5
“ಈಗ ನೀನು ಕರೆದರೆ, ನಿನಗೆ ಉತ್ತರ ಕೊಡುವವರು ಇದ್ದಾರೋ?
ಪರಿಶುದ್ಧರಲ್ಲಿ ಯಾರ ಕಡೆಗೆ ನೀನು ತಿರುಗಿಕೊಳ್ಳುವೆ?
ಮೂಢನನ್ನು ಅಸಮಾಧಾನವು ಕೊಲ್ಲುವುದು;
ಮುಗ್ಧನನ್ನು ಅಸುಹೆ ಸಾಯುವಂತೆ ಮಾಡುವುದು.
ಮೂಢನು ಬೇರೂರುವುದನ್ನು ನಾನು ನೋಡಿದೆನು,
ಕೂಡಲೇ ಅವನ ಮನೆ ಶಾಪಕ್ಕಿಡಾಗುವುದನ್ನು ಕಂಡೆನು.
ಅವನ ಮಕ್ಕಳು ಭದ್ರತೆಯಿಲ್ಲದವರಾಗುವರು;
ಬಿಡಿಸತಕ್ಕವರಿಲ್ಲದೆ ಅವರು ನ್ಯಾಯಸ್ಥಾನದಲ್ಲಿ ಸೋತುಹೋಗುವರು.
ಹಸಿದವರು ಅವನ ಪೈರನ್ನು ತಿಂದುಬಿಡುವರು;
ಮುಳ್ಳುಬೇಲಿ ಹಾಕಿದ್ದರೂ ಅದನ್ನು ತೆಗೆದುಕೊಳ್ಳುವರು;
ಅವನ ಆಸ್ತಿಯನ್ನು ಬಾಯಾರಿಕೆಯಾದವರು ನುಂಗಿಬಿಡುವರು.
ಮಣ್ಣಿನಿಂದ ಕಷ್ಟಗಳು ಹುಟ್ಟುವುದಿಲ್ಲ;
ಭೂಮಿಯಿಂದ ತೊಂದರೆ ಮೊಳೆಯುವುದಿಲ್ಲ.
ಆದರೂ ಕಿಡಿಗಳು ಹಾರುವ ಪ್ರಕಾರವೇ,
ಮನುಷ್ಯನು ಶ್ರಮೆಹೊಂದಲು ಹುಟ್ಟುತ್ತಾನೆ.
 
“ನಾನು ನೀನಾಗಿದ್ದರೆ ದೇವರಿಗೇ ಬೇಡಿಕೊಳ್ಳುತ್ತಿದ್ದೆ;
ನನ್ನ ವಿಷಯವನ್ನು ದೇವರ ಮುಂದೆಯೇ ಇಡುತ್ತಿದ್ದೆ.
ದೇವರು ಸಂಶೋಧನೆ ಮಾಡಲಾಗದಷ್ಟು ಮಹಾಕಾರ್ಯಗಳನ್ನೂ,
ಅಸಂಖ್ಯವಾದ ಅದ್ಭುತ ಕೃತ್ಯಗಳನ್ನೂ ಮಾಡುತ್ತಾರೆ.
10 ಭೂಮಿಯ ಮೇಲೆ ಮಳೆಯನ್ನು ಕೊಡುತ್ತಾರೆ;
ಹೊಲಗಳ ಮೇಲೆ ನೀರನ್ನು ಸುರಿಸುತ್ತಾರೆ.
11 ದೇವರು ತಗ್ಗಿದವರನ್ನು ಉನ್ನತದಲ್ಲಿಡುತ್ತಾರೆ;
ದುಃಖವುಳ್ಳವರನ್ನು ಭದ್ರತೆಗೆ ಒಯ್ಯುತ್ತಾರೆ.
12 ದೇವರು ವಂಚಕರ ಯೋಜನೆಗಳನ್ನು ಭಂಗಪಡಿಸುತ್ತಾರೆ.
ಕುಯುಕ್ತಿಯುಳ್ಳವರ ಕೈಗಳು ಯಾವುದೇ ಯಶಸ್ಸನ್ನು ಸಾಧಿಸದಂತೆ ಮಾಡುತ್ತಾರೆ.
13 ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುತ್ತಾರೆ,
ಮತ್ತು ಕುತಂತ್ರಿಯ ಯೋಜನೆಗಳನ್ನು ನಿರರ್ಥಕಮಾಡುತ್ತಾರೆ.
14 ಕುತಂತ್ರರು ಹಗಲಿನಲ್ಲಿಯೇ ಕತ್ತಲೆಯನ್ನು ಸಂಧಿಸುತ್ತಾರೆ;
ಮಧ್ಯಾಹ್ನದಲ್ಲಿ ರಾತ್ರಿಯಂತೆ ತಡಕಾಡುತ್ತಾರೆ.
15 ದೇವರು ದಿಕ್ಕಿಲ್ಲದವರನ್ನು ದಬ್ಬಾಳಿಕೆಮಾಡುವವರ ಬಾಯಿಯೆಂಬ ಖಡ್ಗದಿಂದಲೂ,
ಬಲಿಷ್ಠರ ಕೈಯೊಳಗಿಂದಲೂ ರಕ್ಷಿಸುತ್ತಾರೆ.
16 ಆದ್ದರಿಂದ ಬಡವರಿಗೆ ನಿರೀಕ್ಷೆಯುಂಟಾಗುವುದು;
ಅನ್ಯಾಯವು ತನ್ನ ಬಾಯಿ ಮುಚ್ಚಿಕೊಳ್ಳುವುದು.
 
17 “ಇಗೋ, ದೇವರು ಗದರಿಸುವ ಮನುಷ್ಯನು ಧನ್ಯನು;
ಸರ್ವಶಕ್ತರ ಶಿಕ್ಷೆಯನ್ನು ತಿರಸ್ಕರಿಸಬೇಡ.
18 ಗಾಯ ಮಾಡುವವರೂ ಗಾಯ ಕಟ್ಟುವವರೂ ದೇವರೇ;
ಹೊಡೆಯುವುದೂ ಗುಣಪಡಿಸುವುದೂ ದೇವರ ಕೈಯೇ.
19 ದೇವರು ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವರು;
ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.
20 ಬರದಲ್ಲಿ ನಿನ್ನನ್ನು ಮರಣದೊಳಗಿಂದಲೂ,
ಯುದ್ಧದಲ್ಲಿ ಖಡ್ಗದ ಬಲದಿಂದಲೂ ದೇವರು ವಿಮೋಚಿಸುವರು.
21 ನೀನು ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ;
ನಾಶ ಬಂದಾಗ ನೀನು ಭಯಪಡುವುದಿಲ್ಲ.
22 ನೀನು ನಾಶಕ್ಕೂ, ಕ್ಷಾಮಕ್ಕೂ ನಗುವೆ;
ಕಾಡುಮೃಗಗಳಿಗೂ ನೀನು ಭಯಪಡುವುದಿಲ್ಲ.
23 ಹೊಲದ ಕಲ್ಲುಗಳ ಸಂಗಡ ನಿನಗೆ ಒಪ್ಪಂದ ಇರುವುದು;
ಕಾಡು ಮೃಗಗಳೂ ನಿನ್ನೊಂದಿಗೆ ಸಮಾಧಾನವಾಗಿರುವವು.
24 ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ನೀನು ತಿಳಿದುಕೊಳ್ಳುವೆ,
ನಿನ್ನ ಆಸ್ತಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
25 ನಿನ್ನ ಸಂತತಿಯು ಬಹಳವಾಗಿದೆ ಎಂದೂ,
ನಿನ್ನ ಸಂತಾನವು ಭೂಮಿಯ ಹುಲ್ಲಿನಂತಿದೆ ಎಂದೂ ತಿಳಿದುಕೊಳ್ಳುವೆ.
26 ಸಿವುಡು ತನ್ನ ಕಾಲದಲ್ಲಿ ಮನೆಗೆ ಸೇರುವಂತೆ
ನೀನು ಪೂರ್ಣ ಪ್ರಾಯದವನಾಗಿ ಸಮಾಧಿ ಸೇರುವೆ.
 
27 “ಇದನ್ನು ನಾವು ಪರಿಶೋಧಿಸಿದ್ದೇವೆ; ಇದು ಸತ್ಯವಾದದ್ದು,
ಇದನ್ನು ನೀನು ಕೇಳಿ ತಿಳಿದುಕೋ, ಇದನ್ನು ನೀನು ಅನ್ವಯಿಸು.”