6
ಯೆರೂಸಲೇಮಿನ ಮುತ್ತಿಗೆ
“ಓ ಬೆನ್ಯಾಮೀನನ ಮಕ್ಕಳೇ! ನಿಮ್ಮ ಸುರಕ್ಷತೆಗಾಗಿ
ಯೆರೂಸಲೇಮಿನಿಂದ ಓಡಿಹೋಗಿರಿ,
ತೆಕೋವದಲ್ಲಿ ತುತೂರಿ ಊದಿರಿ;
ಬೇತ್ ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ.
ಏಕೆಂದರೆ ಕೇಡೂ ದೊಡ್ಡ ನಾಶವೂ
ಉತ್ತರದ ಕಡೆಯಿಂದ ತೋರುತ್ತವೆ.
ಸುಂದರಿ ಮತ್ತು ಕೋಮಲಳಾದ
ಚೀಯೋನಿನ ಮಗಳನ್ನು ನಾನು ನಾಶಮಾಡುತ್ತೇನೆ.
ಕುರುಬರು ತಮ್ಮ ಮಂದೆಗಳ ಸಂಗಡ ಅವಳ ವಿರುದ್ಧ ಬರುವರು.
ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು.
ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.”
 
“ಚೀಯೋನಿಗೆ ವಿರೋಧವಾಗಿ ಯುದ್ಧವನ್ನು ಸಿದ್ಧಮಾಡಿರಿ.
ಏಳಿರಿ, ಮಧ್ಯಾಹ್ನದಲ್ಲಿ ದಾಳಿಮಾಡೋಣ.
ನಮಗೆ ಕಷ್ಟ! ಏಕೆಂದರೆ ಹೊತ್ತು ಮುಳುಗುತ್ತದೆ;
ಸಂಜೆಯ ನೆರಳುಗಳು ಉದ್ದವಾಗುತ್ತವೆ.
ಏಳಿರಿ, ರಾತ್ರಿಯಲ್ಲಿ ದಾಳಿಮಾಡೋಣ.
ಅವಳ ಕೋಟೆಗಳನ್ನು ನಾಶಮಾಡೋಣ.”
ಏಕೆಂದರೆ, ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ,
“ಚೀಯೋನ್ ಸುತ್ತಲಿರುವ ಮರಗಳನ್ನು ಕಡಿಯಿರಿ.
ಯೆರೂಸಲೇಮಿಗೆ ವಿರೋಧವಾಗಿ ದಿಬ್ಬ ಹಾಕಿರಿ.
ಇದೇ ನೀವು ದಂಡಿಸತಕ್ಕ ಪಟ್ಟಣವು.
ಅವಳಲ್ಲಿ ಬರೀ ದಬ್ಬಾಳಿಕೆಯೇ ತುಂಬಿದೆ.
ಬುಗ್ಗೆಯು ನೀರನ್ನು ಹರಿಯ ಮಾಡುವಂತೆ,
ಅವಳು ತನ್ನ ಕೆಟ್ಟತನವನ್ನು ಹರಿಯ ಮಾಡುತ್ತಾಳೆ.
ಬಲಾತ್ಕಾರವೂ ಸುಲಿಗೆಯೂ ಅವಳಲ್ಲಿ ಕೇಳ ಬರುತ್ತದೆ.
ದುಃಖವೂ ಗಾಯಗಳೂ ಯಾವಾಗಲೂ ನನ್ನ ಮುಂದೆ ಇವೆ.
ಓ ಯೆರೂಸಲೇಮೇ,
ನನ್ನ ಪ್ರಾಣವು ನಿನ್ನ ಕಡೆಯಿಂದ ಹೊರಟು ಹೋಗದ ಹಾಗೆ,
ನಾನು ನಿಮ್ಮನ್ನು ಹಾಳಾಗಿಯೂ,
ನಿವಾಸಿಗಳಿಲ್ಲದ ದೇಶವಾಗಿಯೂ ಮಾಡದ ಹಾಗೆ ಶಿಕ್ಷಣವನ್ನು ತೆಗೆದುಕೋ.”
ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ,
“ಇಸ್ರಾಯೇಲಿನ ಶೇಷವನ್ನು ದ್ರಾಕ್ಷಿ ಗಿಡದ ಹಾಗೆ
ಪೂರ್ಣವಾಗಿ ಹಕ್ಕಲಾಯುವರು;
ದ್ರಾಕ್ಷಿ ಕೂಡಿಸುವವನ ಹಾಗೆ
ನಿನ್ನ ಕೈಯನ್ನು ರೆಂಬೆಗಳಲ್ಲಿ ಹಿಂದಕ್ಕೆ ತಿರುಗಿಸು.”
 
10 ನಾನು ಯಾರ ಸಂಗಡ ಮಾತನಾಡಲಿ?
ಅವರು ಕೇಳುವ ಹಾಗೆ ಯಾರನ್ನು ಎಚ್ಚರಿಸಲಿ?
ಇಗೋ, ಅವರು ಆಲೈಸಲಾರದ ಹಾಗೆ
ಅವರ ಕಿವಿ ಮುಚ್ಚಿಹೋಗಿವೆ.
ಇಗೋ, ಯೆಹೋವ ದೇವರ ವಾಕ್ಯವು ಅವನಿಗೆ ನಿಂದೆಯಾಗಿದೆ,
ಅದರಲ್ಲಿ ಅವರಿಗೆ ಸಂತೋಷವಿಲ್ಲ.
11 ಆದ್ದರಿಂದ ಯೆಹೋವ ದೇವರ ಕೋಪದಿಂದ ನಾನು ತುಂಬಿದ್ದೇನೆ.
ಅದನ್ನು ನನ್ನೊಳಗೆ ಹಿಡಿಯುವುದು ನನಗೆ ಸಾಕಾಯಿತು.
 
“ಅದನ್ನು ದೂರ ಇರುವ ಮಕ್ಕಳ ಮೇಲೆ
ಮತ್ತು ಯೌವನಸ್ಥರ ಕೂಟ ಸಹಿತವಾಗಿ ಅವರ ಮೇಲೆ ಸುರಿಸುವೆನು.
ಏಕೆಂದರೆ, ನಿಶ್ಚಯವಾಗಿ ಗಂಡನ, ಹೆಂಡತಿಯ ಸಂಗಡ,
ವೃದ್ಧನ, ದಿನತುಂಬಿದವನ ಸಂಗಡ ಹಿಡಿಯಲಾಗುವರು.
12 ಅವರ ಮನೆಗಳೂ ಹೊಲಗಳೂ,
ಹೆಂಡತಿಯರೂ ಸಹಿತವಾಗಿ ಬೇರೊಬ್ಬರ ಪಾಲಾಗುವುವು.
ಏಕೆಂದರೆ, ದೇಶದ ನಿವಾಸಿಗಳ ಮೇಲೆ
ನನ್ನ ಕೈಚಾಚುವೆನು,”
ಎಂದು ಯೆಹೋವ ದೇವರು ಹೇಳುತ್ತಾರೆ.
13 “ಏಕೆಂದರೆ, ಅವರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರತನಕ,
ಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ.
ಪ್ರವಾದಿ ಮೊದಲುಗೊಂಡು ಯಾಜಕರವರೆಗೆ
ಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ.
14 ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ.
ಸಮಾಧಾನವಿಲ್ಲದಿರುವಾಗ, ‘ಸಮಾಧಾನ, ಸಮಾಧಾನ,’ ಎಂದು ಹೇಳುತ್ತಾರೆ.
15 ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ?
ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ. ಲಜ್ಜೆಯನ್ನೇ ಅರಿಯರು.
ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು.
ನಾನು ಅವರನ್ನು ದಂಡಿಸುವ ಕಾಲದಲ್ಲಿ,
ಅವರು ಕೆಳಗೆ ಬೀಳುವರು,”
ಎಂದು ಯೆಹೋವ ದೇವರು ಹೇಳುತ್ತಾರೆ.
16 ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಮಾರ್ಗಗಳಲ್ಲಿ ನಿಂತುಕೊಂಡು ನೋಡಿರಿ,
ಮೊದಲಿನ ಹಾದಿಗಳನ್ನು ಕೇಳಿಕೊಳ್ಳಿರಿ,
ಒಳ್ಳೆಯ ಮಾರ್ಗ ಎಲ್ಲಿದೆಯೋ ಅದರಲ್ಲಿ ನಡೆಯಿರಿ.
ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ ಸಿಕ್ಕುವುದು,
ಆದರೆ ಅವರು, ‘ನಾವು ನಡೆಯುವುದಿಲ್ಲ,’ ಎಂದರು.
17 ಇದಲ್ಲದೆ ನಿಮ್ಮ ಮೇಲೆ ಕಾವಲುಗಾರರನ್ನು ಇರಿಸಿ,
ತುತೂರಿಯ ಶಬ್ದವನ್ನು ಆಲೈಸಿರಿ, ಎಂದೆನು.
ಆದರೆ ಅವರು, ‘ನಾವು ಆಲೈಸುವುದಿಲ್ಲ,’ ಎಂದರು.
18 ಆದ್ದರಿಂದ ಜನಾಂಗಗಳೇ, ಕೇಳಿರಿ;
ಓ ಸಾಕ್ಷಿಗಳೇ, ಅವರಲ್ಲಿ ಇರುವಂಥದ್ದನ್ನು ತಿಳಿದುಕೊಳ್ಳಿರಿ.
19 ಈ ಭೂಮಿಯೇ, ಕೇಳು.
ಇಗೋ, ನಾನು ಈ ಜನರ ಮೇಲೆ ಕೇಡನ್ನು ಅಂದರೆ
ಅವರ ಕಲ್ಪನೆಗಳ ಫಲವನ್ನೇ ಬರಮಾಡುತ್ತೇನೆ.
ಏಕೆಂದರೆ, ಅವರು ನನ್ನ ವಾಕ್ಯಗಳನ್ನು ಆಲೈಸದೆ ಹೋದರು;
ನನ್ನ ನಿಯಮವನ್ನು ತಿರಸ್ಕರಿಸಿದರು.
20 ಶೆಬದಿಂದ ಸಾಂಬ್ರಾಣಿಯೂ ದೂರದೇಶದಿಂದ
ಒಳ್ಳೆಯ ಸುಗಂಧವೂ ನನಗೆ ಬರುವುದು ಏತಕ್ಕೆ?
ನಿಮ್ಮ ದಹನಬಲಿಗಳು ಮೆಚ್ಚುಗೆಯಾಗಲಿಲ್ಲ.
ನಿಮ್ಮ ಬಲಿಗಳು ನನಗೆ ರುಚಿಯಿಲ್ಲ.”
21 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಇಗೋ, ನಾನು ಈ ಜನರ ಮುಂದೆ ಅಡೆತಡೆಗಳನ್ನು ಇಡುತ್ತೇನೆ.
ತಂದೆಯೂ, ಮಕ್ಕಳೂ ಕೂಡ ಅವುಗಳ ಮೇಲೆ ಬೀಳುವರು.
ನೆರೆಯವರೂ, ಅವರ ಸ್ನೇಹಿತರೂ ನಾಶವಾಗುವರು.”
22 ಯೆಹೋವ ದೇವರು ಹೀಗೆ ಹೇಳುತ್ತಾರೆ:
“ಇಗೋ, ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬರುವುದು.
ದೊಡ್ಡ ಜನಾಂಗವು ಲೋಕದ ಕಟ್ಟಕಡೆಯಿಂದ ಎದ್ದು ಬರುತ್ತದೆ.
23 ಅವರು ಬಿಲ್ಲನ್ನೂ, ಭಲ್ಲೆಯನ್ನೂ ಹಿಡಿದುಕೊಂಡಿದ್ದಾರೆ;
ಅವರು ಕ್ರೂರರು; ಕನಿಕರ ತೋರಿಸುವುದಿಲ್ಲ.
ಅವರ ಶಬ್ದವು ಸಮುದ್ರದ ಹಾಗೆ ಭೋರ್ಗರೆಯುತ್ತದೆ.
ಓ ಚೀಯೋನಿನ ಪುತ್ರಿಯೇ,
ನಿನಗೆ ವಿರೋಧವಾಗಿಯೇ ಯುದ್ಧಮಾಡುವುದಕ್ಕೆ ಸಿದ್ಧವಾಗಿರುವ ಶೂರರಂತೆ
ಕುದುರೆಗಳನ್ನು ಹತ್ತಿಕೊಂಡು ಬರುತ್ತಿದ್ದಾರೆ.”
 
24 ಅದರ ಕೀರ್ತಿಯನ್ನು ಕೇಳಿದ್ದೇವೆ;
ನಮ್ಮ ಕೈಗಳು ಜೋಲಾಡುತ್ತವೆ,
ಸಂಕಟವೂ, ಹೆರುವವಳಂತಿರುವ
ನೋವೂ ನಮ್ಮನ್ನು ಹಿಡಿಯಿತು.
25 ಹೊಲಕ್ಕೆ ಹೋಗಬೇಡ;
ದಾರಿಯಲ್ಲಿ ನಡೆಯಬೇಡ.
ಏಕೆಂದರೆ ಶತ್ರುವಿನ ಖಡ್ಗವೂ,
ಅಂಜಿಕೆಯೂ ಸುತ್ತಲೂ ಇವೆ.
26 ಓ ನನ್ನ ಮಗಳೇ, ನನ್ನ ಪ್ರಜೆಗಳೇ,
ಗೋಣಿತಟ್ಟನ್ನು ಕಟ್ಟಿಕೋ, ಬೂದಿಯಲ್ಲಿ ಹೊರಳಾಡು.
ಒಬ್ಬನೇ ಮಗನಿಗೋಸ್ಕರ ಮಾಡುವ ದುಃಖದ ಪ್ರಕಾರ,
ಬಹು ಕಠಿಣವಾದ ಗೋಳಾಟವನ್ನು ಮಾಡು.
ನಾಶ ಮಾಡುವವನು ಫಕ್ಕನೆ
ನಮ್ಮ ಮೇಲೆ ಬರುವನು.
 
27 “ನೀನು ನನ್ನ ಜನರ ಮಾರ್ಗವನ್ನು
ಪರೀಕ್ಷಿಸಿ ತಿಳಿದುಕೊಳ್ಳುವಂತೆ,
ನಾನು ನಿನ್ನನ್ನು ನನ್ನ ಜನವೆಂಬ ಅದುರಿಗೆ
ಲೋಹ ಶೋಧಕನನ್ನಾಗಿ ನೇಮಿಸಿದ್ದೇನೆ.
28 ಅವರೆಲ್ಲರು ಕಠಿಣ ದ್ರೋಹಿಗಳು,
ಚಾಡಿ ಹೇಳುತ್ತಾ ತಿರುಗಾಡುವವರು.
ಕಂಚು, ಕಬ್ಬಿಣಕ್ಕೆ ಸಮಾನರು,
ಎಲ್ಲರೂ ಕೇಡಿಗರು.
29 ಕುಲುಮೆಯು ಸುಡುತ್ತದೆ,
ಬೆಂಕಿಯೊಳಗಿಂದ ಸೀಸವು ಕರಗುತ್ತದೆ.
ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ಅವನ ಪರಿಶ್ರಮವೆಲ್ಲ ವ್ಯರ್ಥ,
ಕೆಟ್ಟವರಿಂದ ಕಲ್ಮಷವನ್ನು ಅವನಿಂದ ತೆಗೆಯಲಾಗಲಿಲ್ಲ.
30 ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವುದು;
ಏಕೆಂದರೆ, ಯೆಹೋವ ದೇವರು ಅವರನ್ನು ತಳ್ಳಿದ್ದಾರೆ.”