29
ಅನೇಕಬಾರಿ ಗದರಿಸಿದರೂ ತಗ್ಗದ ಹಟಮಾರಿ
ಪರಿಹಾರವಿಲ್ಲದೆ ಫಕ್ಕನೆ ಮುರಿದು ಬೀಳುವನು.
 
ಶಿಷ್ಟರು ಅಧಿಕಾರಕ್ಕೆ ಬಂದರೆ ಜನರು ಹರ್ಷಿಸುತ್ತಾರೆ.
ಆದರೆ ದುಷ್ಟರು ಆಳಿದರೆ, ಜನರಿಗೆ ನರಳಾಟ.
 
ಜ್ಞಾನಪ್ರಿಯನು ತಂದೆಗೆ ಆನಂದ
ಆದರೆ ವೇಶ್ಯೆಯರ ಸಹವಾಸದಿಂದ ಆಸ್ತಿಯ ವಿನಾಶ.
 
ನ್ಯಾಯದಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ,
ಆದರೆ ಲಂಚಕೋರ ಅಧಿಕಾರಿ ದೇಶವನ್ನು ಕೆಡವಿ ಹಾಕುತ್ತಾನೆ.
 
ತನ್ನ ನೆರೆಯವನನ್ನು ಸುಮ್ಮನೇ ಹೊಗಳುತ್ತಿರುವವನು,
ನೆರೆಯವನ ಕಾಲಿಗೆ ಬಲೆಯನ್ನು ಒಡ್ಡುತ್ತಾನೆ.
 
ಕೆಟ್ಟವನು ತನ್ನ ಪಾಪದಿಂದಲೇ ಸಿಕ್ಕಿಹಾಕಿಕೊಳ್ಳುತ್ತಾನೆ,
ಆದರೆ ನೀತಿವಂತನು ಸಂತೋಷದಿಂದ ಹಾಡಿ ಹರ್ಷಿಸುತ್ತಾನೆ.
 
ಬಡವರ ನ್ಯಾಯಕ್ಕಾಗಿ ನೀತಿವಂತನು ಚಿಂತಿಸುತ್ತಾನೆ.
ಆದರೆ ದುಷ್ಟನಿಗೆ ಅಂಥಾ ಚಿಂತೆಯೇ ಇಲ್ಲ.
 
ಪರಿಹಾಸ್ಯಗಾರರು ಪಟ್ಟಣದಲ್ಲಿ ಗಲಾಟೆ ಎಬ್ಬಿಸುತ್ತಾರೆ.
ಆದರೆ ಜ್ಞಾನಿಗಳು ಕೋಪವನ್ನು ಆರಿಸುವರು.
 
ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯಮಾಡುವಾಗ,
ಮೂರ್ಖನು ರೇಗಿದರೂ ಅಪಹಾಸ್ಯಮಾಡಿದರೂ ಸಮಾಧಾನವೇ ಇರುವುದಿಲ್ಲ.
 
10 ಕೊಲೆಪಾತಕರು ಪ್ರಾಮಾಣಿಕರನ್ನು ದ್ವೇಷಿಸುತ್ತಾರೆ.
ಆದರೆ ಯಥಾರ್ಥವಂತರನ್ನು ನಾಶಮಾಡಲು ಯತ್ನಿಸುತ್ತಾರೆ.
 
11 ಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು.
ಆದರೆ ಜ್ಞಾನಿಯು ಕೋಪವನ್ನು ಶಾಂತಿಯಿಂದ ತಡೆಹಿಡಿಯುತ್ತಾನೆ.
 
12 ಒಬ್ಬ ಅಧಿಕಾರಿಯು ಸುಳ್ಳಿಗೆ ಕಿವಿಗೊಟ್ಟರೆ,
ಅವನ ಸೇವಕರೆಲ್ಲರೂ ದುಷ್ಟರಾಗುತ್ತಾರೆ.
 
13 ಬಡವರಿಗೂ ದಬ್ಬಾಳಿಕೆ ನಡೆಸುವವರಿಗೂ ಒಂದು ಸಂಗತಿ ಹುದುವಾಗಿರುವುದು:
ಯೆಹೋವ ದೇವರು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುವರು ಎಂಬುದೇ.
 
14 ಅರಸನು ಬಡವರಿಗೆ ಪಕ್ಷಪಾತವಿಲ್ಲದೆ ನ್ಯಾಯತೀರಿಸಿದರೆ,
ಅವನ ಸಿಂಹಾಸನವು ಎಂದೆಂದಿಗೂ ಸ್ಥಿರಗೊಳ್ಳುವುದು.
 
15 ಬೆತ್ತ ಮತ್ತು ಬೆದರಿಕೆಗಳು ಜ್ಞಾನವನ್ನುಂಟುಮಾಡುತ್ತವೆ;
ಆದರೆ ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
 
16 ದುಷ್ಟರು ವೃದ್ಧಿಯಾದಾಗ, ಪಾಪವು ವೃದ್ಧಿಯಾಗುತ್ತದೆ.
ಆದರೆ ನೀತಿವಂತರು ದುಷ್ಟರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
 
17 ನಿನ್ನ ಮಕ್ಕಳನ್ನು ಶಿಕ್ಷಿಸಿದರೆ, ಅವರು ನಿನಗೆ ಮನಶಾಂತಿಯನ್ನು ಕೊಡುವರು;
ಹೌದು, ಅವರು ನೀನು ಬಯಸುವ ಹರ್ಷವನ್ನು ನಿನಗೆ ತರುವರು.
 
18 ದೈವ ಪ್ರಕಟನೆ ಇಲ್ಲದಿರುವಾಗ, ಜನರು ನಾಶವಾಗುತ್ತಾರೆ;
ಆದರೆ ಜ್ಞಾನೋಪದೇಶವನ್ನು ಕೈಗೊಳ್ಳುವವನು ಧನ್ಯನು.
 
19 ಮಾತಿನಿಂದ ಮಾತ್ರ ಕೆಲಸಗಾರರನ್ನು ತಿದ್ದಲು ಸಾಧ್ಯವಿಲ್ಲ;
ಏಕೆಂದರೆ ಅವರು ಅರ್ಥಮಾಡಿಕೊಂಡರೂ, ಅದರಂತೆ ನಡೆಯುವುದಿಲ್ಲ.
 
20 ದುಡುಕಿ ಮಾತನಾಡುವ ವ್ಯಕ್ತಿಯನ್ನು ನೀನು ನೋಡಿದ್ದೀಯೋ?
ಅಂಥವನಿಗಿಂತಲೂ ಬುದ್ಧಿಹೀನನ ವಿಷಯದಲ್ಲಿ ಹೆಚ್ಚು ನಿರೀಕ್ಷೆ ಇದೆ.
 
21 ಬಾಲ್ಯದಿಂದ ಕೆಲಸಗಾರನನ್ನು ಅನುಕೂಲವಾಗಿ ಸಾಕಿ ಬಿಟ್ಟರೆ,
ತರುವಾಯ ಅವನು ಎದುರು ಬೀಳಲು ಸಾಧ್ಯ.
 
22 ಕೋಪಿಷ್ಟನು ಜಗಳವನ್ನೆಬ್ಬಿಸುವನು,
ಮುಂಗೋಪಿಯು ಅನೇಕ ಪಾಪಗಳನ್ನು ಮಾಡುತ್ತಾನೆ.
 
23 ಗರ್ವವು ಮನುಷ್ಯನನ್ನು ಹೀನಸ್ಥಿತಿಗೆ ತರುವುದು;
ಆದರೆ ಆತ್ಮದಲ್ಲಿ ದೀನರು ಮೆಚ್ಚಿಕೆಯನ್ನು ಪಡೆಯುವರು.
 
24 ಕಳ್ಳರ ಸಹವಾಸ ಮಾಡುವವರು ತಮಗೆ ತಾವೇ ಶತ್ರುಗಳು.
ಅವರು ಆಣೆ ಇಟ್ಟರೂ ಅವರಲ್ಲಿ ಬದಲಾವಣೆ ಇರುವುದಿಲ್ಲ.
 
25 ಖಂಡಿತವಾಗಿಯೂ ಮನುಷ್ಯನ ಭಯವು ಒಂದು ಉರುಲಾಗಿರುವುದು;
ಯೆಹೋವ ದೇವರಲ್ಲಿ ಭರವಸವಿಡುವವನು, ಸಂರಕ್ಷಣೆ ಹೊಂದುವನು.
 
26 ಅನೇಕರು ಅಧಿಕಾರಿಯ ದಯೆಯನ್ನು ಹುಡುಕುತ್ತಾರೆ.
ಆದರೆ ಯೆಹೋವ ದೇವರಿಂದಲೇ ಪ್ರತಿಯೊಬ್ಬರಿಗೂ ನ್ಯಾಯ ದೊರಕುತ್ತದೆ.
 
27 ನೀತಿವಂತರು ಅಪ್ರಾಮಾಣಿಕರನ್ನು ದ್ವೇಷಿಸುತ್ತಾರೆ.
ದುಷ್ಟರು ಪ್ರಾಮಾಣಿಕರನ್ನು ತಿರಸ್ಕರಿಸುತ್ತಾರೆ.