲಂತೆಯೂ ದುರ್ಬಲವಾಗಿರುವುದು.
19 ದುಷ್ಟರು ಧನಿಕರಾಗಿ ನಿದ್ರಿಸಿದರೂ ಮತ್ತೆ ನಿದ್ರೆಬಾರದು;
ಅವರು ತಮ್ಮ ಕಣ್ಣನ್ನು ತೆರೆಯುತ್ತಲೇ ಆಸ್ತಿ ಇಲ್ಲವಾಗಿರುವುದು.
20 ವಿಪತ್ತುಗಳು ಪ್ರವಾಹದಂತೆ ಅಂಥವರನ್ನು ಹಿಡಿಯುವುವು;
ರಾತ್ರಿಯಲ್ಲಿ ಬಿರುಗಾಳಿ ಅಂಥವರನ್ನು ಅಪಹರಿಸುವುದು.
21 ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು;
ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು.
22 ಆ ಗಾಳಿಯು ಕರುಣೆ ಇಲ್ಲದೆ ದುಷ್ಟರ ಮೇಲೆ ಬೀಸಲು,
ಅವರು ಅದರ ಶಕ್ತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವರು.
23 ಕೊನೆಗೆ ಜನರು ದುಷ್ಟರ ಕಡೆಗೆ ಅಪಹಾಸ್ಯದಿಂದ ಚಪ್ಪಾಳೆ ತಟ್ಟುವರು;
ಅನಂತರ ಅವರ ಸ್ಥಳದೊಳಗಿಂದ ಅವರನ್ನು ಹೊರಹಾಕುವರು.”