ಜ್ಞಾನೋಕ್ತಿಗಳು
ಜ್ಞಾನೋಕ್ತಿಗಳು
1
ಇಸ್ರಾಯೇಲರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಜ್ಞಾನೋಕ್ತಿಗಳು:
ಜನರು ಜ್ಞಾನವನ್ನೂ ಶಿಸ್ತನ್ನೂ ಪಡೆದುಕೊಳ್ಳುವುದಕ್ಕೆ;
ವಿವೇಕದ ಮಾತುಗಳನ್ನು ಗ್ರಹಿಸುವುದಕ್ಕೆ;
ಅಂದರೆ, ಶಿಕ್ಷಣ, ವಿವೇಕ ನಡವಳಿ, ಸರಿಯಾದದ್ದನ್ನು ಮಾಡುವುದು
ನ್ಯಾಯ ಮತ್ತು ಯುಕ್ತವಾದವುಗಳನ್ನು ನಡೆಸುವ ಜ್ಞಾನೋಕ್ತಿಗಳು;
ಮುಗ್ಧರಿಗೆ ವಿವೇಕವನ್ನೂ ಯೌವನಸ್ಥರಿಗೆ ತಿಳುವಳಿಕೆ ಹಾಗೂ
ಸ್ವವಿವೇಚನೆಯನ್ನೂ ಕೊಡುವುದಕ್ಕಾಗಿ ಈ ಜ್ಞಾನೋಕ್ತಿಗಳಿವೆ.
ಜ್ಞಾನಿಯು ಜ್ಞಾನೋಕ್ತಿಗಳನ್ನು ಕೇಳಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲಿ;
ವಿವೇಚಿಸುವವರು ಮಾರ್ಗದರ್ಶನವನ್ನು ಹೊಂದಿಕೊಳ್ಳಲಿ.
ಜ್ಞಾನೋಕ್ತಿಗಳನ್ನು, ಸಾಮ್ಯಗಳನ್ನು, ಜ್ಞಾನಿಗಳ ಮಾತು ಹಾಗೂ ಒಗಟುಗಳನ್ನು
ಅರ್ಥಮಾಡಿಕೊಳ್ಳಲು ಇವು ಬರೆಯಲಾಗಿವೆ.
 
ಯೆಹೋವ ದೇವರ ಭಯವೇ ಜ್ಞಾನದ ಮೂಲವಾಗಿದೆ.
ಆದರೆ ಮೂರ್ಖರು ಜ್ಞಾನವನ್ನೂ ಶಿಕ್ಷಣವನ್ನೂ ಅಸಡ್ಡೆ ಮಾಡುತ್ತಾರೆ.
ಮುನ್ನುಡಿ: ಬುದ್ಧಿವಂತಿಕೆಯನ್ನು ಅಳವಡಿಸಿಕೊಳ್ಳಲು ಉಪದೇಶಗಳು
ಪಾಪ ಸಂಬಧಿತ ಎಚ್ಚರಿಕೆ
ಮಗನೇ, ನಿನ್ನ ತಂದೆಯ ಶಿಕ್ಷಣಗಳನ್ನು ಕೇಳು,
ನಿನ್ನ ತಾಯಿಯ ಉಪದೇಶವನ್ನು ತೊರೆಯಬೇಡ.
ಅವು ನಿನ್ನ ತಲೆಗೆ ಸುಂದರ ಕಿರೀಟ
ನಿನ್ನ ಕೊರಳನ್ನು ಅಲಂಕರಿಸುವ ಹಾರ.
 
10 ಮಗನೇ, ಪಾಪಿಗಳು ನಿನ್ನನ್ನು ಸೆಳೆದರೆ
ನೀನು ಒಪ್ಪಬೇಡ.
11 ಒಂದು ವೇಳೆ ಅವರು ನಿನಗೆ, “ನಮ್ಮೊಂದಿಗೆ ಬಾ,
ಜನರ ರಕ್ತಕ್ಕಾಗಿ ಒಳಸಂಚು ಮಾಡೋಣ,
ನಿರಪರಾಧಿಯ ರಕ್ತಕ್ಕಾಗಿ;
12 ಸಮಾಧಿಯು ನುಂಗುವಂತೆ ಜೀವಂತವಾಗಿ ಅವರನ್ನು ದಾಳಿಮಾಡೋಣ
ಗುಂಡಿಯೊಳಕ್ಕೆ ಹೋಗುವವರನ್ನು ಸಂಪೂರ್ಣವಾಗಿ ನಾವು ಅವರನ್ನು ನುಂಗಿಬಿಡೋಣ.
13 ಅಮೂಲ್ಯವಾದ ಸೊತ್ತನ್ನೆಲ್ಲಾ ನಾವು ಕಂಡುಹಿಡಿದು
ಕೊಳ್ಳೆಹೊಡೆದು ನಮ್ಮ ಮನೆಗಳನ್ನು ತುಂಬಿಕೊಳ್ಳೋಣ;
14 ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು,
ನಾವೆಲ್ಲರೂ ಹಣಹಂಚಿಕೊಳ್ಳೋಣ,” ಎಂದು ಹೇಳುವುದಾದರೆ.
15 ಮಗನೇ, ಅವರೊಂದಿಗೆ ಸೇರಬೇಡ,
ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ.
16 ಏಕೆಂದರೆ ಅವರ ಪಾದಗಳು ಕೇಡಿಗೆ ಓಡುತ್ತವೆ,
ರಕ್ತಸುರಿಸುವುದಕ್ಕೆ ಆತುರಪಡುತ್ತವೆ.
17 ಪಕ್ಷಿಗಳ ಕಣ್ಣೆದುರಿಗೆ ಕಾಣುವಂತೆ
ಬಲೆಯನ್ನು ಹರಡುವುದು ವ್ಯರ್ಥವಲ್ಲವೇ!
18 ಈ ಜನರು ಒಳಸಂಚು ಮಾಡುವುದು ತಮ್ಮ ಸ್ವಂತ ರಕ್ತಕ್ಕೆ.
ಅವರು ಮಾಡುವ ದುರಾಲೋಚನೆ ಅವರನ್ನೇ ನಾಶಮಾಡುವುದು.
19 ಅಕ್ರಮ ಲಾಭದ ಬೆನ್ನಟ್ಟಿ ಹೋಗುವವರೆಲ್ಲರ ಗತಿ ಇದೇ.
ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವದು.
ಜ್ಞಾನವನ್ನು ತಿರಸ್ಕರಿಸುವವರ ವಿರುದ್ಧ ಎಚ್ಚರಿಕೆ
20 ಜ್ಞಾನವೆಂಬಾಕೆಯು ಬೀದಿಯಲ್ಲಿ ಕೂಗುತ್ತಾಳೆ,
ಬಹಿರಂಗ ಸ್ಥಳಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ.
21 ಜನಭರಿತ ಬೀದಿಗಳಲ್ಲಿ ಆಕೆ ಕರೆಯುತ್ತಾಳೆ,
ಪಟ್ಟಣದ ಹೆಬ್ಬಾಗಿಲುಗಳಲ್ಲಿ ಹೀಗೆಂದು ಭಾಷಣ ಮಾಡುತ್ತಾಳೆ:
 
22 “ಮುಗ್ಧರೇ ನೀವು ಎಷ್ಟು ಕಾಲ ಮುಗ್ಧತೆಯನ್ನು ಪ್ರೀತಿಸುವಿರಿ.
ಕುಚೋದ್ಯಗಾರರೇ ಎಷ್ಟು ಕಾಲ ಕುಚೋದ್ಯಗಾರರಾಗಿರಲು ಇಚ್ಛಿಸುವಿರಿ?
ಜ್ಞಾನಹೀನರೇ, ಎಷ್ಟು ಕಾಲ ಪರಿಜ್ಞಾನವನ್ನು ಹಗೆ ಮಾಡುವಿರಿ?
