8
“ ‘ಯೆಹೋವ ದೇವರು ಹೇಳುವುದೇನೆಂದರೆ, ಆ ಕಾಲದಲ್ಲಿ ಅವರು ಯೆಹೂದದ ಅರಸರ ಎಲುಬುಗಳನ್ನೂ, ಅದರ ಪ್ರಧಾನರ ಎಲುಬುಗಳನ್ನೂ, ಯಾಜಕರ ಎಲುಬುಗಳನ್ನೂ, ಪ್ರವಾದಿಗಳ ಎಲುಬುಗಳನ್ನೂ, ಯೆರೂಸಲೇಮಿನ ನಿವಾಸಿಗಳ ಎಲುಬುಗಳನ್ನೂ ಅವರ ಸಮಾಧಿಗಳೊಳಗಿಂದ ಹೊರಗೆ ತರುವರು. ಅವರು ಪ್ರೀತಿ ಮಾಡಿದಂಥ, ಸೇವಿಸಿದಂಥ, ಹಿಂಬಾಲಿಸಿದಂಥ, ಹುಡುಕಿದಂಥ, ಆರಾಧಿಸಿದಂಥ, ಸೂರ್ಯನ ಮುಂದೆಯೂ, ಚಂದ್ರನ ಮುಂದೆಯೂ, ಸಮಸ್ತ ಆಕಾಶ ಸೈನ್ಯದ ಮುಂದೆಯೂ ಅವುಗಳನ್ನು ತೆರೆದಿಡುವರು; ಹೌದು, ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರವಾಗುವುವು. ಈ ಕೆಟ್ಟ ಮನೆತನದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು ಎಂದು ಸೇನಾಧೀಶ್ವರ ಯೆಹೋವ ದೇವರು ನುಡಿಯುತ್ತಾರೆ.’
ಪಾಪ ಮತ್ತು ದಂಡನೆ
“ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ಅವರು ಬಿದ್ದು ಮತ್ತೆ ಏಳರೋ?
ಹಿಂದಿರುಗಿದವನು ಮತ್ತೆ ಬರುವುದಿಲ್ಲವೋ?
ಹಾಗಾದರೆ ಈ ಯೆರೂಸಲೇಮಿನ ಜನರು ಎಂದಿಗೂ
ಹಿಂದಿರುಗದಂತೆ ಏಕೆ ಬಿಟ್ಟು ಹೋಗಿದ್ದಾರೆ?
ಮೋಸವನ್ನು ಬಿಗಿಯಾಗಿ ಹಿಡಿಯುತ್ತಾರೆ,
ಹಿಂದಿರುಗುವುದಕ್ಕೆ ನಿರಾಕರಿಸುತ್ತಾರೆ.
ನಾನು ಕಿವಿಗೊಟ್ಟು ಕೇಳಿದೆನು.
ಆದರೆ ಅವರು ಯಥಾರ್ಥವಾಗಿ ಮಾತನಾಡಲಿಲ್ಲ.
ಯಾವನಾದರೂ, “ನಾನು ಎಂಥಾ ಕೆಲಸ ಮಾಡಿದ್ದೇನೆ,”
ಎಂದುಕೊಂಡು ತನ್ನ ಕೆಟ್ಟತನದ ನಿಮಿತ್ತ ಪಶ್ಚಾತ್ತಾಪ ಪಡಲಿಲ್ಲ.
ಕುದುರೆ ಯುದ್ಧಕ್ಕೆ ರಭಸವಾಗಿ ಓಡುವ ಪ್ರಕಾರ,
ಪ್ರತಿಯೊಬ್ಬನೂ ತನ್ನ ದಾರಿಗೆ ತಿರುಗಿದ್ದಾನೆ.
ಹೌದು, ಆಕಾಶದಲ್ಲಿಯ ಬಕಪಕ್ಷಿಯು
ತನ್ನ ನಿಯಮಿತ ಕಾಲಗಳನ್ನು ತಿಳಿಯುತ್ತದೆ.
ಪಾರಿವಾಳವೂ, ಬಾನಕ್ಕಿಯೂ, ಕೊಕ್ಕರೆಯೂ
ತಮ್ಮ ಗಮನಾಗಮನದ ಸಮಯವನ್ನು ಗಮನಿಸುತ್ತವೆ.
ಆದರೆ ನನ್ನ ಜನರು ಯೆಹೋವ ದೇವರು
ಅಪೇಕ್ಷಿಸುವುದನ್ನು ಅರಿಯರು.
 
“ ‘ “ನಾವು ಜ್ಞಾನಿಗಳು, ಯೆಹೋವ ದೇವರ ನಿಯಮವು
ನಮ್ಮ ಸಂಗಡ ಇದೆ,” ಎಂದು ನೀವು ಹೇಳುವುದು ಹೇಗೆ?
ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ.
ನಿಯಮಶಾಸ್ತ್ರಿಗಳ ಲೇಖನಿಯು ಮೋಸಕರವಾಗಿದೆ.
ಜ್ಞಾನಿಗಳು ನಾಚಿಕೊಂಡಿದ್ದಾರೆ.
ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ.
ಇಗೋ, ಯೆಹೋವ ದೇವರ ವಾಕ್ಯವನ್ನು ನಿರಾಕರಿಸಿದ್ದಾರೆ.
ಹಾಗಾದರೆ ಅವರಲ್ಲಿ ಯಾವ ಜ್ಞಾನವಿದೆ.
10 ಆದ್ದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ,
ಅವರ ಹೊಲಗಳನ್ನು ಹೊಸ ಮಾಲಿಕನಿಗೆ ನಾನು ಕೊಟ್ಟುಬಿಡುವೆನು.
ಏಕೆಂದರೆ, ಚಿಕ್ಕವನು ಮೊದಲುಗೊಂಡು ದೊಡ್ಡವರತನಕ
ಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ.
ಪ್ರವಾದಿ ಮೊದಲುಗೊಂಡು ಯಾಜಕರವರೆಗೆ
ಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ.
11 ಏಕೆಂದರೆ, ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ.
ಸಮಾಧಾನವಿಲ್ಲದಿರುವಾಗ, “ಸಮಾಧಾನ, ಸಮಾಧಾನ,” ಎಂದು ಹೇಳುತ್ತಾರೆ.
12 ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ?
ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ, ಲಜ್ಜೆಯನ್ನೇ ಅರಿಯರು.
ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು.
ನಾನು ಅವರನ್ನು ದಂಡಿಸುವ ಕಾಲದಲ್ಲಿ,
ಅವರು ಕೆಳಗೆ ಬೀಳುವರು,
ಎಂದು ಯೆಹೋವ ದೇವರು ಹೇಳುತ್ತಾರೆ.
 
13 “ ‘ನಾನು ಅವರ ಫಸಲನ್ನು ನಿರ್ಮೂಲ ಮಾಡಿಬಿಡುವೆನು,
ಎಂದು ಯೆಹೋವ ದೇವರು ಹೇಳುತ್ತಾರೆ.
ದ್ರಾಕ್ಷಿ ಗಿಡದಲ್ಲಿ ದ್ರಾಕ್ಷಿ ಹಣ್ಣುಗಳು ಇರುವುದಿಲ್ಲ.
ಅಂಜೂರ ಮರದಲ್ಲಿ ಅಂಜೂರ ಹಣ್ಣುಗಳು ಇರುವುದಿಲ್ಲ. ಎಲೆಯು ಬಾಡುವುದು.
ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟು ಹೋಗುವುವು.’ ”
 
