10
ಸೂರ್ಯನು ನಿಂತುಕೊಂಡದ್ದು
ಈ ಸಮಯದಲ್ಲಿ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಯೆಹೋಶುವನು ಯೆರಿಕೋವನ್ನೂ ಅದರ ಅರಸನನ್ನೂ ಹೇಗೋ ಹಾಗೆಯೇ ಆಯಿ ಎಂಬ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡು, ಅದರ ಅರಸನನ್ನು ಸಂಹರಿಸಿಬಿಟ್ಟು ಸಂಪೂರ್ಣ ನಾಶಮಾಡಿದನೆಂಬ ಸಂಗತಿಯನ್ನು ಅವನು ಕೇಳಿದ್ದನು. ಹಾಗೆಯೇ ಗಿಬ್ಯೋನಿನ ನಿವಾಸಿಗಳು ಇಸ್ರಾಯೇಲಿನ ಸಂಗಡ ಸಮಾಧಾನ ಮಾಡಿಕೊಂಡು ಅವರಲ್ಲಿ ಇದ್ದರೆಂದೂ ಕೇಳಿದ್ದನು. ಅದೋನೀಚೆದೆಕನು ಅವನ ಜನರೂ ಬಹು ಭಯಪಟ್ಟರು. ಏಕೆಂದರೆ ಗಿಬ್ಯೋನ್ ಒಂದು ರಾಜಧಾನಿಯಷ್ಟು ಶ್ರೇಷ್ಠ ಪಟ್ಟಣವೂ ಅದು ಆಯಿ ಪಟ್ಟಣಕ್ಕಿಂತಲೂ ದೊಡ್ಡದಾಗಿತ್ತು. ಇದಲ್ಲದೆ ಅದರಲ್ಲಿರುವ ಜನರು ಪರಾಕ್ರಮಶಾಲಿಗಳಾಗಿದ್ದರು. ಆದ್ದರಿಂದ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನಿಗೂ ಯರ್ಮೂತಿನ ಅರಸನಾದ ಪಿರಾಮನಿಗೂ ಲಾಕೀಷಿನ ಅರಸನಾದ ಯಾಫೀಯನಿಗೂ ಎಗ್ಲೋನಿನ ಅರಸನಾದ ದೆಬೀರನಿಗೂ ದೂತರನ್ನು ಕಳುಹಿಸಿದನು: “ಗಿಬ್ಯೋನರು ಯೆಹೋಶುವನ ಮತ್ತು ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡದ್ದರಿಂದ ನಾವು ಅದನ್ನು ದಾಳಿಮಾಡುವಂತೆ ನೀವು ನನ್ನ ಬಳಿಗೆ ಬಂದು ನನಗೆ ಸಹಾಯಮಾಡಿರಿ,” ಎಂದು ಹೇಳಿ ಕಳುಹಿಸಿದನು.
ಹಾಗೆಯೇ ಅಮೋರಿಯರ ಐದು ಮಂದಿ ಅರಸರಾದ, ಯೆರೂಸಲೇಮಿನ ಅರಸನೂ ಹೆಬ್ರೋನಿನ ಅರಸನೂ ಯರ್ಮೂತಿನ ಅರಸನೂ ಲಾಕೀಷಿನ ಅರಸನೂ ಎಗ್ಲೋನಿನ ಅರಸನೂ ಒಟ್ಟುಸೇರಿದರು. ಇವರೂ ಇವರ ಸೈನ್ಯವೂ ಹೊರಟುಹೋಗಿ ಗಿಬ್ಯೋನಿನ ಮುಂದೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿದರು.