23 ನನ್ನ ಗದರಿಕೆ ಕೇಳಿ ನೀವು ಪಶ್ಚಾತ್ತಾಪಪಡಿರಿ!
ಆಗ ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ,
ನಿಮಗೆ ನನ್ನ ಬೋಧನೆಗಳನ್ನು ಪ್ರಕಟಿಸುವೆನು.
24 ನಾನು ಕರೆದಾಗ ನೀವು ನನ್ನನ್ನು ತಿರಸ್ಕರಿಸಿದ್ದೀರಿ
ನಾನು ನನ್ನ ಕೈಚಾಚಿದಾಗ ಯಾರೂ ಮನುಷ್ಯನೂ ಗಮನಿಸಲಿಲ್ಲ.
25 ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ;
ನನ್ನ ಗದರಿಕೆಯನ್ನು ನೀವು ಬೇಡವೆಂದು ತಳ್ಳಿಬಿಟ್ಟಿದ್ದರಿಂದ
26 ಬಿರುಗಾಳಿಯಂತೆ ನಿಮಗೆ ವಿಪತ್ತು ಬಂದಾಗ ನಾನು ನಗುವೆನು.
ಆಪತ್ತು ನಿಮ್ಮನ್ನು ಹಿಂದಿಕ್ಕಿದಾಗ, ನಾನು ಪರಿಹಾಸ್ಯ ಮಾಡುವೆನು.
27 ಚಂಡಮಾರುತವು ನಿಮ್ಮನ್ನು ಬಿರುಗಾಳಿಯಂತೆ ತಾಕಿದಾಗ,
ವಿಪತ್ತು ಸುಂಟರಗಾಳಿಯಂತೆ ನಿಮ್ಮ ಮೇಲೆ ಬೀಸಿದಾಗ,
ಯಾತನೆ ಮತ್ತು ತೊಂದರೆ ನಿಮ್ಮನ್ನು ಆವರಿಸಿದಾಗಲೂ ಪರಿಹಾಸ್ಯಕ್ಕೆ ಒಳಗಾಗುವಿರಿ.
 
28 “ಆಗ ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರ ಕೊಡೆನು.
ಅವರು ನನ್ನನ್ನು ಆತುರದಿಂದ ಹುಡುಕುವರು, ಆದರೆ ಅವರು ನನ್ನನ್ನು ಕಂಡುಕೊಳ್ಳುವುದಿಲ್ಲ.
29 ಏಕೆಂದರೆ ಅವರು ಅರಿವನ್ನು ಹಗೆಮಾಡಿ,
ಯೆಹೋವ ದೇವರಿಗೆ ಭಯಪಡುವುದನ್ನು ಆರಿಸಿಕೊಳ್ಳದೆ ಹೋದರು.
30 ನನ್ನ ಬುದ್ಧಿವಾದವನ್ನು ಸ್ವೀಕರಿಸದೆ,
ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದರು.
31 ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ,
ತಮ್ಮ ಸ್ವಂತ ಕುಯುಕ್ತಿಗಳಿಂದಲೇ ಹೊಟ್ಟೆ ತುಂಬಿಕೊಳ್ಳುವರು.
32 ಮುಗ್ಧರ ದಾರಿತಪ್ಪುವಿಕೆಯು ಅವರನ್ನು ಕೊಲ್ಲುವುದು.
ಜ್ಞಾನಹೀನರ ನಿಶ್ಚಿಂತೆಯು ಅವರನ್ನು ನಾಶಮಾಡುವುದು.
33 ನನಗೆ ಕಿವಿಗೊಡುವವರಾದರೋ ಸುರಕ್ಷಿತರಾಗಿ ಜೀವಿಸುವರು,
ಕೇಡಿನ ಭಯವಿಲ್ಲದೇ ನೆಮ್ಮದಿಯಿಂದ ಇರುವರು.”