9
ಯೋಬನ ಪ್ರತಿವಾದ
ಅದಕ್ಕೆ ಯೋಬನು ಉತ್ತರಿಸುತ್ತಾ ಇಂತೆಂದನು:
“ನಿಜಕ್ಕೂ, ಇದು ಸತ್ಯ ಎಂದು ಬಲ್ಲೆನು;
ಆದರೆ ಮನುಷ್ಯರು ದೇವರ ಮುಂದೆ ತಮ್ಮ ಮುಗ್ಧತೆಯನ್ನು ಪ್ರಮಾಣಿಕರಿಸುವುದು ಹೇಗೆ?
ದೇವರ ಸಂಗಡ ವ್ಯಾಜ್ಯವಾಡಲು ಮನುಷ್ಯನು ಬಯಸಿದರೂ,
ದೇವರ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಲಾರನು.
ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ;
ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?
ದೇವರು ಪರ್ವತಗಳನ್ನು ಅವುಗಳಿಗೆ ತಿಳಿಯದ ಹಾಗೆ ಸರಿಸುತ್ತಾರೆ;
ತಮ್ಮ ಎದುರಿನಲ್ಲಿ ಅವುಗಳನ್ನು ತಿರುಗಿಸುತ್ತಾರೆ.
ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುತ್ತಾರೆ;
ಅದರ ಸ್ತಂಭಗಳು ನಡುಗುತ್ತವೆ.
ದೇವರು ಸೂರ್ಯನಿಗೆ ಪ್ರಕಾಶಿಸದಂತೆ ಅಪ್ಪಣೆ ಕೊಟ್ಟರೆ, ಪ್ರಕಾಶಿಸುತ್ತಿರಲಿಲ್ಲ;
ನಕ್ಷತ್ರಗಳಿಗೆ ಮುದ್ರೆ ಹಾಕಿದ್ದರೆ, ನಕ್ಷತ್ರವೂ ಮಿನುಗುತ್ತಿರಲಿಲ್ಲ.
ದೇವರೊಬ್ಬರೇ ಆಕಾಶಗಳನ್ನು ಹರಡಿಸುತ್ತಾರೆ;
ದೇವರು ಸಮುದ್ರದ ತೆರೆಗಳ ಮೇಲೆ ನಡೆಯುತ್ತಾರೆ.
ಸಪ್ತರ್ಷಿಮಂಡಲವನ್ನೂ, ಮೃಗಶಿರವನ್ನೂ,
ಕೃತ್ತಿಕೆಯನ್ನೂ ದಕ್ಷಿಣ ದಿಕ್ಕಿನ ನಕ್ಷತ್ರಗ್ರಹಗಳನ್ನೂ ನಿರ್ಮಿಸಿದವರು ದೇವರೇ.
10 ದೇವರು ಕಂಡು ಹಿಡಿಯಲಾರದಂಥ ಮಹತ್ಕಾರ್ಯಗಳನ್ನೂ,
ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾರೆ.
11 ದೇವರು ನನ್ನ ಮುಂದೆ ಹಾದುಹೋದಾಗ, ನನಗೆ ಅವರು ಕಾಣುವುದಿಲ್ಲ;
ದೇವರು ದಾಟಿ ಹೋಗುತ್ತಾರೆ; ಆದರೆ ನಾನು ಅವರನ್ನು ಗ್ರಹಿಸಿಕೊಳ್ಳುವುದಿಲ್ಲ.
12 ದೇವರು ತೆಗೆದುಕೊಂಡರೆ, ಅವರಿಗೆ ಅಡ್ಡಿ ಮಾಡುವವರು ಯಾರು?
ದೇವರನ್ನು, ‘ನೀವು ಏನು ಮಾಡುತ್ತೀರಿ?’ ಎಂದು ಕೇಳುವವರ‍್ಯಾರು.
13 ದೇವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ;
ರಹಾಬನ* ಸಹಾಯಕರು ಸಹ ದೇವರ ಕಾಲಿಗೆ ಅಡ್ಡಬಿದ್ದರಲ್ಲಾ.
 