ಆಗ ಗಿಬ್ಯೋನಿನ ಜನರು, “ಪರ್ವತಗಳಲ್ಲಿ ವಾಸವಾಗಿರುವ ಅಮೋರಿಯರ ಅರಸುಗಳೆಲ್ಲರೂ ನಮಗೆ ವಿರೋಧವಾಗಿ ಕೂಡಿಬಂದಿದ್ದಾರೆ. ನಿನ್ನ ಸೇವಕರರಾದ ನಮ್ಮನ್ನು ಕೈಬಿಡದೆ ಶೀಘ್ರವಾಗಿ ನಮ್ಮ ಬಳಿಗೆ ಬಂದು, ನಮ್ಮನ್ನು ಕಾಪಾಡು! ನಮಗೆ ಸಹಾಯಮಾಡು,” ಎಂದು ಗಿಲ್ಗಾಲಿನಲ್ಲಿ ಪಾಳೆಯ ಮಾಡಿದ್ದ ಯೆಹೋಶುವನ ಬಳಿಗೆ ಹೇಳಿ ಕಳುಹಿಸಿದರು.
ಆಗ ಯೆಹೋಶುವನು ಗಿಲ್ಗಾಲಿನಿಂದ, ಸಮಸ್ತ ಯುದ್ಧವೀರರೂ ಉಳಿದ ಪರಾಕ್ರಮಶಾಲಿಗಳ ಸಮೇತ ಹೊರಟನು. ಯೆಹೋವ ದೇವರು ಯೆಹೋಶುವನಿಗೆ, “ನೀನು ಅವರಿಗೆ ಭಯಪಡಬೇಡ, ನಾನು ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಕೊಟ್ಟಿದ್ದೇನೆ. ಅವರಲ್ಲಿ ಒಬ್ಬನಾದರೂ ನಿನ್ನ ಎದುರಿನಲ್ಲಿ ನಿಲ್ಲುವುದಿಲ್ಲ,” ಎಂದರು.
ಆದ್ದರಿಂದ ಯೆಹೋಶುವನು ಗಿಲ್ಗಾಲಿನಿಂದ ರಾತ್ರಿಯೆಲ್ಲಾ ಪ್ರಯಾಣಮಾಡಿ, ತಕ್ಷಣವೇ ಅವರ ಮೇಲೆ ದಾಳಿಮಾಡಿದನು. 10 ಆಗ ಯೆಹೋವ ದೇವರು ಅವರನ್ನು ಇಸ್ರಾಯೇಲಿನ ಮುಂದೆ ಕಳವಳಗೊಳಿಸಿದರು. ಯೆಹೋಶುವನು ಮತ್ತು ಇಸ್ರಾಯೇಲರು ಗಿಬ್ಯೋನಿನಲ್ಲಿ ಸಂಪೂರ್ಣವಾಗಿ ಸಂಹರಿಸಿ, ಬೇತ್ ಹೋರೋನಿಗೆ ಹೋಗುವ ಮಾರ್ಗದಲ್ಲಿ ಅವರನ್ನು ಹಿಂದಟ್ಟಿ, ಅಜೇಕ, ಮಕ್ಕೇದದ ಎಂಬ ಊರುಗಳವರೆಗೆ ಹೊಡೆದರು. 11 ಅವರು ಬೇತ್ ಹೋರೋನಿನಿಂದ ಇಳಿದು ಅಜೇಕದವರೆಗೆ ಇಸ್ರಾಯೇಲಿನ ಮುಂದೆ ಓಡಿ ಹೋಗುವಾಗ, ಅವರ ಮೇಲೆ ಯೆಹೋವ ದೇವರು ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಇಸ್ರಾಯೇಲರ ಖಡ್ಗದ ದಾಳಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚು ಮಂದಿಯಾಗಿದ್ದರು.
12 ಯೆಹೋವ ದೇವರು ಅಮೋರಿಯರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿದ ಆ ದಿನದಲ್ಲಿ ಯೆಹೋಶುವನು ಯೆಹೋವ ದೇವರ ಸಂಗಡ ಮಾತನಾಡಿ ಇಸ್ರಾಯೇಲಿನ ಮುಂದೆ ಹೀಗೆ ಹೇಳಿದನು,
“ಸೂರ್ಯನೇ ನೀನು ಗಿಬ್ಯೋನಿನ ಮೇಲೆ ನಿಲ್ಲು;
ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲಿ ಸ್ಥಿರವಾಗಿ ನಿಲ್ಲು.”
13 ಆದ್ದರಿಂದ ಇಸ್ರಾಯೇಲರು ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ
ತೀರಿಸುವವರೆಗೆ ಸೂರ್ಯ ಚಂದ್ರರು
ನೆಲೆಯಾಗಿ ನಿಂತಿದ್ದರು.
ಇದು ಯಾಷಾರ್ ಪುಸ್ತಕದಲ್ಲಿ ಬರೆದಿದೆ.
ಹೀಗೆ ಸೂರ್ಯ ಅಸ್ತಮಿಸಲು ತ್ವರೆಮಾಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿ ನಿಂತಿತು. 14 ಯೆಹೋವ ದೇವರು ಒಬ್ಬ ಮನುಷ್ಯನ ಮಾತನ್ನು ಕೇಳಿದಂಥ ಆ ದಿನಕ್ಕೆ ಸಮಾನವಾದ ದಿನವು ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ. ಏಕೆಂದರೆ ಯೆಹೋವ ದೇವರು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದರು.
15 ತರುವಾಯ ಯೆಹೋಶುವನು ಸಮಸ್ತ ಇಸ್ರಾಯೇಲಿನ ಕೂಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂದಿರುಗಿದನು.
ಐದು ಜನ ಅಮೋರಿಯ ಅರಸರ ವಿನಾಶ
16 ಆದರೆ ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದಲ್ಲಿರುವ ಒಂದು ಗವಿಯಲ್ಲಿ ಅಡಗಿಕೊಂಡರು. 17 ಆ ಐದು ಮಂದಿ ಅರಸರು ಮಕ್ಕೇದದಲ್ಲಿರುವ ಒಂದು ಗವಿಯಲ್ಲಿ ಅಡಗಿಕೊಂಡವರಾಗಿ ಸಿಕ್ಕಿದರೆಂದು ಯೆಹೋಶುವನಿಗೆ ತಿಳಿಯಿತು. 18 ಆಗ ಯೆಹೋಶುವನು, “ದೊಡ್ಡ ಕಲ್ಲುಗಳನ್ನು ಗವಿಯ ಬಾಯಿಗೆ ಹೊರಳಿಸಿರಿ. ಆ ಸ್ಥಳದಲ್ಲಿ ಅವರನ್ನು ಕಾಯುವಂತೆ ಕೆಲವರನ್ನು ನೇಮಿಸಿರಿ. 19 ನೀವು ನಿಲ್ಲಬೇಡಿರಿ, ನಿಮ್ಮ ಶತ್ರುಗಳನ್ನು ಹಿಂದಟ್ಟಿರಿ, ದಾಳಿಮಾಡಿರಿ. ತಮ್ಮ ಪಟ್ಟಣಗಳಲ್ಲಿ ಪ್ರವೇಶಿಸದಂತೆ ಮಾಡಿರಿ. ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರೆ,” ಎಂದನು.
20 ಯೆಹೋಶುವನೂ ಇಸ್ರಾಯೇಲರೂ ಅವರನ್ನು ಸಂಪೂರ್ಣವಾಗಿ ಸಂಹರಿಸಿದರು. ಆದರೂ ಅವರಲ್ಲಿ ಉಳಿದವರು ಕೋಟೆಗಳುಳ್ಳ ಪಟ್ಟಣಗಳಲ್ಲಿ ಸೇರಿಕೊಂಡರು. 21 ಇಸ್ರಾಯೇಲರು ಮಕ್ಕೇದದಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ಸುರಕ್ಷಿತವಾಗಿ ಹಿಂದಿರುಗಿ ಬಂದರು. ಇಸ್ರಾಯೇಲರಿಗೆ ವಿರೋಧವಾಗಿ ಒಬ್ಬನೂ ಮಾತಾಡಲಿಲ್ಲ.
22 ಆಗ ಯೆಹೋಶುವನು, “ನೀವು ಗವಿಯ ಬಾಯಿಯನ್ನು ತೆರೆದು ಆ ಐದು ಮಂದಿ ಅರಸರನ್ನು ಗವಿಯೊಳಗಿಂದ ನನ್ನ ಬಳಿಗೆ ತನ್ನಿರಿ,” ಎಂದನು. 23 ಅವರು ಹಾಗೆಯೇ ಮಾಡಿದರು. ಆ ಐದು ಮಂದಿ ಅರಸರನ್ನು ಅಂದರೆ ಯೆರೂಸಲೇಮಿನ ಅರಸನನ್ನೂ, ಹೆಬ್ರೋನಿನ ಅರಸನನ್ನೂ ಯರ್ಮೂತಿನ ಅರಸನನ್ನೂ ಲಾಕೀಷಿನ ಅರಸನನ್ನೂ ಎಗ್ಲೋನಿನ ಅರಸನನ್ನೂ ಆ ಗವಿಯೊಳಗಿಂದ ಅವನ ಬಳಿಗೆ ಹೊರಗೆ ತಂದರು. 24 ಅವರನ್ನು ಯೆಹೋಶುವನ ಬಳಿ ತೆಗೆದುಕೊಂಡು ಬಂದಾಗ, ಯೆಹೋಶುವನು ಇಸ್ರಾಯೇಲರೆಲ್ಲರನ್ನು ಕರೆಸಿ ತನ್ನ ಸಂಗಡ ಬಂದ ಯುದ್ಧಭಟರಾದ ಅಧಿಕಾರಿಗಳಿಗೆ, “ನೀವು ಸಮೀಪಕ್ಕೆ ಬಂದು ನಿಮ್ಮ ಪಾದಗಳನ್ನು ಈ ಅರಸರ ಕೊರಳಿನ ಮೇಲೆ ಇಡಿರಿ,” ಎಂದನು. ಆಗ ಅವರು ಸಮೀಪಕ್ಕೆ ಬಂದು ತಮ್ಮ ಪಾದಗಳನ್ನು ಅವರ ಕೊರಳಿನ ಮೇಲೆ ಇಟ್ಟರು.
25 ಆಗ ಯೆಹೋಶುವನು ಅವರಿಗೆ, “ಭಯಪಡಬೇಡಿರಿ, ನಿರುತ್ಸಾಹಗೊಳ್ಳಬೇಡಿರಿ, ಬಲಗೊಂಡು ಧೈರ್ಯವಾಗಿರಿ. ಏಕೆಂದರೆ ನೀವು ಯುದ್ಧಮಾಡುವ ನಿಮ್ಮ ಶತ್ರುಗಳೆಲ್ಲರಿಗೂ ಯೆಹೋವ ದೇವರು ಹೀಗೆಯೇ ಮಾಡುವರು,” ಎಂದನು. 26 ಆ ತರುವಾಯ ಯೆಹೋಶುವನು ಅವರನ್ನು ದಂಡಿಸಿ, ಐದು ಮರಗಳಲ್ಲಿ ತೂಗುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಮರಗಳಲ್ಲಿ ತೂಗಾಡುತ್ತಿದ್ದವು.
27 ಆದರೆ ಸೂರ್ಯನು ಅಸ್ತಮಿಸುವಾಗ ಯೆಹೋಶುವನು ಆಜ್ಞಾಪಿಸಲು, ಶವವನ್ನು ಮರಗಳಿಂದ ಇಳಿಸಿ ಅವರು ಬಚ್ಚಿಟ್ಟುಕೊಂಡಿದ್ದ ಗವಿಯಲ್ಲಿಯೇ ಅವರನ್ನು ಹಾಕಿ, ಈವರೆಗೂ ಇರುವ ಹಾಗೆ ದೊಡ್ಡ ಕಲ್ಲುಗಳನ್ನು ಅದರ ಬಾಯಿಗೆ ಮುಚ್ಚಿದರು.
ದಕ್ಷಿಣದ ಪಟ್ಟಣಗಳನ್ನು ಜಯಿಸಿದ್ದು
28 ಆ ದಿನದಲ್ಲಿ ಯೆಹೋಶುವನು ಮಕ್ಕೇದ ಊರನ್ನು ಸ್ವಾಧೀನಪಡಿಸಿಕೊಂಡನು. ಅದರ ಅರಸನನ್ನೂ ಜನರನ್ನೂ ಖಡ್ಗಕ್ಕೆ ತುತ್ತಾಗುವಂತೆ ಮಾಡಿದನು. ಅದರಲ್ಲಿರುವ ಎಲ್ಲವನ್ನೂ ನಾಶಮಾಡಿದನು. ಅದರಲ್ಲಿ ಒಬ್ಬರನ್ನಾದರೂ ಉಳಿಸದೆ ಸಂಪೂರ್ಣ ನಾಶಮಾಡಿ, ತಾನು ಯೆರಿಕೋವಿನ ಅರಸನಿಗೆ ಮಾಡಿದ ಹಾಗೆಯೇ ಮಕ್ಕೇದದ ಅರಸನಿಗೂ ಮಾಡಿದನು.
29 ಆಗ ಯೆಹೋಶುವನೂ ಅವನ ಸಂಗಡ ಇದ್ದ ಸಮಸ್ತ ಇಸ್ರಾಯೇಲರೆಲ್ಲರೂ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ, ಅದರ ಮೇಲೆ ಯುದ್ಧಮಾಡಿದರು. 30 ಯೆಹೋವ ದೇವರು ಲಿಬ್ನವನ್ನೂ, ಅದರ ಅರಸನನ್ನೂ ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟರು. ಯೆಹೋಶುವನು ಅದನ್ನೂ, ಅದರಲ್ಲಿರುವ ಎಲ್ಲರನ್ನೂ ನಾಶಮಾಡಿದನು. ಅದರಲ್ಲಿ ಒಬ್ಬರನ್ನಾದರೂ ಉಳಿಸದೆ ಖಡ್ಗದಿಂದ ಹೊಡೆದು ಯೆರಿಕೋವಿನ ಅರಸನಿಗೆ ಮಾಡಿದ ಹಾಗೆ ಅದರ ಅರಸನಿಗೂ ಮಾಡಿದನು.
31 ಅಲ್ಲಿಂದ ಯೆಹೋಶುವನು ಇಸ್ರಾಯೇಲರ ಸಹಿತವಾಗಿ ಲಿಬ್ನದಿಂದ ಲಾಕೀಷಿಗೆ ಹೋಗಿ, ಅದರ ಎದುರಿಗೆ ಪಾಳೆಯ ಮಾಡಿಕೊಂಡು, ಅದರ ಮೇಲೆ ಯುದ್ಧಮಾಡಿದನು. 32 ಯೆಹೋವ ದೇವರು ಲಾಕೀಷನ್ನು ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು. ಅವರು ಅದನ್ನು ಎರಡನೆಯ ದಿವಸದಲ್ಲಿ ಹಿಡಿದು ಲಿಬ್ನಕ್ಕೆ ಮಾಡಿದಂತೆ ಸರಿಯಾಗಿ ಅದನ್ನೂ ಅದರಲ್ಲಿರುವ ಎಲ್ಲರನ್ನು ಖಡ್ಗದಿಂದ ಹೊಡೆದರು. 33 ಆಗ ಗೆಜೆರಿನ ಅರಸನಾದ ಹೋರಾಮನು ಲಾಕೀಷಿಗೆ ಸಹಾಯಮಾಡಲು ಬಂದನು. ಆದರೆ ಯೆಹೋಶುವನು ಒಬ್ಬರೂ ಉಳಿಯದಂತೆ ಅವನನ್ನೂ, ಅವನ ಜನರನ್ನೂ ಸದೆಬಡಿದನು.
34 ಯೆಹೋಶುವನೂ, ಅವನ ಸಂಗಡ ಸಮಸ್ತ ಇಸ್ರಾಯೇಲರೂ ಲಾಕೀಷಿನಿಂದ ಎಗ್ಲೋನಿಗೆ ಹೋಗಿ, ಅದಕ್ಕೆದುರಾಗಿ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿದರು. 35 ಅದೇ ದಿನದಲ್ಲಿ ಎಗ್ಲೋನನ್ನು ಹಿಡಿದು, ಅದರ ಜನರನ್ನು ಖಡ್ಗದಿಂದ ಹೊಡೆದರು. ಅವರು ಲಾಕೀಷಿಗೆ ಮಾಡಿದ ಹಾಗೆ ಅದಕ್ಕೆ ಮಾಡಿ, ಅದೇ ದಿನದಲ್ಲಿ ಅದರಲ್ಲಿರುವ ಸಕಲ ಜನರನ್ನು ಸಂಪೂರ್ಣವಾಗಿ ನಾಶಮಾಡಿದರು.
36 ಅನಂತರ ಯೆಹೋಶುವನು ಸಮಸ್ತ ಇಸ್ರಾಯೇಲರ ಸಂಗಡ ಎಗ್ಲೋನಿನಿಂದ ಹೆಬ್ರೋನಿಗೆ ಹೊರಟುಹೋಗಿ, ಅದರ ಮೇಲೆ ಯುದ್ಧಮಾಡಿದನು. 37 ಹೆಬ್ರೋನನ್ನು ಹಿಡಿದು ಅದನ್ನೂ, ಅದರ ಅರಸನನ್ನೂ ಅದರ ಸಮಸ್ತ ಊರುಗಳನ್ನೂ ಅವುಗಳಲ್ಲಿರುವ ಸಮಸ್ತ ಜನರನ್ನೂ ಖಡ್ಗದಿಂದ ಸದೆಬಡಿದು ಎಗ್ಲೋನಿಗೆ ಮಾಡಿದ ಹಾಗೆ ಒಬ್ಬರನ್ನೂ ಉಳಿಸದೆ, ಅದನ್ನೂ, ಅದರಲ್ಲಿರುವ ಎಲ್ಲರನ್ನೂ ಸಂಪೂರ್ಣ ನಾಶಮಾಡಿದನು.
38 ಯೆಹೋಶುವನು ಸಮಸ್ತ ಇಸ್ರಾಯೇಲರ ಕೂಡ ದೆಬೀರಕ್ಕೆ ಹೋಗಿ, ಅದರ ಮೇಲೆ ಯುದ್ಧಮಾಡಿದನು. 39 ದೆಬೀರನ್ನೂ ಅದರ ಅರಸನನ್ನೂ, ಅದರ ಸಮಸ್ತ ಊರುಗಳನ್ನೂ ಹಿಡಿದು ಅವುಗಳನ್ನು ಖಡ್ಗದಿಂದ ದಾಳಿಮಾಡಿ, ಒಬ್ಬರನ್ನೂ ಉಳಿಸದೆ ಅದರಲ್ಲಿದ್ದ ಎಲ್ಲರನ್ನೂ, ಸಂಪೂರ್ಣ ನಾಶಮಾಡಿದನು. ಹೆಬ್ರೋನಿಗೂ ಲಿಬ್ನಕ್ಕೂ ಅದರ ಅರಸನಿಗೂ ಮಾಡಿದ ಹಾಗೆಯೇ ದೆಬೀರಕ್ಕೂ ಅದರ ಅರಸನಿಗೂ ಮಾಡಿದನು.
40 ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ, ದಕ್ಷಿಣದ ಪ್ರದೇಶವನ್ನೂ, ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸರನ್ನೂ ಒಬ್ಬರನ್ನೂ ಉಳಿಸದೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದನು. 41 ಯೆಹೋಶುವನು ಕಾದೇಶ್ ಬರ್ನೇಯದಿಂದ ಗಾಜದವರೆಗೂ ಇರುವವರನ್ನೂ, ಗೋಷೆನಿನ ಸಮಸ್ತ ಪ್ರಾಂತವನ್ನೂ ಗಿಬ್ಯೋನಿನವರೆಗೆ ಸೋಲಿಸಿದನು. 42 ಯೆಹೋಶುವನು ಈ ಸಮಸ್ತ ಅರಸರನ್ನೂ, ಅವರ ರಾಜ್ಯವನ್ನೂ ಏಕಕಾಲದಲ್ಲಿ ವಶಪಡಿಸಿಕೊಂಡನು. ಏಕೆಂದರೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದರು.
43 ಅನಂತರ ಯೆಹೋಶುವನು ಇಸ್ರಾಯೇಲರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂದಿರುಗಿ ಬಂದನು.