2
ಜ್ಞಾನದಿಂದ ಆಗುವ ನೈತಿಕ ಲಾಭಗಳು
ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ,
ನನ್ನ ಆಜ್ಞೆಗಳನ್ನು ನಿನ್ನಲ್ಲಿ ಕಾದಿರಿಸು.
ನೀನು ಜ್ಞಾನಕ್ಕೆ ಕಿವಿಗೊಟ್ಟು,
ತಿಳುವಳಿಕೆಗೆ ನಿನ್ನ ಹೃದಯವನ್ನು ತಿರುಗಿಸು,
ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು,
ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,
ಬೆಳ್ಳಿಯಂತೆ ನೀನು ಅದನ್ನು ಹಂಬಲಿಸಿದರೆ,
ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ,
ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ;
ದೇವರ ಅರಿವನ್ನು ಕಂಡುಕೊಳ್ಳುವೆ.
ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ;
ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
ನೀತಿವಂತರಿಗೋಸ್ಕರ ದೇವರು ಸುಜ್ಞಾನವನ್ನು ಕೂಡಿಸಿಡುವರು,
ನಿರ್ದೋಷಿಯಾಗಿ ನಡೆದುಕೊಳ್ಳುವವರಿಗೆ ದೇವರು ಗುರಾಣಿಯಾಗಿದ್ದಾರೆ.
ನ್ಯಾಯವಂತರ ದಾರಿಗಳನ್ನು ದೇವರು ಕಾಯುತ್ತಾರೆ;
ತಮ್ಮ ನಂಬಿಗಸ್ತರ ಮಾರ್ಗವನ್ನು ಭದ್ರಪಡಿಸುತ್ತಾರೆ.
 
ಆಗ ನೀನು ಸರಿಯಾದದ್ದನ್ನೂ ನ್ಯಾಯವನ್ನೂ ಯುಕ್ತವಾದದ್ದನ್ನು ಅರ್ಥಮಾಡಿಕೊಳ್ಳುವೆ,
ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದುಕೊಳ್ಳುವೆ.
10 ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿಸಿ,
ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಹಿತಕರವಾಗಿರುವುದು.
11 ನಿನ್ನ ವಿವೇಚನೆಯು ನಿನ್ನನ್ನು ಭದ್ರವಾಗಿ ಕಾಯುವುದು;
ತಿಳುವಳಿಕೆಯು ನಿನ್ನನ್ನು ಕಾಪಾಡುವುದು.
 
12 ಜ್ಞಾನವು ದುಷ್ಟರ ಮಾರ್ಗಗಳಿಂದಲೂ,
ವಕ್ರರ ಮಾತುಗಳಿಂದಲೂ ಕಾಪಾಡುವುದು.
13 ಅವರು ಕತ್ತಲೆಯ ಹಾದಿಗಳಲ್ಲಿ ನಡೆಯುವುದಕ್ಕೆ
ನೇರವಾದ ದಾರಿಗಳನ್ನು ತೊರೆದುಬಿಡುತ್ತಾರೆ.
14 ಅವರು ಕೆಟ್ಟದ್ದನ್ನು ಮಾಡುವುದಕ್ಕೆ ಸಂತೋಷಿಸುತ್ತಾರೆ.
ಕೇಡಿನ ವಕ್ರತನದಲ್ಲಿ ಆನಂದಿಸುತ್ತಾರೆ.
15 ಅವರ ಮಾರ್ಗಗಳು ವಕ್ರವಾಗಿವೆ;
ತಮ್ಮ ನಡತೆಗಳಲ್ಲಿ ಅವರು ತಪ್ಪಿಹೋಗಿದ್ದಾರೆ.
 
16 ಜಾರಿಣಿಯಿಂದಲೂ ದಾರಿತಪ್ಪಿದ
ಪರಸ್ತ್ರೀಯ ವಶೀಕರಣದ ಮಾತುಗಳಿಂದಲೂ ಜ್ಞಾನವು ನಿನ್ನನ್ನು ರಕ್ಷಿಸುವುದು.
17 ಅವಳು ತನ್ನ ಯೌವನ ಕಾಲದ ಪತಿಯನ್ನು ತ್ಯಜಿಸಿದ್ದಾಳೆ,
ದೇವರ ಸನ್ನಿಧಿಯಲ್ಲಿ ಮಾಡಿಕೊಂಡ ಒಡಂಬಡಿಕೆಯನ್ನೂ ಕಡೆಗಣಿಸಿದ್ದಾಳೆ.
18 ಏಕೆಂದರೆ ಅವಳ ಮನೆ ಮರಣ ಮಾರ್ಗ.
ಅವಳ ದಾರಿ ಮೃತರ ಕಡೆಗೂ ನಡೆಸುತ್ತವೆ.
19 ಅವಳ ಬಳಿಗೆ ಹೋಗುವ ಯಾವನೂ ಹಿಂದಿರುಗುವುದಿಲ್ಲ;
ಜೀವಮಾರ್ಗಗಳನ್ನು ಅಂಥವರು ಹಿಡಿಯುವುದೇ ಇಲ್ಲ.
 
20 ಆದ್ದರಿಂದ ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯುವೆ
ನೀತಿವಂತರ ದಾರಿಯನ್ನು ನೀನು ಹಿಡಿಯುವೆ.
21 ಏಕೆಂದರೆ ಪ್ರಾಮಾಣಿಕರು ದೇಶದಲ್ಲಿ ವಾಸಿಸುವರು,
ನಿರ್ದೋಷಿಗಳು ಅದರಲ್ಲಿ ನೆಲೆಯಾಗಿ ಇರುವರು.
22 ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲಾಗುವರು;
ದ್ರೋಹಿಗಳು ಬೇರುಸಹಿತವಾಗಿ ಕಿತ್ತುಹಾಕಲಾಗುವರು.