14 “ದೇವರೊಂದಿಗೆ ವಾದಿಸಲು ನಾನು ಅಶಕ್ತನು;
ದೇವರಿಗೆ ತಕ್ಕ ಉತ್ತರ ಕೊಡಲು ನಾನು ಎಷ್ಟರವನು?
15 ನಾನು ನೀತಿವಂತನಾಗಿದ್ದರೂ ಉತ್ತರ ಕೊಡೆನು;
ಆದರೆ ನನ್ನ ನ್ಯಾಯಾಧಿಪತಿಗೆ ಕರುಣೆಗೋಸ್ಕರ ಮೊರೆಯಿಡುವೆನು.
16 ನಾನು ಕರೆಯಲು ದೇವರು ನನಗೆ ಉತ್ತರ ಕೊಟ್ಟರೂ,
ನನ್ನ ವಿಜ್ಞಾಪನೆಗೆ ದೇವರು ಕಿವಿಗೊಡುವರೆಂದು ನಾನು ನಂಬುತ್ತಿರಲಿಲ್ಲ.
17 ಏಕೆಂದರೆ ದೇವರು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾರೆ;
ನನ್ನ ಗಾಯಗಳನ್ನು ಕಾರಣವಿಲ್ಲದೆ ಹೆಚ್ಚಿಸುತ್ತಾರೆ.
18 ನಾನು ಉಸಿರಾಡಲು ಕಷ್ಟಪಡುತ್ತಿದ್ದೇನೆ,
ದೇವರು ಕಹಿಯಾದವುಗಳಿಂದ ನನ್ನನ್ನು ತುಂಬಿಸುತ್ತಾರೆ.
19 ಶಕ್ತಿಯ ವಿಷಯದಲ್ಲಿ ಹೇಳಬೇಕಾದರೆ, ಇಗೋ ದೇವರು ಬಲಶಾಲಿ!
ನ್ಯಾಯದ ವಿಷಯದಲ್ಲಿ ವಾದಿಸಬೇಕಾದರೆ, ದೇವರಿಗೆ ಸವಾಲು ಹಾಕುವವರು ಯಾರು?
20 ನಾನು ನೀತಿವಂತನಾಗಿದ್ದರೂ, ನನ್ನ ಸ್ವಂತ ಬಾಯೇ ನನ್ನನ್ನು ಖಂಡಿಸುತ್ತದೆ;
ನಾನು ನಿರ್ದೋಷಿಯಾಗಿದ್ದರೂ, ದೇವರು ನನ್ನನ್ನು ಅಪರಾಧಿ ಎಂದು ನಿರೂಪಿಸುವರು.
 
21 “ನಾನು ನಿರ್ದೋಷಿಯೇ ಹೌದು,
ನನ್ನ ಬಗ್ಗೆ ನನಗೆ ಚಿಂತೆ ಇಲ್ಲ;
ನನ್ನ ಬಾಳನ್ನೇ ತಿರಸ್ಕಾರ ಮಾಡುತ್ತೇನೆ.
22 ಇದೆಲ್ಲಾ ಒಂದೇ ವಿಷಯ; ಆದ್ದರಿಂದ ನಾನು ಇದನ್ನು ಹೇಳುತ್ತೇನೆ:
‘ನಿರ್ದೋಷಿಯನ್ನೂ, ಕೆಟ್ಟವನನ್ನೂ ದೇವರು ದಂಡಿಸುತ್ತಾರೆ.’
23 ವಿಪತ್ತು ಅಕಸ್ಮಾತ್ತಾಗಿ ಮರಣವನ್ನು ತಂದರೆ,
ನಿರಪರಾಧಿಯ ಬುದ್ಧಿಹೀನತೆಗೆ ದೇವರು ನಗುವರು.
24 ಲೋಕವು ಕೆಟ್ಟವರ ಕೈವಶವಾಗಿದೆ;
ನ್ಯಾಯಾಧಿಪತಿಗಳ ಮುಖಕ್ಕೆ ಮುಸುಕುಹಾಕಲಾಗಿದೆ;
ಇದನ್ನು ಅನುಮತಿಸಿದವರು ದೇವರಲ್ಲದೆ ಮತ್ತೆ ಯಾರು?
 
25 “ಆದರೆ ನನ್ನ ದಿನಗಳು ಅಂಚೆಯವನಿಗಿಂತಲೂ ತ್ವರೆಯಾಗಿವೆ;
ಆನಂದವನ್ನೂ ನೋಡದೆ ದಿನಗಳು ಓಡಿಹೋಗುತ್ತವೆ.
26 ಆಪಿನ ದೋಣಿಗಳು ದಾಟಿ ಹೋಗುವಂತೆಯೂ,
ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ದಿನಗಳು ವೇಗವಾಗಿ ಗತಿಸಿಹೋಗುತ್ತವೆ.
27 ‘ನಾನು ನನ್ನ ದೂರುಗಳನ್ನು ಮರೆತು,
ನನ್ನ ಭಾರವನ್ನು ಬಿಟ್ಟು, ಆದರಣೆ ಹೊಂದುವೆನು,’ ಎಂದು ತೀರ್ಮಾನಿಸಿಕೊಂಡರೆ,
28 ನನಗಾದ ವ್ಯಥೆಗಳಿಗೆಲ್ಲಾ ನಾನು ಇನ್ನೂ ಹೆದರುತ್ತಿದ್ದೇನೆ;
ದೇವರು ನನ್ನನ್ನು ನಿರಪರಾಧಿ ಎಂದು ಎಣಿಸುವುದಿಲ್ಲವೆಂದು ಸಹ ನನಗೆ ಗೊತ್ತಿದೆ.
29 ನಾನು ಈಗಾಗಲೇ ಅಪರಾಧಿ ಎಂದು ನಿರ್ಣಯವಾಗಿರುವಾಗ,
ನಾನು ಏಕೆ ವ್ಯರ್ಥವಾಗಿ ಹೋರಾಡಬೇಕು?
30 ನಾನು ಹಿಮದ ನೀರಿನಲ್ಲಿ ಸ್ನಾನಮಾಡಿ,
ಸಾಬೂನಿನಿಂದ ನನ್ನ ಕೈಗಳನ್ನು ತೊಳೆದುಕೊಂಡರೂ,
31 ದೇವರು ನನ್ನನ್ನು ಕುಣಿಯಲ್ಲಿ ಮುಳುಗಿಸಿ ಬಿಡುವರು;
ನನ್ನ ಸ್ವಂತ ವಸ್ತ್ರಗಳೇ ನನ್ನನ್ನು ಅಸಹ್ಯಪಡಬೇಕಾಗುವುದು.
 
32 “ದೇವರು ನನ್ನಂಥ ಕೇವಲ ಮನುಷ್ಯನಲ್ಲ, ನಾನು ದೇವರೊಂದಿಗೆ ವಾದಿಸುವುದು ಹೇಗೆ?
ನಾವಿಬ್ಬರೂ ನ್ಯಾಯಾಲಯದ ಮುಂದೆ ಕೂಡಿ ವಾದಿಸುವುದು ಹೇಗೆ?
33 ನಮ್ಮಿಬ್ಬರನ್ನು ಒಟ್ಟು ಸೇರಿಸುವ
ಮಧ್ಯಸ್ಥ ಒಂದು ವೇಳೆ ನಮ್ಮ ನಡುವೆ ಇದ್ದಿದ್ದರೆ,
34 ದೇವರ ಶಿಕ್ಷೆಯಕೋಲನ್ನು ನನ್ನ ಮೇಲಿನಿಂದ ತೊಲಗಿಸುವ ಒಬ್ಬ ಮಧ್ಯಸ್ಥ ಇದ್ದಿದ್ದರೆ,
ದೇವರ ಭೀತಿಗೆ ನಾನು ಎಂದಿಗೂ ಹೆದರದೆ ಇರುತ್ತಿದ್ದೆ.
35 ಆಗ ನಾನು ದೇವರೊಂದಿಗೆ ಭಯಪಡದೆ ಮಾತನಾಡುತ್ತಿದ್ದೆ;
ನನ್ನ ಸ್ವಂತ ಶಕ್ತಿಯಿಂದ ಈಗ ನಾನು ಅದನ್ನೆಲ್ಲಾ ನನಗೆ ಮಾಡಲು ಸಾಧ್ಯವಿಲ್ಲ.
 
* 9:13 9:13 ರಹಾಬನ ಅಥವಾ ಲೆವಿಯಾತಾನ ಎಂಬ ಪ್ರಾಣಿ