24
ಆದರೆ ಇಸ್ರಾಯೇಲನ್ನು ಆಶೀರ್ವದಿಸುವುದಕ್ಕೆ ಯೆಹೋವ ದೇವರ ದೃಷ್ಟಿಗೆ ಒಳ್ಳೆಯದೆಂದು ಬಿಳಾಮನು ನೋಡಿದಾಗ, ಅವನು ಮುಂಚಿನ ಹಾಗೆ ಶಕುನವನ್ನು ಕಂಡುಕೊಳ್ಳುವುದಕ್ಕೆ ಹೋಗದೆ, ತನ್ನ ಮುಖವನ್ನು ಮರುಭೂಮಿಯ ಕಡೆಗೆ ತಿರುಗಿಸಿಕೊಂಡನು. ಬಿಳಾಮನು ತನ್ನ ಕಣ್ಣೆತ್ತಿ ಇಸ್ರಾಯೇಲರು ಅವರವರ ಗೋತ್ರಗಳ ಪ್ರಕಾರ ತಮ್ಮ ಡೇರೆಗಳಲ್ಲಿ ವಾಸವಾಗಿರುವುದನ್ನು ನೋಡಿದಾಗ, ದೇವರಾತ್ಮ ಪ್ರೇರಿತನಾಗಿ ಹೀಗೆ ಪ್ರವಾದಿಸಿದನು:
“ಇದು ಬೆಯೋರನ ಮಗ ಬಿಳಾಮನ ಪ್ರವಾದನೆ:
ಸ್ಪಷ್ಟ ಕಣ್ಣುಳ್ಳವನು ನುಡಿದದ್ದು.
ದೇವರ ಮಾತುಗಳನ್ನು ಕೇಳಿದವನೂ,
ಸರ್ವಶಕ್ತರ ದರ್ಶನವನ್ನು ನೋಡಿದವನೂ,
ಪರವಶನಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು:
 
“ಯಾಕೋಬೇ, ನಿನ್ನ ಡೇರೆಗಳೂ; ಇಸ್ರಾಯೇಲರೇ,
ನಿಮ್ಮ ಗುಡಾರಗಳೂ ಉತ್ತಮವಾಗಿವೆ!
 
“ಅವು ಕಣಿವೆಗಳ ಹಾಗೆ ವಿಸ್ತರಿಸಿವೆ.
ನದಿತೀರದಲ್ಲಿರುವ ತೋಟಗಳ ಹಾಗೆಯೂ,
ಯೆಹೋವ ದೇವರು ನೆಟ್ಟ ಅಗರು ಮರಗಳ ಹಾಗೆಯೂ
ನೀರಿನ ಬಳಿಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ.
ಅವರ ತೊಟ್ಟಿಗಳಿಂದ ನೀರು ಹರಿಯುವಂತೆ ಮಾಡುವರು.
ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು.
 
“ಅವರ ಅರಸನು ಅಗಾಗ್ ರಾಜನಿಗಿಂತಲೂ ಉನ್ನತವಾಗಿರುವನು.
ಅವರ ರಾಜ್ಯವು ಅಭಿವೃದ್ಧಿ ಹೊಂದುವುದು.
 
“ದೇವರು ಅವರನ್ನು ಈಜಿಪ್ಟಿನಿಂದ ಹೊರಗೆ ತಂದನು.
ಈ ಕಾಡುಕೋಣದಂತೆ ಬಲ ಅವರಿಗೆ ಉಂಟು.
ಅವರು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು,
ಅವರ ಎಲುಬುಗಳನ್ನು ಚೂರುಮಾಡಿ,
ತಮ್ಮ ಬಾಣಗಳಿಂದ ಗಾಯಮಾಡುವನು.
ಅವರು ಸಿಂಹದ ಹಾಗೆಯೂ, ಸಿಂಹಣಿ ಹಾಗೆಯೂ ಬಾಗಿ ಮಲಗುತ್ತಾನೆ.
ಅವನನ್ನು ಎಬ್ಬಿಸುವವನು ಯಾರು?
 
“ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದ ಉಂಟಾಗಲಿ.
ಶಪಿಸುವವನಿಗೆ ಶಾಪ ಉಂಟಾಗಲಿ.”
10 ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಬಿಳಾಮನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಈ ಮೂರು ಸಾರಿಯೂ ಆಶೀರ್ವದಿಸಿದೆ. 11 ಈಗ ನಿನ್ನ ಸ್ಥಳಕ್ಕೆ ಓಡಿಹೋಗು. ನಾನು ನಿನ್ನನ್ನು ಬಹು ಗೌರವಿಸಬೇಕೆಂದಿದ್ದೆ. ಆದರೆ ಇಗೋ, ಯೆಹೋವ ದೇವರು ನಿನಗೆ ಘನತೆ ಬಾರದಂತೆ ತಡೆದಿದ್ದಾನೆ,” ಎಂದನು.
12 ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ, 13 ‘ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಬಂಗಾರಗಳನ್ನು ಕೊಟ್ಟರೂ, ನನ್ನ ಹೃದಯದಿಂದ ಒಳ್ಳೆಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡುವುದಕ್ಕೆ ಯೆಹೋವ ದೇವರ ಆಜ್ಞೆಯನ್ನು ಮೀರಲಾರೆನು. ಯೆಹೋವ ದೇವರು ಏನು ಹೇಳುತ್ತಾರೋ, ಅದನ್ನೇ ಹೇಳುವೆನೆಂದು ನಾನು ಹೇಳಲಿಲ್ಲವೋ’? ಈಗ, ನನ್ನ ಜನರ ಬಳಿಗೆ ಹೋಗುತ್ತೇನೆ. 14 ಬಾ, ಈ ಜನರು ನಿನ್ನ ಜನರಿಗೆ ಕಡೇ ದಿವಸಗಳಲ್ಲಿ ಏನು ಮಾಡುವರೋ, ಅದನ್ನು ನಿನಗೆ ತಿಳಿಸುವೆನು,” ಎಂದನು.
ಬಿಳಾಮನ ನಾಲ್ಕನೆಯ ದರ್ಶನ
15 ಆಗ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ:
“ಬೆಯೋರನ ಮಗ ಬಿಳಾಮನು ಹೇಳಿದ್ದು:
ಸ್ಪಷ್ಟ ಕಣ್ಣುಳ್ಳ ಮನುಷ್ಯನು ನುಡಿದದ್ದು.
16 ದೇವರ ಮಾತುಗಳನ್ನು ಕೇಳಿದವನೂ,
ಮಹೋನ್ನತನ ಜ್ಞಾನವನ್ನು ತಿಳಿದವನೂ,
ಸರ್ವಶಕ್ತರ ದರ್ಶನವನ್ನು ನೋಡಿದವನೂ,
ಪರವಶನಾಗಿದ್ದು ತೆರೆದ ಕಣ್ಣುಳ್ಳವನೂ ಹೇಳಿದ್ದು:
 
17 “ನಾನು ಅವನನ್ನು ನೋಡುವೆನು, ಈಗಲ್ಲ.
ಅವನನ್ನು ದೃಷ್ಟಿಸುವೆನು, ಸಮೀಪದಲ್ಲಿ ಅಲ್ಲ.
ಯಾಕೋಬನಿಂದ ನಕ್ಷತ್ರ ಉದಯಿಸುವುದು.
ಇಸ್ರಾಯೇಲನಿಂದ ರಾಜದಂಡ ಏಳುವುದು.
ಅದು ಮೋವಾಬಿನ ಮೂಲೆಗಳನ್ನು ಹೊಡೆದು,
ಸೇಥನ ಎಲ್ಲಾ ಮಕ್ಕಳನ್ನು ಸಂಹರಿಸುವುದು.
18 ಎದೋಮು ಸ್ವಾಧೀನವಾಗುವುದು;
ಸೇಯೀರನವರು ತನ್ನ ಶತ್ರುಗಳಿಗೆ ಸ್ವಾಧೀನವಾಗುವುದು;
ಇಸ್ರಾಯೇಲು ಪರಾಕ್ರಮ ಕಾರ್ಯಮಾಡುವುದು,
19 ಯಾಕೋಬನೊಳಗಿಂದ ಒಬ್ಬನು ಬಂದು ಆಳುವನು,
ಅವನು ಪಟ್ಟಣದಲ್ಲಿ ಉಳಿದದ್ದನ್ನು ನಾಶಮಾಡುವನು.”
ಬಿಳಾಮನ ಐದನೆಯ ದರ್ಶನ
20 ಅನಂತರ ಬಿಳಾಮನು ಅಮಾಲೇಕ್ಯರನ್ನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ:
“ಜನಾಂಗಗಳಲ್ಲಿ ಮೊದಲನೆಯವನೇ ಅಮಾಲೇಕ್ಯನು,
ಆದರೆ ಅವನು ಕೊನೆಗೆ ನಾಶವಾಗುವನು.”
ಬಿಳಾಮನ ಆರನೆಯ ದರ್ಶನ
21 ಬಳಿಕ ಕೇನ್ಯರನ್ನು ಅವನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ:
“ನಿನ್ನ ನಿವಾಸವು ಬಲವಾಗಿದೆ.
ನಿನ್ನ ಗೂಡನ್ನು ಬಂಡೆಯಲ್ಲಿ ಹಾಕಿದಿ.
22 ಆದರೂ ಅಸ್ಸೀರಿಯರು ನಿನ್ನನ್ನು ಸೆರೆಹಿಡಿಯುವಷ್ಟರಲ್ಲೇ
ನೀವು ಕೇನ್ಯರೂ ಹಾಳಾಗುವರು.”
ಬಿಳಾಮನ ಏಳನೆಯ ದರ್ಶನ
23 ಇದಲ್ಲದೆ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ:
“ಅಯ್ಯೋ! ದೇವರು ಇದನ್ನು ಮಾಡುವಾಗ ಯಾರು ಬದುಕುವರು?
24 ಕಿತ್ತೀಮೆಂಬ ತೀರದಿಂದ ಹಡಗುಗಳು ಬಂದು,
ಅಸ್ಸೀರಿಯರನ್ನೂ, ಏಬೆರ್ ಜನರನ್ನೂ ಸೋಲಿಸುವುವು.
ಅವನು ಸಹ ಸದಾಕಾಲಕ್ಕೂ ನಾಶವಾಗುವನು.”
25 ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರುಗಿಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು.