11
ಉತ್ತರದ ಅರಸರನ್ನು ಸೋಲಿಸಿದ್ದು
ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ, ಸಮೀಪ ರಾಜ್ಯಗಳ ಅರಸರಿಗೆ ಒಂದು ಸಂದೇಶವನ್ನು ಕಳುಹಿಸಿದನು: ಎಂದರೆ ಮಾದೋನಿನ ಅರಸನಾದ ಯೋಬಾಬನಿಗೂ ಶಿಮ್ರೋನಿನ ಅರಸನಿಗೂ ಅಕ್ಷಾಫಿನ ಅರಸನಿಗೂ ಪರ್ವತಗಳ ಉತ್ತರ ದಿಕ್ಕಿನಲ್ಲಿಯೂ ಕಿನ್ನೆರೆತಿಗೆ ದಕ್ಷಿಣಕ್ಕಿರುವ ಬಯಲಿನಲ್ಲಿಯೂ ಕಣಿವೆಗಳಲ್ಲಿ ಮತ್ತು ಪಶ್ಚಿಮದಲ್ಲಿ ದೋರಿನ ಪ್ರಾಂತಗಳಲ್ಲಿ ಇರುವ ಅರಸರಿಗೂ ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿಯರ, ಹಿತ್ತಿಯರ, ಪೆರಿಜೀಯರ, ಯೆಬೂಸಿಯರ ಬಳಿಗೂ, ಮಿಚ್ಪಾ ದೇಶದಲ್ಲಿ ಹೆರ್ಮೋನ್ ಪರ್ವತದ ಕೆಳಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿ ಕಳುಹಿಸಿದನು. ಅವರೆಲ್ಲರು ಸಮುದ್ರ ದಡದ ಮರಳಿನ ಹಾಗೆ ಅಸಂಖ್ಯರಾಗಿದ್ದರು. ಅವರು ಬಹು ರಥಗಳೂ ಕುದುರೆಗಳೂ ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು. ಈ ಎಲ್ಲಾ ಅರಸರು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟುಗೂಡಿ ಮೇರೋಮ ಎಂಬ ಜಲಾಶಯದ ಬಳಿಯಲ್ಲಿ ಇಳಿದುಕೊಂಡರು.
ಆಗ ಯೆಹೋವ ದೇವರು ಯೆಹೋಶುವನಿಗೆ, “ಅವರಿಗೆ ಭಯಪಡಬೇಡ, ಏಕೆಂದರೆ ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರೂ ಸಂಹಾರವಾಗುವಂತೆ ಇಸ್ರಾಯೇಲರಿಗೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು,” ಎಂದರು.
ಆಗ ಯೆಹೋಶುವನೂ ಅವನ ಸಂಗಡ ಇದ್ದ ಸೈನಿಕರೆಲ್ಲರೂ ಬಂದು ಫಕ್ಕನೆ ಮೇರೋಮ ಜಲಾಶಯದ ಬಳಿಯಲ್ಲಿ ಅವರ ಮೇಲೆ ದಾಳಿಮಾಡಿದರು. ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿಕೊಟ್ಟರು. ಇವರು ಅವರನ್ನು ಹೊಡೆದು ದೊಡ್ಡ ಸೀದೋನ್, ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಕಣಿವೆಯವರೆಗೂ ಹಿಂದಟ್ಟಿ, ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ಎಲ್ಲರನ್ನು ಸಂಹರಿಸಿದರು. ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರವೇ ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದುಬಿಟ್ಟು, ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
10 ಆ ಕಾಲದಲ್ಲಿ ಯೆಹೋಶುವನು ಹಿಂದಿರುಗಿ ಹಾಚೋರನ್ನು ಹಿಡಿದು, ಅದರ ಅರಸನನ್ನು ಖಡ್ಗದಿಂದ ಸಂಹರಿಸಿದನು. ಏಕೆಂದರೆ ಹಾಚೋರು ಮೊದಲು ಆ ರಾಜ್ಯಗಳಿಗೆಲ್ಲಾ ಶಿರಸ್ಸಾಗಿತ್ತು. 11 ಅವರು ಒಬ್ಬರನ್ನಾದರೂ ಉಳಿಸದೆ, ಅದರಲ್ಲಿದ್ದ ಪ್ರತಿಯೊಬ್ಬರನ್ನೂ ಖಡ್ಗದಿಂದ ಸಂಹರಿಸಿದನು. ಹಾಚೋರನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
12 ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ, ಅವುಗಳ ಸಮಸ್ತ ಅರಸರನ್ನೂ ಹಿಡಿದು ಖಡ್ಗದಿಂದ ದಾಳಿಮಾಡಿ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು. 13 ಆದರೆ ದಿನ್ನೆಯ ಮೇಲೆ ನಿಂತಿರುವ ಪಟ್ಟಣಗಳನ್ನೆಲ್ಲಾ ಇಸ್ರಾಯೇಲರು ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟುಬಿಟ್ಟನು. 14 ಆ ಪಟ್ಟಣಗಳ ಎಲ್ಲಾ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನೆಲ್ಲಾ ಇಸ್ರಾಯೇಲರು ತಮಗೋಸ್ಕರ ಸುಲಿಗೆ ಮಾಡಿಕೊಂಡರು. ಖಡ್ಗದಿಂದ ಜನರನ್ನು ನಾಶಮಾಡಿದರು. ಒಬ್ಬರನ್ನೂ ಅವರು ಉಳಿಸಲಿಲ್ಲ. 15 ಯೆಹೋವ ದೇವರು ತಮ್ಮ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದನು. ಯೆಹೋಶುವನೂ ಹಾಗೆಯೇ ಮಾಡಿದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಯೆಹೋಶುವನು ಒಂದನ್ನೂ ಮೀರದೆ ಎಲ್ಲವನ್ನೂ ಮಾಡಿದನು.