14 ನಾವು ಏಕೆ ಸುಮ್ಮನೆ ಕೂತುಕೊಳ್ಳುತ್ತೇವೆ?
ನೀವು ಕೂಡಿಕೊಳ್ಳಿರಿ,
ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ,
ಅಲ್ಲಿ ನಾಶವಾಗೋಣ.
ಏಕೆಂದರೆ, ನಾವು ನಮ್ಮ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ ಕಾರಣ,
ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ನಾಶಮಾಡಿ,
ನಮಗೆ ವಿಷದ ನೀರನ್ನು ಕುಡಿಯಲು ಕೊಟ್ಟಿದ್ದಾರೆ.
15 ಸಮಾಧಾನಕ್ಕೆ ಕಾದುಕೊಂಡೆವು,
ಆದರೆ ಒಳ್ಳೆಯದೇನೂ ಬರಲಿಲ್ಲ.
ಆರೋಗ್ಯದ ಸಮಯಕ್ಕೆ ಕಾದಿದ್ದೆವು.
ಆದರೆ ಇಗೋ, ಆತಂಕವನ್ನು ನೋಡುತ್ತೇವೆ.
16 ಅವನ ಕುದುರೆಗಳ ಶ್ವಾಸವು
ದಾನಿನಿಂದ ಕೇಳಿಸಿತು.
ಅವನ ಬಲವಾದವುಗಳ ಕೆನೆತದ
ಶಬ್ದದಿಂದ ದೇಶವೆಲ್ಲಾ ನಡುಗುತ್ತದೆ.
ಏಕೆಂದರೆ, ಅವರು
ದೇಶವನ್ನೂ, ಅದರಲ್ಲಿರುವುದೆಲ್ಲವನ್ನೂ,
ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನುಂಗಲು ಬಂದಿದ್ದಾರೆ.
 
17 “ನಾನು ನಿಮ್ಮಲ್ಲಿ ವಿಷಸರ್ಪಗಳನ್ನು ಮಂತ್ರಕ್ಕೆ ಅಧೀನವಾಗದ ನಾಗಗಳನ್ನೂ ಕಳುಹಿಸುತ್ತೇನೆ.
ಅವು ನಿಮ್ಮನ್ನು ಕಚ್ಚುವವು,”
ಎಂದು ಯೆಹೋವ ದೇವರು ಹೇಳುತ್ತಾರೆ.
 
18 ದುಃಖದ ನಿಮಿತ್ತ ನನ್ನನ್ನು ಆಧರಿಸಿ ಕೊಳ್ಳಲು ನಾನು ಮನಸ್ಸು ಮಾಡಿದಾಗ,
ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ.
19 ದೂರದೇಶದಿಂದ ನನ್ನ ಜನರು ಕೂಗುವ ಮೊರೆಯಿದು:
“ಯೆಹೋವ ದೇವರು ಚೀಯೋನಿನಲ್ಲಿ ಇಲ್ಲವೋ?
ಅವಳ ಅರಸನು ಅವಳಲ್ಲಿ ಇಲ್ಲವೋ?”
 
ಎಂಬುದೇ ಆದರೂ ಅವರು ತಮ್ಮ ವಿಗ್ರಹಗಳಿಂದಲೂ,
ವಿಚಿತ್ರವಾದ ವ್ಯರ್ಥತ್ವಗಳಿಂದಲೂ ನನಗೆ ಕೋಪವನ್ನೆಬ್ಬಿಸಿದ್ದು ಏಕೆ?
 
20 “ಸುಗ್ಗಿ ಮುಗಿಯಿತು.
ಬೇಸಿಗೆ ಕಾಲ ತೀರಿತು.
ನಾವಾದರೋ ರಕ್ಷಣೆ ಹೊಂದಲಿಲ್ಲ.”
 
21 ನನ್ನ ಜನರು ತುಳಿತಕ್ಕೆ ಒಳಗಾದದ್ದರಿಂದ ನಾನೂ ತುಳಿತಕ್ಕೆ ಒಳಗಾದೆನು.
ದುಃಖಿಸಿದೆನು. ಭಯವು ನನ್ನನ್ನು ಹಿಡಿಯಿತು.
22 ಗಿಲ್ಯಾದಿನಲ್ಲಿ ಮುಲಾಮು ಇಲ್ಲವೋ?
ಅಲ್ಲಿ ವೈದ್ಯನಿಲ್ಲವೋ?
ಹಾಗಾದರೆ ನನ್ನ ಜನರ ಗಾಯಕ್ಕೆ ಏಕೆ ಸ್ವಸ್ಥತೆ ಇಲ್ಲ?