24
ಇಪ್ಪತ್ತನೆಯ ಹೇಳಿಕೆ
ಕೆಟ್ಟವರಿಗೆ ವಿರೋಧವಾಗಿ ನೀನು ಅಸೂಯೆ ಪಡದಿರು;
ಇಲ್ಲವೆ ಅವರ ಸಂಗಡ ಇರುವುದಕ್ಕೆ ಅಪೇಕ್ಷಿಸಬೇಡ.
ಏಕೆಂದರೆ ಅವರ ಹೃದಯವು ಹಿಂಸೆಯನ್ನು ಯೋಜಿಸುತ್ತದೆ;
ಅವರ ತುಟಿಗಳು ಹಾನಿಯನ್ನು ಪ್ರಸ್ತಾಪಿಸುತ್ತವೆ.
ಇಪ್ಪತ್ತೊಂದನೆಯ ಹೇಳಿಕೆ
ಜ್ಞಾನದಿಂದ ಮನೆಯು ಕಟ್ಟಲಾಗುತ್ತದೆ.
ತಿಳುವಳಿಕೆಯಿಂದ ಅದು ಸ್ಥಿರಗೊಳ್ಳುತ್ತದೆ.
ತಿಳುವಳಿಕೆಯಿಂದ ಅದರ ಕೋಣೆಗಳು ಅಮೂಲ್ಯವಾದ
ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬುವುದು.
ಇಪ್ಪತ್ತೇರಡನೆಯ ಹೇಳಿಕೆ
ಬಲವುಳ್ಳವನಿಗಿಂತ ಜ್ಞಾನಿಯು ಶಕ್ತಿಶಾಲಿ;
ತಿಳುವಳಿಕೆಯುಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ.
ಖಂಡಿತವಾಗಿಯೂ ನಿಮಗೆ ಯುದ್ಧಮಾಡಲು ಮಾರ್ಗದರ್ಶನ ಬೇಕು,
ಬಹುಮಂದಿ ಸಲಹೆಗಾರರು ಇರುವಲ್ಲಿ ಜಯವಿರುವುದು.
ಇಪ್ಪತ್ಮೂರನೆಯ ಹೇಳಿಕೆ
ಜ್ಞಾನವು ಬುದ್ಧಿಹೀನನಿಗೆ ನಿಲುಕದು;
ಪುರದ್ವಾರದಲ್ಲಿ ಕೂಡಿಬಂದ ಸಭೆಯಲ್ಲಿ ಅವನು ತನ್ನ ಬಾಯಿಯನ್ನು ತೆರೆಯುವುದೇ ಇಲ್ಲ.
ಇಪ್ಪತ್ತನಾಲ್ಕನೆಯ ಹೇಳಿಕೆ
ಕೇಡನ್ನು ಕಲ್ಪಿಸುವವನು
ಕುಚೋದ್ಯಗಾರನೆಂದು ಕರೆಯಲ್ಪಡುವನು.
ಬುದ್ಧಿಹೀನನ ಆಲೋಚನೆಯು ಪಾಪಮಯ;
ಪರಿಹಾಸ್ಯಗಾರನು ಮನುಷ್ಯರಿಗೆ ಅಸಹ್ಯ.
ಇಪ್ಪತ್ತೈದನೆಯ ಹೇಳಿಕೆ
10 ಇಕ್ಕಟ್ಟಿನ ಸಮಯದಲ್ಲಿ ನೀನು ಬಳಲಿ ಹೋದರೆ,
ನಿನ್ನ ಬಲವು ಕೊಂಚವಾಗಿದೆ.
11 ಅನ್ಯಾಯವಾಗಿ ಮರಣಕ್ಕೆ ಸಾಗಿಸುವನನ್ನು ಬಿಡಿಸುವುದಕ್ಕೆ ಯತ್ನಿಸು;
ಕೊಲೆಗೆ ನೇಮಿತವಾದವರನ್ನು ನೀನು ರಕ್ಷಿಸು.
12 ನೀನು, “ಅದು ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿದರೆ,
ಹೃದಯವನ್ನು ಪರಿಶೋಧಿಸುವ ದೇವರು ಅದನ್ನು ತಿಳಿಯುವದಿಲ್ಲವೋ?
ನಿನ್ನ ಜೀವವನ್ನು ಕಾಯುವಾತನು ಅದನ್ನು ತಿಳಿಯುವುದಿಲ್ಲವೋ?
ಪ್ರತಿಯೊಬ್ಬನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?
ಇಪ್ಪತ್ತಾರನೆಯ ಹೇಳಿಕೆ
13 ಮಗನೇ, ಜೇನನ್ನು ತಿನ್ನು, ಅದು ಚೆನ್ನಾಗಿದೆ;
ಜೇನು ಗೂಡಿನ ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಾಗಿದೆ.
14 ಅಂತೆಯೇ ಜ್ಞಾನವು ನಿನಗೆ ಜೇನುತುಪ್ಪದಂತೆ ತಿಳಿದುಕೋ.
ಅದು ಸಿಕ್ಕಿದಾಗ ನಿನಗೆ ಉಜ್ವಲ ಭವಿಷ್ಯವಿದೆ.
ನಿನ್ನ ನಿರೀಕ್ಷೆಯು ನಿರರ್ಥಕವಾಗುವುದಿಲ್ಲ.
ಇಪ್ಪತ್ತೇಳನೆಯ ಹೇಳಿಕೆ
15 ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚು ಹಾಕಬೇಡ;
ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ.
16 ಏಕೆಂದರೆ ನೀತಿವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ;
ಆದರೆ ದುಷ್ಟನು ಕೇಡು ಬಂದಾಗ ಬೀಳುವನು.
ಇಪ್ಪತ್ತೆಂಟನೆಯ ಹೇಳಿಕೆ
17 ನಿನ್ನ ಶತ್ರು ಬಿದ್ದರೆ ಆನಂದಿಸಬೇಡ;
ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.
18 ಯೆಹೋವ ದೇವರು ಅದನ್ನು ಕಂಡು, ಅದು ಅವರಿಗೆ ಇಷ್ಟವಿಲ್ಲದ್ದರಿಂದ,
ಅವರು ಅವನ ಕಡೆಯಿಂದ ತನ್ನ ಕೋಪವನ್ನು ತಿರುಗಿಸಿಬಿಟ್ಟಾರು.
ಇಪ್ಪತ್ತೊಂಬತ್ತನೆಯ ಹೇಳಿಕೆ
19 ಕೆಟ್ಟವರನ್ನು ಕಂಡು ಉರಿಗೊಳ್ಳಬೇಡ;
ಇಲ್ಲವೆ ದುಷ್ಟರನ್ನು ಕಂಡು ಅಸೂಯೆಪಡಬೇಡ.
20 ಏಕೆಂದರೆ ಕೆಡುಕನಿಗೆ ಭವಿಷ್ಯದ ನಿರೀಕ್ಷೆ ಇರುವುದಿಲ್ಲ;
ದುಷ್ಟರ ದೀಪವು ಆರಿಹೋಗುವುದು.
ಮೂವತ್ತನೆಯ ಹೇಳಿಕೆ
21 ಮಗನೇ, ಯೆಹೋವ ದೇವರಿಗೂ, ಅರಸನಿಗೂ ಭಯಪಡು;
ತಿರುಗಿಬೀಳುವವರ ಸಹವಾಸ ಮಾಡಬೇಡ,
22 ಏಕೆಂದರೆ ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವದು;
ಅವರು ಯಾವ ವಿಪತ್ತುಗಳನ್ನು ತರಬಹುದು ಎಂದು ಯಾರಿಗೆ ತಿಳಿದಿದೆ?
ಜ್ಞಾನಿಯ ಮತ್ತಷ್ಟು ಹೇಳಿಕೆಗಳು
23 ಇವು ಜ್ಞಾನಿಗಳ ಹೇಳಿಕೆಗಳಾಗಿವೆ:
ನ್ಯಾಯ ವಿಚಾರಣೆಯಲ್ಲಿ ಪಕ್ಷಪಾತವು ಸರಿಯಲ್ಲ.
24 ಯಾವನು ದುಷ್ಟನಿಗೆ, “ನೀನು ನೀತಿವಂತನು” ಎಂದು ಹೇಳುತ್ತಾನೋ
ಅವನನ್ನು ಜನರು ಶಪಿಸುವರು; ಜನಾಂಗಗಳು ಅವನನ್ನು ದೂಷಿಸುವರು.
25 ಆದರೆ ತಪ್ಪುಮಾಡಿದವರನ್ನು ತಿದ್ದುವವರಿಗೆ ಶುಭವಾಗುವುದು;
ಅವರ ಮೇಲೆ ಒಳ್ಳೆಯ ಆಶೀರ್ವಾದವು ಬರುವುದು.
 
26 ಪ್ರಾಮಾಣಿಕವಾದ ಉತ್ತರವು
ತುಟಿಗೆ ಮುದ್ದಿಟ್ಟಂತೆ.
 
27 ನಿನ್ನ ಹೊರಗಿನ ಕೆಲಸವನ್ನು ಕ್ರಮವಾಗಿ ಇರಿಸು.
ನಿನ್ನ ಹೊಲಗಳನ್ನು ಸಿದ್ಧಪಡಿಸು;
ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.
 
28 ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ;
ನಿನ್ನ ಮಾತುಗಳಿಂದ ಅವನಿಗೆ ಮೋಸ ಮಾಡಬೇಡ.
29 ನನಗೆ, “ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು;
ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು,” ಎಂದು ಹೇಳಬೇಡ.
 
30 ನಾನು ಸೋಮಾರಿಯ ಹೊಲದ ಪಕ್ಕದಲ್ಲಿ
ಬುದ್ಧಿಹೀನನ ದ್ರಾಕ್ಷಿತೋಟದ ಕಡೆಯಲ್ಲಿ ಹಾದು ಹೋದೆನು.
31 ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು
ಕಳೆಗಳು ಅವುಗಳನ್ನು ಮುಚ್ಚಿ
ಅದರ ಕಲ್ಲಿನ ಗೋಡೆಯು ಬಿದ್ದುಹೋಗಿತ್ತು.
32 ಆಗ ನಾನು ಅದನ್ನು ನೋಡಿ ಚಿಂತಿಸತೊಡಗಿದೆ;
ನಾನು ಕಂಡದ್ದರಿಂದ ಪಾಠ ಕಲಿತೆನು.
33 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ,
ಇನ್ನು ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?
34 ಹೀಗೆ ನಿನಗೆ ಬಡತನವು ಕಳ್ಳನಂತೆಯೂ
ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.