16 ಈ ಪ್ರಕಾರ ಗೋಷೆನ್ ಸೀಮೆ, ಅದರ ಕಣಿವೆ, ಬಯಲು ಪ್ರದೇಶ, ದಕ್ಷಿಣದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲಾ ಯೆಹೋಶುವನಿಗೆ ಸ್ವಾಧೀನವಾದವು. 17 ಯೆಹೋಶುವನು ಸೇಯೀರಿಗೆ ಏರಿಹೋಗುವ ಹಾಲಾಕ್ ಬೆಟ್ಟ ಮೊದಲುಗೊಂಡು ಬಾಲ್ಗಾದಿನ ಮಟ್ಟಿಗೂ ಇರುವ ಲೆಬನೋನಿನ ಕಣಿವೆಯಲ್ಲಿ ಹೆರ್ಮೋನಿನ ಬೆಟ್ಟದ ಕೆಳಗಿರುವ ಎಲ್ಲಾ ದೇಶವನ್ನೂ ಬೆಟ್ಟಗಳನ್ನೂ ದಕ್ಷಿಣ ದೇಶವೆಲ್ಲವನ್ನೂ ತೆಗೆದುಕೊಂಡು ಅವುಗಳ ಅರಸುಗಳೆಲ್ಲರನ್ನೂ ಹಿಡಿದು ಅವರಿಗೆ ಮರಣದಂಡನೆ ವಿಧಿಸಿದನು. 18 ಯೆಹೋಶುವನು ಬಹಳ ಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧ ಮಾಡುತ್ತಿದ್ದನು. 19 ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ. ಅವರು ಬೇರೆ ಎಲ್ಲವುಗಳನ್ನು ಯುದ್ಧಮಾಡಿ ತೆಗೆದುಕೊಂಡರು. 20 ಏಕೆಂದರೆ ಅವರು ಇಸ್ರಾಯೇಲರಿಗೆ ಎದುರಾಗಿ ಯುದ್ಧಮಾಡಲು ಬರುವ ಹಾಗೆ ಅವರ ಹೃದಯವನ್ನು ಯೆಹೋವ ದೇವರು ಕಠಿಣಮಾಡಿದ್ದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರಿಗೆ ದಯೆ ತೋರಿಸದೆ, ಅವರನ್ನು ಸಂಹರಿಸಿದರು.
21 ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ, ದೆಬೀರಿನಲ್ಲಿಯೂ, ಅನಾಬಿನಲ್ಲಿಯೂ, ಯೆಹೂದದ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲ್ ಪ್ರಾಂತದ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯರನ್ನು ಕಡಿದುಬಿಟ್ಟು, ಅವರನ್ನೂ, ಅವರ ಪಟ್ಟಣಗಳನ್ನೂ ಪೂರ್ಣವಾಗಿ ನಾಶಮಾಡಿದನು. 22 ಅನಾಕ್ಯರು ಇಸ್ರಾಯೇಲರ ದೇಶದಲ್ಲಿ ಒಬ್ಬರೂ ಉಳಿಯಲಿಲ್ಲ. ಗಾಜದಲ್ಲಿಯೂ, ಗತ್‌ನಲ್ಲಿಯೂ, ಅಷ್ಡೋದಿನಲ್ಲಿಯೂ ಮಾತ್ರ ಕೆಲವರು ಉಳಿದರು.
23 ಹೀಗೆ ಯೆಹೋಶುವನು ದೇಶವನ್ನೆಲ್ಲಾ ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರವೇ ಸ್ವಾಧೀನಮಾಡಿಕೊಂಡನು. ಅದನ್ನು ಇಸ್ರಾಯೇಲರಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿಕೊಂಡಿತು.