7
ಸುಳ್ಳು ಆರಾಧನೆ ನಿಷ್ಪ್ರಯೋಜಕ
ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ: “ಯೆಹೋವ ದೇವರ ಆಲಯದ ಬಾಗಿಲಲ್ಲಿ ನಿಂತುಕೊಂಡು ಈ ವಾಕ್ಯವನ್ನು ಅಲ್ಲಿ ಸಾರು:
“ ‘ಯೆಹೂದ್ಯರೇ, ಯೆಹೋವ ದೇವರನ್ನು ಆರಾಧಿಸುವುದಕ್ಕೆ ಈ ಬಾಗಿಲುಗಳಲ್ಲಿ ಸೇರುವವರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ ನೆಟ್ಟಗೆಮಾಡಿರಿ. ಆಗ ನಿಮ್ಮನ್ನು ಈ ಸ್ಥಳದಲ್ಲಿ ವಾಸಿಸುವಂತೆ ಮಾಡುವೆನು. “ಇವುಗಳೇ ಯೆಹೋವ ದೇವರ ದೇವಾಲಯ, ಯೆಹೋವ ದೇವರ ದೇವಾಲಯ, ಯೆಹೋವ ದೇವರ ದೇವಾಲಯ,” ಎಂದು ಹೇಳುವ ಮೋಸಕರ ಮಾತುಗಳಲ್ಲಿ ನಂಬಿಕೆ ಇಡಬೇಡಿರಿ. ಏಕೆಂದರೆ ನೀವು ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ, ಪೂರ್ಣವಾಗಿ ನೆಟ್ಟಗೆ ಮಾಡಿದರೆ; ಮನುಷ್ಯನಿಗೂ, ಅವನ ನೆರೆಯವನಿಗೂ ಪೂರ್ಣವಾಗಿ ನ್ಯಾಯ ನಡೆಸಿದರೆ; ಪರದೇಶಿಯನ್ನೂ, ದಿಕ್ಕಿಲ್ಲದವನನ್ನೂ, ವಿಧವೆಯನ್ನೂ ಸಂಕಟ ಪಡಿಸದಿದ್ದರೆ; ಈ ಸ್ಥಳದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲದಿದ್ದರೆ; ಇಲ್ಲವೆ ನಿಮ್ಮ ಕೇಡಿಗಾಗಿ ಬೇರೆ ದೇವರುಗಳನ್ನು ಹಿಂಬಾಲಿಸದಿದ್ದರೆ; ನಾನು ನಿಮ್ಮನ್ನು ಈ ಸ್ಥಳದಲ್ಲಿ ಎಂದರೆ, ನಾನು ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಂತೆ ಮಾಡುವೆನು. ನೀವು ಪ್ರಯೋಜನವಿಲ್ಲದ ಮೋಸಕರ ಮಾತುಗಳಲ್ಲಿ ನಂಬಿಕೆ ಇಡುತ್ತೀರಿ.
“ ‘ಕಳ್ಳತನ, ಹತ್ಯೆ, ವ್ಯಭಿಚಾರಗಳನ್ನು ನೀವು ನಡೆಸುವಿರೋ? ಸುಳ್ಳು ಪ್ರಮಾಣವನ್ನು ಮಾಡಿ, ಬಾಳನಿಗೆ ಧೂಪವನ್ನು ಸುಡುವಿರೋ? ನಿಮಗೆ ತಿಳಿಯದ ಬೇರೆ ದೇವರುಗಳನ್ನು ಹಿಂಬಾಲಿಸಿ, 10 ಆಮೇಲೆ ಬಂದು ನನ್ನ ಹೆಸರನ್ನು ಹೊಂದಿರುವ ಈ ಆಲಯದಲ್ಲಿ ನನ್ನ ಮುಂದೆ ನಿಂತುಕೊಂಡು, “ನಾವು ಸುರಕ್ಷಿತರು” ಎಂದು ಹೇಳಿ ಈ ಅಸಹ್ಯವಾದವುಗಳನ್ನೆಲ್ಲಾ ಮಾಡುವ ಹಾಗೆ ಒಪ್ಪಿಸಲಾಗಿದ್ದೇವೆಂದು ಹೇಳುವಿರೋ? 11 ನನ್ನ ಹೆಸರನ್ನು ಹೊಂದಿರುವ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.
12 “ ‘ಆದರೆ ಈಗ ಶೀಲೋವಿನಲ್ಲಿದ್ದ ನನ್ನ ಸ್ಥಳಕ್ಕೆ ಎಂದರೆ, ನಾನು ಮೊದಲು ನನ್ನ ಹೆಸರನ್ನು ಸ್ಥಾಪಿಸಿದ ಸ್ಥಳಕ್ಕೆ ಹೋಗಿರಿ; ಅದಕ್ಕೆ ನಾನು, ನನ್ನ ಜನರಾದ ಇಸ್ರಾಯೇಲರ ಕೆಟ್ಟತನದ ನಿಮಿತ್ತ ಏನು ಮಾಡಿದೆನೆಂದು ನೋಡಿರಿ. 13 ಈಗ ಯೆಹೋವ ದೇವರು ಹೇಳುವುದೇನೆಂದರೆ, ನೀವು ಈ ಕೆಲಸಗಳನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮನ್ನು ಕರೆದರೂ, ನೀವು ಉತ್ತರ ಕೊಡದೆ ಹೋದಿರಿ. 14 ಆದಕಾರಣ ನನ್ನ ಹೆಸರಿನಿಂದ ಕರೆಯಲಾದಂಥ ಮತ್ತು ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ, ನಿಮ್ಮ ಪಿತೃಗಳಿಗೆ ಕೊಟ್ಟ ಸ್ಥಳಕ್ಕೂ, ಶೀಲೋವಿಗೆ ಮಾಡಿದ ಹಾಗೆ ಮಾಡುವೆನು. 15 ನಿಮ್ಮ ಸಹೋದರರೆಲ್ಲರನ್ನೂ, ಎಫ್ರಾಯೀಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ, ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.’
16 “ಆದ್ದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ. ಅವರಿಗೋಸ್ಕರ ಮೊರೆಯನ್ನೂ, ಪ್ರಾರ್ಥನೆಯನ್ನೂ ಎತ್ತಬೇಡ. ಇಲ್ಲವೆ ನನಗೆ ವಿಜ್ಞಾಪನೆ ಮಾಡಬೇಡ. ಏಕೆಂದರೆ ನಾನು ಅದನ್ನು ಕೇಳಿಸಿಕೊಳ್ಳುವುದಿಲ್ಲ. 17 ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಅವರು ಮಾಡುವುದನ್ನು ನೀನು ನೋಡುವುದಿಲ್ಲವೋ? 18 ‘ಗಗನದ ಒಡತಿ,’ ಎಂದು ಇವರು ಕರೆಯುವ ದೇವತೆಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಅವರ ಮಕ್ಕಳು ಸೌದೆಯನ್ನು ಆಯ್ದು ತರುತ್ತಾರೆ. ಗಂಡಸರು ಬೆಂಕಿ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದುತ್ತಾರೆ. ನನ್ನನ್ನು ಕೆಣಕಬೇಕೆಂದೇ ಅನ್ಯ ದೇವತೆಗಳಿಗೆ ಪಾನ ನೈವೇದ್ಯವನ್ನು ಅರ್ಪಿಸುತ್ತಾರೆ.” 19 ಯೆಹೋವ ದೇವರು ಅನ್ನುತ್ತಾನೆ: “ಇವರು ಮಾಡುತ್ತಿರುವ ಕೇಡು ನನಗೋ? ಲಜ್ಜೆಯಿಂದ ಮುಖ ಮುಚ್ಚಿಕೊಳ್ಳುವಷ್ಟು ಕೇಡನ್ನು ತಮಗೆ ತಾವೇ ತಂದುಕೊಳ್ಳುತ್ತಿದ್ದಾರಲ್ಲವೇ?”
20 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ಈ ಸ್ಥಳದ ಮೇಲೆಯೂ, ಮನುಷ್ಯರ ಮೇಲೆಯೂ, ಮೃಗಗಳ ಮೇಲೆಯೂ, ಹೊಲದ ಮರಗಳ ಮೇಲೆಯೂ, ಭೂಮಿಯ ಫಲದ ಮೇಲೆಯೂ ನನ್ನ ಕೋಪ ಮತ್ತು ಉಗ್ರತೆಯು ಹೊಯ್ಯಲಾಗುವುದು. ಅದು ಉರಿಯುವುದು ಮತ್ತು ಆರಿಹೋಗುವುದಿಲ್ಲ.
21 “ ‘ಇಸ್ರಾಯೇಲಿನ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಿಮ್ಮ ದಹನಬಲಿಗಳನ್ನು ನಿಮ್ಮ ಬಲಿಗಳ ಸಂಗಡ ಕೂಡಿಸಿ, ಮಾಂಸವನ್ನು ತಿನ್ನಿರಿ. 22 ಏಕೆಂದರೆ, ನಾನು ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ದಿವಸದಲ್ಲಿ, ದಹನಬಲಿಗಳ ಮತ್ತು ಬಲಿಗಳ ವಿಷಯ ನಾನು ಅವರ ಸಂಗಡ ಮಾತನಾಡಲಿಲ್ಲ; ಇಲ್ಲವೆ ಅವರಿಗೆ ಆಜ್ಞಾಪಿಸಲಿಲ್ಲ. 23 ಆದರೆ ನಾನು ಇದನ್ನು ಅವರಿಗೆ, “ನನ್ನ ಶಬ್ದಕ್ಕೆ ವಿಧೇಯರಾಗಿರಿ. ಆಗ ನಾನು ನಿಮ್ಮ ದೇವರಾಗಿರುವೆನು; ನೀವು ನನ್ನ ಜನರಾಗಿರುವಿರಿ; ನಿಮಗೆ ಒಳ್ಳೆಯದಾಗುವಂತೆ ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಮಾರ್ಗಗಳಲ್ಲಿ ನಡೆಯಿರಿ,” ಎಂದು ಆಜ್ಞಾಪಿಸಿ ಹೇಳಿದೆನು. 24 ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ಆದರೆ ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ, ಕಲ್ಪನೆಯ ಪ್ರಕಾರವೂ ನಡೆದುಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು. 25 ನಿಮ್ಮ ಪಿತೃಗಳು ಈಜಿಪ್ಟ್ ದೇಶವನ್ನು ಬಿಟ್ಟುಹೋದ ದಿನದಿಂದ ಇಂದಿನವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ಪ್ರತಿದಿನವೂ ನಿಮ್ಮ ಬಳಿಗೆ ಕಳುಹಿಸುತ್ತಾ ಬಂದೆನು. 26 ಆದರೂ ಅವರು ನನ್ನ ಮಾತಿಗೆ ಕಿವಿಗೊಡದೆ, ತಮ್ಮನ್ನು ಕಠಿಣ ಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು.’
27 “ಆದ್ದರಿಂದ ನೀನು ಈ ಮಾತುಗಳನ್ನೆಲ್ಲಾ ಅವರಿಗೆ ಹೇಳಬೇಕು. ಆದರೆ ಅವರು ನಿನ್ನ ಮಾತನ್ನು ಕೇಳುವುದಿಲ್ಲ. ಅವರನ್ನು ನೀನು ಕರೆಯುವೆ. ಆದರೆ ಅವರು ನಿನಗೆ ಉತ್ತರ ಕೊಡುವುದಿಲ್ಲ. 28 ಆದ್ದರಿಂದ ಅವರಿಗೆ ಹೀಗೆ ಹೇಳು, ‘ಇದು ಅವರ ದೇವರಾದ ಯೆಹೋವ ದೇವರಿಗೆ ವಿಧೇಯನಾಗದ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸದಂಥ ಜನಾಂಗವಾಗಿದೆ. ಸತ್ಯವು ನಾಶವಾಯಿತು. ಇದು ಅವರ ಬಾಯಿಂದ ತೆಗೆದುಹಾಕಲಾಗಿದೆ.
29 “ ‘ಓ ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು. ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು. ಏಕೆಂದರೆ ಯೆಹೋವ ದೇವರು ತನ್ನ ಕೋಪಕ್ಕೆ ಪಾತ್ರರಾದ ಈ ಸಂತತಿಯನ್ನು ನಿರಾಕರಿಸಿ ತಳ್ಳಿಬಿಟ್ಟಿದ್ದಾರೆ.
ಸಂಹಾರದ ತಗ್ಗು
30 “ ‘ಯೆಹೂದನ ಮಕ್ಕಳು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದಾರೆಂದು ಯೆಹೋವ ದೇವರು ಹೇಳುತ್ತಾರೆ. ನನ್ನ ಹೆಸರನ್ನು ಹೊಂದಿರುವ ಆಲಯದಲ್ಲಿ ಅದನ್ನು ಅಪವಿತ್ರ ಮಾಡುವುದಕ್ಕೆ ತಮ್ಮ ಅಸಹ್ಯವಾದವುಗಳನ್ನು ಇಟ್ಟಿದ್ದಾರೆ. 31 ಬೆನ್ ಹಿನ್ನೋಮ್ ತಗ್ಗಿನಲ್ಲಿರುವ ತೋಫೆತಿನ ಉನ್ನತ ಸ್ಥಳಗಳನ್ನು ತಮ್ಮ ಪುತ್ರಪುತ್ರಿಯರನ್ನು ಬೆಂಕಿಯಲ್ಲಿ ಸುಡುವುದಕ್ಕೆ ಕಟ್ಟಿದ್ದಾರೆ. ಇದನ್ನು ನಾನು ಆಜ್ಞಾಪಿಸಲಿಲ್ಲ. ಅದು ನನ್ನ ಮನಸ್ಸಿನಲ್ಲಿ ಬರಲಿಲ್ಲ. 32 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ, ಇಗೋ, ದಿನಗಳು ಬರಲಿವೆ, ಆ ಕಣಿವೆಗೆ ತೋಫೆತ್ ಮತ್ತು ಬೆನ್ ಹಿನ್ನೋಮ್ ಎಂಬ ಹೆಸರುಗಳು ಹೋಗಿ, ಸಂಹಾರದ ಕಣಿವೆ ಎಂದು ಕರೆಯಲಾಗುವುದು. ಏಕೆಂದರೆ, ಸ್ಥಳವಿಲ್ಲದವರೆಗೂ ತೋಫೆತಿನಲ್ಲಿ ಅವರು ಹೂಳಿಡುವರು. 33 ಈ ಜನರ ಹೆಣಗಳು ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು. ಯಾರೂ ಅವುಗಳನ್ನು ಬೆದರಿಸುವುದಿಲ್ಲ. 34 ಆಗ ನಾನು ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಉಲ್ಲಾಸದ ಶಬ್ದವನ್ನೂ, ಸಂತೋಷ ಶಬ್ದವನ್ನೂ, ಮದುಮಗನ ಶಬ್ದವನ್ನೂ, ಮದುಮಗಳ ಶಬ್ದವನ್ನೂ ನಿಲ್ಲಿಸುವೆನು. ಏಕೆಂದರೆ, ದೇಶವು ಹಾಳಾಗುವುದು.