4
ಎಲೀಫಜನ ವಾದ
ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟನು:
“ಒಬ್ಬನು ನಿನ್ನ ಸಂಗಡ ಮಾತಾಡ ತೊಡಗಿದರೆ, ನಿನಗೆ ಬೇಸರಿಕೆ ಉಂಟಾಗುವುದೋ?
ಮಾತಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು?
ಅನೇಕರಿಗೆ ನೀನು ಶಿಕ್ಷಣ ಕೊಟ್ಟದ್ದನ್ನೂ
ಬಲಹೀನ ಕೈಗಳನ್ನು ಬಲಪಡಿಸಿದ್ದನ್ನೂ ಯೋಚಿಸು.
ಎಡವಿ ಬೀಳುವವನನ್ನು ನಿನ್ನ ನುಡಿಗಳು ಎದ್ದು ನಿಲ್ಲಿಸಿದವು.
ಬಲಹೀನವಾದ ಮೊಣಕಾಲುಗಳನ್ನು ಬಲಪಡಿಸಿದೆ.
ಈಗ ಆಪತ್ತು ನಿನ್ನ ಮೇಲೆ ಬಂದದ್ದರಿಂದ ನೀನು ದಣಿಯುತ್ತಿರುವೆ;
ನಿನಗೂ ಕಡುಕಷ್ಟ ತಟ್ಟಿದ್ದರಿಂದ ಕಳವಳಪಡುತ್ತಿರುವೆ.
ನಿನ್ನ ಭಯಭಕ್ತಿಯೇ ನಿನಗೆ ಭರವಸೆಯೂ
ನಿನ್ನ ಸನ್ಮಾಮಾರ್ಗಗಳು ನಿನ್ನ ನಿರೀಕ್ಷೆಯೂ ಆಗಿರಬೇಕಲ್ಲವೇ?
 
“ನೆನಪುಮಾಡಿಕೋ, ನಿರಪರಾಧಿಯಾಗಿ ನಾಶವಾದವನು ಯಾವನು?
ನೀತಿವಂತರು ಅಳಿದು ಹೋದದ್ದು ಎಲ್ಲಿ?
ನಾನು ಕಂಡ ಹಾಗೆ ಕೆಟ್ಟತನವನ್ನು ಊಳುವವರೂ
ದುಷ್ಟತನವನ್ನು ಬಿತ್ತುವವರೂ ಅದನ್ನೇ ಕೊಯ್ಯುವರು.
ದೇವರ ಉಸಿರಿನಿಂದ ಅವರು ಕ್ಷಯಿಸಿ ಹೋಗುತ್ತಾರೆ.
ದೇವರ ದಂಡನೆಯಿಂದ ಅಂಥವರು ನಾಶವಾಗುತ್ತಾರೆ;
10 ಸಿಂಹಗಳು ಗರ್ಜಿಸಬಹುದು ಮತ್ತು ಕೂಗಬಹುದು,
ಆದರೂ ಪ್ರಾಯದ ಸಿಂಹಗಳ ಹಲ್ಲುಗಳು ಮುರಿದುಹೋಗಿವೆ.
11 ಸಿಂಹವು ಬೇಟೆ ಇಲ್ಲದ್ದರಿಂದ ನಾಶವಾಗುತ್ತದೆ;
ಸಿಂಹದ ಮರಿಗಳು ಚದರಿಹೋಗುವವು.
 
12 “ಒಂದು ಮಾತು ನನಗೆ ಗುಟ್ಟಾಗಿ ತಿಳಿದುಬಂತು,
ಅದರ ಪಿಸುಮಾತು ನನ್ನ ಕಿವಿಗೆ ಬಿತ್ತು.
13 ರಾತ್ರಿ ಕನಸಿನ ಆಲೋಚನೆಗಳಲ್ಲಿಯೂ
ಗಾಢನಿದ್ರೆಯು ಜನರಿಗೆ ಹತ್ತುವಾಗಲೂ
14 ಭಯವೂ ನಡುಕವೂ ನನ್ನನ್ನು ಹಿಡಿದು,
ನನ್ನ ಎಲ್ಲಾ ಎಲುಬುಗಳನ್ನು ನಡುಗಿಸಿತು.
15 ಒಂದು ಆತ್ಮವು ನನ್ನ ಮುಂದೆ ಹಾದುಹೋಯಿತು,
ಆಗ ನನ್ನ ಮೈ ರೋಮವೆಲ್ಲಾ ನಿಮಿರಿ ನಿಂತವು.
16 ಆ ಆತ್ಮ ನಿಂತಿದ್ದರೂ
ಅದು ಏನೆಂದು ನನಗೆ ತಿಳಿಯಲಿಲ್ಲ.
ಅದರ ರೂಪವು ನನ್ನ ಕಣ್ಣು ಮುಂದೆ ನಿಂತಿತ್ತು,
ಆಗ ಒಂದು ಸೂಕ್ಷ್ಮ ಸ್ವರವು ಕೇಳಿಸಿತು:
17 ‘ಮನುಷ್ಯನು ದೇವರಿಗಿಂತ ಹೆಚ್ಚು ನೀತಿವಂತನಾಗಿರಲು ಸಾಧ್ಯವೇ?
ಮಾನವನು ಸೃಷ್ಟಿಕರ್ತ ದೇವರಿಗಿಂತಲೂ ಶುದ್ಧನಾಗಿರಲು ಸಾಧ್ಯವೇ?
18 ತಮ್ಮ ಸೇವಕರಲ್ಲಿ ದೇವರು ನಂಬದೆ,
ತಮ್ಮ ದೂತರಲ್ಲಿಯೇ ತಪ್ಪು ಕಂಡಿರಲು,
19 ಧೂಳಿನಲ್ಲಿರುವ ಅಸ್ತಿವಾರದ ಮೇಲೆ ಮಣ್ಣಿನ ಮನೆಗಳ ನಿವಾಸಿಗಳು,
ನುಸಿಗಿಂತಲೂ ಹೆಚ್ಚಾಗಿ ಜಜ್ಜಿಹೋದವರು,
ಇನ್ನೂ ಹೆಚ್ಚಾಗಿ ದಂಡನೆಗೆ ಒಳಪಡುವರಲ್ಲವೇ?
20 ಬೆಳಿಗ್ಗೆಯಿಂದ ಸಂಜೆಯವರೆಗೆ ಜೀವಿಸಿದ ಅವರು ನಾಶವಾಗುತ್ತಾರೆ;
ಯಾರ ಗಮನಕ್ಕೂ ಬಾರದೇ ನಿತ್ಯ ನಾಶವಾಗುತ್ತಾರೆ.
21 ಅವರ ಗುಡಾರದ ಹಗ್ಗವು ಬಿಚ್ಚಿಹೋಗುವುದು,
ಅವರು ಜ್ಞಾನವಿಲ್ಲದೆ ಸಾಯುವರು.’